ಮಣಿಪುರ ಹಿಂಸಾಚಾರದ ಕುರಿತು ಪ್ರಧಾನಿ ಮೋದಿಯವರು 2017ರಲ್ಲಿ ಮಾಡಿದ್ದ ಟ್ವೀಟ್ ಒಂದು ಈಗ ವೈರಲ್ ಆಗಿದ್ದು ಅವರನ್ನು ಮತ್ತು ಅವರ ಪಕ್ಷವನ್ನು ಪೇಚಿಗೆ ಸಿಲುಕಿಸಿದೆ.
“ಮಣಿಪುರದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಸ್ಥಾಪಿಸಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ, ಒಂದು ಕ್ಷಣವೂ ಸರ್ಕಾರದಲ್ಲಿರಲು ಸರ್ಕಾರಕ್ಕೆ ಹಕ್ಕಿಲ್ಲ” ಎಂದು ಅಂದು ಮೋದಿ ಮಣಿಪುರದಲ್ಲಿ ಹೇಳಿಕೆ ನೀಡಿದ್ದರು.
ಈಗ ಈ ಕುರಿತು ಟ್ವೀಟ್ ಮಾಡಿರುವ ಆಮ್ ಆದ್ಮಿ ಪಕ್ಷವು, “ಮಣಿಪುರದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಸ್ಥಾಪಿಸಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ, ಒಂದು ಕ್ಷಣವೂ ಸರ್ಕಾರದಲ್ಲಿರಲು ಸರ್ಕಾರಕ್ಕೆ ಹಕ್ಕಿಲ್ಲ ಮತ್ತು ಆ ಸರ್ಕಾರವನ್ನು ವಜಾಗೊಳಿಸಬೇಕು.”
ಈಗ ಮಣಿಪುರ ಸರ್ಕಾರವನ್ನು ವಜಾ ಮಾಡುವ ಸಮಯ ಬಂದಿದೆ
ರಾಜ್ಯಗಳಲ್ಲಿ ಶಾಂತಿ ಸ್ಥಾಪಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿಯೂ ಆಗಿದೆ ಎಂದು ಸಂವಿಧಾನದ 355ನೇ ವಿಧಿ ಹೇಳುತ್ತದೆ.” ಎಂದು ಹೇಳುವುದರ ಜೊತೆಗೆ ಸಂಸದ ರಾಘವ್ ಚಡ್ಡಾ ಅವರು ಮಾತನಾಡಿರುವ ವಿಡಿಯೋ ಕೂಡಾ ಶೇರ್ ಮಾಡಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಕೂಡ ಪ್ರಧಾನಿ ಮೋದಿಯವರ ಈ ಟ್ವೀಟಿಗೆ ಪ್ರತಿಕ್ರಿಯಿಸಿದ್ದಾರೆ.
“78 ದಿನಗಳ ನಂತರ ಪ್ರಧಾನಿ ಮೋದಿ ಮಣಿಪುರಕ್ಕಾಗಿ 36 ಸೆಕೆಂಡುಗಳನ್ನು ನೀಡಿದರು. ಆದರೆ ಈ ಬಿಕ್ಕಟ್ಟನ್ನು ಎದುರಿಸಲು ಅವರು ಏನು ಮಾಡುತ್ತಾರೆ ಎಂಬುದರ ಬಗ್ಗೆ ಒಂದು ಮಾತನ್ನೂ ಆಡಲಿಲ್ಲ. “ಪ್ರಧಾನಿ ಮೋದಿ ಮತ್ತು ಅವರ ಸರ್ಕಾರವು ರಾಜ್ಯದಲ್ಲಿ ಶಾಂತಿಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ಅವರಿಗೆ ಮಣಿಪುರವನ್ನು ಆಳುವ ಹಕ್ಕಿಲ್ಲ” ಎಂದು ವೇಣುಗೋಪಾಲ್ ಬರೆದಿದ್ದಾರೆ.