Friday, June 14, 2024

ಸತ್ಯ | ನ್ಯಾಯ |ಧರ್ಮ

ಪನೌತಿ ಪ್ರಸಂಗ; ವಿಶ್ವಗುರುವಿನ ಅಭಿಮಾನ ಭಂಗ

ಅಪಶಕುನ ಹಾಗೂ ಕಾಲ್ಗುಣಗಳನ್ನು ನಂಬುವವರಿಗೆ ಇಂಬು ಕೊಡುವಂತೆ ಸರಣಿ ಸನ್ನಿವೇಶಗಳು ಮೋದಿಯವರಿಗೆ ಸಂಬಂಧಿಸಿದಂತೆ ಕಳೆದ ಹತ್ತು ವರ್ಷದಿಂದ ನಡೆದಿವೆ, ನಡೆಯುತ್ತಲೇ ಇವೆ. ಇವೆಲ್ಲಾ ಕಾಕತಾಳೀಯವೂ ಆಗಿರಬಹುದು ಇಲ್ಲವೇ ಮೋದಿಯವರ ದುರಾಡಳಿತದ ದುಷ್ಪರಿಣಾಮಗಳೂ ಆಗಿರಬಹುದು. ಆದರೆ, ಎಲ್ಲವನ್ನೂ ಅವರ ಕಾಲ್ಗುಣಕ್ಕೆ ಹೋಲಿಸಿ ಅಪಪ್ರಚಾರ ಮಾಡುವುದೂ ಮೌಢ್ಯದ ಭಾಗವೇ ಆಗಿದೆ ಶಶಿಕಾಂತ ಯಡಹಳ್ಳಿ, ರಂಗಕರ್ಮಿ

ರಾಹುಲ್ ಗಾಂಧೀಯವರು ವಿಶ್ವಗುರುವಿನ ‘ಪನೌತಿ’ ಬಗ್ಗೆ ಟೀಕಿಸಿದಾಗ ಸಂಘ ಪರಿವಾರವೇ ಬೆಚ್ಚಿ ಬಿತ್ತು. ಬಿಜೆಪಿ ನಾಯಕರು ಎಚ್ಚರಾಗಿ ಮಾತಿನ ಮಚ್ಚು ಹಿಡಿದು ಪ್ರತ್ಯಾರೋಪಗಳ ಸಮರಕ್ಕೆ ನಿಂತರು. ಯಥಾಪ್ರಕಾರ ಗೋದಿ ಮೀಡಿಯಾದ ಕೂಗುಮಾರಿಗಳು ತಕತಕ ಕುಣಿಯತೊಡಗಿದವು.

ಇಷ್ಟಕ್ಕೂ ಈ ಪನೌತಿ ಅಂದ್ರೆ ಏನು? ಅಪಶಕುನ ಮುಂಡೇದೆ ಅಂತಾ ಹಾರವರು ಮಾತು ಮಾತಿಗೂ ಬೈತಾ ಇರ್ತಾರಲ್ಲಾ ಅದೇ ಇದು. ದರಿದ್ರದವ, ಅನಿಷ್ಟದವ ಎಂದೂ ಅರ್ಥೈಸಿಕೊಳ್ಳಬಹುದು.

ಯಾವಾಗ ಕ್ರಿಕೆಟ್ ಸರಣಿಯ ಎಲ್ಲಾ ಪಂದ್ಯಗಳನ್ನು ಗೆದ್ದ ಟೀಂ ಇಂಡಿಯಾ ಫೈನಲ್ ನಲ್ಲಿ ಸೋತಿತೋ, ಹಾಗೆ ಸೋತ ಆಟಕ್ಕೆ ಪ್ರಧಾನಿಗಳು ಸಾಕ್ಷಿಯಾದರೋ, ಅವರದೇ ನಾಮಧೇಯದ ಕ್ರೀಡಾಂಗಣಕ್ಕೆ ಕಾಲಿಟ್ಟರೋ ಆಗ ಆ ಸೋಲಿನ ಹೊಣೆಯನ್ನು ಮೋದಿ ಹೆಗಲಿಗೆ ಹೊರಿಸಲು ಮೋದಿ ವಿರೋಧಿಗಳು ಉತ್ಸುಕರಾದರು. ಪ್ರಧಾನಿಗಳು ಜಾಲತಾಣಗಳಲ್ಲಿ ವಿಪರೀತ ಟ್ರೋಲಿಗೆ ಒಳಗಾದರು. ಐರನ್ ಲೆಗ್ ಎಂದು ಟೀಕೆಗೆ ಭಾಜನರಾದರು. ಮೋದಿ ಕಾಲ್ಗುಣದಿಂದಲೇ ಭಾರತಕ್ಕೆ ಆಟದಲ್ಲಿ ಸೋಲಾಯಿತು ಎಂದು ಪ್ರಧಾನಿಗಳ ಕಾಲೆಳೆದರು. ಇಷ್ಟೆಲ್ಲಾ ಆದರೂ ಮೋದಿ ಭಕ್ತಗಣ ಒಳಗೊಳಗೆ ಉರಿದು ಕೊಂಡರೂ ಹೊರಗೆ ಮುಗುಮ್ಮಾಗಿ ಸುಮ್ಮನಿದ್ದರು. 

ಆದರೆ ಯಾವಾಗ ಅದೇ ಮೋದಿ ಕಾಲ್ಗುಣ ಅಪಶಕುನ (ಪನೌತಿ) ಎಂದು ಸಾರ್ವಜನಿಕವಾಗಿ ರಾಹುಲ್ ಗಾಂಧಿ ಹೇಳಿದರೋ ಆಗ ಬಿಜೆಪಿಗರಿಗೆ ಉರಿ ತಡೆದು ಕೊಳ್ಳದಾಯಿತು. “ರಾಹುಲ್ ಕ್ಷಮೆ ಕೇಳಬೇಕು, ಕಾಂಗ್ರೆಸ್ಸಿಗೆ ದುರ್ಗತಿ ಬಂದಿರೋದೇ ರಾಹುಲ್ ಗಾಂಧಿಯವರ ಕಾಲ್ಗುಣದಿಂದ” ಎನ್ನುವ ಪ್ರತ್ಯಾರೋಪಗಳ ಸುರಿಮಳೆ ಸುರಿಸ ತೊಡಗಿದರು. ಹೀಗೆ ಅಪಶಕುನವೆಂದು ರಾಹುಲ್ ಗಾಂಧಿಯವರು ಮೌಢ್ಯಪರ ಹೇಳಿಕೆ ನೀಡಬಾರದಿತ್ತು ಎಂದು ಶಕುನಗಳನ್ನು ನಂಬದ ಕೆಲವು ಪ್ರಗತಿಪರರು ವಾಟ್ಸಾಪಲ್ಲಿ ಗೊಣಗುಟ್ಟಿದರು. 

ಚಿತ್ರ- ಗೂಗಲ್

ಅಡಿಗಡಿಗೆ ಶಕುನಗಳನ್ನು ನಂಬುವವರು, ಅಪಶಕುನಗಳ ಮೇಲೆ ವಿಶ್ವಾಸವಿರುವವರು ಈ ದೇಶದಾದ್ಯಂತ ತುಂಬಿದ್ದಾರೆ. ಈ ಶಕುನ ಅಪಶಕುನಗಳು ಸನಾತನಿ ಪುರೋಹಿತಶಾಹಿಗಳ ಬಳುವಳಿಯಾಗಿದೆ. ಮೂಲಾ ನಕ್ಷತ್ರದಲ್ಲಿ ಹುಟ್ಟಿದರೆ,  ಹಲ್ಲಿ ಬಿದ್ದರೆ, ಬೆಕ್ಕು ಅಡ್ಡಬಂದರೆ, ವಿಧವೆಯರ – ದಲಿತರ ಮುಖ ನೋಡಿದರೆ ಅಪಶಕುನವೆಂದು ನಂಬಿಸಿದವರೇ ಈ ಸಂಘ ಪರಿವಾರ ಆರಾಧಿಸುವ ಮನುವಾದಿ ಸನಾತನಿಗಳು. ಈಗ ಅವರದೇ ಪನೌತಿ ಬಾಣವನ್ನು ಅವರ ಅಧಿನಾಯಕನಿಗೆ ತಿರುಗಿ ಬಿಟ್ಟರೆ ‘ಅಯ್ಯೋ ಅನ್ಯಾಯ, ಅಯ್ಯಯ್ಯೋ ಅಪಮಾನ’ ಎಂದು ಬಾಯಿಬಡಿದುಕೊಳ್ಳುವುದಾದರೂ ಯಾಕೆ? 

ಅಪಶಕುನ ಅನಿಷ್ಟಗಳನ್ನು ನಂಬುವವರ ಮಾತು ಬಿಡಿ, ನಂಬದವರಿಗೂ ಅನುಮಾನ ಬರುವಂತಹ ಅನಿಷ್ಟಗಳಿಗೆ ಕಳೆದೊಂದು ದಶಕದ ಮೋದಿ ಆಡಳಿತವೇ ಸಾಕ್ಷಿಯಾಗಿದೆಯಲ್ಲಾ. 

ವಿಶ್ವಗುರುಗಳು ಜಾರಿಗೆ ತಂದ ನೋಟ್ ಅಮಾನ್ಯೀಕರಣದಿಂದ ಉಂಟಾದ ದಾರಿದ್ರ್ಯದಿಂದ ಇನ್ನೂ ದೇಶ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಜಿಎಸ್ಟಿ ಕೊಟ್ಟ ಏಟಿಗೆ ಕೆಳಗೆ ಬಿದ್ದ  ಉದ್ಯಮಗಳು ಎದ್ದು ನಿಂತಿಲ್ಲ. ರೈತ ವಿರೋಧಿ ಕಾಯ್ದೆಗಳ ಸಂಕಷ್ಟದಿಂದ ರೈತಾಪಿ ಜನ ಸುಧಾರಿಸಿಕೊಂಡಿಲ್ಲ. ಕೈಗಾರಿಕೆಗಳ ಸ್ಥಗಿತ ಹಾಗೂ ಆರ್ಥಿಕ ಮಂದಗತಿಯಿಂದಾಗಿ ಕೆಲಸ ಕಳೆದುಕೊಂಡು ನಿರುದ್ಯೋಗಿಯಾದವರಿಗೆ ಸೂಕ್ತ ಉದ್ಯೋಗ ದೊರೆತಿಲ್ಲ. ಇವೆಲ್ಲವೂ ಮೋದಿಯವರ ಕಾಲ್ಗುಣದ ಪ್ರಭಾವ ಎಂದರೆ ಅಂಧಭಕ್ತರಿಗೆ ಅರ್ಥವಾಗುವುದಿಲ್ಲ.

ಹೋಗಲಿ, ಮೋದಿಯವರು ಕಾಲಿಟ್ಟ ಕಡೆ ಖಲಾಸ್ ಎಂದು ಹೇಳುವವರಿಗೆ, ಅವರ ಉಪಸ್ಥಿತಿಯೇ ಅಪಶಕುನ ಎಂದು ಆರೋಪಿಸುವವರಿಗೆ ಇತ್ತೀಚೆಗೆ ಅನೇಕ ಉದಾಹರಣೆಗಳು ಕಾರಣವಾಗಿವೆ. ಚಂದ್ರಯಾನ ಉಪಗ್ರಹದ ಉಡಾವಣೆಗೆ ಮೋದೀಜಿ ಹಾಜರಿದ್ದಾಗ ಇಡೀ ಯೋಜನೆಯೇ ವಿಫಲವಾಯ್ತು. ಮೋದಿಯವರ ಅನುಪಸ್ಥಿತಿಯಲ್ಲಿ ಚಂದ್ರಯಾನ ಯಶಸ್ವಿಯಾಯಿತು. ಪಶ್ಚಿಮ ಬಂಗಾಳಕ್ಕೆ ಚುನಾವಣಾ ಪ್ರಚಾರಕ್ಕೆ ಮೋದಿಯವರು ಹೋದರು, ಬಿಜೆಪಿ ಸೋತು ಸುಣ್ಣವಾಯ್ತು. ಕರ್ನಾಟಕದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮೋದೀಜಿ ಎಲ್ಲೆಲ್ಲಿ ರೋಡ್ ಶೋ ಮೂಲಕ ಅಬ್ಬರದ ಪ್ರಚಾರ ಮಾಡಿದ್ದರೋ, ಅಲ್ಲೆಲ್ಲಾ ಬಿಜೆಪಿ ಅಭ್ಯರ್ಥಿಗಳು ನೆಲಕಚ್ಚಿ ಪಕ್ಷಕ್ಕೆ ಅಪಾರ ಹಿನ್ನಡೆಯಾಯ್ತು. ಈಗ ಲೇಟೆಸ್ಟಾಗಿ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎಲ್ಲಾ ಹತ್ತು ಪಂದ್ಯಗಳನ್ನೂ ಗೆದ್ದು ಜಯಭೇರಿ ಬಾರಿಸಿದ್ದ ಟೀಂ ಇಂಡಿಯಾ ಅಂತಿಮ ಹಂತದಲ್ಲಿ ಮೋದೀಜಿಯ ಉಪಸ್ಥಿತಿಯಲ್ಲಿ ಹೀನಾಯವಾಗಿ ಸೋತಿತು. ಇದಕ್ಕೆ ಪನೌತಿ ಅಲ್ಲದೇ ಏನಂತೀರಿ? ಅಂತಾರಾಷ್ಟ್ರೀಯ ವಿಚಾರಕ್ಕೆ ಬಂದರೆ ಅಮೇರಿಕದಲ್ಲಿ ಟ್ರಂಪ್ ಪರ ಮೋದೀಜಿ ಪ್ರಚಾರ ಮಾಡಿದರು. ಕರೋನಾ ದುಸ್ಥಿತಿಯಲ್ಲೂ ಭಾರತಕ್ಕೂ ಟ್ರಂಪ್ ಕರೆತಂದು ಅದ್ದೂರಿ ಸಮಾರಂಭ ಮಾಡಿದರು. ಆದರೆ ಟ್ರಂಪ್ ಅಧಿಕಾರ ಕಳೆದುಕೊಂಡರು. ಇದಕ್ಕೆ ಮೋದಿ ಕಾಲ್ಗುಣವೇ ಕಾರಣವಾ?

ಚಂದ್ರಯಾನ 2- ಇಸ್ರೋದಲ್ಲಿ ಪ್ರಧಾನಿಗಳು‌ (ಗೂಗಲ್)

 ಹೀಗೆ ಅಪಶಕುನ ಹಾಗೂ ಕಾಲ್ಗುಣಗಳನ್ನು ನಂಬುವವರಿಗೆ ಇಂಬು ಕೊಡುವಂತೆ ಸರಣಿ ಸನ್ನಿವೇಶಗಳು ಮೋದಿಯವರಿಗೆ ಸಂಬಂಧಿಸಿದಂತೆ ಕಳೆದ ಹತ್ತು ವರ್ಷದಿಂದ ನಡೆದಿವೆ, ನಡೆಯುತ್ತಲೇ ಇವೆ. ಇವೆಲ್ಲಾ ಕಾಕತಾಳೀಯವೂ ಆಗಿರಬಹುದು ಇಲ್ಲವೇ ಮೋದಿಯವರ ದುರಾಡಳಿತದ ದುಷ್ಪರಿಣಾಮಗಳೂ ಆಗಿರಬಹುದು. ಆದರೆ ಎಲ್ಲವನ್ನೂ ಅವರ ಕಾಲ್ಗುಣಕ್ಕೆ ಹೋಲಿಸಿ ಅಪಪ್ರಚಾರ ಮಾಡುವುದೂ ಮೌಢ್ಯದ ಭಾಗವೇ ಆಗಿದೆ. ಜನರು ಆಡಿಕೊಳ್ಳುವುದಕ್ಕೂ, ರಾಹುಲ್ ಗಾಂಧಿ ಆರೋಪಿಸುವುದಕ್ಕೂ ವಿಶ್ವಗುರುಗಳು ಮಾಡುವುದಕ್ಕೂ ಕಾಕತಾಳೀಯ ಸಂಬಂಧ ಇರುವುದು ಸ್ಪಷ್ಟ. ಎಲ್ಲ ಅನಿಷ್ಟಕ್ಕೂ ಶನೀಶ್ವರನೇ ಕಾರಣ ಎನ್ನುವ ಹಾಗೆ ದೇಶದೊಳಗಿನ ಎಲ್ಲಾ ಅನಿಷ್ಟಗಳ ಹೊಣೆಯನ್ನೂ ಪ್ರಧಾನಿಯಾದವರು ಹೊತ್ತುಕೊಳ್ಳಲೇ ಬೇಕಿದೆ. ಆರೋಪ ಬರಬಾರದು ಎಂದರೆ ಜನರ ಹಿತಾಸಕ್ತಿ ಕಾಪಾಡುವ ಕೆಲಸವನ್ನು ಮಾಡಬೇಕಾಗುತ್ತದೆ. ವಾಸ್ತವದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದೆ ಭಾವನಾತ್ಮಕವಾದ ಪ್ರಚೋದನೆಗೆ ಪ್ರಧಾನಿಗಳು ಹೆಚ್ಚು ಒತ್ತುಕೊಟ್ಟಿದ್ದೇ ದೇಶವಾಸಿಗಳ ದುರ್ಗತಿಗೆ ಕಾರಣವಾಗಿದೆ.

“ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದಾಗಲೆಲ್ಲಾ ಮಳೆ ಹೋಗುತ್ತದೆ, ಬರ ಬರುತ್ತದೆ. ಇದಕ್ಕೆ ಕಾಂಗ್ರೆಸ್ ಪಕ್ಷದ ಕಾಲ್ಗುಣವೇ ಕಾರಣ” ಎಂದು ಇದೇ ಬಿಜೆಪಿಗರು ಅಪಪ್ರಚಾರ ಮಾಡಿದ್ದರು, ಈಗಲೂ ಮಾಡುತ್ತಲೇ ಇದ್ದಾರೆ. ಬಿಜೆಪಿ ಸರಕಾರ ಬಂದಾಗಲೆಲ್ಲಾ ಪ್ರವಾಹ ಬಂದು ಜನ ಜಾನುವಾರು ಸಾಯುವುದನ್ನು ಮರೆಮಾಚುತ್ತಾರೆ. ಅಂದರೆ ಬಿಜೆಪಿಯ ನಾಯಕರು ಅಪಶಕುನ, ಕಾಲ್ಗುಣ ಅಂತೆಲ್ಲಾ ಆರೋಪಿಸಬಹುದು, ಆದರೆ ಕಾಂಗ್ರೆಸ್ ನಾಯಕರು ಪ್ರಧಾನಿಗಳ ಕಾಲ್ಗುಣವನ್ನು ಟೀಕಿಸಿ ಪನೌತಿ ಎಂದು ಹೇಳಿದರೆ ಉರಿ ಕಿತ್ತುಕೊಂಡು ಬರುತ್ತದೆ. ಇದಕ್ಕೆ ಆತ್ಮವಂಚನೆಯ ರಾಜಕಾರಣ ಎನ್ನುವುದು. ಅದನ್ನೇ ಬಿಜೆಪಿಗರು, ಸಂಘಿಗಳು ಹಾಗೂ ಅದರ ಸಮರ್ಥಕರು ಮಾಡುತ್ತಿರುವುದು. ಅದರರ್ಥ ರಾಹುಲ್ ಗಾಂಧಿಯವರು ಹೇಳಿದ್ದನ್ನು ಸಮರ್ಥಿಸಿಕೊಳ್ಳ ಬೇಕೆಂದೇನಿಲ್ಲ. ಆದರೆ ಅವರು ಹೇಳಿದ್ದಕ್ಕೆ ಪೂರಕವಾಗಿದ್ದೇ ಮೋದಿ ಆಡಳಿತದಲ್ಲಿ ನಡೆಯುತ್ತಿದೆಯಲ್ಲಾ… ದೊರೆಯಾದವರು ಆರೋಪಗಳು ಬರದಂತೆ ಆಳ್ವಿಕೆ ಮಾಡಬೇಕೇ ಹೊರತು ಆರೋಪಗಳಿಗೆ ಪ್ರತ್ಯಾರೋಪಗಳು ಉತ್ತರವಲ್ಲ. 

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

ಇದನ್ನೂ ಓದಿ-ಕ್ರಿಕೆಟ್ ಫೈನಲ್: ʼನಾನೇಕೆ ನಡುವಿನಲ್ಲೇ ಎದ್ದು ಬಂದೆ?ʼ

Related Articles

ಇತ್ತೀಚಿನ ಸುದ್ದಿಗಳು