ಪಣಜಿ: ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಅವರ ವಿರುದ್ಧ ಗೋವಾ ವೈದ್ಯಕೀಯ ಕಾಲೇಜು (GMC) ಮತ್ತು ಆಸ್ಪತ್ರೆಯ ವೈದ್ಯರು, ಸಲಹೆಗಾರರು, ತರಬೇತುದಾರರು ಹಾಗೂ ವಿದ್ಯಾರ್ಥಿಗಳು ಒಗ್ಗಟ್ಟಿನಿಂದ ಪ್ರತಿಭಟನೆಗಿಳಿದಿದ್ದಾರೆ. ರಾಣೆ ಅವರು ವಯೋವೃದ್ಧ ರೋಗಿಯೊಬ್ಬರಿಗೆ ಸೂಕ್ತ ಚಿಕಿತ್ಸೆ ನಿರಾಕರಿಸಿದ ಆರೋಪದ ಮೇಲೆ GMC ಯ ಮುಖ್ಯ ವೈದ್ಯಾಧಿಕಾರಿ ಡಾ. ರುದ್ರೇಶ್ ಕುಟ್ಟಿಕಾರ್ ಅವರನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡು ಅಮಾನತುಗೊಳಿಸಿದ್ದರು. ಈ ಕ್ರಮವನ್ನು ವೈದ್ಯ ಸಮುದಾಯವು ತೀವ್ರವಾಗಿ ಖಂಡಿಸಿದ್ದು, ಸಚಿವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.
ಶನಿವಾರ ಗೋವಾ ವೈದ್ಯಕೀಯ ಕಾಲೇಜಿನ ಕ್ಯಾಶುಯಾಲಿಟಿ ವಾರ್ಡ್ಗೆ ಆರೋಗ್ಯ ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿ, ರೋಗಿಯೊಬ್ಬರಿಗೆ ಚಿಕಿತ್ಸೆ ನಿರಾಕರಿಸಿದ್ದಾರೆ ಎಂಬ ಆರೋಪದ ಮೇಲೆ ಡಾ. ಕುಟ್ಟಿಕಾರ್ ಅವರನ್ನು ತರಾಟೆಗೆ ತೆಗೆದುಕೊಂಡು, ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದರು. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ವೈದ್ಯ ಸಮುದಾಯದಿಂದ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು.
ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ರವಿವಾರ ಈ ಅಮಾನತು ಆದೇಶವನ್ನು ರದ್ದುಗೊಳಿಸಿದ್ದಾರೆ. ಆದರೆ, ವೈದ್ಯರು ಸಚಿವರ ಕ್ಷಮೆಯಾಚನೆಗೆ ಪಟ್ಟು ಹಿಡಿದಿದ್ದಾರೆ. ಡಾ. ಕುಟ್ಟಿಕಾರ್ ಅವರು, “ಸ್ಟುಡಿಯೋದಲ್ಲಿ ಕ್ಷಮೆಯಾಚನೆಯನ್ನು ಒಪ್ಪಿಕೊಳ್ಳುವುದಿಲ್ಲ, ಸಚಿವರು ಆಸ್ಪತ್ರೆಗೆ ಬಂದು ಕ್ಷಮೆ ಕೇಳಬೇಕು” ಎಂದು ಆಗ್ರಹಿಸಿದ್ದಾರೆ.
ಸಚಿವ ವಿಶ್ವಜಿತ್ ರಾಣೆ ಅವರು ಸೋಮವಾರ ತಮ್ಮ ಕ್ರಮಕ್ಕೆ ಕ್ಷಮೆಯಾಚಿಸಿದ್ದು, “ನನ್ನ ಉದ್ದೇಶ ಯಾವುದೇ ವೈದ್ಯರ ಗೌರವಕ್ಕೆ ಧಕ್ಕೆ ತರುವುದಾಗಿರಲಿಲ್ಲ, ಆದರೆ ಭಾವನಾತ್ಮಕವಾಗಿ ನನ್ನ ಅಭಿವ್ಯಕ್ತಿ ಮಿತಿಮೀರಿತು” ಎಂದು ಸ್ಪಷ್ಟಪಡಿಸಿದ್ದಾರೆ. ರೋಗಿಯೊಬ್ಬರಿಗೆ ಚಿಕಿತ್ಸೆ ನಿರಾಕರಿಸಿದ್ದಕ್ಕಾಗಿ ತಾನು ವೈದ್ಯರ ವಿರುದ್ಧ ಆ ರೀತಿ ವರ್ತಿಸಿದ್ದು, ಆ ವಿಷಯದಲ್ಲಿ ತಾನು ಕ್ಷಮೆಯಾಚಿಸುವುದಿಲ್ಲ ಎಂದು ರಾಣೆ ತಿಳಿಸಿದ್ದಾರೆ.
ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್, ಈ ಘಟನೆಯನ್ನು ಖಂಡಿಸಿ, ಸಚಿವ ವಿಶ್ವಜಿತ್ ರಾಣೆಯನ್ನು ಸಂಪುಟದಿಂದ ಕೈಬಿಡಬೇಕೆಂದು ಆಗ್ರಹಿಸಿದೆ. ಎಕ್ಸ್ನಲ್ಲಿ ಈ ಕುರಿತು ಚರ್ಚೆ ತೀವ್ರವಾಗಿದ್ದು, ದೇಶಾದ್ಯಂತ ವೈದ್ಯ ಸಮುದಾಯವು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.