Friday, June 20, 2025

ಸತ್ಯ | ನ್ಯಾಯ |ಧರ್ಮ

ಅತ್ಯಾಚಾರ ಪ್ರಕರಣ: ಸಂತ್ರಸ್ತೆಯನ್ನೇ ಹೊಣೆಗಾರಳನ್ನಾಗಿಸಿದ ಅಲಹಾಬಾದ್‌ ಹೈ ಕೋರ್ಟ್‌

ಅಲಹಾಬಾದ್‌: 2024ರಲ್ಲಿಯುವತಿಯೊಬ್ಬರ ಮೇಲೆ ನಡೆದ ಅತ್ಯಾಚಾರಕ್ಕೆ ಆ ಯುವತಿಯೇ ಕಾರಣ ಎಂಬಂತೆ ಅಲಹಾಬಾದ್ ಹೈಕೋರ್ಟ್ ತೀರ್ಪೊಂದನ್ನು ನೀಡಿದ್ದು, ಈ ತಿರ್ಪು ಕುರಿತು ಸಾಕಷ್ಟು ಚರ್ಚೆ ಶುರುವಾಗಿದೆ. ಅತ್ಯಾಚಾರಕ್ಕೊಳಗಾದ ಮಹಿಳೆಯ ಬಗ್ಗೆ ”ಮಹಿಳೆಯೆ ಸಮಸ್ಯೆಯನ್ನು ಮೈಗೆಳೆದುಕೊಂಡಿದ್ದಾರೆ” ಎಂದು ಕೋರ್ಟ್‌ ಆರೋಪಿಗೆ ಜಾಮೀನು ನೀಡುವ ಸಂದರ್ಭದಲ್ಲಿ ತೀರ್ಪು ನೀಡಿದೆ.

ನ್ಯಾಯಾಧೀಶ ಸಂಜಯ್ ಕುಮಾರ್ ಸಿಂಗ್ ಅವರು ಮಾರ್ಚ್ 11 ರಂದು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿ ನಿಶ್ಚಲ್ ಚಂದಕ್‌ಗೆ ಜಾಮೀನು ಮಂಜೂರು ಮಾಡುವ ತಮ್ಮ ಆದೇಶದಲ್ಲಿ ಈ ಹೇಳಿಕೆ ನೀಡಿದ್ದಾರೆ.

“ಸಂತ್ರಸ್ತೆಯ ಆರೋಪ ನಿಜವೆಂದು ಒಪ್ಪಿಕೊಂಡರೂ ಸಹ, ಅವಳೆ ಸಮಸ್ಯೆಯನ್ನು ಸ್ವತಃ ಮೈಗೆಳೆದುಕೊಂಡಿದ್ದಾರೆ ಮತ್ತು ಅಪರಾಧಕ್ಕೆ ಕಾರಣಳಾಗಿದ್ದಾಳೆ ಎಂದು ತೀರ್ಮಾನಿಸಬಹುದು ಎಂದು ಈ ನ್ಯಾಯಾಲಯ ಅಭಿಪ್ರಾಯಪಟ್ಟಿದೆ” ಎಂದು ಸಂಜಯ್ ಸಿಂಗ್ ತೀರ್ಪಿನಲ್ಲಿ ತಿಳಿಸಿದ್ದಾರೆ.

ನೋಯ್ಡಾ ಪೊಲೀಸರಿಗೆ ಸಲ್ಲಿಸಿದ ದೂರಿನ ಪ್ರಕಾರ, ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದ ಯುವತಿ, ಸೆಪ್ಟೆಂಬರ್ 2024 ರಲ್ಲಿ ತನ್ನ ಮೂವರು ಮಹಿಳಾ ಸ್ನೇಹಿತರೊಂದಿಗೆ ದೆಹಲಿಯ ಬಾರ್‌ಗೆ ಹೋಗಿದ್ದೆ ಎಂದು ಹೇಳಿರುವುದಾಗಿ ಬಾರ್ ಮತ್ತು ಬೆಂಚ್ ವರದಿ ಮಾಡಿದೆ.

ಯುವತಿ ಬಾರ್‌ನಲ್ಲಿ ಕೆಲವು ಪುರುಷ ಪರಿಚಯಸ್ಥರನ್ನು ಭೇಟಿಯಾದಳು ಮತ್ತು ಚಂದಕ್ ಕೂಡ ಈ ಗುಂಪಿನ ಭಾಗವಾಗಿದ್ದನು ಎಂದು ಯುವತಿ ನೀಡಿದ್ದ ದೂರಿನಲ್ಲಿ ತಿಳಿಸಲಾಗಿದೆ. ಮಹಿಳೆ ಮದ್ಯ ಸೇವಿಸಿ ಬೆಳಗಿನ ಜಾವ 3 ಗಂಟೆಯವರೆಗೆ ಬಾರ್‌ನಲ್ಲಿಯೇ ಇದ್ದಳು ಎಂದು ದೂರಿನಲ್ಲಿ ಯುವತಿ ಹೇಳಿದ್ದಾರೆ.

ಈ ವೇಳೆ ಚಂದಕ್ ತನ್ನೊಂದಿಗೆ ಬರುವಂತೆ ಕೇಳುತ್ತಲೇ ಇದ್ದನು ಎಂದು ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ. ಚಂದಕ್‌ನ ಒತ್ತಾಯದ ಮೇರೆಗೆ ತಾನು ಕೊನೆಗೆ ಅವನೊಂದಿಗೆ ಅವನ ಮನೆಗೆ ವಿಶ್ರಾಂತಿ ಪಡೆಯಲು ಹೋಗಲು ಒಪ್ಪಿಕೊಂಡೆ ಎಂದು ಯುವತಿ ಹೇಳಿದ್ದಾರೆ.

ಮನೆಗೆ ಹೋಗುವ ದಾರಿಯಲ್ಲಿ ಚಂದಕ್ ತನ್ನನ್ನು ಅನುಚಿತವಾಗಿ ಸ್ಪರ್ಶಿಸುತ್ತಲೇ ಇದ್ದನು ಮತ್ತು ನೋಯ್ಡಾದಲ್ಲಿರುವ ತನ್ನ ಮನೆಗೆ ಕರೆದೊಯ್ಯುವ ಬದಲು, ಗುರ್ಗಾಂವ್‌ನಲ್ಲಿರುವ ತನ್ನ ಸಂಬಂಧಿಕರ ಫ್ಲಾಟ್‌ಗೆ ಕರೆದೊಯ್ದು ತನ್ನ ಮೇಲೆ ಅತ್ಯಾಚಾರ ಮಾಡಿದನು ಎಂದು ಯುವತಿ ದೂರಿದ್ದಾರೆ.

ಯುವತಿ ಸಲ್ಲಿಸಿದ ದೂರಿನ ಆಧಾರದ ಮೇಲೆ ನೋಯ್ಡಾದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿತ್ತು. ಡಿಸೆಂಬರ್ 11, 2024 ರಂದು ಚಂದಕ್ ನನ್ನು ಬಂಧಿಸಲಾಗಿತ್ತು.

ಚಂದಕ್ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯಲ್ಲಿ, ಯುವತಿಯನ್ನು ತನ್ನ ಸಂಬಂಧಿಕರ ಫ್ಲಾಟ್‌ಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪವನ್ನು ನಿರಾಕರಿಸಿದ್ದಾರೆ. ತಮ್ಮಿಬ್ಬರ ನಡುವೆ ನಡೆದದ್ದು ಸಮ್ಮತಿಯ ಲೈಂಗಿಕತೆಯೆ ಹೊರತು, ಅತ್ಯಾಚಾರವಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಯುವತಿಯೆ ಸ್ವತಃ ತಮ್ಮ ಮನೆಗೆ ಬಂದು ವಿಶ್ರಾಂತಿ ಪಡೆಯಲು ಒಪ್ಪಿಕೊಂಡಿದ್ದರು ಎಂದು ಅವರು ಹೇಳಿದ್ದಾರೆ.

“ಮಹಿಳೆಯ ವೈದ್ಯಕೀಯ ಪರೀಕ್ಷೆಯಲ್ಲಿ, ಆಕೆಯ ಕನ್ಯಾಪೊರೆ ಹರಿದಿರುವುದು ಕಂಡುಬಂದಿದೆ ಆದರೆ ವೈದ್ಯರು ಲೈಂಗಿಕ ದೌರ್ಜನ್ಯದ ಬಗ್ಗೆ ಯಾವುದೇ ಅಭಿಪ್ರಾಯವನ್ನು ನೀಡಿಲ್ಲ ಎಂದು ಆದೇಶದಲ್ಲಿ ಹೇಳಿದ್ದಾರೆ.

“ಪ್ರಕರಣದ ಸಂಗತಿಗಳು ಮತ್ತು ಸಂದರ್ಭಗಳನ್ನು ಹಾಗೂ ಅಪರಾಧದ ಸ್ವರೂಪ, ಸಾಕ್ಷ್ಯಗಳು, ಆರೋಪಿಗಳ ಶಾಮೀಲುದಾರಿಕೆ ಮತ್ತು ಎರಡು ಕಡೆಯವರ ವಕೀಲರ ವಾದಗಳನ್ನು ಗಮನದಲ್ಲಿಟ್ಟುಕೊಂಡು, ಅರ್ಜಿದಾರರು ಜಾಮೀನಿಗೆ ಸೂಕ್ತವಾದ ಪ್ರಕರಣವನ್ನು ಮಂಡಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ.” ಎಂದು ಆದೇಶದಲ್ಲಿ ನ್ಯಾಯಾದೀಶರು ಅಭಿಪ್ರಾಯಪಟ್ಟಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page