Monday, June 17, 2024

ಸತ್ಯ | ನ್ಯಾಯ |ಧರ್ಮ

“ಓಝೋನ್‌: ಮೋಡದಾಚೆ ಇರಲಿ, ಮೂಗಿನ ಬಳಿ ಬೇಡ”

ಸೆಪ್ಟೆಂಬರ್‌ 16 ವಿಶ್ವ ಓಝೋನ್‌ ದಿನ. ಈ ವಿಶೇಷ ದಿನದಂದು ಖ್ಯಾತ ವಿಜ್ಞಾನ ಲೇಖಕರಾದ ನಾಗೇಶ ಹೆಗಡೆಯವರು ʼಓಝೋನ್‌ ಎಂದರೆ ಎಲ್ಲರೂ ಆಕಾಶದತ್ತ ನೋಡುತ್ತಾರೆ, ನೆಲಮಟ್ಟದ ಓಝೋನ್‌ ಮಾಲಿನ್ಯ ತುಂಬ ಗಂಭೀರವಾದದ್ದು, ಇತ್ತ ಕಡೆ ನೋಡಿʼ ಎಂದು ನಮ್ಮನ್ನು ಎಚ್ಚರಿಸಿದ್ದಾರೆ. ನೆಲ ಮಟ್ಟದ ಓಝೋನ್‌ ಮಾಲಿನ್ಯದ ಬಗ್ಗೆ ತಿಳಿಯಲು ಮುಂದೆ ಓದಿ..

ಓಝೋನ್ ಗುಣಧರ್ಮಗಳು ಆಮ್ಲಜನಕಕ್ಕಿಂತ ಭಿನ್ನವಾಗಿರುತ್ತವೆ. ಇವು ನಮ್ಮ ಹತ್ತಿರದ ಗಾಳಿಯಲ್ಲಿದ್ದಷ್ಟು ಹೊತ್ತು ನಮ್ಮ ಉಸಿರಾಟಕ್ಕೆ ಕಷ್ಟವಾಗುತ್ತದೆ. ಕೆಮ್ಮು, ಶ್ವಾಸನಾಳದ ಉರಿ ಕಾಣಿಸಿಕೊಳ್ಳುತ್ತದೆ. ಅಸ್ತಮಾ ಕಾಯಿಲೆ ಉಲ್ಬಣವಾಗುತ್ತದೆ. ಗಾಳಿಯ ಓಡಾಟವಿಲ್ಲದೆ, ಬರೀ ಬಿಸಿಲು ಮತ್ತು ವಾಹನದ ಹೊಗೆ ದಟ್ಟವಾಗಿದ್ದರೆ, ಅಲ್ಲಿ ಓಝೋನ್ ಮಡುಗಟ್ಟುತ್ತದೆ. ಮತ್ತೆ ಮತ್ತೆ ಓಝೋನ್ ಕಣಗಳನ್ನು ಉಸಿರಾಡುತ್ತಿದ್ದರೆ ಅಸ್ತಮಾ ರೋಗಿಗಳ ಸಂಕಟ ಹೆಚ್ಚುತ್ತದೆ. ಮಕ್ಕಳು ಮತ್ತು ವೃದ್ಧರಿಗೆ ವಿಶೇಷ ತೊಂದರೆಯಾಗುತ್ತದೆ. ಆಸ್ಪತ್ರೆಗೆ ಹೋಗುವವರ ಸಂಖ್ಯೆ ಹೆಚ್ಚುತ್ತದೆ.

ನಮ್ಮ ನಿತ್ಯ ಬಳಕೆಯ ಅನೇಕ ವಸ್ತುಗಳಲ್ಲಿ ಓಝೋನ್ ಕಣಗಳನ್ನು ಕೃತಕವಾಗಿ ಸೇರಿಸಿರುತ್ತಾರೆ. ಬಟ್ಟೆಯನ್ನು ಶುಭ‍್ರಗೊಳಿಸುವ ಸಾಬೂನು ಪುಡಿಯಲ್ಲಿ ಇದನ್ನು ಬಳಸುತ್ತಾರೆ. ದುರ್ನಾತವನ್ನು ಹೋಗಲಾಡಿಸುವ ರಸಾಯನಗಳಲ್ಲಿ ಓಝೋನ್ ಸೇರಿಸಿರುತ್ತಾರೆ. ನೀರಿನ ಶುದ್ಧೀಕರಣದಲ್ಲೂ ಇದು ಬಳಕೆಯಾಗುತ್ತದೆ. ಕಾರ್ಖಾನೆಗಳಲ್ಲಿ ಇದನ್ನು ನಾನಾ ರೀತಿಯಲ್ಲಿ ಬಳಸುತ್ತಾರೆ. ಅದು ಅಲ್ಲಲ್ಲೇ ಒಡೆದು ಆಮ್ಲಜನಕವಾಗುತ್ತಿದ್ದರೆ ಏನೂ ಅಪಾಯವಿಲ್ಲ. ಮೇಲಾಗಿ ಸಾಬೂನು ಪುಡಿ ಅಥವಾ ಕುಡಿಯುವ ನೀರಿನಲ್ಲಿ ಓಝೋನ್ ಇದ್ದರೆ, ಅದು ನಮ್ಮ ಶ್ವಾಸನಾಳಕ್ಕೆ ಹೋಗುವ ಸಂಭವ ಕಡಿಮೆ. ಆದರೆ ಕಾರ್ಖಾನೆಗಳು ಮತ್ತು ವಾಹನಗಳಿಂದ ಹೊರಬೀಳುವ ಮಲಿನ ಕಣಗಳು ಬಿಸಿಲಿನಲ್ಲಿ ಆಮ್ಲಜನವನ್ನು ಒಡೆದು ಓಝೋನ್ ಕಣಗಳನ್ನಾಗಿ ಮಾಡುತ್ತವೆ. ಅದು ಅಪಾಯಕಾರಿ. ನೆಲ ಮಟ್ಟದಲ್ಲಿರುವಾಗ ವಿಷವೇ ಆಗಬಲ್ಲ ಈ ಅನಿಲ, ತೀರಾ ಎತ್ತರದ ವಾಯು ಮಂಡಲದಲ್ಲಿದ್ದರೆ, ಜೀವಕೋಟಿಯನ್ನು ರಕ್ಷಿಸುವ ಉಪಕಾರಿಯೂ ಆಗುತ್ತದೆ.

ಓಝೋನ್‌ ಪದರ ತೆಳುವಾದರೆ ಏನಾಗುತ್ತದೆ?

ಇಪ್ಪತ್ತು ಕಿಲೊಮೀಟರ್‌ ಎತ್ತರದ ವಾಯುಮಂಡಲದಲ್ಲಿ ಓಝೋನ್‌ ಪದರ ತೆಳುವಾದರೆ ಅಥವಾ ಚಿಂದಿ ಆದರೆ ಅದರ ಮೂಲಕ ಯೂವಿ ಕಿರಣಗಳು ಭೂಮಿಗೆ ಬಂದು ನಮ್ಮ ಆರೋಗ್ಯಕ್ಕೆ ಧಕ್ಕೆ ತರುತ್ತದೆ (ನೀರಿನಲ್ಲಿರುವ ಬ್ಯಾಕ್ಟೀರಿಯಾವನ್ನು ಕೊಲ್ಲಲು ನಾವು ಯೂವಿ ಕಿರಣವನ್ನು ಹಾಯಿಸುತ್ತೇವೆ). ನಾವು ಬಳಸುವ ಕೆಮಿಕಲ್‌ನಿಂದಾಗಿ ಓಝೋನ್‌ ಪದರ ಹಾಳಾಗಿತ್ತು. ಈಗ ರಿಪೇರಿ ಆಗಿದೆ. ಅಲ್ರೂಗ. ಈಗಿನ ನಿಜವಾದ ಅಪಾಯ ಏನೆಂದರೆ ರಸ್ತೆಯಲ್ಲಿ ವಾಹನದ ಹೊಗೆಯಲ್ಲಿ ಓಝೋನ್‌ ಉತ್ಪತ್ತಿ ಆಗುತ್ತಿರುತ್ತದೆ. ಅದು ಅಸ್ತಮಾ, ಗೂರಲು ಕೆಮ್ಮು, ತಲೆಸುತ್ತು ಮತ್ತು ಮಾನಸಿಕ ಕಿರಿಕಿರಿ ಉಂಟುಮಾಡುತ್ತದೆ. (ಆಟೊ ಓಡಿಸುವವರದ್ದು, ಟ್ರಾಫಿಕ್‌ ಪೊಲೀಸರದ್ದು ಯಾವಾಗಲೂ ತರ್ಲೆ, ಯಾಕಂತೀರಿ?). ಈ ನೆಲಮಟ್ಟದ ಓಝೋನ್‌ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಪಠ್ಯಪುಸ್ತಕದಲ್ಲಿ ಇದರ ಬಗ್ಗೆ ಒಂದು ಪಾಠವೂ ಇಲ್ಲ. ರಸ್ತೆಯ ಸಿಗ್ನಲ್‌ಗಳಲ್ಲಿ ಹೊಗೆ ಹೊಮ್ಮುವ ಜಾಗದಲ್ಲಿ, ಬಿಸಿಲಿನಲ್ಲಿ ಓಝೋನ್‌ ಹೆಚ್ಚಾಗಿ ಉತ್ಪತ್ತಿ ಆಗುತ್ತಿರುತ್ತದೆ. ಅದರಲ್ಲೂ ಹಳೇ ವಾಹನಗಳಿಂದ ಜಾಸ್ತಿ. ಪೊಲೀಸರಿಗೆ ಇದನ್ನು ಯಾರೂ ಹೇಳುವುದಿಲ್ಲ. ಬೇರೆ ದೇಶಗಳಲ್ಲಿ ಓಝೋನ್‌ ಅಳೆಯುವ ಉಪಕರಣಗಳು ರಸ್ತೆಗಳಲ್ಲಿರುತ್ತವೆ. ಓಝೋನ್‌ ಮಟ್ಟ ಜಾಸ್ತಿಯಾದರೆ ಆಸ್ಪತ್ರೆಗಳಿಗೂ ಎಚ್ಚರಿಕೆ ಹೋಗುತ್ತದೆ (ʼಕೆಮ್ಮು ಗೂರಲು ರೋಗಿಗಳು ಜಾಸ್ತಿ ಬರಲಿದ್ದಾರೆ, ತಯಾರಾಗಿರಿʼ ಅಂತ). ಕೋವಿಡ್‌ ಇರಲಿ, ಇಲ್ಲದಿರಲಿ, ರಸ್ತೆಗೆ ಇಳಿಯುವಾಗ (ವಿಶೇಷವಾಗಿ ಶಾಲಾ ಮಕ್ಕಳು ಮತ್ತು ಟ್ರಾಫಿಕ್‌ ಪೊಲೀಸರು) ಮಾಸ್ಕ್‌ ಹಾಕಿಕೊಳ್ಳಬೇಕು. ಎತ್ತರದ ಓಝೋನ್‌ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಅದು ಹಾಳಾದರೂ ನಾವು ಸಾಮಾನ್ಯ ಮನುಷ್ಯರು ಏನೂ ಮಾಡುವಂತಿಲ್ಲ. ದೊಡ್ಡ ಉದ್ಯಮಿಗಳು ಅದರ ಬಗ್ಗೆ ಕ್ರಮ ಕೈಗೊಳ್ಳಬೇಕು. ಆದರೆ ನೆಲಮಟ್ಟದಲ್ಲಿ ಓಝೋನ್‌ ಉತ್ಪಾದನೆ ಆಗದ ಹಾಗೆ ನಾವು ಏನೆಲ್ಲ ಮಾಡಲು ಸಾಧ್ಯ ಇದೆ.

ಎಚ್ಚರಿಕೆಯ ಘಂಟೆ!

ವಾಹನಗಳ ಹೊಗೆಯಿಂದ ಹೊಮ್ಮುವ ಅನಿಲಗಳು ಬಿಸಿಲಿನಲ್ಲಿ ಆಮ್ಲಜನಕದ ಕಣಗಳನ್ನು ಒಡೆದು ಓಝೋನ್ ಕಣಗಳಾಗಿ ಮಾಡುವುದಕ್ಕೆ ‘ಫೋಟೋ ಕೆಮಿಕಲ್ ವಾಯುಮಾಲಿನ್ಯ’ ಎನ್ನುತ್ತಾರೆ. ಪಶ್ಚಿಮದ ನಗರಗಳಲ್ಲಿ ದಿನವೂ ಓಝೋನ್ ಮಟ್ಟವನ್ನು ಅಳೆದು ನೋಡುತ್ತಿರುತ್ತಾರೆ. ಒಂದು ಗಂಟೆಯ ಅವಧಿಯಲ್ಲಿ ಪ್ರತಿ ಘನ ಮೀಟರ್ ಗೆ 100 ಮೈಕ್ರೋ ಗ್ರಾಮ್ ನಷ್ಟಿದ್ದರೆ ಪರವಾಗಿಲ್ಲ. ಅದು 180 ಕ್ಕೆ ಏರಿದರೆ ತಕ್ಷಣ ಜನರಿಗೆ ಸೂಚನೆ ನೀಡಲಾಗುತ್ತದೆ. ಇದು 360 ಮೈಕ್ರೋ ಗ್ರಾಮ್ ಗೆ ಏರಿದರೆ ಜನರಿಗೆ ‘ಎಚ್ಚರಿಕೆ’ ನೀಡಲಾಗುತ್ತದೆ. ಇದು ಹೀಗೆಯೇ ಮುಂದುವರಿದರೆ, ಗಂಭೀರ ಪರಿಸ್ಥಿತಿ ಎಂದು ಪರಿಗಣಿಸಿ, ‘ರೋಗಿಗಳು ಬರಬಹುದು, ಸಿದ್ಧವಾಗಿರಿ’ ಎಂದು ಆಸ್ಪತ್ರೆಗಳಿಗೆ ಸಂದೇಶ ನೀಡಲಾಗುತ್ತದೆ.

ಏನದು, ಪ್ಯಾರಿಸ್ ನಗರದ ತುರ್ತುಸ್ಥಿತಿ?

ಡೀಸೆಲ್ ಚಾಲಿತ ಖಾಸಗಿ ಲಕ್ಷುರಿ ವಾಹನಗಳ ಸಂಖ್ಯೆ ಅತಿಯಾಗಿರುವ ಪ್ಯಾರಿಸ್ ನಲ್ಲಿ 1997 ರಲ್ಲಿ ಬಿಸಿಲು ಚೆನ್ನಾಗಿ ಬಿದ್ದಿದ್ದಾಗ ಹೊಗೆ ಮತ್ತು ಮಂಜು (ಹೊಂಜು) ದಟ್ಟವಾಗಿ, ಮಾಲಿನ್ಯ ಅತಿಯಾಗಿ ಕವಿದಿತ್ತು. ಒಂದಲ್ಲ, ಮೂರು ಬಾರಿ ತುರ್ತುಸ್ಥಿತಿ ಘೋಷಣೆ ಮಾಡಿದ್ದರು. ಒಮ್ಮೆ ಕೇವಲ ಬೆಸ ಸಂಖ್ಯೆಗಳ ವಾಹನಗಳಿಗೆ, ಮತ್ತೊಮ್ಮೆ ಸಮ ಸಂಖ್ಯೆಯ ಕಾರುಗಳಿಗೆ ಓಡಾಟದ ನಿರ್ಬಂಧ ಹಾಕಲಾಯಿತು. ಒಮ್ಮೆ ಖಾಸಗಿ ವಾಹನಗಳ ಓಡಾಟವನ್ನು ಕಡ್ಡಾಯ ನಿಲ್ಲಿಸಬೇಕಾಗಿ ಬಂತು. ಇನ್ನೊಮ್ಮೆ ಸಾರ್ವಜನಿಕರಿಗೆಲ್ಲ ಉಚಿತ ಸಾರಿಗೆ ವ್ಯವಸ್ಥೆ ಮಾಡಬೇಕಾಗಿ ಬಂತು. ಆನಂತರವೇ ವಾಹನಗಳ ಯೂರೋ ಗುಣಮಟ್ಟವನ್ನು ಬಿಗಿ ಮಾಡಲಾಯಿತು.

ನಮ್ಮಲ್ಲಿ ಹೆಚ್ಚಾಗಿ ಡೀಸೆಲ್ ಎಂಜಿನ್ ಗಳಿರುವ ಟ್ರೇನ್, ಲಾರಿಗಳ ಮೂಲಕ ಸರಕು ಆಗುತ್ತಿರುತ್ತದೆ. ನಿತ್ಯ ಬಳಕೆಯ ವಸ್ತುಗಳು ದುಬಾರಿ ಆಗದಂತೆ ಡೀಸೆಲ್ ಬೆಲೆಯನ್ನು ಕೃತಕವಾಗಿ ಕಡಿಮೆ ಮಟ್ಟದಲ್ಲಿಡಲಾಗಿದೆ. ಪೆಟ್ರೋಲ್ ಗಿಂತ ಅವು ಜಾಸ್ತಿ ಮಲಿನಕಾರಿ ಎಂಬುದು ಗೊತ್ತಿದ್ದರೂ ಕಡಿಮೆ ವೆಚ್ಚದ ಇಂಧನ ಅನಿವಾರ್ಯ ಎಂಬಂತಾಗಿದೆ. ಆದರೆ ಈಚಿನ ವರ್ಷಗಳಲ್ಲಿ ಲಕ್ಷುರಿ ಕಾರುಗಳಿಗೆ ಡೀಸೆಲ್ ಎಂಜಿನ್ ಗಳನ್ನು ಅಳವಡಿಸಿ ಬಡವರಿಗೆ ನೀಡುವ ರಿಯಾಯಿತಿ ಇಂಧನವನ್ನೇ ಶ್ರೀಮಂತರೂ ಬಳಸುವಂತೆ ಕಂಪೆನಿಗಳು ಆಮಿಷ ಒಡ್ಡುತ್ತಿವೆ.
ಆದರೆ, ಡೀಸೆಲ್ ಕಾರುಗಳ ಸಂಖ್ಯೆ ಪ್ರತಿ ದಿನವೂ ಜಾಸ್ತಿ ಆಗುತ್ತಿರುವುದರಿಂದ ನಗರದಲ್ಲಿ ಓಝೋನ್ ಮಾಲಿನ್ಯ ಹೆಚ್ಚುತ್ತಿದೆ. ಇತ್ತ ರಸಗೊಬ್ಬರ ಬಳಕೆ ಹಾಗೂ ಔದ್ಯಮಿಕ ಉತ್ಪಾದನೆಯಿಂದ ಹೊಮ್ಮುವ ನೈಟ್ರಸ್ ಆಕ್ಸೈಡ್ ಪ್ರಮಾಣವೂ ಹೆಚ್ಚುತ್ತಿರುವುದರಿಂದ ವಾಯುಮಂಡಲದ ಉಪಕಾರಿ ಓಝೋನ್ ಪದರ ಕ್ಷೀಣವಾಗುತ್ತಿದೆ.

ಜಾಗತಿಕ ಓಝೋನ್‌ ದಿನದ ಮಹತ್ವ

ಈ ಭೂಮಿಯ ಮೇಲಿನ ಜೀವ ಸಂಕುಲವನ್ನು ರಕ್ಷಿಸಲು ಸೃಷ್ಟಿಯಾಗಿರುವ ರಕ್ಷಣಾ ಕವಚಗಳಲ್ಲಿ ಓಝೋನ್‌ ಪದರವೂ ಒಂದು. ಆದರೆ, ವಿಪರೀತ ವಾಯು ಮಾಲಿನ್ಯದಿಂದಾಗಿ ತೆಳುವಾಗುತ್ತಿರುವ ಓಜೋನ್‌ ಪದರದ ಸಂರಕ್ಷಣೆಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಸೆ.೧೬ರಂದು ವಿಶ್ವ ಓಝೋನ್‌ ದಿನವನ್ನಾಗಿ ಆಚರಿಸಲಾಗುತ್ತಿದೆ. ಪ್ರತಿ ವರ್ಷ ಒಂದೊಂದು ಥೀಮ್‌ ನಿಗದಿ ಮಾಡಿಕೊಂಡು ಜನ ಜಾಗೃತಿ ಮೂಡಿಸುತ್ತಾ ಬರುವ ಈ ದಿನ ಮಹತ್ವದ್ದಾಗಿದೆ. ಈ ವರ್ಷದ ಥೀಮ್ ʼಭೂಮಿಯ ಮೇಲಿನ ಜೀವ ಸಮುದಾಯ ಸಂರಕ್ಷಿಸಲು ಜಾಗತಿಕ ಸಹಕಾರʼ ಎಂಬುದಾಗಿದೆ. ಓಝೋನ್‌ ಪದರದ ರಕ್ಷಣೆ ಜಗತ್ತಿನ ಎಲ್ಲರ ಹೊಣೆ.

ಓಝೋನ್ ಕುರಿತಂತೆ ಸುಶಿಕ್ಷಿತ ಯುವಜನರ ಪಾತ್ರ ಏನು?

ಎತ್ತರದ ವಾಯುಮಂಡಲದ ಓಝೋನ್ ಪದರವನ್ನು ನಾಶಪಡಿಸುವ ರಸಾಯನ ವಸ್ತುಗಳ ಬಗ್ಗೆ ಜಾಗೃತಿ ಉಂಟುಮಾಡಬೇಕು. ನೆಲಮಟ್ಟದಲ್ಲಿ ಓಝೋನ್ ಕಣಗಳ ಉತ್ಪಾದನೆಯಾಗದಂತೆ ತಡೆಯಬೇಕು. ಅಂದರೆ, ವಾಹನಗಳಿಂದಾಗುವ ವಾಯು ಮಾಲಿನ್ಯವನ್ನು ತಗ್ಗಿಸಲು ಸಹಕರಿಸಬೇಕು. ಇದಕ್ಕಾಗಿ-

  1. ಹದಿನೈದು ವರ್ಷಗಳಿಂಗಿಂತ ಹಳೆಯದಾದ ಡೀಸೆಲ್ ವಾಹನಗಳನ್ನು ನಗರಗಳಲ್ಲಿ ಬಳಸಬಾರದು. ಈ ನಿಯಮವನ್ನು ಕಡ್ಡಾಯ ಜಾರಿಗೊಳಿಸಲು ಒತ್ತಾಯಿಸಬೇಕು.
  2. ನಗರದ ವಾಯುಮಾಲಿನ್ಯವನ್ನು ಅಳೆದು ವರದಿ ಮಾಡುವಾಗ ಓಝೋನ್ ಮಾಲಿನ್ಯವನ್ನು ಪ್ರತ್ಯೇಕ ಅಳೆಯುತ್ತಿಲ್ಲ. ಅದನ್ನೂ ಅಳೆದು ಜನರಿಗೆ ಎಚ್ಚರಿಕೆ ನೀಡುವ ವ್ಯವಸ್ಥೆ ಬರುವಂತೆ ಮಾಲಿನ್ಯ ನಿಯಂತ್ರಣ ಮಂಡಲಿಯನ್ನು ಒತ್ತಾಯಿಸಬೇಕು.
  3. ಸಿಗ್ನಲ್ ಬಳಿ ವಾಹನದ ಎಂಜಿನ್ ಸ್ವಿಚ್ ಆಫ್ ಮಾಡಬೇಕು. ಸಾಧ್ಯವಾದ ಮಟ್ಟಿಗೆ ಸ್ವಂತದ ವಾಹನಗಳ ಬಳಕೆಯನ್ನು ಕಡಿಮೆ ಮಾಡಿ, ಬಸ್ ಗಳಲ್ಲೇ ಸಂಚರಿಸಬೇಕು. ಉದಾ: ನಮ್ಮ ಬಿಎಂಟಿಸಿ, ಪ್ರತಿ ತಿಂಗಳ 4 ರಂದು ‘ಬಸ್ ದಿನ’ ಆಚರಿಸುತ್ತಿದೆ. ಅಂದು ನಾವೆಲ್ಲ ಬಸ್ಸಲ್ಲೇ ಸಂಚರಿಸಬಹುದು.
  4. ಸಣ್ಣಪುಟ್ಟ ತಿರುಗಾಟಕ್ಕೆ ಸೈಕಲ್ ಬಳಸಬೇಕು. ಇಲ್ಲವೇ ನಡೆಯಬೇಕು. ಇವೆರಡಕ್ಕೂ ಪ್ರತ್ಯೇಕ ಪಥಕ್ಕೆ ಒತ್ತಾಯಿಸಬೇಕು.
  5. ನಮ್ಮ ದೇಶದಲ್ಲಿ ಈಗಲೂ ಸಿಎಫ್ ಸಿ ಬಳಕೆ ವ್ಯಾಪಕವಾಗಿದೆ. ಅದನ್ನು ನಿಷೇಧಿಸಲು ಒತ್ತಾಯಿಸಬೇಕು.
  6. ಹಳೇ ಫ್ರಿಜ್, ಏರ್ ಕಂಡೀಶನರ್ ಗಳ ರಿಪೇರಿ ಮಾಡುವವರಿಗೆ ಓಝೋನ್ ವಲಯದ ಮಹತ್ವವನ್ನು ತಿಳಿಸಿ ಹೇಳಬೇಕು.
  7. ಕೃಷಿಯಲ್ಲಿ ರಾಸಾಯನಿಕ ವಸ್ತುಗಳನ್ನು ಬಳಸದ ಸ್ಥಳೀಯವಾಗಿ ಬೆಳೆದ ಸಾವಯವ ಹಣ್ಣು, ತರಕಾರಿ, ದವಸ ಧಾನ್ಯಗಳನ್ನೇ ಹೆಚ್ಚು ಹೆಚ್ಚಾಗಿ ಬಳಸಬೇಕು.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ನಾಗೇಶ ಹೆಗಡೆ
ಶಿಕ್ಷಕ, ಪರಿಸರವಾದಿ, ಪತ್ರಕರ್ತ

Related Articles

ಇತ್ತೀಚಿನ ಸುದ್ದಿಗಳು