Home ರಾಜ್ಯ ವಿಧಾನಸಭೆಯಲ್ಲಿ ಒಳ ಮೀಸಲಾತಿ, ಸದಾಶಿವ ಆಯೋಗದ ವರದಿ ಪರ ಕೂಗು: ಏಳು ಮಂದಿ ಬಂಧನ

ವಿಧಾನಸಭೆಯಲ್ಲಿ ಒಳ ಮೀಸಲಾತಿ, ಸದಾಶಿವ ಆಯೋಗದ ವರದಿ ಪರ ಕೂಗು: ಏಳು ಮಂದಿ ಬಂಧನ

0

ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಬಜೆಟ್‌ ಮಂಡಿಸುತ್ತಿದ್ದ ವೇಳೆ ಸಾರ್ವಜನಿಕರ ಗ್ಯಾಲರಿ ಹಾಗೂ ಸಭಾಧ್ಯಕ್ಷರ ಗ್ಯಾಲರಿಯಲ್ಲಿ ಘೋಷಣೆ ಕೂಗಿದ್ದ ಏಳು ಮಂದಿಯನ್ನು ವಿಧಾನಸೌಧ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಎಚ್‌ಎಸ್‌ಆರ್‌ ಲೇಔಟ್‌ ಎ.ವಿಜಯಕುಮಾರ್‌, ಎಸ್‌.ಎಸ್‌.ವಿಜಯಶೇಖರ್‌, ಹೊಸಪಾಳ್ಯ ಮುಖ್ಯರಸ್ತೆಯ ಸತ್ಯೇಂದ್ರಕುಮಾರ್‌, ಜಾಂಬವನಗರದ ಎಂ.ರಾಜರತ್ನಂ ಸರ್ಜಾಪುರದ ಎಸ್‌.ವಿ.ಸುರೇಶ್‌, ಚೊಕ್ಕಸಂದ್ರದ ಎನ್‌.ವೇಣುಗೋಪಾಲ್‌, ಸರ್ಜಾಪುರ ಅಂಬೇಡ್ಕರ್‌ ಕಾಲೊನಿಯ ಎಸ್‌.ವಿ.ಶ್ರೀನಿವಾಸ್‌ ಬಂಧಿತರು.

ವಿಧಾನಸಭೆ ದಂಡನಾಯಕ ಎಚ್‌.ಎಸ್‌.ಜಯಕೃಷ್ಣ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಬಂಧಿಸಿ ಮುಂದಿನ ಕಾನೂನು ಕ್ರಮಕೈಗೊಳ್ಳಲಾಗಿದೆ. ಸಾರ್ವಜನಿಕರ ಗ್ಯಾಲರಿ ಹಾಗೂ ಸಭಾಧ್ಯಕ್ಷರ ಗ್ಯಾಲರಿಯಲ್ಲಿ ಏಳು ಮಂದಿ ಬಜೆಟ್‌ ಅಧಿವೇಶನದ ವೀಕ್ಷಣೆ ಮಾಡುತ್ತಿದ್ದರು. ಆಗ ಬಜೆಟ್‌ ಮಂಡನೆಯ ಮಧ್ಯಯೇ ಸದಾಶಿವ ಆಯೋಗದ ವರದಿ ಜಾರಿ, ಒಳ ಮೀಸಲಾತಿ ಜಾರಿ ಮಾಡಿ ಎಂದು ಘೋಷಣೆ ಕೂಗಿದ್ದರು. ಅವರನ್ನು ಕೂಡಲೇ ಮಾರ್ಷಲ್‌ಗ‌ಳು ವಶಕ್ಕೆ ಪಡೆದುಕೊಂಡರು.

ನಂತರ ವಿಧಾನಸಭೆ ದಂಡನಾಯಕ ಎಚ್‌.ಎಸ್‌.ಜಯಕೃಷ್ಣ ಎಲ್ಲಾ ಆರೋಪಿಗಳ ವಿಚಾರಣೆ ನಡೆಸಿ ವಿಧಾನಸೌಧ ಠಾಣೆಗೆ ಕರೆದೊಯ್ದು ದೂರು ನೀಡಿದ್ದಾರೆ. ಸದನದ ನಿಯಮಾವಳಿಯನ್ನು ಉಲ್ಲಂಘನೆ ಮಾಡುವುದರ ಜತೆಗೆ ಮಾರ್ಷಲ್‌ ಅಧಿಕಾರಿ ಹಾಗೂ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂಬ ಆರೋಪದಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

You cannot copy content of this page

Exit mobile version