Tuesday, June 18, 2024

ಸತ್ಯ | ನ್ಯಾಯ |ಧರ್ಮ

ಹಿಂದುತ್ವ ಕಾರ್ಯಕರ್ತ ಪುನೀತ್‌ ಕೆರೆಹಳ್ಳಿ ವಿರುದ್ಧ ಮತ್ತೊಂದು ಕೇಸ್

ಬೆಂಗಳೂರು: ಹಿಂದುತ್ವ ಕಾರ್ಯಕರ್ತಹಾಗೂ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಪುನೀತ್‌ ಕೆರೆಹಳ್ಳಿ ವಿರುದ್ಧ ಇನ್ನೊಂದು ಪ್ರಕರಣ ದಾಖಲಾಗಿದೆ.

ಪುನೀತ್‌ ಕೆರೆಹಳ್ಳಿ ವಿರುದ್ಧ ಅಶ್ಲೀಲ ಪದಬಳಕೆ ಮಾಡಿ ನಿಂದಿಸಿದ್ದಕ್ಕಾಗಿ ತುಮಕೂರಿನ ಹೆಬ್ಬೂರು ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಮತ್ತು ಅಸಾಂವಿಧಾನಿಕ ಪದ ಬಳಸುವುದರಲ್ಲಿ ಕುಖ್ಯಾತಿ ಪಡೆದಿರುವ ಪುನೀತ್‌ ಕಾಂಗ್ರೆಸ್‌ ನಾಯಕರ ವಿರುದ್ಧ ನಾಲಗೆ ಹರಿಬಿಟ್ಟ ಕಾರಣಕ್ಕಾಗಿ ಈಗ ಪ್ರಕರಣ ದಾಖಲಿಸಲಾಗಿದೆ.

ತೇಜಸ್‌ ಗೌಡ ಎನ್ನುವವರು ನೀಡಿರುವ ದೂರಿನಲ್ಲಿ ”ಪುನೀತ್ ಕೆರೆಹಳ್ಳಿ ಎಂಬ ವ್ಯಕ್ತಿಯು ವಕೀಲರು ಮತ್ತು ಕೆಪಿಸಿಸಿ ವಕ್ತಾರರಾಗಿರುವ ಸೂರ್ಯ ಮುಕುಂದರಾಜ್ ಅವರನ್ನು ಮತ್ತು ಅವರ ಸಹೋದ್ಯೋಗಿಗಳ ಬಗ್ಗೆ ಅವಹೇಳನಕಾರಿಯಾಗಿ, ಅವಾಚ್ಯ ಪದಗಳನ್ನು ಬಳಸಿ ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾನೆ. ಪುನೀತ್ ಕೆರೆಹಳ್ಳಿಯ ಬೆಂಬಲಿಗರು ನಕಲಿ ಖಾತೆಗಳ ಮೂಲಕ ಬಂದು ಈ ಪೋಸ್‌ಗೆ ಕೆಟ್ಟದ್ದಾಗಿ ಕಮೆಂಟ್ ಮಾಡಿರುತ್ತಾರೆ. ಪುನೀತ್ ಕೆರೆಹಳ್ಳಿಯು ವಕೀಲಿ ವೃತ್ತಿಗೆ ಅವಮಾನ ಮಾಡಿದ್ದಾನೆ. ಆದ್ದರಿಂದ ಆತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು” ಎಂದು ಮನವಿ ಮಾಡಿದ್ದಾರೆ. ಜೊತೆಗೆ ಆತನ ಫೇಸ್ಬುಕ್‌ ಖಾತೆಯನ್ನು ಸ್ಥಗಿತಗೊಳಿಸುವುದುರ ಮೂಲಕ ನಮಗೆ ನ್ಯಾಯ ಒದಗಿಸಬೇಕು ಎಂದು ದೂರಿನಲ್ಲಿ ಕೇಳಿಕೊಳ್ಳಲಾಗಿದೆ.

ಸದರಿ ದೂರನ್ನಾಧರಿಸಿ ಪೊಲೀಸರು ಪುನೀತ್‌ ಕೆರೆಹಳ್ಳಿ ವಿರುದ್ಧ ಐಪಿಸಿ ಸೆಕ್ಷನ್ 504ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈಗಾಗಲೇ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಪುನೀತ್‌ ಜಾಮೀನಿನ ಮೇಲೆ ಹೊರಗಿದ್ದು, ಇತ್ತೀಚೆಗಷ್ಟೇ ಸರ್ಕಾರವು ಈತನ ವಿರುದ್ಧ ರೌಡಿ ಶೀಟ್‌ ತಯಾರಿ ಬಂಧಿಸಿತ್ತು. ಆದರೆ ಪುನೀತ್‌ ಸರ್ಕಾರದ ವಿರುದ್ಧ ಕೋರ್ಟಿಗೆ ಹೋಗಿ ಅದನ್ನು ರದ್ದುಪಡಿಸುವಂತೆ ಆದೇಶ ತಂದಿದ್ದನು. ರಾಮನಗರದಲ್ಲಿ ಇದ್ರಿಷ್‌ ಪಾಶಾ ಎಂಬುವವರ ಕೊಲೆ ಪ್ರಕರಣದಲ್ಲಿಯೂ ಈತ ಆರೋಪಿಯಾಗಿದ್ದಾನೆ

Related Articles

ಇತ್ತೀಚಿನ ಸುದ್ದಿಗಳು