Friday, June 14, 2024

ಸತ್ಯ | ನ್ಯಾಯ |ಧರ್ಮ

ಬಹಿರಂಗ ಚರ್ಚೆಗೆ ಒಪ್ಪಿದ ರಾಹುಲ್; ಇನ್ನೀಗ ನರೇಂದ್ರ ಮೋದಿ ಸರದಿ

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಹಿರಿಯ ಪತ್ರಕರ್ತರನ್ನೊಳಗೊಂಡ ತಂಡ ಚುನಾವಣಾ ಸಂದರ್ಭದಲ್ಲಿ ದೇಶದ ಸ್ಥಿತಿಗತಿಗಳ ಬಗ್ಗೆ ಕರೆದ ಬಹಿರಂಗ ಚರ್ಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಮ್ಮತಿ ಸೂಚಿಸಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಕಡೆಯಿಂದ ಚರ್ಚೆಯ ಬಗ್ಗೆ ಈ ವರಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

“ಆರೋಗ್ಯಕರ ಪ್ರಜಾಪ್ರಭುತ್ವಕ್ಕಾಗಿ ಒಂದೇ ವೇದಿಕೆಯ ಮೂಲಕ ದೇಶಕ್ಕೆ ತಮ್ಮ ದೃಷ್ಟಿಕೋನವನ್ನು ಪ್ರಸ್ತುತಪಡಿಸಲು ಪ್ರಮುಖ ಪಕ್ಷಗಳಿಗೆ ನೀಡಿರುವ ಕರೆ ಸಕಾರಾತ್ಮಕವಾಗಿದೆ. ಕಾಂಗ್ರೆಸ್ ಪಕ್ಷ ಈ ಕಾರ್ಯವನ್ನು ಸ್ವಾಗತಿಸುತ್ತದೆ ಮತ್ತು ಚರ್ಚೆಗೆ ಆಹ್ವಾನವನ್ನು ಸ್ವೀಕರಿಸುತ್ತದೆ. ಈ ಸಂವಾದದಲ್ಲಿ ಪ್ರಧಾನಿಗಳು ಭಾಗವಹಿಸುವರೆಂದು ದೇಶ ನಿರೀಕ್ಷೆಯಲ್ಲಿದೆ” ಎಂದು ರಾಹುಲ್ ಗಾಂಧಿ ತಮ್ಮ ಲೆಟರ್ ಹೆಡ್ ನ್ನು ತಮ್ಮ ಸಾಮಾಜಿಕ ಜಾಲತಾಣದ ವೇದಿಕೆ ‘X’ ನಲ್ಲಿ ಹಂಚಿಕೊಂಡಿದ್ದಾರೆ.

ಅಷ್ಟೇ ಅಲ್ಲದೇ “ಲೋಕಸಭೆ ಚುನಾವಣೆ 2024 ರ ಸಾರ್ವಜನಿಕ ಚರ್ಚೆಗೆ ನಿಮ್ಮ ಆಹ್ವಾನಕ್ಕಾಗಿ ನಾನು ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಿಮ್ಮ ಆಹ್ವಾನದ ಕುರಿತು ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆಯವರೊಂದಿಗೆ ಚರ್ಚಿಸಿದ್ದೇನೆ. ಈ ರೀತಿಯ ಚರ್ಚೆಯು ಜನರು ನಮ್ಮ ಮತ್ತು ನಮ್ಮ ಪಕ್ಷದ ದೃಷ್ಟಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ತಿಳುವಳಿಕೆಯುಳ್ಳ ಆಯ್ಕೆಯನ್ನು ಮಾಡಲು ಅವರಿಗೆ ಅನುವು ಮಾಡಿಕೊಡುತ್ತದೆ ಎಂದು ನಾವು ನಂಬಿದ್ದೇವೆ. ನಮ್ಮ ಆಯಾ ಪಕ್ಷಗಳಿಗೆ ಕಾರಣವಾದ ಯಾವುದೇ ಆಧಾರರಹಿತ ಆರೋಪಗಳನ್ನು ನಿಲ್ಲಿಸುವುದು ಸಹ ಇಲ್ಲಿ ನಿರ್ಣಾಯಕವಾಗಿದೆ. ಪ್ರಮುಖ ಪಕ್ಷಗಳು ಚುನಾವಣೆಯಲ್ಲಿ ಹೋರಾಡುತ್ತಿರುವಂತೆ, ಸಾರ್ವಜನಿಕರು ತಮ್ಮ ನಾಯಕರಿಂದ ನೇರವಾಗಿ ಕೇಳಲು ಅರ್ಹರಾಗಿದ್ದಾರೆ.

ಅದರಂತೆ, ನಾನು ಅಥವಾ ಕಾಂಗ್ರೆಸ್ ಅಧ್ಯಕ್ಷರು ಅಂತಹ ಚರ್ಚೆಯಲ್ಲಿ ಭಾಗವಹಿಸಲು ಹೆಮ್ಮೆಯಿದೆ. ಪ್ರಧಾನಿ ಭಾಗವಹಿಸಲು ಯಾವಾಗ ಮತ್ತು ಯಾವಾಗ ಸಮ್ಮತಿಸುತ್ತಾರೆ ಎಂಬುದನ್ನು ದಯವಿಟ್ಟು ನಮಗೆ ತಿಳಿಸಿ, ನಂತರ ನಾವು ಚರ್ಚೆಯ ವಿವರಗಳು ಮತ್ತು ಸ್ವರೂಪವನ್ನು ಚರ್ಚಿಸಬಹುದು. ನಿಮ್ಮ ಆಹ್ವಾನಕ್ಕಾಗಿ ಮತ್ತೊಮ್ಮೆ ಧನ್ಯವಾದಗಳು. ಇಂತಾದ್ದೊಂದು ಅತ್ಯವಶ್ಯ ಮತ್ತು ಐತಿಹಾಸಿಕ ಚರ್ಚೆಯಲ್ಲಿ ಭಾಗವಹಿಸಲು ನಾನು ಎದುರು ನೋಡುತ್ತಿದ್ದೇನೆ.” ಎಂದು ತಮ್ಮ ಲೆಟರ್ ಹೆಡ್ ಮೂಲಕ ರಾಹುಲ್ ಗಾಂಧಿ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶ ಮದನ್ ಬಿ ಲೋಕೂರ್, ಮಾಜಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಪಿ ಶಾ ಮತ್ತು ಹಿರಿಯ ಪತ್ರಕರ್ತ ಎನ್ ರಾಮ್ ಅವರನ್ನು ಒಳಗೊಂಡ ತಂಡ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಬ್ಬರನ್ನೂ ಲೋಕಸಭೆ ಚುನಾವಣೆ 2024 ಕುರಿತು ಸಾರ್ವಜನಿಕ ಚರ್ಚೆಗೆ ಆಹ್ವಾನಿಸಿದ್ದರು. ಚುನಾವಣಾ ಸಂದರ್ಭದಲ್ಲಿ ಇಂತಹದ್ದೊಂದು ಐತಿಹಾಸಿಕ ಚರ್ಚೆಯ ಅಗತ್ಯ ಇರುವ ಬಗ್ಗೆ ವೈಚಾರಿಕ ವಲಯದಲ್ಲಿ ಹಲವಷ್ಟು ಬೇಡಿಕೆ ಕೇಳಿ ಬಂದಿತ್ತು.

ಈ ವೇದಿಕೆಯು ಪಕ್ಷಾತೀತ ಮತ್ತು ಯಾವುದೇ ಮಾಧ್ಯಮ ಸಂಸ್ಥೆಗಳ ವೇದಿಕೆಯ ಹೊರತಾಗಿ ಸಿದ್ಧಪಡಿಸಿಕೊಂಡಿರುವ ಮೂಲಕ ನಡೆಯುವ ಈ ಚರ್ಚೆ ದೇಶದ ಜನತೆಗೆ ಹೆಚ್ಚು ಉಪಯುಕ್ತ ಆಗಲಿದೆ. ದೇಶದ ಚುನಾವಣಾ ರ್ಯಾಲಿಗಳಿಗಿಂತ ಹೆಚ್ಚು ಉಪಯುಕ್ತತೆ ಮತ್ತು ಪರಿಣಾಮಕಾರಿಯಾಗಿ ಈ ಚರ್ಚೆ ಇರಲಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಮತ್ತು ದೇಶದ ಪ್ರಮುಖ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರ ನೇರ ಮುಖಾಮುಖಿ ಚರ್ಚೆಗೆ ದೇಶವೇ ಎದುರು ನೋಡುತ್ತದೆ ಎಂಬುದು ಬಹು ಚರ್ಚಿತ ಮತ್ತು ನಿರೀಕ್ಷಿತ ವಿಚಾರವಾಗಿದೆ.

Related Articles

ಇತ್ತೀಚಿನ ಸುದ್ದಿಗಳು