Monday, June 17, 2024

ಸತ್ಯ | ನ್ಯಾಯ |ಧರ್ಮ

ದೆಹಲಿಯಲ್ಲಿ ನಾಳೆ NDA ಸಭೆ: ಮೋದಿ ಅಲೆಯ ಮ್ಯಾಜಿಕ್‌ ಮುಗಿಯಿತೇ?

ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ನಾಳೆ ದೆಹಲಿಯ ಅಶೋಕ ಹೋಟೆಲ್‌ನಲ್ಲಿ ಔತಣಕೂಟವನ್ನು ಆಯೋಜಿಸಲು ಸಜ್ಜಾಗಿದೆ, ಜುಲೈ 18ರಂದು‌ ನಡೆಯಲಿರುವ ಈ ಡಿನ್ನರ್ ಪಾರ್ಟಿಗೆ ಆರು ಹೊಸ ಪಕ್ಷಗಳು ಸೇರಿದಂತೆ ಕನಿಷ್ಠ 31 ಎನ್‌ಡಿಎ ಮಿತ್ರಪಕ್ಷಗಳನ್ನು ಆಹ್ವಾನಿಸಿದೆ. ಬಿಜೆಪಿ ಪ್ರಸ್ತುತ ಅಸ್ತಿತ್ವದಲ್ಲಿರುವ ಮೈತ್ರಿ ಪಾಲುದಾರರ ಜೊತೆಗೆ, ವಿವಿಧ ಹೊಸ ಮಿತ್ರಪಕ್ಷಗಳಿಗೆ ಮತ್ತು ಕೆಲವು ಮಾಜಿ ಮಿತ್ರರಿಗೆ ಕೂಟದಲ್ಲಿ ಭಾಗವಹಿಸಲು ಆಹ್ವಾನವನ್ನು ನೀಡಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ಈ ಸಭೆ ನಡೆಯಲಿದ್ದು, ಜೊತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಈ ಪಕ್ಷಗಳ ಮುಖಂಡರೊಂದಿಗೆ ಭಾಗವಹಿಸಲಿದ್ದಾರೆ. ಎನ್‌ಡಿಎಗೆ ಹೊಸದಾಗಿ ಸೇರ್ಪಡೆಗೊಂಡ ಪಕ್ಷಗಳಲ್ಲಿ ಉತ್ತರಪ್ರದೇಶದ ಎಸ್‌ಬಿಎಸ್‌ಪಿ, ಮಹಾರಾಷ್ಟ್ರದ ಅಜಿತ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮತ್ತು ಬಿಹಾರದ ಚಿರಾಗ್ ಪಾಸ್ವಾನ್‌ರ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಸೇರಿವೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇತ್ತೀಚೆಗೆ ಉತ್ತರ ಪ್ರದೇಶ ಮೂಲದ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ (ಎಸ್‌ಬಿಎಸ್‌ಪಿ) ನಾಯಕ ಓಂ ಪ್ರಕಾಶ್ ರಾಜ್‌ಭರ್ ಅವರನ್ನು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (ಎನ್‌ಡಿಎ) ಸ್ವಾಗತಿಸಿದ್ದರು. ರಾಜ್‌ಭರ್ ಅವರು ಈ ಹಿಂದೆ 2022ರ ಯುಪಿ ಅಸೆಂಬ್ಲಿ ಚುನಾವಣೆಯ ಸಮಯದಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ಮಿತ್ರರಾಗಿದ್ದರು. ಅಪರಾಧಿ ದರೋಡೆಕೋರ ಮುಕ್ತಾರ್ ಅನ್ಸಾರಿಯ ಪುತ್ರ ಮೌ ಕ್ಷೇತ್ರದ ಅಬ್ಬಾಸ್ ಅನ್ಸಾರಿ ಸೇರಿದಂತೆ ಎಸ್‌ಬಿಎಸ್‌ಪಿ ಆರು ಶಾಸಕರನ್ನು ಹೊಂದಿದೆ.

ಶಿರೋಮಣಿ ಅಕಾಲಿದಳ (ಎಸ್‌ಎಡಿ) ಮತ್ತು ತೆಲುಗು ದೇಶಂ ಪಕ್ಷ (ಟಿಡಿಪಿ) ಬಿಜೆಪಿಯ ಎನ್‌ಡಿಎ ಮಿತ್ರಕೂಟದಿಂದ ದೂರವಾಗಿರುವ ಎರಡು ಪ್ರಮುಖ ಪಕ್ಷಗಳಾಗಿವೆ. ಹಲವು ಪ್ರಯತ್ನಗಳ ನಂತರವೂ ಬಿಜೆಪಿ ಇವೆರಡೂ ಪಕ್ಷಗಳನ್ನು ಸೆಳೆಯುವಲ್ಲಿ ವಿಫಲವಾಗಿದೆ.

ಬಿಜೆಪಿ ನಾಯಕತ್ವವು ಪಶ್ಚಿಮ ಉತ್ತರಪ್ರದೇಶದಲ್ಲಿ ಎಸ್‌ಪಿಯ ಮಿತ್ರಪಕ್ಷವಾದ ಜಯಂತ್ ಚೌಧರಿ ನೇತೃತ್ವದ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಜೊತೆಯಲ್ಲೂ ಸಂಪರ್ಕದಲ್ಲಿದೆ. ಜೂನ್ 23ರಂದು ಪ್ರತಿಪಕ್ಷಗಳ ಸಭೆಯಿಂದ ಹೊರಗುಳಿದಿದ್ದ ಚೌಧರಿಯವರು ಬೆಂಗಳೂರು ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇತ್ತ ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ನಡುವಿನ ಮೈತ್ರಿಯ ಮಾತುಕತೆಗಳು ಚಾಲನೆಯಲ್ಲಿವೆ ಎಂದು ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.

ಕಳೆದ ಬಾರಿ ಕರ್ನಾಟಕದಿಂದ 25 ಸಂಸದ ಕ್ಷೇತ್ರಗಳನ್ನು ಗೆದ್ದ ಬಿಜೆಪಿಗೆ ಈ ಬಾರಿ ಅಂತಹ ಆತ್ಮವಿಶ್ವಾಸವಿದ್ದಂತೆ ಕಾಣುತ್ತಿಲ್ಲ. ಕರ್ನಾಟಕದಲ್ಲಿ ಮುರಿದ ಮನೆಯಾಗಿರುವ ಬಿಜೆಪಿಯನ್ನು ಅದರ ಸ್ಥಳೀಯ ನಾಯಕರೇ ಸೋಲಿಸಿದರೂ ಆಶ್ಚರ್ಯವಿಲ್ಲ. ಏಕೆಂದರೆ ಸ್ಥಳೀಯ ಕೆಲವು ನಾಯಕರಲ್ಲಿ ಬಿಜೆಪಿ ಹೈಕಮಾಂಡ್‌ ನಾಯಕರ ಕುರಿತು ಅಷ್ಟು ಅಸಹನೆಯಿದೆ.

ಹೆಸರಿನಲ್ಲಿ ಒಂದು ಕರೆಂಟ್‌ ಕಂಬ ನಿಂತರೂ ಗೆಲ್ಲುತ್ತದೆ ಎನ್ನಲಾಗುತ್ತಿದ್ದ ಕರ್ನಾಟಕದಲ್ಲಿ ಬಿಜೆಪಿ ಜೆಡಿಎಸ್‌ ಮೊರೆ ಹೋಗಿರುವುದು ಮೋದಿ ಅಲೆ ತಗ್ಗಿರುವುದಕ್ಕೆ ಸಾಕ್ಷಿ ಎನ್ನುತ್ತಾರೆ ವಿಶ್ಲೇಷಕರು. ದೇಶದೆಲ್ಲೆಡೆ ಆಡಳಿತ ವಿರೋಧಿ ಅಲೆಯಿದ್ದು, ಸರಕಾರ ತನ್ನ ಸಂಸ್ಥೆಗಳನ್ನು ಬಳಸಿ ವಿರೋಧಿ ನಾಯಕರ ಬಾಯಿ ಮುಚ್ಚಿಸುತ್ತಿದೆಯಾದರೂ, ಬೆಲೆಯೇರಿಕೆಯ ಬಿಸಿಯನ್ನು ತಣಿಸುವ ಯಾವ ಉಪಾಯವು ಸದ್ಯಕ್ಕೆ ಅದರ ಬಳಿ ಇದ್ದಂತಿಲ್ಲ. ಇದು ವಿಜೆಪಿಗೆ ಮುಂದಿನ ಸಲ ತೊಡಕಾಗುವ ಎಲ್ಲಾ ಲಕ್ಷಣಗಳೂ ಕಂಡು ಬರುತ್ತಿದೆ.

ಇಷ್ಟು ದಿನದ ಮೋದಿಯವರ ಒನ್‌ ಮ್ಯಾನ್‌ ಶೋ ಕಾರಣದಿಂದಾಗಿ ಆ ಪಕ್ಷದಲ್ಲಿ ಎರಡನೇ ಹಂತದ ನಾಯಕರ ಕೊರತೆಯೂ ತೀವ್ರವಾಗಿ ಕಾಡುತ್ತಿದೆ.

ಒಟ್ಟಿನಲ್ಲಿ ಮುಂದಿನ ಮತ ಸುಗ್ಗಿಯಲ್ಲಿ ಒಳ್ಳೆಯ ಕೊಯ್ಲು ಮಾಡಲು ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ನೆಲ ಹದ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿವೆ. ಯಾರ ಕಣಜ ತುಂಬಲಿದೆ ಎನ್ನುವ ಪ್ರಶ್ನೆಗೆ ಉತ್ತರ ಸಿಗಲು ಇನ್ನೂ ಹತ್ತು-ಹನ್ನೊಂದು ತಿಂಗಳು ಕಾಯಲೇಬೇಕು.

Related Articles

ಇತ್ತೀಚಿನ ಸುದ್ದಿಗಳು