Monday, June 23, 2025

ಸತ್ಯ | ನ್ಯಾಯ |ಧರ್ಮ

ಕಳ್ಳುಬಳ್ಳಿ -2 : ಕ್ರಾಂತಿಯ ಉಪಾಸನೆ ಸಂಕ್ರಾಂತಿ

ಸಂಕ್ರಾಂತಿಯ ದಿವಸ ಭೂಮಿಯ ಪಥವೇ ಬದಲಾಯಿಸುವ ಪರ್ವ ಕಾಲ. ಮನುಷ್ಯಜೀವಿಯೂ ತನ್ನ ಬದುಕಿನ ನಡೆಯನ್ನು ಬದಲಿಸುವತ್ತ ಮನಸ್ಸು ಮಾಡಲು ಪ್ರಕೃತಿಯ ಮುಕ್ತ ಆಹ್ವಾನ.

ನಿನ್ನರಿವೇ ನಿನಗೆ ದಾರಿದೀಪ. ಇದೇ ಮುಂದೆ ಇತರರ ಒಳ ಹೊಕ್ಕು ಅವರ ಬದುಕಿಗೂ ದಿಟದ ದೀವಿಗೆಯಾಗುವುಂಟು. ಹೀಗೆ ಒಳ್ಳೆಯ ಚಿಂತನೆಗಳು ವಿಚಾರ ಕ್ರಾಂತಿಗೆ ಆಹ್ವಾನವನ್ನು ನೀಡುತ್ತವೆ.

ಸಚ್ಚರಿತ್ರೆ, ಸದಾಚಾರ ಸಂಪನ್ನತೆ, ತನ್ನಂತೆ ಪರರನ್ನು ಸಮಾನವಾಗಿ ಆದರಿಸುವ ಗುಣಗಳು, ಜಾತಿ, ಧರ್ಮ, ಜಾತಿ-ಪಂಗಡ, ಬಣ್ಣ, ಅಂತಸ್ತು, ಲಿಂಗ ಮೊದಲಾದ ಭಿನ್ನ ಭಾವಗಳನ್ನು ಮೀರಿ ಮನುಷ್ಯ ಮನುಷ್ಯ ಮಾತ್ರವಾಗಿ ಪ್ರೀತಿಸುವ ಗುಣಗಳು ಮನುಷ್ಯನನ್ನು ಮಹಾನತೆಗೆ ಕೊಂಡೊಯ್ಯುತ್ತವೆ.

ಬಡತನ, ದಾರಿದ್ರ್ಯ, ತುತ್ತು ಅನ್ನಕ್ಕಾಗಿ ತಾತ್ವಾರ, ದುಡಿಯುವ ಮನಸ್ಸಿದ್ದರೂ ದುಡಿಯುವ ಕೈನ ಕೆಲಸ ಕಿತ್ತುಕೊಳ್ಳುವ ದುಷ್ಟ ಶಕ್ತಿಗಳು, ಮತಭ್ರಾಂತಿಯಲ್ಲೇ ಕೊಳೆಯುವ ಮೂಢಮತಿಗಳು ಇಲ್ಲೆಲ್ಲಾ ವಿಚಾರ ಕ್ರಾಂತಿಯ ಆಹ್ವಾನವಾಗಬೇಕಿದೆ.

ವಿಚಾರಕ್ರಾಂತಿ ಮತ್ತು ಮತದಿಂದ ಉಂಟಾದ ಮತಿಭ್ರಮಣೆ ಕಳೆಯಲು, ವಿಶ್ವಮಾನವತೆಯ ಕಡೆಗೆ ಸಂಚರಿಸಲು ಸಂ-ಕ್ರಾಂತಿಯ ಅವಶ್ಯಕತೆ ಇದ್ದೇ ಇದೆ. ರಾಷ್ಟ್ರಕವಿ ಕುವೆಂಪು ವಿರಚಿತ ವಿಚಾರ ಸಾಹಿತ್ಯ ಇದೇ ಸಕ್ರಾಂತಿಯಲಿ ಡಮರಿನಂತೆ ಸದ್ದು ಮಾಡಬೇಕಾಗಿದೆ.

ವಿಚಾರ ಸಾಹಿತ್ಯ ಓದಿದಷ್ಟು ಜಗತ್ತು ಕಿರಿದಾಗಿ, ಎಲ್ಲರೂ ಸಹೋದರತೆಯ ಹೊಳೆಯಲ್ಲಿ ಮಿಂದು ಹೊಸ ಬದುಕು ಪಡೆದಷ್ಟೇ ಜನ್ಮ ಪಾವನಗೊಂಡ ಅನುಭವವಾಗುತ್ತದೆ.

ಭೂಮಿ ತನ್ನದೇ ಆದ ದಿಕ್ಕು ಬದಲಿಸುವುದು, ಹಾಗೆಯೇ ಮನುಷ್ಯನ ಮೆದುಳು ಸಹ ತನ್ನ ವಿಚಾರದ ದಿಕ್ಕು ಬದಲಾಯಿಸಿ ನವನವೀನತೆಯಲ್ಲಿ ಬೆಳಗಬೇಕು.

ನಮ್ಮಲ್ಲಿ ಅಂತರ್ಗತವಾಗಿರುವ ಸನಾತನ ಧರ್ಮದ ಮೌಲ್ಯಗಳನ್ನು ಎತ್ತಿಹಿಡಿದು, ಹಿಂದೂ ಧರ್ಮದ ಅಂಟುಜಾಡ್ಯಗಳನ್ನು ಜಾಡಿಸಿದ ವೀರ ಸನ್ಯಾಸಿ ಸ್ವಾಮಿವಿವೇಕಾನಂದರವರು ಪ್ರಚಾರಪಡಿಸಿದ ವಿಚಾರಗಳು ಇಡೀ ಜಗತ್ತಿಗೇ ಸಕ್ರಾಂತಿಯಂತೆ ಕೆಲಸ ಮಾಡಿದ್ದು ಸುಳ್ಳಲ್ಲ. ಸಿಸ್ಟರ್ ನಿವೇದಿತಾ ಇದೇ ಸಂಕ್ರಾಂತಿಯ ದೀವಿಗೆಯಂತೆ ಬೆಳಗಿದರು. ಚಿಕ್ಕಮಗಳೂರಿನಲ್ಲಿ ಜನಿಸಿದ ಅಳಸಿಂಗ ಪೆರುಮಾಳ್ ಸಹ ಸ್ವಾಮಿ ವಿವೇಕಾನಂದರನ್ನ ಧರ್ಮ ಸಮ್ಮೇಳನಕ್ಕೆ ಹೋಗಲು ಒತ್ತಾಯಿಸಿ ಅವರಿಗೆ ಹಣದ ಸಹಾಯ ಮಾಡಿ ಕೃತಾರ್ಥತೆ ಮೆರೆದರು. ಐವತ್ತು ವರ್ಷದೊಳಗೆ ಇಲ್ಲವಾದ ಪೆರುಮಾಳ್ ಸ್ವಾಮಿವಿವೇಕಾನಂದರ ಅಪ್ಪಟ ಅನುಯಾಯಿಯಾಗಿ ಬೆಳಗಿದರು. ಹೀಗೆ ವಿಚಾರ ಕ್ರಾಂತಿಯನ್ನು ಜಗತ್ತಿನಲ್ಲಿ ಬೆಳಗಿದವರ ಕತೆಗಳು ಓದಿದವರ, ಕೇಳಿದವರಲ್ಲೂ ಸಂ-ಕ್ರಾಂತಿಯನ್ನು ಮೂಡಿಸುತ್ತದೆ.

ಸಕ್ರಾಂತಿ ಸುಗ್ಗಿ, ರೈತರ ಹಬ್ಬವಾಗಿಯೇ ಉಳಿದಿಲ್ಲ. ಮಳೆಯಿರದ, ಬಿಸಿಲಿನ ಸೀಮೆಗಳಿಗೂ ಸಂಕ್ರಾಂತಿ ಹಬ್ಬ ಇದ್ದೇ ಇದೆ.

ಹೊಸ ದೀಪ ಬೆಳಗಲು, ಹೊಸ ವಿಚಾರಗಳನ್ನು ಚಿಂತಿಸಲು ನಮಗೆ ಸಕ್ರಾಂತಿಯ ಅವಶ್ಯಕತೆ ಇದೆ. ಎಲ್ಲರೊಳಗೊಂದಾಗು ಮಂಕುತಿಮ್ಮ ಎಂದು ಡಿವಿಜಿ ಹೇಳಿರುವ ಹಾಗೆ ಭಿನ್ನ ಬೇಧವ ಮರೆವಿಗೆ ತಳ್ಳಿ, ಹಚ್ಚುತಾ ಕೆಡುಕಿಗೆ ಒಳ್ಳೆಯತನದ ಕೊಳ್ಳಿ, ಸುಟ್ಟು ಬಿಡೋಣ ಸಕ್ರಾಂತಿಯ ಕಿಚ್ಚಲಿ, ಬೆಳಗಲಿ ಬಡವರ ಭಾಗ್ಯ.

ಹೊರಗಿನ ಆಚರಣೆಗಳಾದ ದೇಹಕೆ ತೈಲ ಎರೆದು, ಸ್ನಾನ ಮಾಡುವುದು, ಹೊಸ ಬಟ್ಟೆ ಉಡುವುದು, ಎಣ್ಣೆ ತುಂಬಿದ ತಟ್ಟೆಯಲಿ ಮುಖ ನೋಡಿಕೊಳ್ಳುವುದು, ಇವುಗಳೆಲ್ಲಾ ಹಬ್ಬದ ಜೊತೆಗೆ ಇದ್ದೇ ಇರುತ್ತದೆ. ಎಳ್ಳುಬೆಲ್ಲ ಮೆದ್ದು ಒಳ್ಳೆ ಮಾತಾಡಿ ಎನ್ನುವ ಹಾಗೇ, ಒಳ್ಳೆಯ ವಿಚಾರಗಳನ್ನು ಹಂಚಲು ಸಕ್ರಾಂತಿಯ ದಿವಸ ಬಂದಿದೆ.

ಉಳಿದ ಆಚರಣೆಗಳಾದ ಪೊಂಗಲ್ ಮಾಡಿ ಹಂಚುವುದು, ದೇವರಿಗೆ ಎಡೆ ಮಾಡುವುದು, ಎಳ್ಳು ಬೆಲ್ಲ, ಕಬ್ಬು ಮನೆಮನೆಗೆ ತಿದ್ದುವುದು, ಇವುಗಳ ಜೊತೆಗೆ ನೆರೆಹೊರೆಯವರೊಂದಿಗೆ ವಿರಸ ಮರೆಸಿ ಸ್ನೇಹ ಹಂಚೋಣ. ಇರುವಷ್ಟು ಕಾಲ ಒಳ್ಳೆಯತನದಿ ಆಲೋಚಿಸಿ ಸಂತೃಪ್ತಿಯ ಸಂಕ್ರಾಂತಿ ಆಚರಿಸೋಣ.

ಮನುಷ್ಯ ಜೀವನದಲ್ಲಿ ವಯಸ್ಸು ಕಳೆದಂತೆ ಮದುವೆ, ಮಕ್ಕಳು, ಮೊಮ್ಮಕ್ಕಳು, ಸ್ನೇಹಿತರು, ಪರಿವಾರದವರು ಹೆಚ್ಚುತ್ತಾ ಹೋಗುತ್ತಾರೆ. ಪ್ರೀತಿ ಪ್ರೇಮ ಇವು ಅಲ್ಪಕಾಲದ ಸುಖ ನೀಡುತ್ತವೆ. ಸ್ನೇಹ, ಸಾಂಗತ್ಯ ಇವು ನಮಗೆ ಅವಶ್ಯಕವಾಗಿ ಬರುತ್ತವೆ. ಮಾನವೀಯ ಮೌಲ್ಯಗಳು ಜೀವನ ಪೂರ್ತಿ ಮನುಷ್ಯ ನಿಗೆ ಆತ್ನ ಸಂತೋಷದ ಬದುಕನ್ನು ದಯಪಾಲಿಸುತ್ತದೆ. ಇದಕ್ಕಾಗಿಯೇ ಕೆಲವರು ನಮ್ಮ ನಿಮ್ಮ ನಿಮ್ಮಂತೆ ಸಾಮಾನ್ಯರಾಗಿ ಹುಟ್ಡಿದರೂ ಮಹಾನ್ ಚೇತನಗಳಾಗಿ ಇಂದಿಗೂ ನಮ್ಮ ನಿಮ್ಮ ನಡುವೆ ಇದ್ದಾರೆ, ಇರುತ್ತಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page