Friday, June 20, 2025

ಸತ್ಯ | ನ್ಯಾಯ |ಧರ್ಮ

ಪ್ರಕೃತಿಯನ್ನು ಸಂಭ್ರಮಿಸುವ ʼತೆನೆ ಹಬ್ಬʼ

ಸಪ್ಟಂಬರ್ 8 ಮಾತೆ ಮೇರಿಯಮ್ಮ ಜನಿಸಿದ ದಿನ. ಜಗತ್ತಿನ ಬಹುತೇಕ ಕಡೆ ಈ ದಿನವನ್ನು ಕ್ರೈಸ್ತ ಧಾರ್ಮಿಕ ಕಟ್ಟಳೆಗಳೊಂದಿಗೆ ಆಚರಿಸುತ್ತಾರೆ. ಆದರೆ ಕರಾವಳಿಯ ಕ್ರೈಸ್ತರು ಮಾತ್ರ ಪ್ರಕೃತಿ ಆರಾಧನೆಯ ತೆನೆ ಹಬ್ಬವಾಗಿ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ. ಕರಾವಳಿ ಮಣ್ಣಿನ ಮೂಲ ಸಂಸ್ಕೃತಿಯನ್ನು ಎತ್ತಿಹಿಡಿಯುವ ಈ ಮಹತ್ವದ ʼತೆನೆ ಹಬ್ಬʼದ ಕುರಿತು ಖ್ಯಾತ ಕವಿ, ಲೇಖಕ ವಿಲ್ಸನ್‌ ಕಟೀಲ್‌ ಬೆಳಕು ಚೆಲ್ಲಿದ್ದಾರೆ.

ಸೌಹಾರ್ದತೆಯ ಹೂಗಳನ್ನು ಬೆಳೆಸೋಣ
ಆರೋಗ್ಯವಂತ ತೆನೆಗಳನ್ನು ಹಂಚೋಣ

ಕರಾವಳಿಯ ಕ್ರಿಶ್ಚಿಯನ್ನರು ಆಚರಿಸುವ ಹಬ್ಬಗಳ ಪಯ್ಕಿ ಎರಡು ಹಬ್ಬಗಳಿಗೆ ವಿಶೇಷ ಮಹತ್ವವಿದೆ. ಒಂದು ಸಪ್ಟಂಬರ್ 8 ರ ತೆನೆಹಬ್ಬ; ಮತ್ತೊಂದು ಸಾಂತ್‍ಮಾರಿ. ಈ ಎರಡೂ ಹಬ್ಬಗಳೂ ಧಾರ್ಮಿಕ ಚೌಕಟ್ಟನ್ನು ಮೀರಿ, ಕುಟುಂಬ ಸದಸ್ಯರನ್ನು ಜೊತೆ ಸೇರಿಸುವ ಮತ್ತು ನೆರೆಕರೆಯವರನ್ನೂ ಒಳಗೊಳಿಸುವ ಕಾರಣಕ್ಕಾಗಿ ವಿಶೇಷವಾಗಿವೆ. ಮಕ್ಕಳ ನೆನಪಲ್ಲಿ ಕೂಡ ಈ ಎರಡು ಹಬ್ಬಗಳಿಗೆ ಪ್ರಮುಖ ಸ್ಥಾನವಿದೆ. ಸಾಂತ್ ಮಾರಿ ಒಂದೊಂದು ಊರಲ್ಲಿ ಒಂದೊಂದು ದಿನದಂದು ಆಚರಿಸುತ್ತಾರೆ. ಎಲ್ಲಾ ನೆಂಟರಿಷ್ಟರೂ ಜೊತೆ ಸೇರುವುದಕ್ಕೆ ಈ ಹಬ್ಬ ವೇದಿಕೆಯಾಗುತ್ತದೆ. ಆದರೆ ಸಪ್ಟಂಬರ್ 8 ರ ತೆನೆಹಬ್ಬ ಒಂದು ಕುಟುಂಬವನ್ನು ಜೊತೆ ಸೇರಿಸುವ ಹಬ್ಬ. ಇದು ಧಾರ್ಮಿಕ ಹಬ್ಬಕ್ಕಿಂತ ಪ್ರಕೃತಿಯ ಹಬ್ಬ, ಪ್ರಕೃತಿಯನ್ನು ಸಂಭ್ರಮಿಸುವ ಹಬ್ಬ ಎಂದು ಹೇಳುವುದರಲ್ಲಿ ನನಗೆ ಹೆಚ್ಚು ಹೆಮ್ಮೆ ಇದೆ.

ಕ್ರಿಶ್ಚಿಯನ್ ಧಾರ್ಮಿಕ ಪರಿಧಿಯೊಳಗೆ ನೋಡಿದರೆ ಸಪ್ಟಂಬರ್ 8 ಏಸು ಕ್ರಿಸ್ತನ ತಾಯಿ ಮೇರಿಯ ಹುಟ್ಟನ್ನು ಸಂಭ್ರಮಿಸುವ ದಿನ. ಈ ಹಬ್ಬದ ಸಲುವಾಗಿ ಹಬ್ಬದ ಎಂಟು ದಿನಗಳ ಮುಂಚೆ ಪ್ರತಿದಿನ ಬೆಳಿಗ್ಗೆ ಮಕ್ಕಳು ಹೂವಿನಿಂದ ತುಂಬಿದ ತಟ್ಟೆಗಳೊಂದಿಗೆ ಚರ್ಚಿಗೆ ಹಾಜರಾಗುತ್ತಾರೆ. ಪೂಜೆಯ ನಂತರ ಮಲಗಿಸಿದ ಪುಟ್ಟ ಕಂದಮ್ಮನಂತೆ ಕಾಣುವ ಮೇರಿಯ ವಿಗ್ರಹದ ಮುಂದೆ ನಿಂತು ಹೂಗಳನ್ನು ಅರ್ಪಿಸುತ್ತಾರೆ. ಹಬ್ಬದ ದಿನದಂದು ಇದರ ಗೌಜಿ ಮತ್ತು ಮಕ್ಕಳ ಸಂಭ್ರಮ ಇನ್ನೂ ಜೋರಾಗಿರುತ್ತೆ. ಈ ಸಂದರ್ಭದಲ್ಲಿ ತೆನೆಯನ್ನು ಆಶೀರ್ವದಿಸುತ್ತಾರೆ. ವಾಪಾಸು ಮನೆಗೆ ಬರುವಾಗ ಕಬ್ಬು ಮತ್ತು ತೆನೆಯೊಂದಿಗೆ ಮರಳುತ್ತಾರೆ. ಇದನ್ನು ನಾನೂ ಚಿಕ್ಕಂದಿನಲ್ಲಿ ತಪ್ಪದೆ ಪಾಲಿಸಿದ್ದೆ. ಈಗ ದೇವರು ಧರ್ಮಗಳ ರಗಳೆಯಿಂದ ಆಚೆ ನಿಂತಿರುವ ನನ್ನಂತವರ ಅನೇಕ ಜೀವನದಲ್ಲೂ ಸಪ್ಟಂಬರ್ 8 ರ ಹಬ್ಬ, ಮತ್ತದರ ತಯಾರಿ ಎಂದಿಗೂ ಮಾಸದ ಹಸಿರು.

ಈ ನೆನಪಿನ ಬುತ್ತಿ ಬಿಚ್ಚಿದಷ್ಟು ರುಚಿರುಚಿ…

ಎಂಟು ದಿನಗಳಿಗಾಗುವಷ್ಟು ಹೂಗಳು ತಂತಮ್ಮ ಹಿತ್ತಲುಗಳಲ್ಲಿ ಇರುವುದಿಲ್ಲ. ಆದ್ದರಿಂದ ಈ ಹೂಗಳ ಸಲುವಾಗಿ ನೆರೆಕರೆಯವರೊಂದಿಗೆ ಬಾಂಧವ್ಯ ಬೆಳೆಯುತ್ತದೆ. ನಾನು ಗಮನಿಸಿದಂತೆ ಕ್ರಿಶ್ಚಿಯನ್ ಮಕ್ಕಳಿಗೆ ಎಟುಕದ ಹೂಗಳನ್ನು ನೆರೆಕರೆಯ ಹಿಂದೂ, ಮುಸ್ಲಿಮ್ ಬಾಂಧವರು ಕೊಯ್ದು ಕೊಡುತ್ತಿದ್ದರು. ನಾನೂ ನಮ್ಮ ಮನೆ ಮತ್ತು ಚರ್ಚಿನ ಹಾದಿಯ ಇಕ್ಕೆಲೆಗಳಲ್ಲಿದ್ದ ನೀಲಪ್ಪೆ, ಸುಶೀಲಕ್ಕ, ದೊಂಬಮಾಮ, ಪುಷ್ಪಕ್ಕ ಈ ಎಲ್ಲರ ಮನೆಯಿಂದ ಹೂಗಳನ್ನು ತರುತ್ತಿದ್ದೆ. ಎಷ್ಟೊ ಸಲ ಸುಶೀಲಕ್ಕ, ನೀಲಪ್ಪೆ ನನಗೆ ಹೂಗಳನ್ನು ಕೊಯ್ದು ಕೊಟ್ಟದ್ದಿದೆ. ಹೌದು ನಾವು ಮಕ್ಕಳು ಅವರನ್ನು ಹೀಗೆಯೇ ಕರೆಯುತ್ತಿದ್ದದ್ದು.. ದೊಂಬ ಮಾಮ, ನೀಲಪ್ಪೆ, ಸುಶೀಲಕ್ಕ… ಮಾಮ, ಅಪ್ಪೆ, ಅಕ್ಕ – ಎಲ್ಲವೂ ಸಂಬಂಧ ಸೂಚಕ ಪದಗಳು, ಈ ಎಲ್ಲರೂ ನಮ್ಮ ಕುಟುಂಬದ ಸದಸ್ಯರು. ಕಂದಮ್ಮ ಮೇರಿಯ ವಿಗ್ರಹಕ್ಕೆ ಅರ್ಪಿಸುವ ಹೂಗಳೆಲ್ಲಾ ಸ್ಪರ್ಶದ ರೂಪಕವಾಗಿ ಬದಲಾದರೆ. ಮೇರಿ ಮಾತೆ ಬರೀ ಕ್ರಿಶ್ಚಿಯನ್ನರ ಸ್ಪರ್ಷದಿಂದ ಮಾತ್ರವೇ ಮೀಯುತ್ತಿರಲಿಲ್ಲ ಬದಲಾಗಿ ಎಲ್ಲಾ ಜಾತಿ ಧರ್ಮದ, ತೋಟ, ಕಂಪೌಂಡು – ಎಂಬ ಬೇಲಿಗಳನ್ನು ಮೀರಿ ಸಮಸ್ತ ಊರ ಬಾಂಧವರ ಸ್ಪರ್ಷದಿಂದ ಮೀಯುತ್ತಿತ್ತು. ಇಷ್ಟೇ ಅಲ್ಲ, ಹಬ್ಬದ ದಿನದಂದು ಚರ್ಚಿನಿಂದ ತಂದ ಕಬ್ಬುಗಳ ಒಂದೊಂದು ತುಂಡು ಆ ಮನೆಗಳೊಂದಿಗೆ ಹಂಚುತ್ತಿದ್ದೆವು. ಇದು ಬೇಲಿಗಳನ್ನೂ ಮೀರಿದ ಪರಿಮಳ ಮತ್ತು ಸಿಹಿಯ ಕೊಡುಕೊಳ್ಳುವಿಕೆ.

ಈ ಹಬ್ಬ ನೆನಪಲ್ಲುಳಿಯಲು ಇನ್ನೂ ಒಂದು ಕಾರಣವಿದೆ. ಅದು ಹಲವಾರು ಬಗೆಯ ಪಲ್ಯಗಳಿಂದ ಕೂಡಿದ ಬಾಳೆ ಎಲೆಯ ಊಟ. ಇದು ತೆನೆಯ ಹಬ್ಬ ಎಂದು ಕರೆಸಿಕೊಳ್ಳುವುದರಲ್ಲಿ ನನಗೆ ಹೆಮ್ಮೆ ಇದೆ ಎಂದು ಹೇಳಿದೆ. ಹೌದು ನಿಜವಾಗಿ ಇದು ತೆನೆ ಮತ್ತು ಊಟದ ಹಬ್ಬ. ಈ ದಿನ ಹೆಚ್ಚಾಗಿ ತರಕಾರಿ ಬಳಸುತ್ತಾರಾದರೂ ಕೆಲವು ಕಡೆ ಮೀನೂ ಈ ಹಬ್ಬದ ಒಂದು ಭಾಗ. ಎಲ್ಲರೂ ಸುತ್ತ ಕುಂತು, ಬಾಳೆ ಎಲೆಯಲ್ಲಿ ಹಲವಾರು ಬಗೆಯ ಪಲ್ಯಗಳು, ಅನ್ನ, ಇಡ್ಲಿ, ದಂಟಿನ ಪದಾರ್ಥ ಎಲ್ಲವನ್ನು ಬಡಿಸಿದ ನಂತರ ಚರ್ಚಿನಿಂದ ಆಶೀರ್ವದಿಸಿ ತಂದ ತೆನೆಯ ಕಾಳುಗಳನ್ನು ಸುಲಿದು ಹಾಲಲ್ಲಿ ಅಥವಾ ಪಾಯಸದಲ್ಲಿ ಹಾಕಿ ಕುಡಿಯುವ ಸಂಪ್ರದಾಯವಿದೆ. ಆ ಕ್ಷಣ ಮನೆಯಿಂದ ದೂರ ಇರುವ ಕುಟುಂಬದ ಸದಸ್ಯರನ್ನು ನೆನೆಯುತ್ತಾರೆ. ಮರಣ ಹೊಂದಿದ ಸದಸ್ಯರನ್ನು ನೆನೆಯುತ್ತಾರೆ. ಆ ನಂತರವಷ್ಟೇ ಅನ್ನ ಊಟಕ್ಕೆ ’ತುತ್ತಾಗುವುದು’.

ಈಗಂತೂ ಹೆಚ್ಚಿನ ಕ್ರಿಶ್ಚಿಯನ್ನರು ಗಲ್ಫ್ ಮಾತ್ರವಲ್ಲ ಆಸ್ಟ್ರೇಲಿಯಾ, ಅಮೆರಿಕಾ, ಕೆನಡ, ಯು.ಕೆ- ಮುಂತಾದ ಊರುಗಳಲ್ಲಿ ಕುಟುಂಬ ಸಮೇತ ವಾಸಿಸುತ್ತಾರೆ. ಕೆಲವರಿಗೆ ಈ ಹಬ್ಬಕ್ಕಾಗಿ ಒಂದೆರಡು ದಿನಗಳ ಮಟ್ಟಿಗೆ ಬಂದು ಹೋಗುವಷ್ಟು ಅನುಕೂಲವಿದೆ. ಆದರೆ ಇಪ್ಪತ್ತು-ಮೂವತ್ತು ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಕುಟುಂಬದ ಒಬ್ಬನೇ ಸದಸ್ಯ ತಮ್ಮ ತಂದೆ-ತಾಯಿ, ಮಡದಿ
ಮಕ್ಕಳನ್ನು ಊರಲ್ಲಿ ಬಿಟ್ಟು ಗಲ್ಫಿನಲ್ಲಿ ದುಡಿಯುವ ಪರಿಸ್ಥಿತಿ ಇತ್ತು. ಎಷ್ಟೋ ಜನರು ತಮ್ಮ ಕುಟುಂಬದವರ ಹೊಟ್ಟೆಯನ್ನು ತಂಪಾಗಿರಿಸಲು ಗಲ್ಫಿನ ಉರಿವ ಮರಳಲ್ಲಿ ಬೇಯುತ್ತಿದ್ದರು. ನನ್ನ ತಂದೆಯೂ ಕುವೈಟಿನಲ್ಲಿ ಹಲವಾರು ವರ್ಷಗಳಿದ್ದರು. ಫೋನು, ಮೊಬೈಲು ಇಲ್ಲದ ಆ ಕಾಲದಲ್ಲಿ ಅವರಿಗೆ ಒಂದಷ್ಟು ತಂಪುಗಳನ್ನು ರವಾನಿಸುತ್ತಿದ್ದದ್ದು ಊರಿನಿಂದ ಹೋಗಿ ತಲುಪುವ ಪತ್ರಗಳು. ಅದೂ ಸಪ್ಟಂಬರಿನಲ್ಲಿ ಅಂದರೆ ಈ ತೆನೆ ಹಬ್ಬದ ನಂತರ ತಲುಪುವ ಪತ್ರಗಳು ಬರೀ ಪತ್ರಗಳಾಗಿ ಇರುತ್ತಿರಲಿಲ್ಲ. ‌

ಹೀಗೆ ದೂರದ ದೇಶಗಳಲ್ಲಿ ದುಡಿಯುತ್ತಿದ್ದ ಸದಸ್ಯರಿಗೆ ಚರ್ಚಿನಿಂದ ಆಶೀರ್ವದಿಸಿ ತಂದ ತೆನೆಯ ಕಾಳುಗಳೂ ಪತ್ರದ ಮೂಲಕ ತಲುಪುತಿದ್ದವು. ಒಂದು ಪತ್ರ, ಆ ಪತ್ರದಲ್ಲಿ ಪ್ರೀತಿಯ ಪದಗಳು, ಜೊತೆಗೆ ಈ ತೆನೆಯ ಕಾಳುಗಳು…. ಒಟ್ಟಿಗೆ ಗಲ್ಫಿಗೆ ವಿಮಾನದಲ್ಲಿ ಹಾರಿ ಹೋಗುತ್ತಿದ್ದವು. ನನಗೆ ನೆನಪಿರುವ ಮಟ್ಟಿಗೆ ಇನ್ನೊಂದು ವಿಶೇಷ ಎಂದರೆ ಇಂಥಹ ಪತ್ರಗಳು ಇನ್ಲ್ಯಾಂಡ್ ಲೆಟರಿನ ಅಂಚುಗಳನ್ನು ಅಂಟಿಸಲು ಯಾವುದೇ ಅಂಟನ್ನು ಉಪಯೋಗಿಸುತ್ತಿರಲಿಲ್ಲ. ನಾಲ್ಕು ಅನ್ನದ ಅಗುಳನ್ನು ಬೆರಳಿಂದ ಜಜ್ಜಿ, ಅದನ್ನೇ ಈ ಕಾಗದದ ಅಂಚಿಗೆ ಉಜ್ಜಿ ಅಂಟಿಸುತ್ತಿದ್ದ ನೆನಪು. ಒಂದು ಕಾಗದ ಅದರಲ್ಲಿ ಕುಟುಂಬದ ಸದಸ್ಯರ ಪ್ರೀತಿಯ ಪದಗಳು… ಅದಕ್ಕೆ ಅಂಟಿಕೊಂಡ ತೆನೆಯ ಕಾಳುಗಳು ಮತ್ತು ಈ ಎಲ್ಲಾ ಗೌಪ್ಯತೆಯನ್ನು ಮುಚ್ಚಲು ಜಜ್ಜಿದ ಅನ್ನದ ಅಗುಳುಗಳು…. ಈ ಹಬ್ಬವೆಂದರೆ ಭಾವನೆಗಳ ಉತ್ಕಟತೆ.

ಇಲ್ಲಿನ ಫಲವತ್ತಾದ ಮಣ್ಣು, ಗದ್ದೆ-ಬದುಗಳು, ತೋಡು-ಬಾವಿಗಳು, ತೆಂಗು ಅಡಿಕೆ ಮರಗಳ ನೆರಳು, ವೀಳ್ಯ-ಬಸಳೆ ಬಳ್ಳಿಗಳ ಸಾಂಗತ್ಯ, ಬಾಳೆ ಎಲೆಯ ರುಚಿ ಎಲ್ಲವನ್ನೂ ಬಿಟ್ಟು ಕುಟುಂಬದ ಏಳಿಗೆಗಾಗಿ ಒಬ್ಬಂಟಿಯಾಗಿ ಗಲ್ಫಿನ ಮರಳಲ್ಲಿ ಬೇಯುವ ಒಂದು ಜೀವಕ್ಕೆ ಈ ಕಾಗದ ತಲುವಾಗ ಏನನ್ನಿಸಬೇಡ? ಬಹುಷಃ ಒಂದು ಹನಿ ಕಣ್ಣೀರು ಆ ಕಾಗದದ ಮೇಲೆ ಬೀಳದೆ ಇರಲಿಕ್ಕೆ ಸಾಧ್ಯವೇ ಇಲ್ಲ. ಯಾರಿಗ್ಗೊತ್ತು- ಮನೆಯಿಂದ ಕಳುಹಿಸಿದ ಎಷ್ಟೊಂದು ತೆನೆಯ ಕಾಳುಗಳು ಇಂತಹ ಕಣ್ಣುಗಳಿಂದ ಜಾರಿದ ಹನಿಗಳಲ್ಲಿ ಮಿಂದು, ಆ ಕಂಬನಿಯ ಕಾವಿಗೇ ಅನ್ನವಾಗಿದ್ದವೋ ಏನೊ! ಈ ಹಬ್ಬವೆಂದರೆ ಸಂಬಂಧಗಳ ತೀವ್ರತೆ!

ಇಂದು ಕಾಲ ಬದಲಾಗಿದೆ. ಮನೆಗಳು ಖಾಲಿಖಾಲಿಯಾಗಿ ವೃದ್ಧಾಶ್ರಮಗಳು ತುಂಬಿ ತುಳುಕುತ್ತಿವೆ. ಹೆಚ್ಚಿನ ಮಕ್ಕಳು ಹೂಗಳನ್ನು ಮಾರುಕಟ್ಟೆಯಿಂದ ತರುತ್ತಾರೆ. ಕೆಲವು ಚರ್ಚುಗಳಲ್ಲಿ ಹಿರಿಯರ ಸೂಚನೆಯ ಮೇರೆಗೆ ಹೂಗಳ ಬದಲು ಕೆಲ ಚಿಕ್ಕಪುಟ್ಟ ವಸ್ತುಗಳನ್ನು ಕೊಡುತ್ತಾರೆ ಹಾಗೂ ನಂತರ ಆ ವಸ್ತುಗಳನ್ನು ಬಡವರಿಗೆ ಅಥವಾ ಅಗತ್ಯ ಇರುವವರಿಗೆ ಹಂಚುತ್ತಾರೆ. ಹೂಗಳ ಮಾರಣ ಹೋಮಕ್ಕಿಂತ ಅಥವಾ ಮಾರುಕಟ್ಟೆಯಲ್ಲಿ ಖರೀದಿಸಿದ ಹೂಗಳ ನಿರ್ಲಿಪ್ತತೆಗಿಂತ ಇಂಥಹುದೇ ಕ್ರಾಂತಿಕಾರಿ ಬದಲಾವಣೆಗಳು ಇಂದಿನ ಸಮಾಜಕ್ಕೆ ಒಳಿತು ಎಂದು ಅನಿಸುತ್ತದೆ ಆದರೂ, ಹೂಗಳ ಹೆಸರಲ್ಲಿ ಮಕ್ಕಳು ಊರ ಜನರೊಂದಿಗೆ ಬೆಸೆಯುತ್ತಿದ್ದ ಸಂದರ್ಭಗಳು, ಮೀರುತ್ತಿದ್ದ ಬೇಲಿಗಳು ಇವೆಲ್ಲವನ್ನೂ ಇಂದಿನ ಮಕ್ಕಳು ತಪ್ಪಿಸಿಕೊಳ್ಳುತ್ತಿದ್ದಾರೆ ಎಂಬ ನೋವು ಇದ್ದೇ ಇದೆ.

ಈವತ್ತಿನ ಈ ದೇಶದ ರಾಜಕೀಯ ಸಂದರ್ಭ ನೋಡಿದರೆ, ಒಂದು ಹೂವಿನ ಚಿಹ್ನೆಯ ಪಕ್ಷವೇ ಅಧಿಕಾರದಲ್ಲಿದೆ. ಆದರೆ ಹೂತೋಟದಲ್ಲಿ ನಡೆಯುವಂತೆ ನಮಗಂತೂ ಭಾಸವಾಗುತ್ತಿಲ್ಲ. ಬೇಲಿಗಳು ಎತ್ತರೆತ್ತರಕ್ಕೆ ಬೆಳೆಯುತ್ತಿವೆ. ದಾರಿಯಲ್ಲೆಲ್ಲಾ ಮುಳ್ಳುಗಳನ್ನೇ ಬಿತ್ತುವ ಕೆಲಸಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ಆಡುವ ಮಾತುಗಳಿಗೂ, ಉಣ್ಣುವ ಅನ್ನದ ಅಗುಳಿಗೂ ವಿಷಪ್ರಾಶನವಾಗುತ್ತಿದೆ. ಹೆಚ್ಚಿನ ಹೂಗಳು ಶವಸಂಸ್ಕಾರಕ್ಕಾಗಿಯೇ ಖರ್ಚಾಗುತ್ತಿವೆ ಎಂಬ ಭಾವನೆ ಹೆಚ್ಚುತ್ತಿದೆ…

ಆದರೂ
ಪ್ರಕೃತಿಗೆ ಅದರದೇ ನಿಯಮವಿದೆ. ಹೂಗಳು ಪ್ರೀತಿಯ ಸಂಕೇತಗಳೇ ಹೊರತು ದ್ವೇಷದ ಸಂಕೇತ ಅಲ್ಲ. ಇದನ್ನು ಮನುಷ್ಯ ಮರೆತರೂ ಪ್ರಕೃತಿ ಮರೆಯೋದಿಲ್ಲ. ನಾವು ನಮ್ಮಿಂದ ಸಾಧ್ಯವಾದಷ್ಟು ಸೌಹಾರ್ದತೆಯ ಹೂಗಳನ್ನು ಬೆಳೆಸೋಣ. ಆ ಮೂಲಕ ಬೇಲಿಗಳನ್ನು ಅಳಿಸೋಣ. ನಾವು ಆರೋಗ್ಯವಂತ ತೆನೆಗಳನ್ನು ಹಂಚೋಣ; ಆ ಮೂಲಕ ವಿಷವನ್ನು ಸೋಲಿಸೋಣ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ವಿಲ್ಸನ್ ಕಟೀಲ್
ಕವಿ, ಕೊಂಕಣಿ ಪತ್ರಿಕೆ ʼಆರ್ಸೊʼದ ಸಂಪಾದಕರು

Related Articles

ಇತ್ತೀಚಿನ ಸುದ್ದಿಗಳು

You cannot copy content of this page