Monday, June 17, 2024

ಸತ್ಯ | ನ್ಯಾಯ |ಧರ್ಮ

ಮುಖ್ಯಮಂತ್ರಿ ಸಿದ್ದರಾಮಯ್ಯನವರ 14ನೇ ಬಜೆಟ್ ಭಾಷಣದ ಪೂರ್ಣ ಪಾಠ ಭಾಗ-18 – ಇ ಆಡಳಿತಕ್ಕೆ ಏನು, ಎಷ್ಟು?

ಇ-ಆಡಳಿತ

  • ಇ-ಆಡಳಿತ ಇಲಾಖೆಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಗಳಾದ FRUITS, Kutumba, GIS ಗಳನ್ನು ಬಳಸಿಕೊಂಡು ತಾಲ್ಲೂಕು ಹಂತದ ಕಛೇರಿಗಳಲ್ಲಿನ ಶಾಸನಬದ್ಧ ಕಾಲಮಿತಿ ಇರುವಂತಹ ಸೇವೆಗಳನ್ನು ಹೊರತುಪಡಿಸಿ, ಉಳಿದ ಸೇವೆಗಳನ್ನು ತತ್‌ಕ್ಷಣವೇ ಅಥವಾ ಅದೇ ದಿನದಂದು ಅಥವಾ ಅತ್ಯಂತ ಸಂಕೀರ್ಣ ಪ್ರಕರಣಗಳಲ್ಲಿ ಒಂದು ವಾರದೊಳಗೆ ಸಾರ್ವಜನಿಕರಿಗೆ ಒದಗಿಸಲು ಯತ್ನಿಸಲಾಗುವುದು. ಪ್ರಾಯೋಗಿಕವಾಗಿ ಒಂಭತ್ತು ಕೋಟಿ ರೂ.ಗಳ ವೆಚ್ಚದಲ್ಲಿ ಈ ವಿಧಾನವನ್ನು ಜಾರಿಗೆ ತರಲು ಚಿಕ್ಕಬಳ್ಳಾಪುರ, ಕೊರಟಗೆರೆ, ಚಾಮರಾಜನಗರ, ರಾಯಚೂರು, ಧಾರವಾಡ ಮತ್ತು ಬಂಟ್ವಾಳ ತಾಲ್ಲೂಕುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
  • ಸಕಾಲದಡಿ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳು ಸಂಪರ್ಕಿತ ಡೇಟಾಬೇಸ್‌ (Connected database) ವಿಧಾನ ಬಳಸಿ ಕಡಿಮೆ ಅವಧಿಯಲ್ಲಿ ಸೇವೆಗಳನ್ನು ನೀಡಲು ಬ್ಯಾಕ್‌ ಎಂಡ್‌ ಪ್ರಕ್ರಿಯೆಗಳಲ್ಲಿ (backend processes) ಪಾರದರ್ಶಕತೆ ತರಲಾಗುವುದು.
    100 ಪ್ರಮುಖ ಸೇವಾಸಿಂಧು ಸೇವೆಗಳನ್ನು ಸಕಾಲ ವಿನ್ಯಾಸಕ್ಕೆ ಅನುಗುಣವಾಗಿ ಪರಿವರ್ತಿಸಲು Business Process
    Re-engineering ಕೋಶವನ್ನು ಸ್ಥಾಪಿಸಲಾಗುವುದು. ಇದರಲ್ಲಿ ಪ್ರಮುಖವಾಗಿ ಆದಾಯ ಪ್ರಮಾಣ ಪತ್ರಕ್ಕಾಗಿ ಕುಟುಂಬ ಆದಾಯವನ್ನು ವಸ್ತುನಿಷ್ಠ ನಿರ್ಣಯ ರೂಪದಲ್ಲಿ ಪರಿವರ್ತಿಸಲಾಗುವುದು. ಈ ಯೋಜನೆಗಾಗಿ ಮೂರು ಕೋಟಿ ರೂ.ಗಳನ್ನು ಒದಗಿಸಲಾಗುವುದು.
  • ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಕೆ-ಜಿ.ಐ.ಎಸ್. (KGIS) ತಂತ್ರಜ್ಞಾನವನ್ನು ಆಧರಿಸಿ ವೈಜ್ಞಾನಿಕ ಮತ್ತು ತರ್ಕಬದ್ದ ಮಾರ್ಗಸೂಚಿ ದರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುವುದು. ಎಲ್ಲಾ ರಸ್ತೆಗಳು ಮತ್ತು ಬೀದಿಗಳಿಗೆ ಹೊಂದಿಕೊಂಡಿರುವ ಆಸ್ತಿಗಳ ಮಾರ್ಗಸೂಚಿ ಮೌಲ್ಯವನ್ನು ಹಾಗೂ ಅದರ ನಿಖರ ಮುದ್ರಾಂಕ ಶುಲ್ಕವನ್ನು ಆನ್‌ಲೈನ್‌ ನಲ್ಲಿ ಪಡೆಯಲು ಅನುಕೂಲವಾಗಲಿದೆ. ಪ್ರಾಯೋಗಿಕವಾಗಿ ಈ ಯೋಜನೆಯನ್ನು ಒಂದು ಜಿಲ್ಲೆಯಲ್ಲಿ ಪ್ರಾರಂಭಿಸಲಾಗುವುದು ಮತ್ತು ಹಂತ ಹಂತವಾಗಿ ರಾಜ್ಯದೆಲ್ಲೆಡೆ ಜಾರಿಗೊಳಿಸಲಾಗುವುದು.
  • ಸರ್ಕಾರದ ವಿವಿಧ ಕಾರ್ಯಕ್ರಮ/ಯೋಜನೆಗಳ ಅನುಷ್ಠಾನಕ್ಕಾಗಿ ಇಲಾಖೆಗಳ ಮಧ್ಯೆ ಸಮನ್ವಯತೆ ಸಾಧಿಸಿ ಜಂಟಿ ನಿರ್ಧಾರ ಕೈಗೊಂಡು ಅನುಮೋದನೆ ನೀಡಲು ಅನುವಾಗುವಂತೆ ಜಿಐಎಸ್‌ (GIS) ಆಧಾರಿತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುವುದು.
  • ರಾಜ್ಯ ವಿಧಾನ ಮಂಡಲದ ಕಲಾಪಗಳನ್ನು ಸುಗಮವಾಗಿ ನಡೆಸುವ ಉದ್ದೇಶದಿಂದ ಹಾಗೂ ಕರ್ನಾಟಕ ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಕಲಾಪದ ಮಾಹಿತಿ ಸುಲಭವಾಗಿ ಲಭ್ಯವಾಗಿಸುವ ನಿಟ್ಟಿನಲ್ಲಿ ವಿಧಾನ ಮಂಡಲದ ಚಟುವಟಿಕೆಗಳ ಡಿಜಿಟಲೀಕರಣದ ಯೋಜನೆಯನ್ನು ಹೊಸದಾಗಿ ರೂಪಿಸಿ ಅನುಷ್ಠಾನಗೊಳಿಸಲಾಗುವುದು.
    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ
  • 2015-16ನೇ ಸಾಲಿನಲ್ಲಿ ಮೈಸೂರು ಜಿಲ್ಲೆಯಲ್ಲಿ ಜಾಗತಿಕ ಮಟ್ಟದ ಚಿತ್ರನಗರಿಯನ್ನು ಸ್ಥಾಪಿಸಲು ಘೋಷಿಸಲಾಗಿತ್ತು. ನಂತರದ ಸರ್ಕಾರವು ಸದರಿ ಚಿತ್ರನಗರಿಯನ್ನು ಬೆಂಗಳೂರಿಗೆ ಸ್ಥಳಾಂತರಗೊಳಿಸಲು ಉದ್ದೇಶಿಸಿತ್ತು. ಆದರೆ ಇಲ್ಲಿಯವರೆಗೂ ಅನುಷ್ಠಾನಗೊಳಿಸಿರುವುದಿಲ್ಲ. ನಮ್ಮ ಸರ್ಕಾರವು ಹಿಂದೆ ಘೋಷಿಸಿದಂತೆ ಮೈಸೂರು ಜಿಲ್ಲೆಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಚಿತ್ರನಗರಿಯನ್ನು ನಿರ್ಮಿಸಲಿದೆ.
  • ಬೆಂಗಳೂರಿನಲ್ಲಿರುವ ಡಾ. ರಾಜ್‌ಕುಮಾರ್ ಸ್ಮಾರಕದ ಬಳಿ ಕನ್ನಡ ಚಿತ್ರರಂಗ ಬೆಳೆದು ಬಂದ ಇತಿಹಾಸವನ್ನು ದಾಖಲಿಸುವ ವಸ್ತು ಸಂಗ್ರಹಾಲಯವನ್ನು ನಿರ್ಮಿಸಲಾಗುವುದು.
  • ಕಳೆದ ಮೂರು ವರ್ಷಗಳಿಂದ ಕನ್ನಡದ ಗುಣಾತ್ಮಕ ಚಿತ್ರಗಳಿಗೆ ಸಹಾಯಧನ ನೀಡುವ ಯೋಜನೆ ಸ್ಥಗಿತಗೊಂಡಿತ್ತು. ಈ ಬಾರಿ, ಆಯ್ಕೆ ಸಮಿತಿಗಳನ್ನು ರಚಿಸಿ, ಸಹಾಯಧನ ನೀಡಲು ಕ್ರಮ ಕೈಗೊಳ್ಳಲಾಗುವುದು.
  • ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ನೀಡಲಾಗುವ ಮಾಸಾಶನ ಮೊತ್ತವನ್ನು 10 ಸಾವಿರ ರೂ. ಗಳಿಂದ 12 ಸಾವಿರ ರೂ. ಗಳಿಗೆ ಹೆಚ್ಚಿಸಲಾಗುವುದು. ಮಾಸಾಶನ ಪಡೆಯುವ ಪತ್ರಕರ್ತರು ಮೃತಪಟ್ಟಾಗ ನೀಡಲಾಗುವ ಕುಟುಂಬ ಮಾಸಾಶನ ಮೊತ್ತವನ್ನು ಮೂರು ಸಾವಿರ ರೂ. ಗಳಿಂದ ಆರು ಸಾವಿರ ರೂ. ಗಳಿಗೆ ಹೆಚ್ಚಿಸಲಾಗುವುದು.

Related Articles

ಇತ್ತೀಚಿನ ಸುದ್ದಿಗಳು