ಬೆಂಗಳೂರು: ಭಾರತ ಐಕ್ಯತಾ ಯಾತ್ರೆಯು ರಾಜ್ಯದಲ್ಲಿ ಕಾಲಿಟ್ಟಿರುವ ಹಿನ್ನಲೆ ಯಾತ್ರೆ ಸಾಗುವ ದಾರಿಯ ಅಕ್ಕ-ಪಕ್ಕದಲ್ಲಿ ನಾಡ ಧ್ವಜಗಳ ಮೇಲೆ ರಾಹುಲ್ ಗಾಂಧಿ ಭಾವಚಿತ್ರ ಹಾಕಿರುವ ಕುರಿತು ರಾಜ್ಯ ಬಿಜೆಪಿ ಘಟಕವು ಕಾಂಗ್ರೆಸ್ ಪಕ್ಷದ ಮೇಲೆ ಹರಿಹಾಯ್ದಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕವು, ಕಾಂಗ್ರೆಸ್ಗೆ ನಮ್ಮ ಕನ್ನಡ ಬಾವುಟದ ವಿಚಾರದಲ್ಲಿ ಸುಮ್ಮನೆ ಕೂರುವುದಕ್ಕೇ ಬರಲ್ಲ ಎಂಬುದಕ್ಕೆ ಇದು ಎರಡನೇ ಉದಾಹರಣೆ. ಮೊದಲು ಧ್ವಜವನ್ನೇ ಬದಲಿಸಹೊರಟಿದ್ದರು, ಆದರೆ ಈಗ ರಾಹುಲ್ ಗಾಂಧಿಯ ಫೋಟೊ ಹಾಕಿದ್ದಾರೆ. ಕನ್ನಡಿಗರನ್ನು ಕಂಡರೆ ಭಾರತ ರಾಷ್ಟ್ರೀಯ ಕಾಂಗ್ರೆಸ್ಗೇಕೆ ಇಷ್ಟು ದ್ವೇಷ? ಎಂದು ಕಿಡಿಕಾರಿದೆ.
ಕಂಡ ಕಂಡ ಕಡೆಯಲ್ಲೆಲ್ಲ ಗಾಂಧಿ ಕುಟುಂಬದ ಹೆಸರೇ ತುಂಬಿದ್ದರೂ, ಸಮಾಧಾನಗೊಳ್ಳದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುಲಾಮಗಿರಿಯ ಮನಸ್ಸು, ಈಗ ಕನ್ನಡದ ಧ್ವಜದಲ್ಲೂ ರಾಹುಲ್ ಗಾಂಧಿಯ ಫೋಟೊ ಹಾಕಿರುವುದನ್ನು ನೋಡಿದರೆ, ಮುಂದೊಂದು ದಿನ ಕರ್ನಾಟಕವನ್ನೇ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಅಡವಿಟ್ಟರೂ ಯಾವುದೇ ಆಶ್ಚರ್ಯವಿಲ್ಲ ಎಂದು ವ್ಯಂಗ್ಯವಾಡಿದೆ.