ಅದಾನಿ ಬಿಡುಗಡೆಗಾಗಿ ಅಮೆರಿಕದೊಂದಿಗೆ ಮೋದಿ ವಾಣಿಜ್ಯ ಒಪ್ಪಂದ: ರಾಹುಲ್ ಗಾಂಧಿ ಆರೋಪ

ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿ ಅವರನ್ನು ಕಾನೂನು ಸಂಕಷ್ಟದಿಂದ ಮುಕ್ತಗೊಳಿಸುವ ಉದ್ದೇಶದಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ-ಅಮೆರಿಕ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅದಾನಿ ಲಂಚ ನೀಡಿದ ವಿಚಾರವನ್ನು ಮುಚ್ಚಿಟ್ಟಿದ್ದಾರೆ ಎಂಬ ಆರೋಪದ ಮೇಲೆ ಅಮೆರಿಕದಲ್ಲಿ ದಾಖಲಾಗಿದ್ದ ಮೊಕದ್ದಮೆಯನ್ನು ಇತ್ಯರ್ಥಗೊಳಿಸಲು ಅಮೆರಿಕ ಸರ್ಕಾರ ಒಪ್ಪಿಕೊಂಡಿದೆ ಎಂಬ ವಾರ್ತೆಗಳು ಹೊರಬಂದ ಬೆನ್ನಲ್ಲೇ ರಾಹುಲ್ ಈ ಪ್ರತಿಕ್ರಿಯೆ ನೀಡಿದ್ದಾರೆ.

“ಪ್ರಧಾನಿ ಮೋದಿ ಅವರು ಮಾಡಿಕೊಂಡಿರುವುದು ಕೇವಲ ವಾಣಿಜ್ಯ ಒಪ್ಪಂದವಲ್ಲ, ಬದಲಿಗೆ ಅದಾನಿ ಪರವಾಗಿ ನಡೆಸಿದ ಲಾಬಿ” ಎಂದು ರಾಹುಲ್ ಗಾಂಧಿ ಅವರು ಎಕ್ಸ್ (X) ಜಾಲತಾಣದಲ್ಲಿ ಟೀಕಿಸಿದ್ದಾರೆ. ಭಾರತದಲ್ಲಿನ ಬೃಹತ್ ಸೌರ ಯೋಜನೆಯನ್ನು ಲಂಚ ನೀಡಿ ಪಡೆದುಕೊಳ್ಳಲು ಹೂಡಿಕೆದಾರರಿಗೆ ವಂಚಿಸಿದ್ದಾರೆ ಎಂಬ ಆರೋಪದ ಮೇಲೆ ಅದಾನಿ ವಿರುದ್ಧ ದಾಖಲಾಗಿದ್ದ ಮೊಕದ್ದಮೆಯನ್ನು ಇತ್ಯರ್ಥಪಡಿಸಲು ಅಮೆರಿಕ ಸರ್ಕಾರ ಒಪ್ಪಿಕೊಂಡಿದೆ ಎಂದು ನ್ಯಾಯಾಲಯದ ದಾಖಲೆಗಳು ತಿಳಿಸಿವೆ.

ಈ ವರದಿಗಳ ಕುರಿತು ಕಾಂಗ್ರೆಸ್ ಸಂವಹನ ಮುಖ್ಯಸ್ಥ ಜೈರಾಂ ರಮೇಶ್ ಕೂಡ ಕಿಡಿ ಕಾರಿದ್ದಾರೆ. “ಅಮೆರಿಕದ ಸುಲಿಗೆಗೆ ಮತ್ತು ಸಂಪೂರ್ಣ ಏಕಪಕ್ಷೀಯವಾದ ಭಾರತ-ಅಮೆರಿಕ ವಾಣಿಜ್ಯ ಒಪ್ಪಂದಕ್ಕೆ ಪ್ರಧಾನಿ ಮೋದಿ ಏಕೆ ಒಪ್ಪಿಕೊಂಡರು ಎಂಬುದು ಈಗ ಸ್ಪಷ್ಟವಾಗಿದೆ. ರಾಷ್ಟ್ರೀಯ ಹಿತಾಸಕ್ತಿಗಿಂತ ಹೆಚ್ಚಾಗಿ, ಅಧ್ಯಕ್ಷ ಟ್ರಂಪ್ ಅವರ ಬೆದರಿಕೆಗೆ ಮಣಿದು ಪ್ರಧಾನಿ ಮೋದಿ ಅವರು 2025ರ ಮೇ 10ರಂದು ‘ಆಪರೇಷನ್ ಸಿಂಧೂರ್’ ಅನ್ನು ಏಕೆ ಇದ್ದಕ್ಕಿದ್ದಂತೆ ಸ್ಥಗಿತಗೊಳಿಸಿದರು ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ” ಎಂದು ಅವರು ಹೇಳಿದ್ದಾರೆ. ಅದಾನಿ ಮೇಲಿರುವ ಎಲ್ಲಾ ಭ್ರಷ್ಟಾಚಾರದ ಆರೋಪಗಳನ್ನು ಟ್ರಂಪ್ ಸರ್ಕಾರ ಹಿಂಪಡೆಯಲಿದೆ ಎಂಬ ಮಾಹಿತಿ ಇದೆ ಎಂದು ಅವರು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ: 2024ರ ಕೊನೆಯಲ್ಲಿ ದಾಖಲಾದ ಮೊಕದ್ದಮೆಯ ಪ್ರಕಾರ, ಅದಾನಿ ಗ್ರೂಪ್ ಚೈರ್ಮನ್ ಗೌತಮ್ ಅದಾನಿ ಮತ್ತು ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್‌ನ ನಿರ್ದೇಶಕ ಸಾಗರ್ ಅದಾನಿ ಅವರು 2020-2024ರ ನಡುವೆ ಲಾಭದಾಯಕ ಸೌರ ವಿದ್ಯುತ್ ಗುತ್ತಿಗೆಗಳನ್ನು ಪಡೆಯಲು ಭಾರತ ಸರ್ಕಾರದ ಅಧಿಕಾರಿಗಳಿಗೆ ಸುಮಾರು 265 ಮಿಲಿಯನ್ ಡಾಲರ್ ಲಂಚ ನೀಡಲು ಒಪ್ಪಿಕೊಂಡಿದ್ದರು ಎಂದು ಅಮೆರಿಕದ ಸಂಸ್ಥೆಯು ಆರೋಪಿಸಿದೆ. ಈ ಲಂಚದ ವಿಚಾರವನ್ನು ಮರೆಮಾಚಿ, ತಪ್ಪು ಮಾಹಿತಿಗಳ ಮೂಲಕ ಅದಾನಿ ಗ್ರೂಪ್ ಅಮೆರಿಕದ ಸಂಸ್ಥೆಗಳು ಸೇರಿದಂತೆ ವಿವಿಧ ಮೂಲಗಳಿಂದ 2 ಬಿಲಿಯನ್ ಡಾಲರ್ ಸಾಲ ಮತ್ತು ಬಾಂಡ್‌ಗಳನ್ನು ಸಂಗ್ರಹಿಸಿದೆ ಎಂದು ಮೊಕದ್ದಮೆಯಲ್ಲಿ ಉಲ್ಲೇಖಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು