ಬ್ರಾಹ್ಮಣವಾದಿಗಳ ದಲಿತರ ವಿರುದ್ಧದ ಜಾತಿವಾದಿ ನಿಂದನೆಗಳು ಫುಲೆ-ಶಾಹು-ಅಂಬೇಡ್ಕರ್ ಚಳವಳಿ ಇಂದಿಗೂ ಎಷ್ಟು ಮುಖ್ಯ ಎನ್ನುವುದನ್ನು ನೆನಪಿಸುತ್ತವೆ: ಪ್ರಕಾಶ್ ಅಂಬೇಡ್ಕರ್

ದಲಿತರ ವಿರುದ್ಧ ಸಾರ್ವಜನಿಕವಾಗಿ ಹಾಗೂ ಆನ್‌ಲೈನ್‌ ಮೂಲಕ ನಡೆಯುತ್ತಿರುವ ಜಾತಿವಾದಿ ನಿಂದನೆಯನ್ನು ಪ್ರಕಾಶ ಅಂಬೇಡ್ಕರ್‌ ತೀವ್ರವಾಗಿ ಖಂಡಿಸಿದ್ದಾರೆ. ಇತ್ತೀಚೆಗೆ ಮೀಸಲಾತಿ ವಿರುದ್ಧದ ಹೋರಾಟದ ಹೆಸರಿನಲ್ಲಿ ದಲಿತ ಸಮುದಾಯವನ್ನು ಹೀನಾಯವಾಗಿ ನಿಂದಿಸಲಾಗುತ್ತಿದ್ದು ಈ ಕುರಿತು ಅವರು ಪ್ರತಿಕ್ರಿಯಿಸಿದ್ದಾರೆ.


ʼಭೀಮತಾಸ್’, ಕಳ್ಳ-ಚಮ್ಮಾರ್‌ಗಳು, ನೀಲಿ ಪಾರಿವಾಳಗಳು, ಪೊರೆಕೆ ಹಿಡಿಯುವವರು, ಶೂ ಪಾಲಿಶ್ ಮಾಡುವವರು—ಇವು ದಲಿತರನ್ನು ಸಾರ್ವಜನಿಕವಾಗಿ ಮತ್ತು ಆನ್‌ಲೈನ್‌ನಲ್ಲಿ ಜಾತಿವಾದಿಗಳು ನಿಂದಿಸಲು ಬಳಸುತ್ತಿರುವ ಕೆಲವು ಕೀಳು ಪದಗಳು.

ಬ್ರಾಹ್ಮಣವಾದಿಗಳು ಮತ್ತು ಮನುವಾದಿಗಳು ಈ ರೀತಿಯ ಜಾತಿವಾದಿ ಬೈಗುಳಗಳಿಂದ ನಮ್ಮನ್ನು ಮಟ್ಟ ಹಾಕಬಹುದು ಎಂದುಕೊಂಡಿದ್ದರೆ, ನಮ್ಮ ಮಾತುಗಳನ್ನು ಪೂರ್ಣ ಗಮನದಿಂದ ಮತ್ತು ಎಚ್ಚರಿಕೆಯಿಂದ ಕೇಳಿಸಿಕೊಳ್ಳಿ!

ನೀವು ಯಾವಾಗೆಲ್ಲಾ ನಿಮ್ಮ ವಿಷಕಾರುತ್ತೀರೋ, ಆಗ ನೀವು ನಮ್ಮನ್ನು ದುರ್ಬಲಗೊಳಿಸುತ್ತಿಲ್ಲ—ಬದಲಿಗೆ ನಿಮ್ಮದೇ ಜಾತಿವಾದಿ ಮನಸ್ಥಿತಿಯನ್ನು ಜಗತ್ತಿಗೆ ಮುಖಕ್ಕೆ ಹೊಡೆದಂತೆ ತೋರಿಸುತ್ತಿದ್ದೀರಿ. ನಿಮ್ಮ ಈ ಬೈಗುಳಗಳು ಬ್ರಾಹ್ಮಣವಾದಿ ಮತ್ತು ಮನುವಾದಿ ಸಿದ್ಧಾಂತದ ಕೊಳೆತ ಚಿಂತನೆಯನ್ನು ಸ್ಪಷ್ಟವಾಗಿ ಬಹಿರಂಗಪಡಿಸುತ್ತವೆ. ನೀವು ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು, ಮೀಸಲಾತಿಯನ್ನು ಮತ್ತು ನಮ್ಮನ್ನು ಯಾವಾಗೆಲ್ಲಾ ಅವಮಾನಿಸುತ್ತೀರೋ, ಆಗ ಫುಲೆ-ಶಾಹು-ಅಂಬೇಡ್ಕರ್ ಚಳವಳಿ ಎಷ್ಟು ಅನಿವಾರ್ಯ ಎಂಬುದನ್ನು ನಮಗೆ ಪದೇ ಪದೇ ನೆನಪಿಸುತ್ತೀರಿ!

ಸಂವಿಧಾನ ಮತ್ತು ಮೀಸಲಾತಿಯ ಮೂಲಕ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳು ಸಾಧಿಸುತ್ತಿರುವ ಸಮಾನತೆ ಹಾಗೂ ಪ್ರಗತಿಯನ್ನು ಬ್ರಾಹ್ಮಣವಾದಿಗಳು ಮತ್ತು ಮನುವಾದಿಗಳಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಪ್ರಕಾಶ್‌ ಅಂಬೇಡ್ಕರ್‌ ಟ್ವೀಟ್‌ ಮಾಡಿದ್ದಾರೆ.

ಬ್ರಾಹ್ಮಣವಾದಿಗಳು ಮತ್ತು ಮನುವಾದಿಗಳು ನಮ್ಮನ್ನು ನಿಂದಿಸಿದಾಗಲೆಲ್ಲಾ ನಾವು ‘ಜೈ ಭೀಮ್, ಜೈ ಸಂವಿಧಾನ’ ಎಂದು ಪ್ರತಿರೋಧ ಒಡ್ಡುತ್ತೇವೆ. ಅವರು ನಮ್ಮನ್ನು ಕೀಳಾಗಿ ಕಾಣಲು ಪ್ರಯತ್ನಿಸಿದಾಗಲೆಲ್ಲಾ, ಬಾಬಾಸಾಹೇಬ್ ನಮಗೆ ಕಲಿಸಿದಂತೆ ನಾವು ಇನ್ನಷ್ಟು ಶಿಕ್ಷಿತರಾಗುತ್ತೇವೆ, ಸಂಘಟಿತರಾಗುತ್ತೇವೆ ಮತ್ತು ಹೋರಾಟಗಳನ್ನು ಮುಂದುವರಿಸುತ್ತೇವೆ.

ನಿಮ್ಮ ದ್ವೇಷ ಮತ್ತು ಕೀಳು ಮಟ್ಟದ ಬೈಗುಳಗಳು, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳ ವಿರುದ್ಧದ ಜಾತಿ ತಾರತಮ್ಯವು ಇಂದಿಗೂ ಸಮಾಜದಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು, ಸಾಮಾಜಿಕ ನ್ಯಾಯ ಎಷ್ಟು ಅತ್ಯಗತ್ಯ ಎಂಬುದನ್ನು ಮತ್ತು ಮೀಸಲಾತಿಗಳು ಎಷ್ಟು ನಿರ್ಣಾಯಕ ಎಂಬುದನ್ನು ಜಗತ್ತಿಗೆ ಸಾರುತ್ತಿವೆ ಎಂದು ಪ್ರಕಾಶ್ ಅಂಬೇಡ್ಕರ್ ಕಿಡಿಕಾರಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು