ಹೆಚ್.ಡಿ. ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ: ಮೇ.20ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್!

ಇಂದು ಎಚ್.ಡಿ. ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ರೇವಣ್ಣ ಪರ ಹಿರಿಯ ವಕೀಲ ನಾಗೇಶ್ ಅವರ ವಾದವನ್ನು ಆಲಿಸಿದ ಬಳಿಕ ಇದೀಗ ಸೋಮವಾರದವರೆಗೂ ಮಧ್ಯಂತರ ಜಾಮೀನು ಮುಂದುವರೆಯಲಿದೆ ಎಂದು ತಿಳಿಸಿ, ಮೇ.20ಕ್ಕೆ ಆದೇಶ ಕಾಯ್ದಿರಿಸಿದೆ.

ಮಾಜಿ ಸಚಿವ ಎಚ್‌ ಡಿ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ನಡೆಯಿತು. ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಜೆ ಪ್ರೀತ್‌ರಿಂದ ಅರ್ಜಿ ವಿಚಾರಣೆ ನಡೆಯಿತು.

ರೇವಣ್ಣ ಪರವಾಗಿ ಹಿರಿಯ ವಕೀಲ ಸಿ ವಿ ನಾಗೇಶ್‌ ಮತ್ತು ಎಸ್‌ಐಟಿ ಪರವಾಗಿ ಹಿರಿಯ ವಕೀಲರಾದ ಅಶೋಕ್‌ ನಾಯ್ಕ್‌ ಮತ್ತು ಜಯ್ನಾ ಕೊಠಾರಿಯಿಂದ ವಾದ ಪ್ರತಿವಾದ ನಡೆಯಿತು.ರೇವಣ್ಣ ವಿರುದ್ಧವು ಅತ್ಯಾಚಾರದ ಆರೋಪ ಇದೆ. ಇದು ಜಾಮೀನು ರಹಿತ ಅಪರಾಧ ಎಂದು ವಾದಿಸುವ ಮೂಲಕ ಜಾಮೀನಿಗೆ ಎಸ್ಐಟಿ ಎಸ್ ಪಿ ಪಿ ಯಿಂದ ಪ್ರಬಲ ವಿರೋಧ ವ್ಯಕ್ತಪಡಿಸಿತು.

ರೇವಣ್ಢ ಪರ ವಕೀಲ ಸಿ ವಿ ನಾಗೇಶ್‌, ಪ್ರಕರಣದಲ್ಲಿ ದೂರನ್ನು ಹೇಗೆ ದಾಖಿಸಲಾಗಿದೆ ಎಂಬುದರ ವಿವರಣೆ ನೀಡಿ, ಇದೊಂದು ರೀತಿಯಲ್ಲಿ ಅರೇಬಿಯನ್‌ ನೈಟ್‌ ಕಥೆಯ ರೀತಿಯಲ್ಲಿದೆ, ಸಿಆರ್‌ಪಿಸಿ 154ರ ಅಡಿ ಮಹಿಳಾ ಅಧಿಕಾರಿ ದೂರು ದಾಖಲಿಸಿಕೊಳ್ಳಬೇಕು. ಸಂತ್ರಸ್ತೆಯ ಹೇಳಿಕೆಯನ್ನು ವಿಡಿಯೊ ಮಾಡಬೇಕಿತ್ತು. ಮಹಿಳೆಯ ಘನತೆ ಕಾಪಾಡುವ ನಿಟ್ಟಿನಲ್ಲಿ ಕಾಯಿದೆಗೆ 2013ರಲ್ಲಿ ತಿದ್ದುಪಡಿ ತರಲಾಗಿದೆ. ಆದರೆ, ಇದನ್ನು ಪಾಲಿಸಲಾಗಿಲ್ಲ. ಆದರೆ ಇಲ್ಲಿ ಪುರುಷ ಅಧಿಕಾರಿ ದೂರು ದಾಖಲಿಸಿದ್ದಾರೆ. ಎಫ್‌ಐಆರ್‌ ಅನ್ನು ಕಾನೂನುಬಾಹಿರವಾಗಿ ದಾಖಲಿಸಲಾಗಿದೆ ಎಂದು ವಾದ ಮಂಡಿಸಿದರು.

“ಟೈಪ್‌ ಮಾಡಿರುವ ದೂರಿನ ಪ್ರತಿಗೆ ಸಂತ್ರಸ್ತೆ ಸಹಿ ಮಾಡಿ ನೀಡಿದ್ದಾರೆ. ಪ್ರಕರಣದಲ್ಲಿ ಐಪಿಸಿ 376 (ಅತ್ಯಾಚಾರ ಆರೋಪ) ಅನ್ವಯವಾಗುವುದಿಲ್ಲ. ಮೊದಲಿಗೆ ಜಾಮೀನುಸಹಿತ ಆರೋಪಗಳನ್ನು ಒಳಗೊಂಡ ಎಫ್‌ಐಆರ್‌ ದಾಖಲಿಸಲಾಗಿತ್ತು. ಆನಂತರ ಅತ್ಯಾಚಾರ ಆರೋಪ ಮಾಡಲಾಗಿದೆ. ಲೋಕಸಭೆ ಎರಡನೇ ಹಂತದ ಮತದಾನ ಇರುವ ಸಂದರ್ಭದಲ್ಲಿ ಹೀಗೆಲ್ಲಾ ಮಾಡಲಾಗಿದೆ. ಇದರ ಹಿಂದೆ ರಾಜಕೀಯ ದುರುದ್ದೇಶವಿದೆ.” ಎಂದು ವಾದಿಸಿದರು. ವಾದ-ಪ್ರತಿವಾದ ಆಲಿಸಿ ಮೇ 20ಕ್ಕೆ ಜಾಮೀನಿನ ಆದೇಶವನ್ನು ನ್ಯಾಯಾಲಯ ಕಾಯ್ದಿರಿಸಿದೆ. ಅಲ್ಲಿಯವರೆಗೆ ಮಧ್ಯಂತರ ಜಾಮೀನು ಮುಂದುವರಿಯಲಿದೆ ಎಂದು ಕೋರ್ಟ್ ತಿಳಿಸಿದೆ‌.

Related Articles

ಇತ್ತೀಚಿನ ಸುದ್ದಿಗಳು