Home ದೆಹಲಿ ಇದು ನಾಚಿಕೆಗೇಡಿನ ಸಂಗತಿ, ಅವರೇನೋ ಸೂಪರ್‌ಸ್ಟಾರ್ ಎಂಬಂತೆ ನಡೆಸಿಕೊಳ್ಳಲಾಗುತ್ತಿದೆ: ಧರ್ಮೇಂದ್ರ ಪ್ರಧಾನ್‌ಗೆ ನೀಡಿದ ಸ್ವಾಗತವನ್ನು ಟೀಕಿಸಿದ...

ಇದು ನಾಚಿಕೆಗೇಡಿನ ಸಂಗತಿ, ಅವರೇನೋ ಸೂಪರ್‌ಸ್ಟಾರ್ ಎಂಬಂತೆ ನಡೆಸಿಕೊಳ್ಳಲಾಗುತ್ತಿದೆ: ಧರ್ಮೇಂದ್ರ ಪ್ರಧಾನ್‌ಗೆ ನೀಡಿದ ಸ್ವಾಗತವನ್ನು ಟೀಕಿಸಿದ ಪ್ರಿಯಾಂಕಾ ಗಾಂಧಿ

0

ಸಂಸತ್ತಿನಲ್ಲಿ ಪೇಪರ್ ಲೀಕ್ ತಡೆ ಮಸೂದೆ ಮೇಲಿನ ಚರ್ಚೆಯ ಸಂದರ್ಭದಲ್ಲಿ ವಯನಾಡಿನ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ, ಜುಲೈ 20 ರಂದು ವಿದ್ಯಾರ್ಥಿ ಪ್ರತಿಭಟನಾಕಾರರು ನಡೆಸಿದ ‘ಸಂಸತ್ ಚಲೋ’ ಮೆರವಣಿಗೆಯನ್ನು ಸರ್ಕಾರ ನಿರ್ವಹಿಸಿದ ರೀತಿಯನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ. ಮಾನ್ಸೂನ್ ಅಧಿವೇಶನದ ಏಳನೇ ದಿನದಂದು ಲೋಕಸಭೆಯಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಹಿಂಸಾಚಾರಕ್ಕೆ ಬಲಿಯಾಗಿ ಜೀವನಕ್ಕಾಗಿ ಹೋರಾಡುತ್ತಿರುವ ಹಾಗೂ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿಯೊಬ್ಬಳ ಸ್ಥಿತಿಯನ್ನು ಉಲ್ಲೇಖಿಸಿದರು.

ಪ್ರತಿಭಟನಾಕಾರರ ಮೇಲೆ ಲಾಠಿ ಮತ್ತು ಪೆಲೆಟ್ ಗನ್‌ಗಳನ್ನು ಬಳಸಲು ಪೋಲಿಸರಿಗೆ ಮತ್ತು ಭದ್ರತಾ ಪಡೆಗಳಿಗೆ ಅನುಮತಿ ನೀಡಿದವರು ಯಾರು ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದರು. “ಕೇವಲ ಕಾಂಗ್ರೆಸ್ ಮಾತ್ರವಲ್ಲ, ಇಡೀ ದೇಶವೇ ಪ್ರಶ್ನಿಸುತ್ತಿದೆ; ಜುಲೈ 20 ರಂದು ವಿದ್ಯಾರ್ಥಿಗಳ ಮೇಲೆ ಲಾಠಿ, ಕಣ್ಣೀರು ತರಿಸುವ ಅನಿಲ, ವಾಟರ್ ಕ್ಯಾನನ್, ಪೆಲೆಟ್ ಗನ್ ಮತ್ತು ಎಕೆ 47 ಬಳಸುವ ಅಗತ್ಯವೇನಿತ್ತು? ಹಾಗೂ ಇದಕ್ಕೆ ಗೃಹ ಸಚಿವರು ಅಥವಾ ಪ್ರಧಾನಮಂತ್ರಿಯವರಲ್ಲಿ ಯಾರು ಅನುಮತಿ ನೀಡಿದ್ದರು?” ಎಂದು ಕೇಳಿದ ಅವರು, “ಮಹಿಳೆಯರ ಮೇಲೆ ಯಾಕೆ ಹಲ್ಲೆ ನಡೆಸಲಾಯಿತು, ಅವರ ಉಡುಪುಗಳನ್ನು ಯಾಕೆ ಹರಿಯಲಾಯಿತು?” ಎಂದು ಆಕ್ರೋಶ ಹೊರಹಾಕಿದರು.

ಇದು ನಾಚಿಕೆಗೇಡಿನ ಸಂಗತಿ: ಪ್ರಿಯಾಂಕಾ ಗಾಂಧಿ

ಸಂಸತ್ತಿನಲ್ಲಿ ಧರ್ಮೇಂದ್ರ ಪ್ರಧಾನ್ ಅವರಿಗೆ ನೀಡಲಾದ ಅದ್ಧೂರಿ ಸ್ವಾಗತದ ಕುರಿತು ಭಾರತೀಯ ಜನತಾ ಪಾರ್ಟಿಯ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕಾ ಗಾಂಧಿ, “ಅವರನ್ನು ಯಾವುದೋ ಒಬ್ಬ ಸೂಪರ್‌ಸ್ಟಾರ್ ಎಂಬಂತೆ ನಡೆಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ” ಎಂದರು. ಒಡಿಶಾದ ರಾಜ್ಯಸಭಾ ಸಂಸದ ಪ್ರಧಾನ್ ಅವರನ್ನು ಬಿಜೆಪಿ ಸಂಸದರು ಉಡುಗೊರೆಗಳನ್ನು ನೀಡಿ ‘ಪ್ರಧಾನ್ ಜಿಂದಾಬಾದ್’ ಎಂಬ ಘೋಷಣೆಗಳೊಂದಿಗೆ ಸ್ವಾಗತಿಸಿದರೆ, ವಿರೋಧ ಪಕ್ಷದ ಸಂಸದರು ‘ಚೋರ್, ಚೋರ್, ಪೇಪರ್ ಚೋರ್’ ಎಂದು ಘೋಷಣೆ ಕೂಗಿದರು. ಪ್ರಿಯಾಂಕಾ ಮುಂದುವರಿದು, “ಇದು ನಾಚಿಕೆಗೇಡಿನ ಸಂಗತಿ ಎಂದು ನಿಮಗನಿಸುವುದಿಲ್ಲವೇ? ಪ್ರಧಾನ್ ಅವರು ಯಾವ ಪರಿಸ್ಥಿತಿಯಲ್ಲಿ ರಾಜೀನಾಮೆ ನೀಡಿದರು ಎಂಬುದನ್ನು ಎಲ್ಲರೂ ನೋಡಿದ್ದಾರೆ… ಆದರೆ ನಿನ್ನೆ ಸಂಸತ್ತಿನಲ್ಲಿ ಅವರನ್ನು ಒಬ್ಬ ಸೂಪರ್‌ಸ್ಟಾರ್ ಎಂಬಂತೆ ಸ್ವಾಗತಿಸಲಾಯಿತು!” ಎಂದರು.

ಪ್ರಹ್ಲಾದ್ ಜೋಶಿ ವಿರುದ್ಧ ಹರಿದುಬಿದ್ದ ಪ್ರಿಯಾಂಕಾ

ಇದಾದ ನಂತರ ನೂತನ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಅವರ ನೇಮಕಾತಿಯನ್ನು ಪ್ರಶ್ನಿಸಿದ ಪ್ರಿಯಾಂಕಾ ಗಾಂಧಿ, ಗರ್ಭಿಣಿ ಮಹಿಳೆಯೊಬ್ಬಳ ಮೇಲಿನ ಅತ್ಯಾಚಾರ ಪ್ರಕರಣದ ಅಪರಾಧಿಗಳ ಬಿಡುಗಡೆಗೆ ಸಮ್ಮತಿ ಸೂಚಿಸಿ, ಸಂತಸ ವ್ಯಕ್ತಪಡಿಸಿದ್ದ ವ್ಯಕ್ತಿಯನ್ನು ಪ್ರಧಾನಿಯವರು ಹೊಸ ಶಿಕ್ಷಣ ಸಚಿವರನ್ನಾಗಿ ಆಯ್ಕೆ ಮಾಡಿದ್ದಾರೆ ಎಂದು ಆರೋಪಿಸಿದರು. ಇದರಿಂದ ದೇಶದ ಮಹಿಳೆಯರಿಗೆ ಸರ್ಕಾರ ಯಾವ ಸಂದೇಶ ನೀಡುತ್ತಿದೆ ಎಂದು ಪ್ರಶ್ನಿಸಿದರು. ಈ ಹೇಳಿಕೆಗೆ ಸಂಸತ್ತಿನಲ್ಲಿ ತೀವ್ರ ಗದ್ದಲ ಉಂಟಾಯಿತು.

ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಆಕ್ಷೇಪಣೆ

ಪ್ರಿಯಾಂಕಾ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು, “ಇದು ಸಂಸತ್ತಿನ ಒಳಗೆ ನಡೆಸಿದ ಚಾರಿತ್ರ್ಯ ವಧೆಗೆ ಸಮಾನವಾಗಿದೆ ಮತ್ತು ನಾವು ಅವರಿಂದ ಇಂತಹ ಭಾಷೆಯನ್ನು ನಿರೀಕ್ಷಿಸಿರಲಿಲ್ಲ. ಈ ಹೇಳಿಕೆಗಳನ್ನು ಕಡತದಿಂದ ತೆಗೆದುಹಾಕಬೇಕು. ಎರಡನೆಯದಾಗಿ, ಇಂತಹ ಭಾಷೆಯನ್ನು ಬಳಸಬಾರದು, ಅವರು (ಪ್ರಿಯಾಂಕಾ ಗಾಂಧಿ) ಸದನದ ಕ್ಷಮೆಯಾಚಿಸಬೇಕು” ಎಂದು ಆಗ್ರಹಿಸಿದರು.

ತಮ್ಮ ಹೇಳಿಕೆಯ ನಂತರ ಸಂಸತ್ತಿನ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ, “ನಾವು ಮಹಿಳೆಯರಿಗೆ ಹಕ್ಕುಗಳನ್ನು ನೀಡುತ್ತಿದ್ದೇವೆ, ಮಹಿಳಾ ಮೀಸಲಾತಿ ತರುತ್ತಿದ್ದೇವೆ ಮತ್ತು ಮಹಿಳೆಯರನ್ನು ಮುಂದೆ ತರುತ್ತಿದ್ದೇವೆ ಎಂದು ಸರ್ಕಾರ ಹೇಳಿಕೊಳ್ಳುತ್ತಿರುವ ಈ ಸಮಯದಲ್ಲಿ, ಇಂತಹ ನೇಮಕಾತಿ ತೀರಾ ತಪ್ಪು ಸಂದೇಶ ನೀಡುತ್ತದೆ. ನಾನು ಇದನ್ನು ಸಾಬೀತುಪಡಿಸಲಿದ್ದೇನೆ. ಆ ಸಮಯದ ವೀಡಿಯೊ ಲಭ್ಯವಿದೆ. ನಾನು ಸೂಕ್ತ ಪ್ರಕ್ರಿಯೆಯೊಂದಿಗೆ ಎಲ್ಲವನ್ನೂ ಸಲ್ಲಿಸುತ್ತೇನೆ” ಎಂದರು.

ಆರೋಪಗಳನ್ನು ತರಸ್ಕರಿಸಿದ ಪ್ರಹ್ಲಾದ್ ಜೋಶಿ

ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾಡ್ರಾ ಅವರ ಹೇಳಿಕೆಯನ್ನು ಟೀಕಿಸಿದ ನೂತನ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ, ಯಾವುದೇ ಹೇಳಿಕೆ ನೀಡುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಿತ್ತು ಎಂದಿದ್ದಾರೆ. ಈ ಆರೋಪಗಳು ಸುಳ್ಳು ಮಾಹಿತಿಯಿಂದ ಕೂಡಿದ್ದು ಎಂದು ತರಸ್ಕರಿಸಿದ ಪ್ರಹ್ಲಾದ್ ಜೋಶಿ, ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, “ಪ್ರಿಯಾಂಕಾ ಜಿ ತಮ್ಮ ಹೇಳಿಕೆಗಳನ್ನು ಖಚಿತಪಡಿಸಿಕೊಳ್ಳಬೇಕಿತ್ತು. ತಪ್ಪು ಮಾಹಿತಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಯಾರು ಏನು ಬೇಕಾದರೂ ಹೇಳಿ ನುಣುಚಿಕೊಳ್ಳಲು ಸಾಧ್ಯವೇ? ನಾನು ಈ ಆರೋಪಗಳನ್ನು ಸಂಪೂರ್ಣವಾಗಿ ತರಸ್ಕರಿಸುತ್ತೇನೆ. ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಮತ್ತು ಅವರು ಕ್ಷಮೆಯಾಚಿಸಬೇಕು” ಎಂದು ಹೇಳಿದರು.

ಪ್ರಹ್ಲಾದ್ ಜೋಶಿ ಅತ್ಯಂತ ಕೀಳು ಮಟ್ಟದ ವ್ಯಕ್ತಿ ಎಂದ ವಿರೋಧ ಪಕ್ಷದ ನಾಯಕ

ತಮ್ಮ ಸಹೋದರಿ ಹಾಗೂ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಹೇಳಿಕೆಗೆ ಬೆಂಬಲ ಸೂಚಿಸಿದ ರಾಹುಲ್ ಗಾಂಧಿ, ಪ್ರಹ್ಲಾದ್ ಜೋಶಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ‘ಅತ್ಯಂತ ಕೀಳು ಮಟ್ಟದ ವ್ಯಕ್ತಿ’ ಎಂದು ಬಣ್ಣಿಸಿದರು. ರಾಹುಲ್ ಗಾಂಧಿ ಮಾತನಾಡಿ, “ಭಾರತದ ಶಿಕ್ಷಣ ಸಚಿವರಾಗಿ ಅತ್ಯಾಚಾರಿಗಳನ್ನು ರಕ್ಷಿಸುವ ವ್ಯಕ್ತಿಯನ್ನು ಬಿಜೆಪಿ ಆಯ್ಕೆ ಮಾಡಿದೆ. ಅವರು ಅತ್ಯಂತ ಕೀಳು ಮಟ್ಟದ ವ್ಯಕ್ತಿ. ಅತ್ಯಾಚಾರಿಗಳಿಗೆ ರಕ್ಷಣೆ ನೀಡಬೇಕು ಎಂದು ಹೇಳುವ ವ್ಯಕ್ತಿಗಿಂತ ಕೀಳು ಮಟ್ಟದ ವ್ಯಕ್ತಿ ಇನ್ನೊಬ್ಬರಿರಲು ಸಾಧ್ಯವಿಲ್ಲ. ಇಂದು ಭಾರತದ ಶಿಕ್ಷಣ ಸಚಿವರಾಗಿರುವುದು ಅವರೇ. ಪ್ರಧಾನಿಯವರ ಈ ನಿಲುವು ವಿಚಿತ್ರವಾಗಿದೆ; ಅವರ ಸಂಪುಟದಲ್ಲಿ ಇಷ್ಟೊಂದು ಜನರಿದ್ದಾರೆ, ಅವರಲ್ಲಿ ಯಾರನ್ನಾದರೂ ಆಯ್ಕೆ ಮಾಡಬಹುದಿತ್ತು. ಆದರೆ ಅವರು ಇಂತಹ ವ್ಯಕ್ತಿಯನ್ನೇ ಆಯ್ಕೆ ಮಾಡಿದ್ದಾರೆ” ಎಂದು ಕಿಡಿಕಾರಿದರು.

You cannot copy content of this page

Exit mobile version