Friday, June 14, 2024

ಸತ್ಯ | ನ್ಯಾಯ |ಧರ್ಮ

ಅಮಿತ್‌ ಶಾ ಪ್ರಚಾರ ಸಭೆಯಲ್ಲಿ ಪತ್ರಕರ್ತನ ಮೇಲೆ ದೈಹಿಕ ಹಲ್ಲೆ: ಕಠಿಣ ಕ್ರಮಕ್ಕೆ ಆಗ್ರಹಿಸಿದ ಪ್ರೆಸ್ ಕ್ಲಬ್ ಆಫ್ ಇಂಡಿಯಾ

ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರಚಾರ ಸಭೆಯ ವರದಿಗೆ ತೆರಳಿದ್ದ ಪತ್ರಕರ್ತನ ಮೇಲೆ ನಡೆದ ದಾಳಿಯನ್ನು “ತೀವ್ರವಾಗಿ ಖಂಡಿಸುವುದಾಗಿ” ಪ್ರೆಸ್ ಕ್ಲಬ್ ಆಫ್ ಇಂಡಿಯಾ ಭಾನುವಾರ ಹೇಳಿದೆ.

ಮೊಲಿಟಿಕ್ಸ್‌ ಎನ್ನುವ ಸುದ್ದಿ ತಾಣಕ್ಕೆ ಕೆಲಸ ಮಾಡುವ ಕೆಲಸ ಮಾಡುವ ರಾಘವ್ ತ್ರಿವೇದಿ ಎನ್ನುವ ಪತ್ರಕರ್ತನ ಮೇಲೆ ಶಾ ಅವರ ರ್ಯಾಲಿಯಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

“ರಾಯ್‌ ಬರೇಲಿ ಹಾಗೂ ಅಮೇಥಿಯ ವಾಸ್ತವ ಸ್ಥಿತಿಗತಿಗಳ ಕುರಿತು ವರದಿ ಮಾಡಲೆಂದು ನಾನು ದೆಹಲಿಯಿಂದ ಬಂದಿದ್ದೆ. ಸಭೆಯಯಲ್ಲಿದ್ದ ಮಹಿಳೆಯರನ್ನು ಸಂದರ್ಶಿಸುವಾಗ ಹಲವು ಮಹಿಳೆಯರು ತಮ್ಮ ಗ್ರಾಮದ ಮುಖಂಡ 100 ರೂಪಾಯಿಗಳನ್ನು ನೀಡುವುದಾಗಿ ಭರವಸೆ ನೀಡಿ ಕಾರ್ಯಕ್ರಮಕ್ಕೆ ಕರೆತಂದಿದ್ದಾರೆ ಎಂದು ಹೇಳಿದರು.”

“ನಂತರ ಮಹಿಳೆಯರ ಹೇಳಿಕೆಯನ್ನು ಖಾತರಿಪಡಿಸಿಕೊಳ್ಳುವ ಸಲುವಾಗಿ ಸ್ಥಳೀಯ ಬಿಜೆಪಿ ನಾಯಕರನ್ನು ಸಂಪರ್ಕಿಸಿದೆ. ಅವರು ಅದನ್ನು ಸುಳ್ಳು ಎಂದು ಹೇಳಿದರು. ಆದರೆ ನಾನು ಮಹಿಳೆಯರ ಹೇಳಿಕೆಗಳನ್ನು ದಾಖಲಿಸಿದ್ದೇನೆ ಎಂದು ನಾನು ಅವರಿಗೆ ತಿಳಿಸಿದಾಗ, ಒಂದು ಗುಂಪು ನನ್ನನ್ನು ಬಲವಂತವಾಗಿ ಏಕಾಂತ ಸ್ಥಳಕ್ಕೆ ಕರೆದೊಯ್ದು ರೆಕಾರ್ಡಿಂಗ್ ಅನ್ನು ಅಳಿಸುವಂತೆ ಒತ್ತಾಯಿಸಿತು” ಎಂದು ತ್ರಿವೇದಿ ಹೇಳಿದರು.

ಆ ಸಂದರ್ಭದಲ್ಲಿ ಸಹಾಯಕ್ಕಾಗಿ ಪೊಲೀಸರು ಹಾಗೂ ಅಲ್ಲಿದ್ದ ಜನರನ್ನು ವಿನಂತಿಸಿದೆ ಆದರೆ ಯಾರೂ ಬರಲಿಲ್ಲ ಎಂದು ತ್ರಿವೇದಿ ಹೇಳಿದ್ದಾರೆ.

ಸ್ಥಳದಲ್ಲಿ ಸುಮಾರು 40 ಪೊಲೀಸ್ ಸಿಬ್ಬಂದಿ ಇದ್ದರು ಆದರೆ ಅವರಲ್ಲಿ ಒಬ್ಬರೂ ರಕ್ಷಣೆಗೆ ಬರಲಿಲ್ಲ ಎಂದು ಪತ್ರಕರ್ತ ನ್ಯೂಸ್‌ಲಾಂಡ್ರಿಗೆ ತಿಳಿಸಿದ್ದಾರೆ.

ದಾಳಿಯ ನಂತರ, ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಚುನಾವಣಾ ಆಯೋಗ ಮತ್ತು ಸ್ಥಳೀಯ ಆಡಳಿತವನ್ನು ದಾಳಿಕೋರರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಒತ್ತಾಯಿಸಿದೆ.

“ತಮ್ಮ ದಿನನಿತ್ಯದ ವರದಿಯಲ್ಲಿ ಪತ್ರಕರ್ತರು ನಿಯಮಿತವಾಗಿ ದೈಹಿಕ ಬೆದರಿಕೆ, ಕಿರುಕುಳ ಮತ್ತು ದಾಳಿಗೆ ಒಳಗಾಗುತ್ತಿದ್ದಾರೆ” ಎಂದು ಪತ್ರಿಕಾ ಸಂಸ್ಥೆ ಹೇಳಿದೆ.

ತ್ರಿವೇದಿ ಜೊತೆಗಿದ್ದ ಕ್ಯಾಮರಾಮನ್ ಸಂಜೀತ್ ಸಾಹ್ನಿ ಅವರ ದೂರಿನ ಆಧಾರದ ಮೇಲೆ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 147 (ಗಲಭೆ), 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), ಮತ್ತು 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು