Friday, June 14, 2024

ಸತ್ಯ | ನ್ಯಾಯ |ಧರ್ಮ

ರಾಜ್ಯ ಹಾಗೂ ರಾಷ್ಟ್ರ ಪ್ರಣಾಳಿಕೆಗಳಲ್ಲಿ ಜನರ ಅಭಿಪ್ರಾಯ: ರಾಹುಲ್‌ ಗಾಂಧಿ

ಬೆಂಗಳೂರು: ರಾಹುಲ್ ಗಾಂಧಿ ಅವರು ಇಂದು ಶಿಕ್ಷಣ ತಜ್ಞರ ಜತೆ ಸಭೆ ನಡೆಸಿದ್ದು, ಹಲವು ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು, ಮಹಿಳಾ ಶಿಕ್ಷಕಿಯರು ಈ ಸಂವಾದದಲ್ಲಿ ಭಾಗವಹಿಸಿದ್ದರು. ಇವರೆಲ್ಲರೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಾಗೂ ಎನ್ ಇಪಿ ಜಾರಿ ನಂತರ ನಮ್ಮ ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ತೊಂದರೆಗಳ ವಿಚಾರವನ್ನು ರಾಹುಲ್ ಗಾಂಧಿ ಅವರ ಮುಂದೆ ಪ್ರಸ್ತಾಪಿಸಿದರು.

ಸಭೆಯಲ್ಲಿ ನ್ಯಾಷನಲ್ ಲಾ ಸ್ಕೂಲ್ ಪ್ರಾಧ್ಯಾಪಕರು ಮಾತನಾಡಿ ʼಎನ್ಇಪಿ ಜಾರಿ ನಂತರ ಮೂರು ಸಮಸ್ಯೆಗಳು ಎದುರಾಗಿದ್ದು, ಕೋಮುವಾದಿಕರಣ, ವಾಣಿಜ್ಯಕರಣ ಹಾಗೂ ಕೇಂದ್ರಿಕರಣದಿಂದ ಕಳೆದ 75 ವರ್ಷಗಳಲ್ಲಿ ನಮ್ಮ ದೇಶದ ಶಿಕ್ಷಣ ಕ್ಷೇತ್ರದ ಅಡಿಪಾಯ ನಾಶವಾಗುತ್ತಿದೆ. ಕೋಮುವಾದದ ವಿಷಬೀಜವನ್ನು ಚಿಕ್ಕ ಮಕ್ಕಳ ಮನಸ್ಸಿನಲ್ಲಿ ಬಿತ್ತುತ್ತಿದ್ದಾರೆʼ ಎಂದು ಹೇಳಿದರು

ನಮ್ಮ ರಾಜ್ಯದ ಪಠ್ಯಪುಸ್ತಕದಲ್ಲಿ ಸಾರ್ವಕರ್ ವಿಚಾರವಾಗಿ ಇದ್ದ ಪಾಠದಲ್ಲಿ ಬುಲ್ ಬುಲ್ ಹಕ್ಕಿ ಮೇಲೆ ಕೂತು ತಾಯ್ನಾಡನ್ನು ಸಂದರ್ಶಿಸುತ್ತಿದ್ದರು ಎಂಬಂತಹ ಕಟ್ಟು ಕಥೆಗಳು ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬ ವಿಚಾರವೂ ಚರ್ಚೆ ಆಯಿತು. ಈ ರೀತಿ ಮಾಡುತ್ತಿರುವುದೇಕೆ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ರಾಹುಲ್‌ ಗಾಂಧಿ ʼಜನರಲ್ಲಿ ಚಿಕ್ಕ ವಯಸ್ಸಿನಲ್ಲೇ ಹೊಸ ಹೊಸ ಪುರಾಣಗಳನ್ನು ಸೃಷ್ಟಿಸಿ ಅವರು ನಂಬುವಂತೆ ಮಾಡುವ ಪ್ರಯತ್ನ ನಡೆಯುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದವರಿಗೆ ಪ್ರಾಮುಖ್ಯತೆ ನೀಡಲು ಇಂತಹ ಪ್ರಯತ್ನ ಮಾಡಲಾಗುತ್ತಿದೆʼ ಎಂದು ತಿಳಿಸಿದರು.

ಆರ್ ಎಸ್ಎಸ್ ಗೆ ಆರ್ಥಿಕ ನೆರವು ಹೇಗೆ ಬರುತ್ತಿದೆ ಎಂದು ಕೇಳಿದಾಗ ಅದಕ್ಕೆ ಸರಿಯಾದ ದಾಖಲೆಗಳು ಇಲ್ಲವಾಗಿದೆ. ಆದರೆ ಬಿಜೆಪಿ ಸರ್ಕಾರದ ರಾಜ್ಯಗಳಲ್ಲಿ ಸಾರ್ವಜನಿಕ ಶಾಲೆಗಳಿಗೆ ಹೋಗಬೇಕಾದ ಅನುದಾನಗಳು ಆರ್ ಎಸ್ಎಸ್ ಶಾಲೆಗಳಿಗೆ ನೀಡಲಾಗುತ್ತಿದೆ ಎಂಬ ವಿಚಾರ ಚರ್ಚೆ ಆಯಿತು. ಕೋವಿಡ್ ಸಮಯದಲ್ಲಿ ಶಾಲೆ ಮುಚ್ಚಿರುವ ಪ್ರಮಾಣದಲ್ಲಿ ದೇಶವೇ ಮೊದಲು. ಈ ಸಂದರ್ಭದಲ್ಲಿ ಶ್ರೀಮಂತರ ಮಕ್ಕಳು ಶಿಕ್ಷಣ ಪಡೆದರು, ಬಡವರು 2 ವರ್ಷ ಶಿಕ್ಷಣದಿಂದ ದೂರವಾಗಿದ್ದರು. ಈ ಮಕ್ಕಳು ಹೇಗೆ ತಮ್ಮ ಶಿಕ್ಷಣದ ಕೊರತೆ ನೀಗಿಸುತ್ತಾರೆ, ಇದಕ್ಕೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ವಿಚಾರಗಳು ಚರ್ಚೆ ಆಗಿವೆ.

ಮಂಡ್ಯ ಮೂಲದ ಶಿಕ್ಷಕಿ ಮಾತನಾಡಿ, ʼಪೋಷಕರು ಸರ್ಕಾರಿ ಶಾಲೆಗಿಂತ ಖಾಸಗಿ ಶಾಲೆಗಳತ್ತ ಹೆಚ್ಚಿನ ಒಲವು ತೋರಿದ್ದು, ಅವರ ಪ್ರಕಾರ ಸರ್ಕಾರಿ ಶಾಲೆಗಳ ಮೂಲಸೌಕರ್ಯಕ್ಕೆ ಅನುದಾನ, ಶಿಕ್ಷಕರಿಗೆ ಅನುದಾನ ನೀಡುತ್ತಿಲ್ಲ. ಹೀಗಾಗಿ ಬಡವರು ಕೂಡ ಖಾಸಗಿ ಶಾಲೆಗಳತ್ತ ಮುಖಮಾಡಿದ್ದಾರೆ ಎಂದರು. ಇದಕ್ಕೆ ಪರಿಹಾರ ಏನು ಎಂದು ಕೇಳಿದಾಗ ಉತ್ತರಿಸಿದ ರಾಹುಲ್ ಗಾಂಧಿ ಅವರು, ಸರ್ಕಾರಗಳು ಅನುದಾನಗಳನ್ನು ಹೆಚ್ಚಿಸಬೇಕು. ಈ ಬಗ್ಗೆ ಪ್ರಣಾಳಿಕೆಯಲ್ಲಿ ವಿಚಾರ ಸೇರಿಸುತ್ತೇವೆ. ಸರ್ಕಾರದಿಂದ ಉತ್ತಮ ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಸಾಧ್ಯವಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಐಐಟಿಗಳೆಲ್ಲವೂ ಸರ್ಕಾರದ ಕಾಲೇಜುಗಳಾಗಿವೆ. ಸರ್ಕಾರ ಮನಸ್ಸು ಮಾಡಿದರೆ ಉತ್ತಮ ಶಿಕ್ಷಣ ನೀಡಬಹುದುʼ ಎಂದರು.

ಇನ್ನು ಈಗಿನ ಪರಿಸ್ಥಿತಿಯಲ್ಲಿ ಉಳ್ಳವರಿಗೆ ಉತ್ತಮ ಶಿಕ್ಷಣ ಹಾಗೂ ಭವಿಷ್ಯ ಸಿಗುತ್ತಿದ್ದು, ಬಡವರು ಶಿಕ್ಷಣ ವಂಚಿತರಾಗುತ್ತಿದ್ದಾರೆ. ಹಿಂದುಳಿಯುತ್ತಿದ್ದಾರೆ ಎಂದು ಚರ್ಚಿಸಲಾಯಿತು. ಸರ್ಕಾರಿ ಶಾಲೆ ಅಭಿವೃದ್ಧಿ ಪಡಿಸಿ ಸಮಾನ ಶಿಕ್ಷಣ ನೀಡುವಂತೆ ಮಾಡಬೇಕು ಎಂಬ ಒತ್ತಾಯ ಮಾಡಲಾಯಿತು. ಇದನ್ನು ಒಪ್ಪಿದ ರಾಹುಲ್ ಗಾಂಧಿ 1947ರಿಂದ ನಮ್ಮ ಶಿಕ್ಷಣ ನೀತಿಗಳಲ್ಲಿ ಸಮಾನ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಮುಂದೆಯೂ ಈ ಬಗ್ಗೆ ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ಕಾಂಗ್ರೆಸ್ ಸರ್ಕಾರ ಇರುವ ರಾಜ್ಯಗಳಲ್ಲಿ ಹಾಗೂ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಾಡಲಾಗಿದ್ದು, ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಇನ್ನು ಮಹಿಳೆಯರ ವಿಚಾರ, ಹಿಜಾಬ್ ವಿವಾದದಿಂದ ಹೆಣ್ಣು ಮಕ್ಕಳ ಶಿಕ್ಷಣ ಕಸಿಯುವ ಪ್ರಯತ್ನ, ಪಠ್ಯ ಪುಸ್ತಕ ಪರಿಷ್ಕರಣೆ ಹೆಸರಲ್ಲಿ ಪಠ್ಯ ಕೋಮುವಾದದಿಂದ ತುಂಬುವುದರ ವಿರುದ್ಧ ಚರ್ಚೆ ಮಾಡಿದರು.

ಕಡೆಯದಾಗಿ ಮಾತನಾಡಿದ ರಾಹುಲ್ ಗಾಂಧಿ ಅವರು, ಇದು ಚಿಕ್ಕ ಚರ್ಚೆ ಮಾಡಿದ್ದೇವೆ ಅಷ್ಟೇ. ಇನ್ನುಮುಂದೆ, ನಮ್ಮ ರಾಜ್ಯದ ಪ್ರಣಾಳಿಕೆ, ಹಾಗೂ ರಾಷ್ಟ್ರ ಪ್ರಣಾಳಿಕೆಗಳಲ್ಲಿ ನಿಮ್ಮ ಅಭಿಪ್ರಾಯ ಸಂಗ್ರಹಿಸಿ ಜನರ ಪ್ರಣಾಳಿಕೆ ಮಾಡಲಾಗುವುದು ಎಂದರು.

Related Articles

ಇತ್ತೀಚಿನ ಸುದ್ದಿಗಳು