ನವದೆಹಲಿ: ಮತ ಚಲಾವಣೆಗೆ ಮತಯಂತ್ರಗಳ ಬದಲು ಬ್ಯಾಲೆಟ್ ಪೇಪರ್ ಬಳಕೆ ಕುರಿತು ಕುರಿತು ಗಮನ ಕೊಡಿ, ಜೊತೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ಗಮನ ಕೊಡಬೇಕು ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಬರೆದುಕೊಂಡಿದ್ದು ‘ಬ್ಯಾಲೆಟ್ ಪೇಪರ್ ಹಾಗೂ ಅದೇ ದಿನ ಮತದಾನ ಕುರಿತು ತಮ್ಮ ಆತ್ಮೀಯ ಸ್ನೇಹಿತ ಡೊನಾಲ್ಡ್ ಟ್ರಂಪ್ ನೀಡಿರುವ ಸಂದೇಶಕ್ಕೆ ಪ್ರಧಾನಿ ಮೋದಿ ಗಮನ ಕೊಡುತ್ತಾರೆಯೇ? ಚುನಾವಣಾ ಪ್ರಕ್ರಿಯೆಯ ಸಮಗ್ರತೆ ಕುರಿತು ಇಡೀ ದೇಶದ ಕಳವಳವನ್ನು ಪರಿಹರಿಸುತ್ತಾರೆಯೇ ?’ ಎಂದು ಪ್ರಶ್ನಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಹೇಳಿಕೆ ಸಂಬಂಧ ‘ಎಕನಾಮಿಕ್ ಟೈಮ್ಸ್’ ವರದಿ ಹಂಚಿಕೊಂಡಿರುವ ವೇಣುಗೋಪಾಲ್, ‘ಮಹಾರಾಷ್ಟ್ರದಲ್ಲಿ ಲಕ್ಷಗಟ್ಟಲೆ ಮತದಾರರ ಅಸಹಜ ಹೆಚ್ಚಳ ಮತ್ತು ವಿರೋಧ ಪಕ್ಷಗಳ ಮತಗಳನ್ನು ಅಳಿಸಿ ಹಾಕಿರುವುದರ ಕುರಿತಾಗಿಯೂ ಅವರ ಆಪ್ತ ಮಿತ್ರ ದಿಗ್ಭ್ರಮೆ ವ್ಯಕ್ತಪಡಿಸಿರುವ ಕುರಿತು ನಮಗೆ ಖಾತ್ರಿಯಿದೆ’ ಎಂದು ಹೇಳಿದ್ದಾರೆ.
‘ಇಡೀ ಜಗತ್ತಿಗೆ ಸ್ಪಷ್ಟವಾಗಿ ಗೋಚರಿಸುವ ವಿಷಯವನ್ನು ಬಿಜೆಪಿ ಕಡೆಗಣಿಸುತ್ತಿರುವುದು ದುರಂತದ ಸಂಗತಿಯಾಗಿದೆ. ಚುನಾವಣಾ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುವ ಹಾಗೂ ಪಾರದರ್ಶಕತೆಯಿಂದ ಪಲಾಯನಗೈಯುವ ಬಿಜೆಪಿಯ ವರ್ತನೆಯು ನಮ್ಮ ಅನುಮಾನಗಳನ್ನು ದೃಢಪಡಿಸುತ್ತದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.