Thursday, June 19, 2025

ಸತ್ಯ | ನ್ಯಾಯ |ಧರ್ಮ

ಶಸ್ತ್ರ ಕೈಗೆತ್ತಿಕೊಳ್ಳುತ್ತಿರುವ ಜನರು | ಇದರಲ್ಲಿ ಪ್ರಭುತ್ವದ ಪಾಲು ಎಷ್ಟು?

ಜನತಂತ್ರ ವ್ಯವಸ್ಥೆಯಲ್ಲಿ ಪ್ರಭುತ್ವವು ತನ್ನ ಪ್ರಜೆಗಳ ವಿರುದ್ಧ ಯಾವತ್ತೂ ಹಿಂಸೆಯ ಹಾದಿ ಹಿಡಿಯಬಾರದು. ಹಿಂಸೆಯು ಇನ್ನಷ್ಟು ಹಿಂಸೆಗೆ ಹಾದಿ ಮಾಡಿಕೊಡುತ್ತದೆ. ಪರಿಣಾಮವಾಗಿ ಅಹಿಂಸೆಯಲ್ಲಿ ನಂಬಿಕೆ ಇರಿಸಿದ್ದ ಮಂದಿಯೂ ಹಿಂಸೆಯ ಹಾದಿ ಹಿಡಿಯುವಂತೆ ಮಾಡುತ್ತದೆ. ಶ್ರೀನಿವಾಸ ಕಾರ್ಕಳ ಅವರ  ʼಶ್ರೀನಿ ಕಾಲಂʼ ಓದಿ..

ನಮ್ಮ ನಡುವಿನ ಕ್ರಿಯಾಶೀಲ ಮತ್ತು ಧೈರ್ಯಶಾಲಿ ಪತ್ರಕರ್ತ ನವೀನ್ ಸೂರಿಂಜೆ ಅವರ ‘ಕುತ್ಲೂರು ಕಥನ’ ಪುಸ್ತಕ ಓದುತ್ತಿದ್ದೇನೆ. ನನ್ನ ಮನಸು ಕ್ಯೂಬಾ, ನಕ್ಸಲ್ ಬರಿ, ಕಾಶ್ಮೀರ, ಗುಜರಾತ್ ಗಳತ್ತ ಓಡುತ್ತಿದೆ.

ಶತ್ರು ಸೇನೆಯ ವಿರುದ್ಧ ಗೆರಿಲ್ಲಾ ಯುದ್ಧ ನಡೆಸುತ್ತಿದ್ದ ಕ್ಯೂಬಾದ ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೋ ನಿರಂತರ ಹೋರಾಟದಿಂದ ದಣಿದು, ಬೆಟ್ಟವೊಂದರ ಪುಟ್ಟ ಗುಡಿಸಲಿನಲ್ಲಿ ವಿಶ‍್ರಾಂತಿ ಪಡೆಯುತ್ತಿರುತ್ತಾನೆ. ಅಲ್ಲಿಗೆ ಶತ್ರು ಸೇನೆಯ ಸೇನಾಧಿಕಾರಿ ಮತ್ತು ಒಬ್ಬ ಸೈನಿಕ ಬರುತ್ತಾರೆ. ಫಿಡೆಲ್ ನನ್ನು ಕಂಡ ಸೈನಿಕ ಆತನನ್ನು ಕೊಲ್ಲಲು ತಕ್ಷಣ ಬಂದೂಕು ಗುರಿ ಹಿಡಿಯುತ್ತಾನೆ. ಅದು ಕ್ರಾಂತಿಕಾರಿಗಳ ನಾಯಕ ಫಿಡೆಲ್ ಕ್ಯಾಸ್ಟ್ರೋ ಎಂಬುದು ಆತನಿಗೆ ಗೊತ್ತಿರುವುದಿಲ್ಲ. ಆದರೆ ಸೇನಾಧಿಕಾರಿಗೆ ತಕ್ಷಣ ಆತನ ಗುರುತು ಪತ್ತೆಯಾಗುತ್ತೆ. ‘ಕೊಲ್ಲಬೇಡ’ ಎಂದು ಸೈನಿಕನನ್ನು ತಡೆಯುವ ಆತ ‘Ideas can not be killed (ಸಿದ್ಧಾಂತವನ್ನು ಕೊಲ್ಲುವುದು ಅಸಾಧ್ಯ)’ ಎಂದು ಮೆಲುದನಿಯಲ್ಲಿ ಹೇಳುತ್ತಾನೆ. ಫಿಡೆಲ್ ಕ್ಯಾಸ್ಟ್ರೋ ಬದುಕಿ ಉಳಿಯುತ್ತಾನೆ ಮತ್ತು ಮುಂದೆ ದೀರ್ಘಕಾಲ ಕ್ಯೂಬಾದ ಅಧ್ಯಕ್ಷ ಕೂಡಾ ಆಗುತ್ತಾನೆ.

ನಕ್ಸಲ್ ಬರಿ ಬಂಡಾಯ

ಭಾರತದಲ್ಲಿ ಮಾವೋವಾದಿ ಅಥವಾ ನಕ್ಸಲೀಯ ಚಳುವಳಿಗೆ ಸರಿ ಸುಮಾರು 60 ವರ್ಷಗಳ ಇತಿಹಾಸವಿದೆ. ಪಶ್ಚಿಮ ಬಂಗಾಳದ ಸಿಲಿಗುರಿಯ ಚಹಾ ತೋಟಗಳ ನಡುವೆ ತಣ್ಣಗೆ ಪವಡಿಸಿದ ‘ನಕ್ಸಲ್ ಬರಿ’ ಎಂಬ ಪುಟ್ಟ ಊರಿನಲ್ಲಿ 1967 ರಲ್ಲಿ ರೈತ ದಂಗೆಯಾಗಿ ಆರಂಭವಾದ ಇದು ಮುಂದೆ ಚಾರು ಮಜುಮ್ದಾರ್ ನೇತೃತ್ವದಲ್ಲಿ ಪ್ರಭುತ್ವದ ವಿರುದ್ಧದ ಸಶಸ್ತ್ರ ಹೋರಾಟವಾಗಿ ಪರಿವರ್ತನೆಗೊಂಡು ಬಿಹಾರ, ಒಡಿಶಾ, ತೆಲಂಗಾಣ, ಆಂಧ್ರಪ್ರದೇಶಗಳಿಗೆ ವ್ಯಾಪಿಸಿತು.

ಆನಂತರ ಇದುವರೆಗೆ ಪ್ರಭುತ್ವದ ಪೊಲೀಸರು ಮತ್ತು ಈ ಕ್ರಾಂತಿಕಾರಿ ಕಮ್ಯುನಿಸ್ಟ್ ಕಾರ್ಯಕರ್ತರ ನಡುವಿನ ಕದನದಲ್ಲಿ ಸತ್ತವರ ಲೆಕ್ಕ ಇಟ್ಟವರಿಲ್ಲ. ಸಾವಿರ ಸಾವಿರ ನಕ್ಸಲರನ್ನು ಕೊಲ್ಲಲಾಗಿದೆ, ನಕ್ಸಲ್ ನಾಯಕತ್ವವನ್ನು ಅಳಿಸಿಹಾಕಲಾಗಿದೆ, ಆದರೆ ಇಂದಿಗೂ ನಕ್ಸಲ್ ಹೋರಾಟ ನಡೆದೇ ಇದೆ; ಅವರ ವಿರುದ್ಧದ ಪೊಲೀಸರ ದಾಳಿಯೂ.

ಕಾಶ್ಮೀರ

ಕಾಶ್ಮೀರದ ಸಮಸ್ಯೆ ದಶಕ ದಶಕಗಳಿಂದ ಭಾರತ ಸರಕಾರದ ಪಾಲಿಗೆ ಒಂದು ತಲೆ ನೋವಾಗಿಯೇ ಪರಿಣಮಿಸಿದೆ. ಸ್ವಾಯತ್ತೆಯ ಬಯಕೆಯೊಂದಿಗೆ ಅಲ್ಲಿನ ಜನ ದೀರ್ಘಕಾಲದಿಂದ ತಮ್ಮ ಬಹುವಿಧ ಹೋರಾಟ ಮುಂದುವರೆಸಿದ್ದಾರೆ. ಭಾರತದ ಲಕ್ಷಗಟ್ಟಲೆ ಸೈನಿಕರು ಕಾಶ್ಮೀರ ಕೊಳ್ಳದಲ್ಲಿದ್ದಾರೆ. ಒಂದೆಡೆಯಲ್ಲಿ ಜನರ ಮನಗೆಲ್ಲುವ ಬದಲು ಕಾಶ್ಮೀರ ಸಮಸ್ಯೆಯನ್ನು ಬಂದೂಕಿನಿಂದ ಪರಿಹರಿಸಹೊರಟ ಸರಕಾರ ಮತ್ತು ಇನ್ನೊಂದೆಡೆಯಲ್ಲಿ ಇದಕ್ಕೆ ಬಂದೂಕಿನ ಮೂಲಕವೇ ಉತ್ತರಿಸಹೊರಟ ಅಲ್ಲಿನ ಪ್ರತ್ಯೇಕತಾವಾದಿಗಳು, ಒಟ್ಟಾರೆಯಾಗಿ ಇದರ ಪರಿಣಾಮವನ್ನು ಅನುಭವಿಸುತ್ತಿರುವವರು ಕಾಶ್ಮೀರದ ಸಾಮಾನ್ಯ ಜನತೆ.

ನೆರೆಯ ಪಾಕಿಸ್ತಾನದ ಕುಮ್ಮಕ್ಕೂ ಇರುವುದರಿಂದ ಅಲ್ಲಿ ರಕ್ತದ ಓಕುಳಿಯೇ ಹರಿಯುತ್ತಿದೆ. ಪ್ರಭುತ್ವದ ಅತಿರೇಕಗಳಿಂದ ನೊಂದ ಹೊಸ ಯುವಕರೂ ಅಹಿಂಸೆಯ ಮಾರ್ಗ ತೊರೆದು ಉಗ್ರರ ಸಂಘಟನೆಗಳನ್ನು ಸೇರುತ್ತಿದ್ದಾರೆ. ಪರಿಚ್ಛೇದ 370 ತೆಗೆದು ಹಾಕಿ ತಾನು ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಿದ್ದೇನೆ ಎಂದು ಸರಕಾರ ಹೇಳಿಕೊಳ್ಳುತ್ತಿದೆಯಾದರೂ ಅಲ್ಲಿ ಈಗ ‘ಟಾರ್ಗೆಟೆಡ್ ಕಿಲ್ಲಿಂಗ್’ (ಆಯ್ದು ಕೊಲ್ಲುವುದು) ಹೆಚ್ಚಿದೆ. ನಿನ್ನೆ ಮೊನ್ನೆಯಷ್ಟೇ ಪುಲ್ವಾಮಾದಲ್ಲಿ ಕಾಶ್ಮೀರಿ ಪಂಡಿತನೊಬ್ಬನನ್ನು ಉಗ್ರರು ಕೊಂದು ಹಾಕಿದ್ದಾರೆ. ಸದ್ಯೋಭವಿಷ್ಯದಲ್ಲಿ ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಯಾಗುವ ಯಾವ ಸೂಚನೆಯೂ ದೊರೆಯುತ್ತಿಲ್ಲ.

ಗುಜರಾತ್

2002 ರ ಗುಜರಾತ್ ನರಮೇಧದಿಂದ ಸುಮಾರು ಎರಡು ಸಾವಿರಕ್ಕೂ ಅಧಿಕ ಮಂದಿ ದಾರುಣವಾಗಿ ಅಸು ನೀಗಿದರು; ಬಹುವಾಗಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲಾಯಿತು. ತುಂಬು ಗರ್ಭಿಣಿಗೂ ರಿಯಾಯಿತಿ ನೀಡಲಿಲ್ಲ. ಗರ್ಭದೊಳಗಿನ ಭ್ರೂಣವನ್ನೂ ಎಳೆದು ಸುಟ್ಟು ಹಾಕುವಷ್ಟರ ಮಟ್ಟಿನ ಕ್ರೌರ್ಯವನ್ನು ಮೆರೆಯಲಾಯಿತು. ಪ್ರಭುತ್ವದ ಬೆಂಬಲವಿಲ್ಲದೆ ಈ ಗಲಭೆ ನಡೆಯುವುದು ಸಾಧ್ಯವೇ ಇರಲಿಲ್ಲ.

ಆದರೂ ಜನರಿಗೆ ಪ್ರಜಾತಂತ್ರದಲ್ಲಿ, ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆಯಿತ್ತು. ಸತ್ತವರು ಸತ್ತು ಹೋದರು, ಅಪರಾಧಿಗಳಿಗೆ ಶಿಕ್ಷೆಯಾಗುವ ಮೂಲಕವಾದರೂ ತಮಗೆ ನ್ಯಾಯ ದೊರೆಯ ಬಹುದು ಎಂದು ಜನ ಕಾದಿದ್ದರು. ಆದರೆ ಶಿಕ್ಷೆಯ ಮಾತು ಒತ್ತಟ್ಟಿಗಿರಲಿ, ಅಪರಾಧ ಕೃತ್ಯಕ್ಕೆ ಅತ್ಯಂತ ಪ್ರಬಲ ಸಾಕ್ಷ್ಯ ಇದ್ದಾಗಲೂ, ಅಪರಾಧಿಗಳ ಮೇಲೆ ಪುಟ್ಟ ಪ್ರಕರಣ ಕೂಡಾ ದಾಖಲಾಗಲಿಲ್ಲ. ಅಲ್ಲಿನ ಸರಕಾರದ ಈ ನೀತಿಯನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡು ಛೀಮಾರಿ ಹಾಕಿತು ಮತ್ತು ಅನೇಕ ಪ್ರಕರಣಗಳನ್ನು ರಾಜ್ಯದಿಂದ ಹೊರಗೆ ವರ್ಗಾಯಿಸಿತು. ಸಂತ್ರಸ್ತರು ಪ್ರಜಾತಂತ್ರದ ಮೇಲೆ ನಂಬಿಕೆ ಇರಿಸಿದ್ದರು, ನ್ಯಾಯದಾನ ವ್ಯವಸ್ಥೆಯ ಮೇಲೆ ವಿಶ್ವಾಸ ಇರಿಸಿದ್ದರು. ಆದರೆ ಪ್ರಭುತ್ವವೇ ತಮ್ಮ ಕೈಬಿಟ್ಟಾಗ ತಮ್ಮ ವಿರುದ್ಧ ವರ್ತಿಸಿದಾಗ ಅನೇಕರು ಹೊಸ ಹುಡುಗರು ಉಗ್ರವಾದದ ಹಾದಿ ಹಿಡಿದರು, ಉಗ್ರರಾದರು.

ಹಿಂಸೆ ಉತ್ತರವಲ್ಲ

ಇಲ್ಲಿ ಎರಡು ಮುಖ್ಯ ಅಂಶಗಳನ್ನು ಗಮನಿಸಬೇಕು. ಯಾವುದೇ ಸಮಸ್ಯೆಗೆ ಹಿಂಸೆ ಪರಿಹಾರವಲ್ಲ. ನಕ್ಸಲರು ಹಿಡಿದಿರುವುದು ಹಿಂಸೆಯ ತಪ್ಪು ಹಾದಿ. ಆದ್ದರಿಂದ ಆ ದಾರಿಯ ಬಗ್ಗೆ ಯಾರಿಗೂ ಸಹಮತವಿಲ್ಲ. ನಾಗರಿಕ ಜಗತ್ತಿನಲ್ಲಿ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅದು ಸಲ್ಲದ ದಾರಿ.

ಆದರೆ ಅವರ ಗುರಿಯ ಬಗ್ಗೆ, ಅವರ ಬೇಡಿಕೆಯ ಬಗ್ಗೆ ಯಾರಿಗೂ ಅಸಹಮತವಿಲ್ಲ. ಯಾಕೆಂದರೆ ನಕ್ಸಲರು ಶೋಷಿತರ ಪರ ಇರುವವರು. ಬಡವರು, ಆದಿವಾಸಿಗಳ ಬದುಕು ಹಸನಾಗಬೇಕು ಎಂಬ ಬಯಕೆ ಹೊಂದಿರುವವರು. ಅದೊಂದು ಸಿದ್ಧಾಂತ. ಪ್ರಜಾತಂತ್ರದಲ್ಲಿ ನಂಬಿಕೆ ಇರಿಸಿರುವ ಪ್ರಭುತ್ವವು ನೊಂದವರ ನೋವನ್ನು ಆಲಿಸಿ ಅದನ್ನು ಶಾಂತಿಯುತವಾಗಿ ಪರಿಹರಿಸುವ ಎಲ್ಲ ಯತ್ನಗಳನ್ನೂ ನಡೆಸಬೇಕು. ದಾರಿ ತಪ್ಪಿದ ಜನರು ಪ್ರಜಾತಂತ್ರದಲ್ಲಿ ನಂಬಿಕೆ ಇರಿಸಿಕೊಂಡು ಮುಖ್ಯವಾಹಿನಿಗೆ ಮರಳುವಂತೆ ಮಾಡಬೇಕು. ಅದರ ಬದಲಿಗೆ ನೀವು ಒಬ್ಬ ಹೋರಾಟಗಾರನನ್ನು ಕೊಂದರೆ ಆ ಆಕ್ರೋಶದಿಂದ ಹತ್ತು ಹೊಸ ಹೋರಾಟಗಾರರು ಹುಟ್ಟಿಕೊಳ್ಳುತ್ತಾರೆ. ಹೋರಾಟವನ್ನು ನಿರ್ಮೂಲ ಮಾಡುವುದು ಬಿಡಿ, ಅದು ವ್ಯಾಪಕಗೊಳ್ಳಲು ನೀವೇ ಸಹಾಯ ಮಾಡುತ್ತೀರಿ. ಯಾಕೆಂದರೆ ಅವರ ಹೋರಾಟದ ಹಿಂದೆ ಇರುವ ಸಿದ್ಧಾಂತವನ್ನು ಕೊಲ್ಲುವುದು ಅಸಾಧ್ಯ. ಅದು ನಕ್ಸಲ್ ಬರಿ ಇರಬಹುದು, ಕಾಶ್ಮೀರ ಇರಬಹುದು ಎಲ್ಲ ಸಮಸ್ಯೆಗಳ ಹಿಂದೆ ಇರುವ ವಾಸ್ತವ ಇದು.

ಅದೆಲ್ಲ ಸರಿ.. ಜನ ಯಾಕೆ ಪ್ರಜಾತಂತ್ರದಲ್ಲಿ ನಂಬಿಕೆ ಕಳೆದುಕೊಳ್ಳುತ್ತಾರೆ? ಯಾಕೆ ಹಿಂಸೆಯ ಹಾದಿ ಹಿಡಿಯುತ್ತಾರೆ? ಯಾಕೆ ಅವರಿಗೆ ನಕ್ಸಲರು ಪ್ರಿಯರಾಗುತ್ತಾರೆ? ಯಾಕೆ ಅವರು ನಕ್ಸಲ್ ಚಳುವಳಿ ಸೇರಿಕೊಂಡು ಬಿಡುತ್ತಾರೆ? ಇದಕ್ಕೊಂದು ಸಣ್ಣ ಸುಳಿವು ‘ಕುತ್ಲೂರು ಕಥನ’ದಲ್ಲಿ ದೊರೆಯುತ್ತದೆ.

ಕುತ್ಲೂರು ಕಥನ

ಹಿಂಸೆ ಯಾರಿಗೂ ಬೇಕಾಗಿಲ್ಲ. ಪ್ರತಿಯೊಬ್ಬರೂ ಶಾಂತಿಯುತವಾಗಿ, ನೆಮ್ಮದಿಯಿಂದ ಬದುಕ ಬಯಸುತ್ತಾರೆ. ಕುತ್ಲೂರಿನ ಆದಿವಾಸಿಗಳು ಕೂಡಾ ಯಾವುದೇ ನಾಗರಿಕ ಸೌಲಭ್ಯಗಳಿಲ್ಲದ ದುರ್ಗಮ ಅರಣ್ಯದೊಳಗೆ ಇದ್ದಾಗಲೂ, ತಮ್ಮ ಪಾಡಿಗೆ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ, ಅವನ್ನು ಮಾರಿ ಜೀವನೋಪಾಯ ಸಾಗಿಸುತ್ತಿದ್ದವರು. ಅವರೆಂದೂ ಅರಣ್ಯ ನಾಶ ಮಾಡಿದವರಲ್ಲ, ಬದಲಿಗೆ ಅರಣ್ಯ ರಕ್ಷಿಸಿಕೊಂಡು ಪೋಷಿಸಿಕೊಂಡು ಬಂದವರು. ಯಾಕೆಂದರೆ ಅವರಿಗೆ ಅರಣ್ಯವಿಲ್ಲದೆ ಅಸ್ತಿತ್ವವೇ ಇಲ್ಲ.

ಇಂತಹ ಬಡಪಾಯಿಗಳನ್ನು ಅರಣ್ಯ ಇಲಾಖೆಯವರು ವಿನಾ ಕಾರಣ ಕಾಡ ತೊಡಗಿದಾಗ, ಅವರ ಜೀವನೋಪಾಯದ ಬೇರುಗಳನ್ನೇ ಕತ್ತರಿಸಹೊರಟಾಗ, ಸಾಲದೆಂಬಂತೆ ರಾಷ್ಟ್ರೀಯ ಉದ್ಯಾನದ ಹೆಸರಿನಲ್ಲಿ ಸರಕಾರ ಅವರನ್ನು ಒಕ್ಕಲೆಬ್ಬಿಸ ಹೊರಟಾಗ ಈ ಆದಿವಾಸಿಗಳಲ್ಲಿ ಮೊದಲ ಬಾರಿಗೆ ಆತಂಕ ಉಂಟಾಗುತ್ತದೆ. ಭವಿಷ್ಯದ ಬಗ್ಗೆ ಭಯ ಉಂಟಾಗುತ್ತದೆ.

ಇದಕ್ಕೆ ನಾಗರಿಕ ಜಗತ್ತು ಮಾನವೀಯವಾಗಿ ಸ್ಪಂದಿಸಬೇಕಿತ್ತು. ಪ್ರಭುತ್ವವು ತನ್ನ ಅಧಿಕಾರದ ಅಹಂ ಬದಿಗಿಟ್ಟು ಸಹಾನುಭೂತಿಯಿಂದ ಅವರೊಂದಿಗೆ ನಡೆದುಕೊಳ್ಳಬೇಕಿತ್ತು. ಅವರಿಗೆ ನ್ಯಾಯಯುತ ಪರಿಹಾರವನ್ನು ಕೊಡುವ ಪ್ರಾಮಾಣಿಕತೆ ಮೆರೆಯಬೇಕಿತ್ತು. ಆದರೆ ಅದಕ್ಕೆ ಅಧಿಕಾರ ದರ್ಪದ ಹಾದಿಯೇ ಇಷ್ಟವಾಯಿತು. ಪೊಲೀಸರು ಆ ಮುಗ್ಧರ ಮೇಲೆ ಕ್ರೌರ್ಯ ಮೆರೆದರು.

ಇಂತಹ ಹೊತ್ತಿನಲ್ಲಿಯೇ ಕಗ್ಗತ್ತಲ ಸುರಂಗದ ತುದಿಯ ಬೆಳಕಿನ ಕಿರಣದಂತೆ, ಒಂದು ಬದುಕಿನ ಭರವಸೆಯಂತೆ ನಕ್ಸಲರ ರಂಗ ಪ್ರವೇಶವಾಯಿತು. ಯಾರ ಸಹಾಯವಾದರೂ ಸರಿ ಎಂದು ಎದುರು ನೋಡುತ್ತಿದ್ದವರಿಗೆ ನಕ್ಸಲರ ಸಹಾಯದ ಕೈ ಸಿಕ್ಕಿತು. ಮೊದಲು ಮಲೆಕುಡಿಯ ಯುವಕ ವಸಂತ ಅವರೊಂದಿಗೆ ಕಾಡು ಸೇರಿದರೆ ಮುಂದೆ ದಿನಕರ ಮತ್ತು ಸುಂದರಿ ಕೂಡಾ ಕಾಡು ಸೇರಿದರು. ವಸಂತ ಮತ್ತು ದಿನಕರ ಪೊಲೀಸರ ಗುಂಡಿಗೆ ಬಲಿಯಾದರೆ ಸುಂದರಿ ಇನ್ನೂ ಕೂಡಾ ಕಾಡಿನಲ್ಲಿಯೇ ಇದ್ದಾಳೆ. ಇವರು ನಕ್ಸಲ್ ಚಳುವಳಿ ಸೇರಿದ ಕಾರಣಕ್ಕೆ ಇಡೀ ಕುತ್ಲೂರಿನ ಮಲೆಕುಡಿಯ ಸಮುದಾಯ ಪೈಶಾಚಿಕ ಕ್ರೌರ್ಯ ಅನುಭವಿಸಬೇಕಾಯಿತು. ವಿದ್ಯಾವಂತ ಯುವಕ ವಿಠಲ ಮಲೆಕುಡಿಯ ಜೈಲು ಸೇರಬೇಕಾಯಿತು. ಕೈಗೆ ಕೋಳ ಹಾಕಿಸಿಕೊಂಡು ಪರೀಕ್ಷೆ ಬರೆಯಬೇಕಾಯಿತು.

ಆತ್ಮಾವಲೋಕನವಾಗಬೇಕು

ಇಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದವರು ಯಾರು? ದುರ್ಗಮ ಕಾಡಿನಲ್ಲಿ ಅವರ ಪಾಡಿಗೆ ಬದುಕಿಕೊಂಡಿದ್ದ ಆದಿವಾಸಿ ಮಲೆಕುಡಿಯರನ್ನು ಅವರ ನೆಲೆ ತಪ್ಪಿಸುವ ಕೆಲಸವನ್ನು ಪ್ರಭುತ್ವ ಮಾಡದೆ ಇರುತ್ತಿದ್ದರೆ, ಅರಣ್ಯ ಉತ್ಪನ್ನವನ್ನೇ ನಂಬಿಕೊಂಡಿದ್ದ ಈ ಬಡಮಂದಿಯ ಜೀವನೋಪಾಯದ ಹಾದಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಕತ್ತರಿಸದಿರುತ್ತಿದ್ದರೆ, ನಕ್ಸಲ್ ವಿರೋಧಿ ಹೋರಾಟದ ಹೆಸರಿನಲ್ಲಿ ಈ ಅಮಾಯಕರ ಮೇಲೆ ಪೊಲೀಸರು ಪೈಶಾಚಿಕ ದಾಳಿಯನ್ನು ನಡೆಸದಿರುತ್ತಿದ್ದರೆ ವಸಂತ, ದಿನಕರ ಮತ್ತು ಸುಂದರಿ ಯಾಕೆ ನಕ್ಸಲ್ ಚಳುವಳಿಗೆ ಮನಸೋತು ಅವರೊಂದಿಗೆ ಸೇರಿಕೊಳ್ಳುತ್ತಿದ್ದರು?

ಹೀಗಾಗಿ, ಇಲ್ಲಿ ಸಮಸ್ಯೆ ಪರಿಹಾರವಾಗುವ ಬದಲು, ಬಿಗಡಾಯಿಸಿ ಅನೇಕ ಮುಗ್ಧರ ಜೀವ ಹಾನಿಯಾಗುವಂತಹ ಮತ್ತು ಬದುಕಿದ್ದವರೂ ಕ್ಷಣ ಕ್ಷಣವೂ ಆತಂಕದಿಂದ ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗುವಲ್ಲಿ ಅರಣ್ಯ ಇಲಾಖೆ ಮತ್ತು ಪೊಲೀಸರ ಸಹಿತವಾದ ಪ್ರಭುತ್ವ, ಹಾಗೆಯೇ ಅನ್ಯಾಯಕ್ಕೆ ಸ್ಪಂದಿಸಿ ಅದನ್ನು ತನ್ನದೇ ಆದ ರೀತಿಯಲ್ಲಿ ಪ್ರತಿಭಟಿಸಿಬೇಕಿದ್ದ ನಾಗರಿಕ ಜಗತ್ತು ಕೂಡಾ ತಮ್ಮ ಪಾತ್ರಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಜನತಂತ್ರ ವ್ಯವಸ್ಥೆಯಲ್ಲಿ ಪ್ರಭುತ್ವವು ತನ್ನ ಪ್ರಜೆಗಳ ವಿರುದ್ಧ ಯಾವತ್ತೂ ಹಿಂಸೆಯ ಹಾದಿ ಹಿಡಿಯಬಾರದು. ಹಿಂಸೆಯು ಇನ್ನಷ್ಟು ಹಿಂಸೆಗೆ ಹಾದಿ ಮಾಡಿಕೊಡುತ್ತದೆ. ಪರಿಣಾಮವಾಗಿ ಅಹಿಂಸೆಯಲ್ಲಿ ನಂಬಿಕೆ ಇರಿಸಿದ್ದ ಮಂದಿಯೂ ಹಿಂಸೆಯ ಹಾದಿ ಹಿಡಿಯುವಂತೆ ಮಾಡುತ್ತದೆ. ಸಮಸ್ಯೆ ಪರಿಹಾರಗೊಳ್ಳುವ ಬದಲಿಗೆ ಬಿಗಡಾಯಿಸುತ್ತಲೇ ಹೋಗುತ್ತದೆ. ಇದಕ್ಕೆ ‘ಕುತ್ಲೂರು ಕಥನ’ದಲ್ಲಿ ಅನೇಕ ಉದಾಹರಣೆಗಳಿವೆ; ಕಿವಿಮಾತುಗಳೂ ಇವೆ.

ಶ್ರೀನಿವಾಸ ಕಾರ್ಕಳ

ಚಿಂತಕರೂ, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page