ಬೀದರ್: ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ನೀಡಿರುವ ಹೇಳಿಕೆಯು ಇಡೀ ಮಹಿಳಾ ಕುಲಕ್ಕೆ ಅವಮಾನಕರವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಆರೋಪಿಸಿದರು.
ಶುಕ್ರವಾರ ಬೀದರ್ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ರಾಮಾಯಣದ ಬಗ್ಗೆ ಮಾತನಾಡುತ್ತ, ರಾಮ-ಸೀತೆಯನ್ನು ಉಲ್ಲೇಖಿಸಿ ಮಹಿಳೆಯರನ್ನು ಗೌರವಿಸಬೇಕು ಎಂದು ಹೇಳುತ್ತಾರೆ. ಆದರೆ, ಮತ್ತೊಂದೆಡೆ ಅವಾಚ್ಯವಾಗಿ ಮಾತನಾಡುತ್ತಾರೆ. ಇದು ಬಿಜೆಪಿಯ ಸಂಸ್ಕೃತಿಯನ್ನು ಬಯಲು ಮಾಡುತ್ತದೆ. ಇಂತಹವರಿಗೆ ಗೌರವ ಮತ್ತು ಮರ್ಯಾದೆಯ ಕೊರತೆಯಿದೆ ಎಂದು ತೀವ್ರವಾಗಿ ಟೀಕಿಸಿದರು.
ರವಿಕುಮಾರ್ ಅವರಿಗೆ ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡುವ ಕೆಟ್ಟ ಚಾಳಿಯಿದೆ. ಮಹಿಳೆಯರಿಗೆ ಅವಮಾನ ಮಾಡುವುದು, ಅವಾಚ್ಯ ಪದಗಳಿಂದ ನಿಂದಿಸಿ ಮಾನಸಿಕ ಕಿರುಕುಳ ನೀಡುವುದು ಅವರ ಸ್ವಭಾವವಾಗಿದೆ. “ನನಗೂ ಸದನದಲ್ಲಿ ಸಿ.ಟಿ. ರವಿ ಇದೇ ರೀತಿ ನಿಂದಿಸಿದ್ದರು. ಇಂತಹವರಿಗೆ ನೈತಿಕ ಜವಾಬ್ದಾರಿಯೇ ಇಲ್ಲ. ಅವರು ವಿಧಾನಸಭೆಯಲ್ಲಿ ಇರಬಾರದು” ಎಂದು ಅವರು ಹೇಳಿದರು.
ನಮ್ಮ ಪಕ್ಷದಲ್ಲಿ ಒಬ್ಬರು ಜನಪ್ರಿಯ ನಾಯಕರಿದ್ದಾರೆ, ಇನ್ನೊಬ್ಬರು ಸಂಘಟನಾ ಕುಶಲತೆಯನ್ನು ಹೊಂದಿದ್ದಾರೆ. ಈ ಇಬ್ಬರೂ ಒಟ್ಟಾಗಿ ಕರ್ನಾಟಕದ ಜನತೆಗೆ ಭರವಸೆಯ ಸರ್ಕಾರವನ್ನು ನೀಡುತ್ತಿದ್ದಾರೆ. ಸರ್ಕಾರ ಸ್ಥಿರವಾಗಿದ್ದು, ಯಾವುದೇ ಗೊಂದಲವಿಲ್ಲ. “ನನ್ನ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದರೆ ಸುಮ್ಮನಿರುವುದಿಲ್ಲ” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.