Wednesday, June 25, 2025

ಸತ್ಯ | ನ್ಯಾಯ |ಧರ್ಮ

ಚಿತ್ರಕಲೆ-ಸಾಹಿತ್ಯ ಮನಸ್ಸಿನ ಕೊಳಕನ್ನು ತೊಳೆಯುವ ಶಕ್ತಿ ಹೊಂದಿವೆ – ಕೆ.ಟಿ. ಶಿವಪ್ರಸಾದ್

ಹಾಸನ : ಮನುಷ್ಯ ಹುಟ್ಟಿದಾಗಲೆ ಗುಹಾಂತರಗಳಲ್ಲಿ ಚಿತ್ರ ರಚಿಸುತ್ತಾ ಆನಂದವಾಗಿ ಬದುಕಿದ್ದನ್ನು ನಾವು ಇತಿಹಾಸದಲ್ಲಿ ಓದಿ ತಿಳಿದಿದ್ದೇವೆ. ಆಗಿನ ಚಿತ್ರಕಲೆಯ ಅಧ್ಯಯನದ ಆಧಾರದ ಮೇಲೆ ರಾಜಕೀಯ , ಸಾಂಸ್ಕೃತಿಕ, ಆರ್ಥಿಕಸ್ಥಿತಿಗಳನ್ನು ತಿಳಿಯುತ್ತೇವೆ ಆಗಿನಿಂದ ಪ್ರಾರಂಭವಾಗುವ ಚಿತ್ರ ರಚನೆಯು ಎಲ್ಲಿಯೂ ನಿಂತ ನೀರಾಗಿಲ್ಲ ಎಂದು ಚಿತ್ರಕಲಾವಿದರಾದ ಕೆ.ಟಿ. ಶಿವಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ನಗರದ ಕಲಾಭವನದಲ್ಲಿ ಒಡನಾಡಿ ಚಿತ್ರಕಲಾಬಳಗದ ವತಿಯಿಂದ ಏರ್ಪಡಿಸಿದ್ದ ಚಿತ್ರಕಲಾವಿದ ವಸಂತಕುಮಾರ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚಿತ್ರಗಳು ಮಕ್ಕಳ ಭಾಷೆ. ಅವರಿಗೆ ಮೊದಲು ಬರುವುದೇ ಚಿತ್ರಕಲೆ ಆನಂತರ ಬರಹುದು ಓದು. ಚಿತ್ರ ಗೀಚುವುದೇ ಅವರಿಗೆ ಆನಂದ ನಮ್ಮ ಸಮಾಜದ ಎಲ್ಲಾ ವರ್ಗಗಳ ಪ್ರತಿ ಶತ 80 ಮಕ್ಕಳು ತಾವು ಇಷ್ಟಪಡುವ ಆಟಕ್ಕಿಂತಲೂ ಹೆಚ್ಚು ಸಮಯವನ್ನು ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳಲು ಇಚ್ಚಿಸುತ್ತಾರೆ. ಆದ್ದರಿಂದ ಪೋಷಕರು ಮಕ್ಕಳ ಕಲೆಯನ್ನು ಪ್ರೋತ್ಸಾಹಿಸಬೇಕು. ಮಕ್ಕಳು ಚಿತ್ರಕಲೆಯನ್ನು ನೋಡುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಒಂದು ಚಿತ್ರಕಲೆಯಲ್ಲಿ ಕಲಾವಿದ ಯಾವ ಬಣ್ಣ ಬಳಸಿದ್ದಾನೆ ಆ ಚಿತ್ರ ಏನು ಹೇಳುತ್ತಿದೆ ಅದರ ಶೈಲಿ ಎಲ್ಲವನ್ನೂ ಗಮನಿಸಬೇಕು ಇದರಿಂದ ಭಾವಾಭಿವ್ಯಕ್ತಿ ಕಲ್ಪನಾಶಕ್ತಿ ಜ್ಞಾಪಕ ಶಕ್ತಿ ವರ್ಧಿಸುವುದಕ್ಕೆ ಸಹಾಯಕವಾಗುತ್ತದೆ ಎಂದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕವಿ ಗೊರೂರು ಅನಂತರಾಜ್, ಚಿತ್ರಕಲೆಯಲ್ಲಿ ನಮ್ಮ ಜಿಲ್ಲೆಯನ್ನು ಜಾಗತಿಕಮಟ್ಟಕ್ಕೆ ಕೊಂಡೊಯ್ಯದ ಕೀರ್ತಿ ಕೆ.ಟಿ.ಶಿವಪ್ರಸಾದ್ ಗೆ ಸಲ್ಲುತ್ತದೆ. ಕಲೆಯಲ್ಲಿ ಈ ದೇಶದ ದೊಡ್ಡ ಆಸ್ತಿ ಇವರು. ಕವಿಶೈಲದಲ್ಲಿ ಇವರು ನಿರ್ಮಿಸಿರುವ ಕುವೆಂಪು- ತೇಜಸ್ವಿಯವರ ಸ್ಮಾರಕ ಬಹಳ ಅದ್ಬುತವಾಗಿದೆ ಇಡೀ ಪರಿಸರವನ್ನೇ ಕಾನ್ವಾಸ್ ಮಾಡಿಕೊಂಡು ತಮ್ಮದೇ ಆದ ಕಲ್ಪನೆಯಲ್ಲಿ ಸ್ಮಾರಕ ನಿರ್ಮಿಸಿದ್ದು ಇದು ಜಗತ್ತಿನ ಬಹುದೊಡ್ಡ ಸ್ಮಾರಕ ಇದನ್ನು ನೋಡುತ್ತಿದ್ದರೆ ಕಲಾವಿದನ ಕಲ್ಪನೆ ನಿಜಕ್ಕೂ ಶ್ಲಾಘನೀಯವಾದುದು.ಕೆ.ಟಿ.ಶಿವಪ್ರಸಾದ್ ಅವರ ಒಂದೊಂದು ಕಲೆಯನ್ನು ನೋಡಿದರೆ ಒಂದೊಂದು ಕಾದಂಬರಿಯನ್ನು ರಚಿಸಬಹುದು ಅಷ್ಟೊಂದು ವಿಷಯಗಳು ಅವರ ಕಲೆಯಲ್ಲಿ ಇರುತ್ತವೆ ಇವರ ಕಲೆ ಯುವ ಕಲಾವಿದರಿಗೆ ಸ್ಪೂರ್ತಿಯಾಗಿದೆ. ಇನ್ನೂ ಕಲಾವಿದ ವಸಂತಕುಮಾರ್ ಅವರು ಕೂಡ ಇಲ್ಲಿ ಪ್ರದರ್ಶಿಸಿರುವ ಕಲೆಗಳು ಬಹಳ ಅದ್ಬುತವಾಗಿದ್ದು ಅವರು ತಮ್ಮ ಲ್ಯಾಂಡ್ ಸ್ಕೇಪ್ ಚಿತ್ರಗಳ ಮೂಲಕ ಜನರಲ್ಲಿ ಪರಿಸರ ಕಾಳಜಿಯನ್ನು ಮೂಡಿಸುತ್ತಿದ್ದಾರೆ ಅವರ ಕುಂಚದಲ್ಲಿ ಮೂಡಿ ಬಂದಿರುವ ಕಲೆಗಳು ನೋಡುಗನಿಗೆ ಮುದವನ್ನು ನೀಡುತ್ತಿದೆ ಎಂದು ಹೇಳಿದರು.


ಲೇಖಕಿ ಸಿ. ಸುವರ್ಣಶಿವಪ್ರಸಾದ್ ಮಾತನಾಡಿ, ಕಲೆ ಮನುಷ್ಯನ ವ್ಯಕ್ತಿತ್ವವನ್ನು ವಿಕಸಗೊಳಿಸಲು ಸಹಕಾರಿಯಾಗಿದೆ ಆದ್ದರಿಂದ ಮಕ್ಕಳು ಬಾಲ್ಯದಿಂದಲೇ ತಮ್ಮ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಸಂಗೀತ, ನೃತ್ಯ , ಚಿತ್ರಕಲೆ , ಕ್ರೀಡೆ , ಬರವಣಿಗೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು ಆಗ ತಮ್ಮ ಸೃಜನಶೀಲತೆಯ ಬೆಳವಣಿಗೆಯ ಜೊತೆಗೆ ಸಂಸ್ಕೃತಿಯು ಬೆಳೆಯಲು ಸಹಕಾರಿಯಾಗುತ್ತದೆ ಎಂದರು.
ಕಲಾವಿದ ವಸಂತಕುಮಾರ್ ಅವರು ಮಾತನಾಡಿ, ಪ್ರತಿವರ್ಷ ವಿಶ್ವಪರಿಸರದ ಅಂಘವಾಗಿ ತಮ್ಮ ಏಕವ್ಯಕ್ತಿಕಲೆಯನ್ನು ಪ್ರದರ್ಶನ ಮಾಡುತ್ತಿದ್ದು ಜೊತೆಗೆ ಮಕ್ಕಳಲ್ಲಿ ಕಲಾಭಿರುಚಿಯನ್ನು ಮೂಡಿಸುವ ಸಲುವಾಗಿ ಪರಿಸರ ಕುರಿತ ಚಿತ್ರಕಲಾಸ್ಪರ್ಧೆ ಏರ್ಪಡಿಸುತ್ತಾ ಕಲೆಯನ್ನು ಪ್ರೋತ್ಸಾಹಿಸುವ ಜೊತೆಗೆ ಪರಿಸರವನ್ನು ಉಳಿಸಿ ಎಂದು ಉತ್ತೇಜನ ನೀಡುತ್ತಿರುವುದು ನಿಜಕ್ಕೂ ಉತ್ತಮವಾದ, ಬೆಳವಣಿಗೆ ಇಂದು ಪರಿಸರದ ವೈಪರಿತ್ಯದಿಂದ ಹವಾಮಾನದಲ್ಲಿ ಹಲವಾರು ಬದಲಾವಣೆಗಳಾಗಿ ಅಪಾರ ಸಾವು ನೋವುಗಳು ಸಂಭವಿಸುತ್ತಿವೆ ಆದ್ದರಿಂದ ಪ್ರತಿಯೊಬ್ಬರು ಪರಿಸರದ ಬಗ್ಗೆ ಕಾಳಜಿ ವಹಿಸಬೇಕು . ನಮ್ಮ ಸುತ್ತಮುತ್ತ ಪರಿಸರ ಚನ್ನಾಗಿ ಇರಬೇಕು ಎಂದರೆ ಮೊದಲು ಸ್ವಚ್ಚತೆಯನ್ನು ಕಾಪಾಡಬೇಕು, ಕಸವನ್ನು ಎಲ್ಲೆಂದರಲ್ಲಿ ಹಾಕಬಾರದು ನಮಗೆ ಉತ್ತಮ ಆಮ್ಲಜನಕ ದೊರೆಯ ಬೇಕಾದರೆ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸಬೇಕು ಇದರಿಂದ ಉತ್ತಮ ಪರಿಸರವನ್ನು ನಿರ್ಮಿಸಲು ಸಹಾಯಕವಾಗುತ್ತದೆ ಗಿಡಮರಗಳಿದ್ದರೆ ನಮಗೆ ಮನಸ್ಸಿಗೆ ಉಲ್ಲಾಸ ತೊರೆಯುತ್ತದೆ ಅಲ್ಲದೇ ಒಳ್ಳೆಯ ಆಲೋಚನೆಗಳು ಮೂಡುತ್ತದೆ ಎಂದರು,

Related Articles

ಇತ್ತೀಚಿನ ಸುದ್ದಿಗಳು

You cannot copy content of this page