Tuesday, June 18, 2024

ಸತ್ಯ | ನ್ಯಾಯ |ಧರ್ಮ

ಕೆಇಎ ಪರೀಕ್ಷಾ ಅಕ್ರಮದ ಕಿಂಗ್ ಪಿನ್ ಆರ್.ಡಿ.ಪಾಟೀಲ್ ಬಂಧನ

ಕೆಇಎ ಹಾಗೂ ಪಿಎಸ್ಐ ಪರೀಕ್ಷಾ ಹಗರಣದ ಕಿಂಗ್ ಪಿನ್ ಎಂದೇ ಗುರುತಿಸಿಕೊಂಡಿರುವ ಆರ್ ಡಿ ಪಾಟೀಲ್ ನನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ. ಅಫಜಲಪುರ-ಮಹಾರಾಷ್ಟ್ರ ಗಡಿ ಭಾಗದಲ್ಲಿ ಈತ ತಲೆಮರೆಸಿಕೊಂಡು ಹೋಗುವಾಗ ಪೊಲೀಸರ ಬಲೆಗೆ ಬಿದ್ದದ್ದಾಗಿ ಮಾಹಿತಿ ಲಭ್ಯವಾಗಿದೆ.

ಕಲ್ಬುರ್ಗಿಯಲ್ಲಿ ಹಾಗೂ ಯಾದಗಿರಿಯಲ್ಲಿ ಪರೀಕ್ಷೆ ಬರೆಯುವಾಗ ಅಕ್ರಮ ಎಸಗಿದ್ದ ಹಿನ್ನೆಲೆಯಲ್ಲಿ ಯಾದಗಿರಿಯಲ್ಲಿ 16 ಜನರನ್ನು ಬಂಧಿಸಲಾಗಿತ್ತು. ಪರೀಕ್ಷೆ ಬರೆಯುತ್ತಿದ್ದ ವೇಳೆ ಬ್ಲೂಟೂತ್ ಬಳಸಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ಅಭ್ಯರ್ಥಿಗಳನ್ನು ಬಂಧಿಸಿದ್ದರು. ಅವರ ಬಂಧನದ ನಂತರ ಪ್ರಕರಣದ ಕಿಂಗ್ ಪಿನ್ ಆರ್ ಡಿ ಪಾಟೀಲ್ ಎಂದು ತಿಳಿದು ಬಂದಿತ್ತು.

ಖಚಿತ ಮಾಹಿತಿ ಮೇರೆಗೆ ಆರ್.ಡಿ.ಪಾಟೀಲ್ ನನ್ನು ಬಂಧಿಸಲು ತೆರಳಿದ್ದ ಪೊಲೀಸರಿಗೆ ಈತ ಚಳ್ಳೆಹಣ್ಣು ತಿನ್ನಿಸಿ ಕಾಂಪೌಂಡ್ ಹಾರಿ ತಪ್ಪಿಸಿಕೊಂಡು ಹೋಗಿದ್ದ. ಆತ ತಪ್ಪಿಸಿಕೊಳ್ಳಲು ಕಾಂಪೌಂಡ್ ಹಾರಿದ ದೃಶ್ಯಗಳು ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕಲಬುರಗಿಯ ಅಪಾರ್ಟ್ಮೆಂಟ್ನಲ್ಲಿಯೇ ಈತ ವಾಸವಿದ್ದನು ಎನ್ನಲಾಗಿದೆ.

ಅದಕ್ಕೂ ಹಿಂದೆ ವಿಚಾರಣೆ ಎದುರಿಸದೇ ಪೊಲೀಸರಿಗೂ ಶರಣಾಗದೆ ತಪ್ಪಿಸಿಕೊಂಡೇ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಡಿ ಪಾಟೀಲ್ ಜಾಮೀನು ಅರ್ಜಿ ವಿಚಾರಣೆ ನ.16 ಕ್ಕೆ ಮುಂದೂಡಿಕೆಯಾಗಿದೆ. ಸಧ್ಯ ಈತನನ್ನು ಮಹಾರಾಷ್ಟ್ರ ಗಡಿ ಭಾಗದಲ್ಲಿ ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು