ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಅಮೆರಿಕ ಮತ್ತು ವಿದೇಶ ಪ್ರವಾಸದ ಹೇಳಿಕೆಗಳನ್ನು ಉಲ್ಲೇಖಿಸಿ ಕರ್ನಾಟಕ ಸರ್ಕಾರದ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿದೇಶಗಳಲ್ಲಿ ಒಂದು ರೀತಿಯ ಹಾಗೂ ದೇಶದೊಳಗೆ ಮತ್ತೊಂದು ರೀತಿಯ ನಿಲುವು ತಾಳುವ ಮೂಲಕ ಬಿಜೆಪಿ ಮತ್ತು ಆರ್ಎಸ್ಎಸ್ ತಮ್ಮ ದ್ವಂದ್ವ ನೀತಿಯನ್ನು ಪ್ರದರ್ಶಿಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, “ಮೋಹನ್ ಭಾಗವತ್ ಅವರು ಫಂಡ್ಗಾಗಿ ಏನು ಬೇಕಾದರೂ ಮಾತನಾಡುತ್ತಾರೆ. ಭಾರತದಲ್ಲಿದ್ದಾಗ ‘ಹಿಂದೂ ರಾಷ್ಟ್ರ’ ಎನ್ನುವವರು, ಅಮೆರಿಕಕ್ಕೆ ಹೋದರೆ ‘ನಾವು ಅತ್ಯಂತ ಜಾತ್ಯತೀತ, ಪ್ರಜಾಪ್ರಭುತ್ವವಾದಿ ದೇಶ ಮತ್ತು ವೈವಿಧ್ಯತೆಯಲ್ಲಿ ಏಕತೆಯನ್ನು ನಂಬುತ್ತೇವೆ’ ಎಂದು ಹೇಳುತ್ತಾರೆ. ಅಮೆರಿಕದಲ್ಲಿ ಮುಸ್ಲಿಮರು ಭಾರತದ ಅವಿಭಾಜ್ಯ ಅಂಗ ಎನ್ನುವ ಭಾಗವತ್ ಅವರ ಮಾತಿಗೆ ವಿರುದ್ಧವಾಗಿ, ಭಾರತದಲ್ಲಿ ಬಿಜೆಪಿ ಮತ್ತು ಅವರ ಪರಿವಾರ ಟಿಪ್ಪು ಸುಲ್ತಾನ್ ಭಾವಚಿತ್ರ ಅಥವಾ ಕಟೌಟ್ ಹಾಕುವುದಕ್ಕೂ ವಿರೋಧ ವ್ಯಕ್ತಪಡಿಸುತ್ತದೆ” ಎಂದು ಕಿಡಿಕಾರಿದರು.
ಇಸ್ಲಾಂ ಧರ್ಮದ ಕುರಿತು ಸಚಿವ ಬಸವರಾಜ ರಾಯರೆಡ್ಡಿ ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡ ಖರ್ಗೆ, ಪ್ರತಿಯೊಂದು ಧರ್ಮದಿಂದಲೂ ಕಲಿಯಲು ಒಳ್ಳೆಯ ವಿಷಯಗಳಿರುತ್ತವೆ, ಅದರಲ್ಲಿ ಇಸ್ಲಾಂ ಕೂಡ ಒಂದು ಎಂದಷ್ಟೇ ರಾಯರೆಡ್ಡಿ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ ಅವರು, “ಬಿಜೆಪಿ ಈಗ ಮೋಹನ್ ಭಾಗವತ್ ಅವರ ಮಾತನ್ನೂ ಕೇಳುತ್ತಿಲ್ಲ. ಹಾಗಾದರೆ ಬಿಜೆಪಿ ಈಗ ಆರ್ಎಸ್ಎಸ್ಗಿಂತಲೂ ದೊಡ್ಡದಾಗಿದೆಯೇ? ಭಾರತದಿಂದ ಇಸ್ಲಾಂ ಅಥವಾ ಮುಸ್ಲಿಮರನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಖುದ್ದು ಆರ್ಎಸ್ಎಸ್ ಮುಖ್ಯಸ್ಥರೇ ಹೇಳುತ್ತಿರುವಾಗ, ರಾಯರೆಡ್ಡಿ ಅವರ ಹೇಳಿಕೆಯನ್ನು ತಪ್ಪು ಎಂದು ಹೇಳಲು ಬಿಜೆಪಿ ನಾಯಕರು ಯಾರು?” ಎಂದು ಪ್ರಶ್ನಿಸಿದರು.
