ಬೆಂಗಳೂರು: ತನ್ನ ದ್ವೇಷ ಭಾಷಣಗಳಿಂದ ಕುಖ್ಯಾತಿ ಗಳಿಸಿರುವ ಬಾಷಣಕಾರ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪೊಲೀಸರು ಮಾಹಿತಿ ಸಂಗ್ರಹಿಸಲು ಆರಂಭಿಸಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ.
ಯುವ ಬ್ರಿಗೇಡ್ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಬೆಂಗಳೂರು ಸಹಿತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಾಖಲಾಗಿರುವ ಎಫ್ಐಆರ್ಗಳ ಮಾಹಿತಿ ನೀಡುವಂತೆ ರಾಜ್ಯ ಪೊಲೀಸ್ ಇಲಾಖೆ ಎಲ್ಲ ಜಿಲ್ಲಾವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದೆ.
ಚಕ್ರವರ್ತಿ ಸೂಲಿಬೆಲೆ ವಿರುದ್ಧ 2022ರಿಂದ 2025ರ ಮೇ 31ರ ವರೆಗೆ ದಾಖಲಾಗಿರುವ ಎಫ್ಐಆರ್ ಪ್ರತಿ ಮತ್ತು ತೆಗೆದುಕೊಂಡ ಕ್ರಮ ಹಾಗೂ ಪ್ರಸ್ತುತ ಹಂತದ ಮಾಹಿತಿಯನ್ನು ಕನ್ನಡ ಭಾಷೆಯಲ್ಲಿ ಹಾಗೂ ಎಫ್ಐಆರ್ ಪ್ರತಿಯನ್ನು ssloco@ksp.gov.in ಗೆ ಒದಗಿಸುವಂತೆ ಸೂಚಿಸಲಾಗಿದೆ.
ರಾಜ್ಯದ ಅಲ್ಪಸಂಖ್ಯಾಕರ ಆಯೋಗದ ಅಧ್ಯಕ್ಷರು ಬರೆದಿರುವ ಪತ್ರದ ಪರಿಣಾಮವೇ ಈ ಕ್ರಮ ಎನ್ನಲಾಗಿದೆ. ರಾಜ್ಯ ಸರ್ಕಾರವು ಇತ್ತೀಚೆಗಷ್ಟೇ ಕೋಮು ಹಿಂಸೆ ನಿಗ್ರಹ ಪಡೆಯನ್ನು ಆರಂಭಿಸಿದ್ದು, ಅದು ಇನ್ನೇನು ತನ್ನ ಕೆಲಸ ಆರಂಭಿಸುವುದರಲ್ಲಿದೆ. ಈ ಹಿನ್ನಲೆಯಲ್ಲಿ ಸೂಲಿಬೆಲೆ ವಿರುದ್ಧ ಮಾಹಿತಿ ಸಂಗ್ರಹಿಸುತ್ತಿರುವುದು ಜನರ ಕುತೂಹಲ ಕೆರಳಿಸಿದೆ.
ಕರಾವಳಿ ಜಿಲ್ಲೆಗಳಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಕೋಮು ಗಲಭೆಗಳಿಗೆ ಕೋಮು ದ್ವೇಷದ ಭಾಷಣಗಳೂ ಕಾರಣವಾಗುತ್ತಿದ್ದು, ಹೇಟ್ ಸ್ಪೀಚ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರಜ್ಞಾವಂತರು ಆಗ್ರಹಿಸುತ್ತಲೇ ಇದ್ದರು. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕೆಲವು ಪ್ರಕರಣಗಳು ಸರ್ಕಾರ ಕೊನೆಗೂ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುವಂತೆ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ, “ಸೂಲಿಬೆಲೆ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಿ ಕಿರುಕುಳ ನೀಡಲು ಮುಂದಾದರೆ ಸುಮ್ಮನಿರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ. ರಾಷ್ಟ್ರವಿದ್ರೋಹಿ ಮತೀಯ ಶಕ್ತಿಗಳನ್ನು ಓಲೈಸುವ ಸಲುವಾಗಿ ಸದ್ಯ ಕೋಮು ನಿಗ್ರಹ ದಳವನ್ನು ಅಸ್ತಿತ್ವಕ್ಕೆ ತರಲಾಗಿದೆ. ಈಗ ಸೂಲಿಬೆಲೆಯನ್ನು ಗುರಿಯಾಗಿಸಿ ಕೊಂಡು ಕಾರ್ಯಾ ಚರಣೆ ನಡೆಸುತ್ತಿರುವುದು ಬಹಿರಂಗಗೊಂಡಿದೆ” ಎಂದಿದ್ದಾರೆ.