Monday, June 17, 2024

ಸತ್ಯ | ನ್ಯಾಯ |ಧರ್ಮ

ರಾಣ ಚಿತ್ರದ ಗಲ್ಲಿ ಬಾಯ್, ಜೋಗಿ ಪ್ರೇಮ್ ಕೈಯಲ್ಲಿ ಹಾಡು ಬಿಡುಗಡೆ

ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ನಾಯಕನಾಗಿ ನಟಿಸಿರುವ , ನಂದಕಿಶೋರ್ ನಿರ್ದೇಶನದ “ರಾಣ”  ಚಿತ್ರದ “ಗಲ್ಲಿ ಬಾಯ್” ಹಾಡನ್ನು ಇತ್ತೀಚೆಗೆ ಜೋಗಿ ಪ್ರೇಮ್ ಬಿಡುಗಡೆ ಮಾಡಿದ್ದಾರೆ. ಚಂದನ್ ಶೆಟ್ಟಿ ಬರೆದು ಸಂಗೀತ ನೀಡಿರುವ ಈ ಹಾಡನ್ನು ಅನಿರುದ್ಧ್ ಶಾಸ್ತ್ರಿ ಹಾಗೂ ಅದಿತಿ ಸಾಗರ್ ಹಾಡಿದ್ದಾರೆ. ಆನಂದ್ ಆಡಿಯೋ ಮೂಲಕ ಈ ಹಾಡು ಬಿಡುಗಡೆಯಾಗಿದೆ.

ಈ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ. ಶ್ರೇಯಸ್ ಹಾಗೂ ರೀಷ್ಮಾ ನಾಣಯ್ಯ ಇಬ್ಬರೂ ಚೆನ್ನಾಗಿ ನೃತ್ಯ ಮಾಡಿದ್ದಾರೆ. ಚಂದನ್ ಶೆಟ್ಟಿ ಸಂಗೀತ ಸುಂದರವಾಗಿದೆ. ಅನಿರುದ್ಧ್ ಶಾಸ್ತ್ರಿ ಹಾಗೂ ಅದಿತಿ ಸಾಗರ್ ಗಾಯನ ಸುಮಧುರವಾಗಿದೆ. ನಂದ ಕಿಶೋರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಜೋಗಿ ಪ್ರೇಮ್ ಹಾರೈಸಿದರು.

ಮೊದಲು ನಾನು, ನನ್ನ ಸ್ಪೂರ್ತಿಯಾದ ವಿಷ್ಣುವರ್ಧನ್ ಹಾಗೂ ಅಪ್ಪು ಅವರನ್ನು ನೆನಪಿಸಿಕೊಳ್ಳುತ್ತೇನೆ. ಚಂದನ್ ಶೆಟ್ಟಿ  ಎಲ್ಲರ ಮನಸಿಗೆ ಹತ್ತಿರವಾಗುವಂತಹ ಸಾಹಿತ್ಯ ಬರೆದಿದ್ದಾರೆ. ಅಷ್ಟೇ ಚೆನ್ನಾಗಿ ಸಂಗೀತ ನೀಡಿದ್ದಾರೆ. ಅನಿರುಧ್ದ್ ಶಾಸ್ತ್ರಿ ಹಾಗೂ ಅದಿತಿ ಸಾಗರ್ ಅವರ ಅದ್ಭುತ ಗಾಯನ ಹಾಡಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ರೀಷ್ಮಾ ನಾಣಯ್ಯ ಒಳ್ಳೆಯ ನೃತ್ಯಗಾರ್ತಿ. ನವೆಂಬರ್11 ರಂದು ಚಿತ್ರ ತೆರೆಗೆ ಬರಲಿದೆ.‌ ಹಾಡು ಬಿಡುಗಡೆ ಮಾಡಿಕೊಟ್ಟ ಪ್ರೇಮ್ ಅವರಿಗೆ ಹಾಗೂ ಅವಕಾಶ ನೀಡಿರುವ ನಿರ್ಮಾಪಕ ಪುರುಷೋತ್ತಮ್ ಹಾಗೂ ನಿರ್ದೇಶಕ ನಂದಕಿಶೋರ್ ಅವರಿಗೆ ಧನ್ಯವಾದ ಎಂದರು ನಾಯಕ ಶ್ರೇಯಸ್.

ಗುಜ್ಜಲ್ ಪುರುಷೋತ್ತಮ್ ಅವರು ಒಂದು ಸಿನಿಮಾ ಮಾಡುತ್ತಿದ್ದೇನೆ. ನೀವು ಜೊತೆಗಿರಬೇಕು ಎಂದರು.  ನನ್ನ ಮಗನೇ ಹೀರೋ ಅಂತ ತಿಳಿದ ಮೇಲೆ, ನಾನು ಅವನಿಗೆ ಚಿತ್ರ ಚೆನ್ನಾಗಿ ಬರಲು ನಿರ್ದೇಶಕರು ಕಾರಣ ಅವರು ಹೇಳಿದ ಹಾಗೆ ಕೇಳಬೇಕು ಅಂತ ಹೇಳಿದೆ. “ರಾಣ” ಒಂದೊಳ್ಳೆಯ ಕೌಟುಂಬಿಕ ಚಿತ್ರ.  ಹಳ್ಳಿಯಿಂದ ನಗರಕ್ಕೆ ಬಂದು ನೆಲೆಸಿರುವವರ ಕುರಿತಾದ ಕಥೆಯಿದೆ. ನಂದಕಿಶೋರ್ ನಿರ್ದೇಶನ, ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ಸೇರಿದಂತೆ ಎಲ್ಲರ ಕೆಲಸ ಚೆನ್ನಾಗಿದೆ. ನವೆಂಬರ್ 11 ಚಿತ್ರ ತೆರೆಗೆ ಬರುತ್ತಿದೆ ಎಂದು ತಿಳಿಸಿದ ಕೆ.ಮಂಜು, ಹಾಡು ಬಿಡುಗಡೆ ಮಾಡಲು ದೂರದ ಮುಂಬೈನಿಂದ ಬಂದ ಪ್ರೇಮ್ ಅವರಿಗೆ ಧನ್ಯವಾದ ಹೇಳಿದರು.

ಕೆ.ಮಂಜು ಅವರ ಸಹಕಾರದಿಂದ ಈ ಚಿತ್ರ ನಿರ್ಮಾಣ ಮಾಡಿದ್ದೇನೆ. ಇಡೀ ತಂಡಕ್ಕೆ ನನ್ನ ಧನ್ಯವಾದ ಎಂದರು ನಿರ್ಮಾಪಕ ಗುಜ್ಜಲ್ ಪುರುಷೋತ್ತಮ್.

ನಂದಕಿಶೋರ್ ನಿರ್ದೇಶನದಲ್ಲಿ ಚಿತ್ರ  ಚೆನ್ನಾಗಿ ಬಂದಿದೆ. ಹಾಡುಗಳು ಸುಂದರವಾಗಿದೆ. ಇದೇ ಮೊದಲ ಬಾರಿಗೆ ನಾನು ಹಿನ್ನೆಲೆ ಸಂಗೀತ ಕೂಡ ನೀಡಿದ್ದೇನೆ ಎಂದು ಸಂಗೀತದ ಬಗ್ಗೆ ಚಂದನ್ ಶೆಟ್ಟಿ ಮಾಹಿತಿ ನೀಡಿದರು.

Related Articles

ಇತ್ತೀಚಿನ ಸುದ್ದಿಗಳು