ಬೆಂಗಳೂರು: “ಜೆಪಿಗೊಂದು ನ್ಯಾಯ, ಉಳಿದವರಿಗೊಂದು ನ್ಯಾಯವೇ? ಎಲ್ಲರಿಗೂ ನ್ಯಾಯ ಒಂದೇ ಇರಬೇಕಲ್ಲವೇ?” ಎಂದು ಕಾಲ್ತುಳಿತ ಘಟನೆಯ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ರಾಜೀನಾಮೆಗೆ ಒತ್ತಾಯಿಸುತ್ತಿರುವ ಬಿಜೆಪಿ ರಾಜ್ಯ ನಾಯಕರಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಮುಂಬೈ ರೈಲು ದುರಂತದಲ್ಲಿ ಐವರು ಸಾವಿಗೀಡಾಗಿದ್ದಾರೆ. ಅಲ್ಲಿ ಬಿಜೆಪಿ ಸಿಎಂ-ಡಿಸಿಎಂ ರಾಜೀನಾಮೆ ನೀಡಿದರೇ? ಕುಂಭಮೇಳದ ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಯೋಗಿ ಆದಿತ್ಯನಾಥ್ರನ್ನು ಬಿಜೆಪಿ ಪ್ರಶ್ನಿಸಿತೇ? ಇವರಿಗೆ ಒಂದು ಮಾನದಂಡ, ನಮಗೆ ಮತ್ತೊಂದೇ?” ಎಂದು ಪ್ರಶ್ನಿಸಿದರು.
“ಬಿಜೆಪಿ ಆಡಳಿತದಲ್ಲಿ ಒಂದು ನೀತಿ, ಕಾಂಗ್ರೆಸ್ ಆಡಳಿತದಲ್ಲಿ ಮತ್ತೊಂದು ಯಾಕೆ? ಬಿಜೆಪಿ ಸಿಎಂಗಳು ರಾಜೀನಾಮೆ ನೀಡಿ ನಮ್ಮನ್ನು ಪ್ರಶ್ನಿಸಿದರೆ ಅದಕ್ಕೆ ನೈತಿಕತೆ ಇರುತ್ತದೆ. ಬಿಜೆಪಿ ಘೋರ ತಪ್ಪುಗಳನ್ನು ಮಾಡಿದೆ, ಆದರೂ ನಮಗೆ ನೀತಿ ಉಪದೇಶಿಸಲು ಬರುತ್ತಾರೆ” ಎಂದು ಖರ್ಗೆ ವಾಗ್ದಾಳಿ ನಡೆಸಿದರು.
“ನಾವು ಲೋಪವನ್ನು ಒಪ್ಪಿಕೊಂಡಿದ್ದೇವೆ ಮತ್ತು ಅದನ್ನು ಸರಿಪಡಿಸಲು ಕೆಲಸ ಮಾಡುತ್ತಿದ್ದೇವೆ. ಯಾವುದೇ ಪ್ರಶ್ನೆಯಿಂದ ತಪ್ಪಿಸಿಕೊಳ್ಳುತ್ತಿಲ್ಲ. ನಮ್ಮ ಸರ್ಕಾರ ಜವಾಬ್ದಾರಿಯುತವಾಗಿದೆ ಮತ್ತು ಪ್ರಬುದ್ಧವಾಗಿದೆ. ಬಿಜೆಪಿಯಂತೆ ಜವಾಬ್ದಾರಿಯಿಂದ ನುಣುಚಿಕೊಂಡು ಓಡಿಹೋಗುವುದಿಲ್ಲ” ಎಂದು ಅವರು ಹೇಳಿದರು.
“ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಸೀಮಿತವೆಂದು ಯಾರೂ ಹೇಳಿಲ್ಲ. ಇದು ಖಾಸಗಿ ಕಾರ್ಯಕ್ರಮವಾಗಿತ್ತು, ಆದ್ದರಿಂದ ಜವಾಬ್ದಾರಿ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಸಿಎಂ ಹೇಳಿದ್ದಾರೆ. ಆದರೆ, ಈ ಹೇಳಿಕೆಯನ್ನು ಬಿಜೆಪಿ ತಪ್ಪಾಗಿ ಅರ್ಥೈಸುತ್ತಿದೆ. ಬಿಜೆಪಿಗೆ ಇದಕ್ಕಿಂತ ಬೇರೆ ಕೆಲಸವಿಲ್ಲವೇ?” ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.