Friday, June 14, 2024

ಸತ್ಯ | ನ್ಯಾಯ |ಧರ್ಮ

ಪ್ರಾಥಮಿಕ ಶಾಲೆಗಳನ್ನು ಸರಸ್ವತಿ ಶಿಶು ಮಂದಿರಗಳನ್ನಾಗಿಸುವ ಹುನ್ನಾರ: ತಜ್ಞರ ವಿರೋಧ

ಬೆಂಗಳೂರು: ಕರ್ನಾಟಕದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಹೊರಡಿಸಿದ ಹೊಸದೊಂದು ಸುತ್ತೋಲೆ ಈಗ ವಿವಾದಕ್ಕೆ ಸಿಲುಕಿದ್ದು, ಹಲವು ನಾಗರಿಕರು ಮತ್ತು ಪ್ರಜ್ಞಾವಂತರು ಸುತ್ತೋಲೆಯನ್ನು ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಸಚಿವರು ತಮ್ಮ ಸುತ್ತೋಲೆಯಲ್ಲಿ ʼಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಲ್ಲಿ ದೃಡತೆ, ಏಕಾಗ್ರತೆ, ದೈಹಿಕ ಮತ್ತು ಮಾನಸಿಕ ಒತ್ತಡ ಕಡಿಮೆಯಾಗಲು ಸಹಕಾರಿಯಾಗುವಂತೆ ಶಾಲೆಗಳಲ್ಲಿ ಪ್ರತಿದಿನ ಧ್ಯಾನವನ್ನು ಮಾಡಿಸುವುದು ಅಗತ್ಯವಾಗಿದೆʼ ಎಂದು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಸುತ್ತೋಲೆಗೆ ಪ್ರತಿಕ್ರಿಯಿಸಿ ನಾಡಿನ ಹಿರಿಯ ಶಿಕ್ಷಣ ತಜ್ಞರು ಮತ್ತು ಸಾಹಿತಿಗಳು ಜಂಟಿ ಪತ್ರಿಕಾ ಹೇಳಿಕೆಯನ್ನು ಹೊರಡಿಸಿದ್ದು ಸಚಿವರ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಪ್ರಯತ್ನವು ಸರಕಾರಿ ಶಾಲೆಗಳನ್ನು ಸರಸ್ವತಿ ಶಿಶು ಮಂದಿರಗಳನ್ನಾಗಿ ಪರಿವರ್ತಿಸುವ ಸಂಚಾಗಿದ್ದು, ತಾವು ಇದನ್ನು ಖಂಡಿಸುವುದಾಗಿ ಹೇಳಿಕೆ ನೀಡಿದ್ದಾರೆ.

ʼಅಲ್ಲದೆ ಪ್ರಸ್ತುತ ಸುತ್ತೋಲೆಯಲ್ಲಿ ಇಲಾಖೆಯ ನೀತಿಗಳನ್ನು ಗಾಳಿಗೆ ತೂರಿ ಆದೇಶ ಹೊರಡಿಸಲಾಗಿದೆ ಎಂದಿರುವ ಅವರು, ಅಲ್ಲದೆ ಕೊರೋನ ಕಾಲದ ಶಾಲೆ ಮುಚ್ಚುವಿಕೆಯಿಂದ ಮಕ್ಕಳ ಮೇಲೆ ಆದ ಮಾನಸಿಕ ಸಮಸ್ಯೆಗಳ ಪರಿಣಾಮಗಳನ್ನು ಹೋಗಲಾಡಿಸಲು ಯುನಿಸೆಫ್‌ ಹೊರಡಿಸಿದ ನೀತಿಯಲ್ಲಿ ಎಲ್ಲಿಯೂ ಧ್ಯಾನದ ಹೆಸರನ್ನು ಉಲ್ಲೇಖಿಸಲಾಗಿಲ್ಲ. ಆದರೂ ಇಲಾಖೆಯು ಇಂತಹ ಸುತ್ತೋಲೆಯನ್ನು ಹೊರಡಿಸಿರುವುದು ಶಿಕ್ಷಣದ ಹಕ್ಕಿನ ಉಲ್ಲಂಘನೆಯಾಗಿದೆʼ ಎಂದು ಹೇಳಿದ್ದಾರೆ.

ಜಂಟಿ ಪತ್ರಿಕೆ ಹೇಳಿಕೆಯ ಪೂರ್ಣ ಪಾಠ ಈ ಕೆಳಗಿನಂತಿದೆ:

ದಿನಾಂಕ: 03/11/2022

ಕರ್ನಾಟಕದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ರಾಜ್ಯದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಲ್ಲಿ ದೃಡತೆ, ಏಕಾಗ್ರತೆ, ದೈಹಿಕ ಮತ್ತು ಮಾನಸಿಕ ಒತ್ತಡ ಕಡಿಮೆಯಾಗಲು ಸಹಕಾರಿಯಾಗುವಂತೆ ಶಾಲೆಗಳಲ್ಲಿ ಪ್ರತಿದಿನ ಧ್ಯಾನವನ್ನು ಮಾಡಿಸುವುದು ಅಗತ್ಯವಾಗಿದೆ ಎಂಬ ಸುತ್ತೋಲೆಯನ್ನು ಕಳುಹಿಸಿದ್ದಾರೆ.

ರಾಜ್ಯದಲ್ಲಿ ಸಾಂವಿಧಾನಿಕವಾಗಿ ಮತ್ತು ಶಿಕ್ಷಣ ಹಕ್ಕು ಕಾಯಿದೆಯ ಅನ್ವಯ ಸಮಾನತೆಯ ನೆಲೆಯಲ್ಲಿ ಎಲ್ಲಾ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸುವುದನ್ನು ಬಿಟ್ಟು ಈ ಸಚಿವರು ತಮ್ಮ ಏಕಪಕ್ಷೀಯ ತೀರ್ಮಾನಗಳಿಂದ ದಿನಕ್ಕೊಂದು ಹೊಸ ಬಗೆಯ ವಿವಾದಗಳನ್ನು ಹುಟ್ಟು ಹಾಕುತ್ತಿದ್ದು, ಜಾತ್ಯತೀತ, ವೈಜ್ಞಾನಿಕ ನೆಲೆಯಲ್ಲಿ ಆಧುನಿಕ ಶಿಕ್ಷಣವನ್ನು ಕೊಡಮಾಡುವ ಬದಲು ಶಾಲಾ ಶಿಕ್ಷಣವನ್ನು ಅಸ್ತವ್ಯಸ್ತಗೊಳಿಸಲು ಪಣ ತೊಟ್ಟಂತೆ ವರ್ತಿಸುತ್ತಿದ್ದಾರೆ.

ಕೊರೋನ ಕಾಲದಲ್ಲಿ ಶಾಲೆಗಳನ್ನು ಮುಚ್ಚಿದ ಪರಿಣಾಮವಾಗಿ ಸಮಸ್ಯೆಗಳಾಗಿದ್ದು, ಅದನ್ನು ಸರಿಪಡಿಸಲು ಮಕ್ಕಳಿಗೆ ಪ್ರತಿನಿತ್ಯ ಧ್ಯಾನ ಮಾಡಿಸಬೇಕೆಂದೂ, ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಕೆಲವು ಶಾಲೆಗಳಲ್ಲಿ ಈಗಾಗಲೇ ಇದನ್ನು ಮಾಡಲಾಗಿದೆಯೆಂದೂ, ಆ ಸಂಘವು ಇದನ್ನು ಎಲ್ಲಾ ಶಾಲೆಗಳಿಗೆ ವಿಸ್ತರಿಸುವಂತೆ ಕೇಳಿರುವುದನ್ನು ಮನ್ನಿಸಿ ಇಂಥ ಸುತ್ತೋಲೆಯನ್ನು ಹೊರಡಿಸಲಾಗಿದೆಯೆಂದೂ ಸಚಿವರು ಹೇಳಿದ್ದಾರೆ.

ಈ ಸರಕಾರವು ಸಂವೇದನಾರಹಿತವೂ, ಅವೈಜ್ಞಾನಿಕವೂ ಆಗಿದೆ ಎನ್ನುವುದಕ್ಕೆ ಇದುವೇ  ಸ್ಪಷ್ಟ ಪುರಾವೆಯಾಗಿದೆ.

ಕೊರೋನ ಕಾಲದಲ್ಲಿ ರಾಜ್ಯದ ಅನೇಕ ವೈದ್ಯಕೀಯ ತಜ್ಞರು, ಮನೋರೋಗ ತಜ್ಞರು, ಶಿಕ್ಷಣ ತಜ್ಞರು, ಶಾಲಾಭಿವೃದ್ಧಿ ಸಮಿತಿಗಳು, ವಿದ್ಯಾರ್ಥಿಗಳು ಮತ್ತು ಹೆತ್ತವರು ಶಾಲೆಗಳನ್ನು ಮುಚ್ಚ್ದಂತೆ, ಮುಚ್ಚಿದ ಶಾಲೆಗಳನ್ನು ಕೂಡಲೇ ತೆರೆಯುವಂತೆ, ವಿದ್ಯಾಗಮವನ್ನು ನಿಲ್ಲಿಸದಂತೆ ಹಲವು ಬಾರಿ ಬೇಡಿಕೊಂಡರೂ, ಪ್ರತಿಭಟನೆಗಳನ್ನೂ ನಡೆಸಿದ್ದರು. ಇವನ್ನು ಲೆಕ್ಕಿಸದೆ ಸುಮಾರು ಎರಡು ವರ್ಷ ಶಾಲೆಗಳನ್ನು ಮುಚ್ಚಿ ಮಕ್ಕಳನ್ನು ಕಲಿಕೆಯಿಂದ ವಂಚಿತರಾಗಿಸಿ, ಆನ್ ಲೈನ್ ಶಿಕ್ಷಣದ ನೆಪದಲ್ಲಿ ಮೊಬೈಲ್ ಸಾಧನಗಳ ದಾಸ್ಯಕ್ಕೆ ತಳ್ಳಿದ ಸರಕಾರವು ಈಗ ಅದಕ್ಕೆ ಪರಿಹಾರವಾಗಿ ಧ್ಯಾನ ಮಾಡಬೇಕೆಂದು ಸುತ್ತೋಲೆ ಹೊರಡಿಸುತ್ತಿರುವುದು ಇನ್ನೂ ದೊಡ್ಡ ಅಪಚಾರವಾಗುತ್ತದೆ.

ಮಕ್ಕಳ ದೈಹಿಕ, ಮಾನಸಿಕ ಆರೋಗ್ಯಕ್ಕೆ, ಏಕಾಗ್ರತೆಗೆ, ಮೊಬೈಲ್ ಸಾಧನಗಳ ಚಟದಿಂದ ಮುಕ್ತಿಗೆ ಧ್ಯಾನ ಮಾಡುವುದರಿಂದ ಪ್ರಯೋಜನವಿದೆಯೆನ್ನಲು ಯಾವುದೇ ಆಧಾರಗಳಿಲ್ಲ, ದೇಶದ ಯಾ ವಿಶ್ವದ ಯಾವುದೇ ಭಾಗದಲ್ಲೂ ಇಂಥ ಪರಿಹಾರವನ್ನು ಯಾರೂ ಸೂಚಿಸಿಲ್ಲ, ಜಾರಿಗೊಳಿಸಿಯೂ ಇಲ್ಲ. ಆದ್ದರಿಂದ ಇಂಥ ಅವೈಜ್ಞಾನಿಕವಾದ ಕ್ರಮಗಳು ಮಕ್ಕಳಿಗೆ ಯಾವುದೇ ಸಹಾಯವನ್ನು ಮಾಡುವುದಿಲ್ಲ. ಮಕ್ಕಳು ಎಲ್ಲರೊಂದಿಗೆ ಬೆರೆತು, ಆಡಿ, ನಲಿದು ಬೆಳೆಯಬೇಕಲ್ಲದೆ ಅಂತರ್ಮುಖಿಗಳಾಗಿ ಧ್ಯಾನಿಸುವುದಲ್ಲ.

ಯುನಿಸೆಫ್ ಸಂಸ್ಥೆಯು ಕೊರೋನ ಕಾಲದಲ್ಲಿ ಶಾಲೆಗಳನ್ನು ಮುಚ್ಚುವುದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಕೊರೋನ ಕಾಲದಲ್ಲಿ ಶಾಲೆಗಳ ಮುಚ್ಚುವಿಕೆಯಿಂದ ಮಕ್ಕಳಲ್ಲಾಗಿರುವ ಮಾನಸಿಕ ಸಮಸ್ಯೆಗಳನ್ನು  ನಿಭಾಯಿಸಲು ವಿಷದವಾದ ಕಾರ್ಯಸೂಚಿಗಳನ್ನು ಕೂಡಾ ಯುನಿಸೆಫ್ ಪ್ರಕಟಿಸಿದ್ದು, ಅದರಲ್ಲಿ ಎಲ್ಲಿಯೂ ಧ್ಯಾನ, ಯೋಗ, ಪ್ರಾಣಾಯಾಮ ಎಂಬ ಪದಗಳೇ ಕಾಣಸಿಗುವುದಿಲ್ಲ. ಆದ್ದರಿಂದ ರಾಜ್ಯದಲ್ಲಿ ಯುನಿಸೆಫ್ ಕಾರ್ಯಸೂಚಿಯ ಆಧಾರದಲ್ಲಿ ವೈಜ್ಞಾನಿಕ ಕ್ರಮಗಳನ್ನಷ್ಟೇ ಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ.

ಎಲ್ಲಕ್ಕಿಂತ ಮಿಗಿಲಾಗಿ, ಶಿಕ್ಷಣ ಹಕ್ಕು ಕಾಯಿದೆ ಅನ್ವಯ ಶಾಲಾ ಚಟುವಟಿಕೆಗಳ ಭಾಗವಾಗಿ ಯಾವುದೇ ಕಲಿಕೆ ಅಥವಾ ಕಲಿಕೇತರ ಚಟುವಟಿಕೆಗಳನ್ನು ಶಿಕ್ಷಣ ಶಾಸ್ತ್ರದ ನೆಲೆಯಲ್ಲಿ ಗೊತ್ತುಪಡಿಸುವ ಪರಮಾಧಿಕಾರವನ್ನು ಕಾನೂನು ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ  ಇಲಾಖೆಗೆ ವಹಿಸಿ ಅದು ಸಕ್ಷಮ ಪ್ರಾಧಿಕಾರ ಎಂದು ಘೋಷಿಸಿದೆ. ಅದು ಈ ಕೆಳ ಕಂಡಂತಿದೆ:

29 Curriculum and evaluation procedure.

(1) The curriculum and the evaluation procedure for elementary education shall be laid down by an academic authority to be specified by the appropriate Government, by notification.

(2) The academic authority, while laying down the curriculum and the evaluation procedure under sub-section (1), shall take into consideration the following, namely:

(a) conformity with the values enshrined in the Constitution;

(b) all round development of the child;

(c) building up child’s knowledge, potentiality and talent;

(d) development of physical and mental abilities to the fullest extent;

(e) learning through activities, discovery and exploration in a child friendly and child-centered manner;

(f) medium of instructions shall, as far as practicable, be in child’s mother tongue;

(g) making the child free of fear, trauma and anxiety and helping the child to express views freely;

(h) comprehensive and continuous evaluation of child’s understanding of knowledge and his or her ability to apply the same

ಈ ಇಲಾಖೆಗಳು ಸೂಚಿಸದೇ ಇರುವ ಧ್ಯಾನ ಇತ್ಯಾದಿಗಳನ್ನು ಶಾಲೆಗಳಲ್ಲಿ ನಡೆಸುವುದಕ್ಕೆ ಶಿಕ್ಷಕರ ಸಂಘಕ್ಕೆ ಯಾವುದೇ ಅಧಿಕಾರವಿಲ್ಲ, ಅವು ಈಗಾಗಲೇ ಹಾಗೆ ಮಾಡಿರುವುದು ನ್ಯಾಯಬಾಹಿರವಾಗಿದ್ದು, ಅದನ್ನು ಸಮರ್ಥಿಸಿ, ವಿಸ್ತರಿಸಲು ಹೇಳುತ್ತಿರುವ ಸಚಿವರ ನಡೆಯು ವಿಷಾದನೀಯವೂ, ಆಘಾತಕಾರಿಯೂ ಆಗಿದೆ.

ಈ ಎಲ್ಲಾ ಅಂಶಗಳನ್ನು ಗಾಳಿಗೆ ತೂರಿ ತಮಗೆ ಮನಬಂದಂತೆ ಹಾಗೂ  ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಸಚಿವರ ನಡೆಯನ್ನು ನಾವು ಒಕ್ಕೊರಲಿನಿಂದ ಖಂಡಿಸುತ್ತೇವೆ. ಸಚಿವರು ಕ್ರಮೇಣವಾಗಿ ಸಾರ್ವಜನಿಕ ಶಾಲೆಗಳನ್ನು ಸರಸ್ವತಿ ಶಿಶು ಮಂದಿರಗಳನ್ನಾಗಿಸುವ ಹುನ್ನಾರ ನಡೆಸುತ್ತಿದ್ದು ಅವರ ಈ ಕಾನೂನು ಬಾಹಿರ ನಡೆಯನ್ನು ನಾವು ವಿರೋಧಿಸುತ್ತೇವೆ.

1.       ಪ್ರೊ. ನಿರಂಜನಾರಾಧ್ಯ ವಿಪಿ

2.       ಶ್ರೀ ಎಸ್ ಜಿ ಸಿದ್ದರಾಮಯ್ಯ

3.       ಡಾ. ವಿಜಯಮ್ಮ

4.       ಡಾ. ಕಾಳೇಗೌಡ ನಾಗವಾರ

5.       ಶ್ರೀ ಹಿಶಿ ರಾಮಚಂದ್ರೇಗೌಡ

6.       ಡಾ. ಶ್ರೀನಿವಾಸ ಕಕ್ಕಿಲ್ಲಾಯ

7.       ಡಾ. ಪಿವಿ ಭಂಡಾರಿ

8.       ಡಾ. ಯೋಗಾನಂದ ರೆಡ್ಡಿ

Related Articles

ಇತ್ತೀಚಿನ ಸುದ್ದಿಗಳು