Friday, June 20, 2025

ಸತ್ಯ | ನ್ಯಾಯ |ಧರ್ಮ

ನಮ್ಮ “ರಾಮು” ಛೇರ್ಮನ್ ಆಗಲಿಲ್ಲ! : ಡಾ.ಬಾಬು ಜಗಜೀವನ ರಾಂ ಬಗ್ಗೆ ಪಿ.ಲಂಕೇಶ್

“..ರಾಮುವಿನ ಬಗ್ಗೆ ಬರೆಯುವಾಗ ನನ್ನಲ್ಲಿ ವ್ಯಂಗ್ಯ ಸತ್ತು ಕಣ್ಣಂಚಿನಲ್ಲಿ ನೀರು ಕಾಣಿಸಿಕೊಳ್ಳುತ್ತಿದೆ. ಇದು ಖಂಡಿತ ಕರುಣೆ ಅಥವಾ ಬೊಟ್ಟಿ ಅನುಕಂಪದ್ದಲ್ಲ. ಈ ಗಾಂಧೀಜಿಯ ನೆಲದ ಅನ್ಯಾಯದಿಂದ ಹೊರಟದ್ದು..” – ಪಿ.ಲಂಕೇಶ್

ನಮ್ಮ ಜೀವನರಾಮು ಕೊನೆಗೂ ಛೇರ್ಮನ್ ಆಗಲಿಲ್ಲ. ಬರ್ತೂರಿನ ಛೇರನ್ನು ಈ ಪಂಚಾಯತಿಯ ಕತ್ತೆಗಳು ಎಷ್ಟು ಗಲೀಜು ಮಾಡಿದ್ದಾರೆಂದರೆ, ನಮ್ಮ ರಾಮು ಹಿಡಿಯುತ್ತಿದ್ದುದು ಈ ದರಿದ್ರ ಛೇರನ್ನು. ಊರಿನ ಯಜಮಾನ ಸಂಜೀವಿಯ ಆಶೀರ್ವಾದದಿಂದ ರಾಮು ಕುರ್ಚಿ ಏರಬೇಕಾಗಿರಲಿಲ್ಲ. ರಾಮು ನಮ್ಮೆಲ್ಲರ ಮನಸ್ಸಿನಲ್ಲಿ ಬಹಳ ಕಾಲ ಉಳಿಯುವ ಕಪ್ಪು ಸಂಕೇತ. ನಮ್ಮ ಅನ್ಯಾಯಗಳ ಸಂಕೇತ ಕೂಡ.

ಬಿಳಿ ತೊಗಲು, ಚರಣಪ್ಪನ ಮುದಿ ಗತ್ತು, ಉತ್ತರಳ್ಳಿಯ ಕುಣಿತದ ಹೆಂಗಸಿನ ಒನಪು ಒಯ್ಯಾರ, ಅವಳ ಮಗ ಸಂಜಿಯ ವೈಭವಗಳನ್ನು ಪ್ರೀತಿಸುವ ನಮ್ಮ ಪಂಚಾಯ್ತಿಯ ಮನುಷ್ಯರಿಗೆ ನಮ್ಮ ರಾಮು ಸವಾಲು. ಈ ರಾಮು ಸಂಜಿಯ ಇನ್ನೊಂದು ರೂಪ ಕೂಡ.

ಪಂಚಾಯ್ತಿಯ ಜನ ಬಹಳ ಮಾತಾಡಿಕೊಳ್ಳುತ್ತಾರೆ. ಗುಂಡಗೆ ಕಪ್ಪಗಿರುವ ಜೀವನರಾಮು ವ್ಯಂಗ್ಯ ಚಿತ್ರ ಬರೆಯುವವನಿಗೆ ಹಬ್ಬವಾಗಬಲ್ಲ. ಬಿಳಿ ಹಾಳೆಯ ಮೇಲೆ ಕಪ್ಪು ಇಂಕು ಚೆಲ್ಲಿ ಎರಡು ಕಣ್ಣು ಬರೆದು ಬಿಳಿ ಟೋಪಿ ಹಾಕಿ ತಮಾಷೆ ಮಾಡುವುದು ಸುಲಭ. ಆದರೆ ಈ ಕಪ್ಪು ಆಕಾರದ ಹಿಂದೆ ಅರ್ಧಶತಮಾನದ ಅನುಭವ ಇದೆ. ಕೋಟ್ಯಂತರ ಕಪ್ಪು ಜನರ ನೋವು ಇದೆ. ಗಾಂಧೀಜಿ ಅನುಭವಿಸಿದ ದುರಂತವಿದೆ. ವೇದೋಪನಿಷತ್ತು ಹೇಳಿ ಮೋಸ ಮಾಡಿದವರ, ಸುಲಿದು ಉಂಡವರ ಅಟ್ಟಹಾಸದ ನೆನಪುಗಳಿವೆ. ಚರಣಪ್ಪನಂಥ ಕಟ್ಟೆ ಮುಖಂಡರ ತಾತ್ಸಾರ ಮತ್ತು ಶೋಷಣೆ ಇದೆ. ಯಜಮಾನ ಸಂಜೀವಿಯಂಥವರ ಪಿತೂರಿ ಮತ್ತು ಸೇಡುಗಳ ಬರೆ ಸ್ಪಷ್ಟವಾಗಿದೆ. ಜಾತಿ, ವರ್ಗಗಳ ಕೊಲೆಗಡುಕ ಚೌಕಟ್ಟು ನಮ್ಮೆಲ್ಲರ ಕಣ್ಣು ಕುಕ್ಕುವಷ್ಟು ಸರಳವಾಗಿ ಎದ್ದು ಕಾಣುತ್ತಿದೆ.

ಎಲ್ಲ ಶೂದ್ರರಂತೆ ಈತ ತಪ್ಪು ಮಾಡಿದ್ದಾನೆ. ಉತ್ತರಳ್ಳಿ ಹೆಂಗಸಿನ ತಂದೆ ನೆಹರೇಶ್‌ನಾಥ ಎಂಬ ನಾಜೂಕು ಮನುಷ್ಯನ ಪೊಳ್ಳುತನ ಕಂಡುಕೊಳ್ಳದೆ ಮೋಸ ಹೋಗಿದ್ದಾನೆ. ಸಮಯದಲ್ಲಿ ಕೈಕೊಡುವ ಜನರಿಗೆ ಧಿಕ್ಕಾರ ಹೇಳಿ ಬೀದಿಗಿಳಿದು ತನ್ನವರೊಂದಿಗೆ ಕೂಡಿಕೊಂಡು ಈ ಸುಲಿವವರನ್ನು ನಾರಗೊಳಿಸುವುದಕ್ಕೆ ಬದಲು ಪೇಪರು ರಾಜಕೀಯದಲ್ಲಿದ್ದು ಕಾಲ ಹಾಳು ಮಾಡಿಕೊಂಡಿದ್ದಾನೆ. ಒಂದು ಬಗೆಯಲ್ಲಿ ಒಬ್ಬಂಟಿಯಾಗಿದ್ದಾನೆ ನಮ್ಮ ರಾಮು.

ಜೀವನರಾಮು ಈಗಲಾದರೂ ತನ್ನ ದಾರಿ ಕಂಡುಕೊಳ್ಳಬೇಕು. ಛೇರ್ಮನ್ ಗಿರಿಯಿಂದ ಅಲ್ಲೊಂದು ಇಲ್ಲೊಂದು ಚರಂಡಿ ತೋಡಿಸಿ ರಸ್ತೆ ಸರಿಮಾಡಬಹುದು. ಆದರೆ ಈ ಪಂಚಾಯ್ತಿಯ ಕಪ್ಪು ಹೃದಯಗಳ ನೋವನ್ನು ಒಂದುಗೂಡಿಸಿದರೆ ಮಾತ್ರ ಆತನ ಬದುಕಿಗೆ ಮತ್ತು ಅವನ ಶತ್ರುಗಳೆನ್ನಿಸಿಕೊಂಡ ಖೂಳರೆಲ್ಲರ ಬದುಕಿಗೆ ಅರ್ಥ ಬರುತ್ತದೆ. ಮೂವತ್ತು ವರ್ಷಗಳ ಮರಳು ರಾಜಕೀಯದಿಂದ ಅಲ್ಲ, ಜೀವನರಾಮುವಿನ ಎರೆಮಣ್ಣಿನ ರಾಜಕೀಯದಿಂದ ಒಳ್ಳೆಯದಾಗುತ್ತದೆ. ಈ ನೆಲಕ್ಕಿನ್ನೂ ಜೀವ ಬರಿಸುವ ಶಕ್ತಿ ಉಳಿದಿದೆಯೋ ಇಲ್ಲವೋ ಎಂಬುದು ಗೊತ್ತಾಗುತ್ತದೆ. ಗಾಳಿಯಲ್ಲಿ ಓಡಾಡುವ ಮೇಲುವರ್ಗದ ಜನಕ್ಕೆ ಕಾಣದೆ ಇದ್ದದ್ದು ಈ ಮಣ್ಣಿನ ಕಂದಮ್ಮನಿಗೆ ಕಾಣಬೇಕಾಗುತ್ತದೆ.

ರಾಮು ಸರಳವಾದದ್ದು ಕಾಣಲು ಇನ್ನಷ್ಟು ಕಾಲ ತೆಗೆದುಕೊಳ್ಳಬಾರದು. ಹಣ, ಧರ್ಮ, ರಾಜಕೀಯದ ಗುತ್ತಿಗೆ ಅವನಿಗೆ ಅರ್ಥವಾಗಬೇಕು. ಅದರಲ್ಲಿ ಪಾಲುದಾರನಾಗಲು ನಿರಾಕರಿಸಬೇಕು. ನೇರ ಹೇಳುವುದು ಕಲಿಯಬೇಕು.

ನಮ್ಮ ಕಪ್ಪು ಮುಖದ ಮಗುವಿನಂಥ ರಾಮುವಿನಲ್ಲಿ ಇನ್ನೂ ಸಾಕಷ್ಟು ಜೀವನದ್ರವ್ಯ ಇದೆಯೆಂದು ಆಶಿಸೋಣ. ಈತನ ನೋವಿನಲ್ಲಿ ಭಾಗಿಗಳಾಗೋಣ. ನಮ್ಮ ರಾಮು ತನ್ನ ಸ್ಪರ್ಧೆಯಲ್ಲಿ ಸೋತರೂ ಅದಕ್ಕಿರುವ ನಿಜವಾದ ಗೆಲುವಿನ ಬಗ್ಗೆ ಆಶಾವಾದಿಗಳಾಗೋಣ, ರಾಮುವಿನ ಬಗ್ಗೆ ಬರೆಯುವಾಗ ನನ್ನಲ್ಲಿ ವ್ಯಂಗ್ಯ ಸತ್ತು ಕಣ್ಣಂಚಿನಲ್ಲಿ ನೀರು ಕಾಣಿಸಿಕೊಳ್ಳುತ್ತಿದೆ. ಇದು ಖಂಡಿತ ಕರುಣೆ ಅಥವಾ ಬೊಟ್ಟಿ ಅನುಕಂಪದ್ದಲ್ಲ. ಈ ಗಾಂಧೀಜಿಯ ನೆಲದ ಅನ್ಯಾಯದಿಂದ ಹೊರಟದ್ದು.

26, ಆಗಷ್ಟ 1979

Related Articles

ಇತ್ತೀಚಿನ ಸುದ್ದಿಗಳು

You cannot copy content of this page