Saturday, June 21, 2025

ಸತ್ಯ | ನ್ಯಾಯ |ಧರ್ಮ

ವಿಕ್ಟೋರಿಯಾ ಅಮೆಲಿನಾ: ಮನೆಯ ಗಡಿಯು ಈಗ ವಿಸ್ತರಿಸಲ್ಪಟ್ಟಿದೆ …

ಉಕ್ರೇನ್‌ನಲ್ಲಿ, ಡಿಸೆಂಬರ್ 2013ರ ಮೊದಲ ದಿನಗಳಲ್ಲಿ, ಅಧ್ಯಕ್ಷ ಯಾನುಕೋವಿಚ್ ಮಾಸ್ಕೋ ಪರವಹಿಸಿ ಯುರೋಪಿನೊಂದಿಗಿನ ನಿಕಟ ಸಂಬಂಧವನ್ನು ತಿರಸ್ಕರಿಸಿದಾಗ ಪ್ರತಿಭಟನಾಕಾರರು ಬೀದಿಗಿಳಿದು ‘ಘನತೆಯ ಕ್ರಾಂತಿ’ ಆರಂಭವಾದಾಗ ಎಲ್ಲವೂ ಬದಲಾಯಿತು. ಕೈವ್‌ನ ಸ್ವಾತಂತ್ರ್ಯ ಚೌಕದಲ್ಲಿ ಪೊಲೀಸರು ವಿದ್ಯಾರ್ಥಿಗಳನ್ನು ತೀವ್ರವಾಗಿ ಹೊಡೆದ ನಂತರ, ರಷ್ಯಾ ಅಥವಾ ಬೆಲಾರಸ್‌ನಂತಹ ಸರ್ವಾಧಿಕಾರಿ ಆಡಳಿತವಾಗಿ ಉಕ್ರೇನ್ ಬದಲಾಗುವುದನ್ನು ತಡೆಯುವ ಸಮಯ ಇದು ಎಂಬುದು ಸ್ಪಷ್ಟವಾಯಿತು. ತಾನು ಸ್ವತಂತ್ರ ಉಕ್ರೇನಿಯನ್ ಎಂದು ಭಾವಿಸಿದ ಪ್ರತಿಯೊಬ್ಬರೂ ಮೈದಾನ್ ಗೆ ಹೋಗುವ ಅಪಾಯಕ್ಕೆ ಕೈಹಾಕಬೇಕಾಯಿತು . ಆದರೆ ಪ್ರದರ್ಶನಕ್ಕೆ ಬರಲು ಇತರರಿಗೆ ಧೈರ್ಯವಿಲ್ಲದಿದ್ದರೆ? ಆಗ ಅಲ್ಲಿಗೆ ಬಂದ ಕೆಲವು ಧೈರ್ಯಶಾಲಿಗಳೂ ಸಹ ಪೋಲಿಸ್ ಹಿಂಸೆಯ ವಿರುದ್ಧ ಶಕ್ತಿಹೀನರಾಗುತ್ತಾರೆ. ಪ್ರತಿಭಟನೆಗಾಗಿ ಕೈವ್‌ನ ಬೀದಿಗಿಳಿಯಲು, ನಾವು ಒಬ್ಬರನ್ನೊಬ್ಬರು ನಂಬುವ ಅಪಾಯಕ್ಕೆ ಒಡ್ಡಿಕೊಳ್ಳಬೇಕಾಗಿತ್ತು.

ನಿಧಾನವಾಗಿ, ಸುಮಾರು ಅರ್ಧ ಮಿಲಿಯನ್ ಜನರು ಕಾಣಿಸಿಕೊಂಡರು, ಆಗ ನಾವು ಒಬ್ಬರನ್ನೊಬ್ಬರು ಬಹುಶ ನಂಬಬಹುದು ಎಂದು ಅನಿಸಿತು. ಉಕ್ರೇನ್ ಅಂತಿಮವಾಗಿ ನನಗೆ ಮನೆಯಂತೆ ಭಾಸವಾಯಿತು. ಮನೆ ಎಂದರೆ ಮಾಂತ್ರಿಕ, ಪರಿಪೂರ್ಣ ಸ್ಥಳವಲ್ಲ. ಆದರೆ ಪೊಲೀಸರು ನಿಮ್ಮನ್ನು ಥಳಿಸುತ್ತಿರುವಾಗ, ನಿಮ್ಮ ನೆರೆಹೊರೆಯವರು ನಿಮಗಾಗಿ ಮಿಡಿಯಲು ಖಚಿತವಾಗಿ ಬರಬಲ್ಲರು ಎಂದು ನೀವು ಹೇಳಬಹುದಾದ ಸ್ಥಳ. 

ಹಳೆಯ ಮೌನಗಳು ಚಮತ್ಕಾರದಂತೆ ಕಣ್ಮರೆಯಾಗಲಿಲ್ಲ, ಆದರೆ 2013 ರ ನಂತರ ನಾವು ನಮ್ಮ ಆಘಾತಕಾರಿ ಭೂತಕಾಲದೊಂದಿಗೆ ವ್ಯವಹರಿಸುವ ವೇದಿಕೆಗಳು ಮತ್ತು ಸಂಸ್ಥೆಗಳನ್ನು ನಿರ್ಮಿಸಲು ಸಾಕಾಗುವಷ್ಟು ಪರಸ್ಪರ ನಂಬಿದ್ದೇವೆ. ಮತ್ತು 2014 ರಲ್ಲಿ ಘನತೆಯ ಕ್ರಾಂತಿಯ ನಂತರ ದೊರಕಿದ ಹೊಸ ನೈಜ ಕಥೆಯಲ್ಲಿ “ನೀವು ಯಾರು?” ಎಂಬ ಪ್ರಶ್ನೆಗೆ ಪ್ರತಿಯೊಬ್ಬರೂ ಪ್ರತಿದಿನ ಉತ್ತರಿಸುತ್ತಿದ್ದರು. ಯುದ್ಧ ನಮ್ಮ ಮನೆಯ ಬಾಗಿಲಿಗೆ ಬಂದಿತ್ತು , ಡೊನ್ಬಾಸ್ ನಲ್ಲಿ ಹೋರಾಟ ಮುಂದುವರೆಯಿತು, ಆದರೆ ನಮ್ಮ ದೃಷ್ಟಿ ಎಂದಿಗಿಂತ ಸ್ಪಷ್ಟವಾಗಿತ್ತು. 

ಎಡ ತುದಿಯಲ್ಲಿ ಅಮೆಲಿನ, ಕೀವ್ ನ ಸಾಹಿತ್ಯ ಸಮಾರಂಭವೊಂದರಲ್ಲಿ 

2014 ರ ವಸಂತ ಮತ್ತು ಬೇಸಿಗೆಯಲ್ಲಿ, ಪೂರ್ಣ ಪ್ರಮಾಣದ ರಷ್ಯಾದ ಆಕ್ರಮಣವು ಈಗಾಗಲೇ ಪ್ರಾರಂಭವಾಗಿದೆ, ಕ್ರೂರತೆಯು ತೀವ್ರಗೊಳ್ಳುತ್ತದೆ ಮತ್ತು ಕ್ರಮೇಣ ಉಕ್ರೇನ್‌ನಾದ್ಯಂತ ಹರಡುತ್ತದೆ ಎಂದು ನನಗೆ ಖಚಿತವಾಗಿತ್ತು. ನನ್ನ ಮೂರು ವರ್ಷದ ಮಗನ ಅಗತ್ಯ ವಸ್ತುಗಳನ್ನು ಎಮೆರ್ಜೆನ್ಸಿ ಬ್ಯಾಗಿನಲ್ಲಿ ತುಂಬಿಸಿ ಬಾಂಬ್ ಶೆಲ್ಟರ್‌ನಲ್ಲಿ ಅಡಗಿಕೊಳ್ಳಲು ಯಾವುದೇ ಕ್ಷಣದಲ್ಲಿ ಬರಬಹುದಾದ ಸೂಚನೆಗೆ ನಾವು ಕಾಯುತ್ತಿದ್ದೆವು. ಆ ಸಮಯದಲ್ಲಿ,ನಮ್ಮ ಮೇಲೆ ಬಾಂಬ್‌ಗಳು ಬೀಳಲಿಲ್ಲ; ರಷ್ಯಾ ಕ್ರೈಮಿಯಾವನ್ನು ಸ್ವಾಧೀನಪಡಿಸಿಕೊಂಡಿತು, ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ನಲ್ಲಿ ಉಕ್ರೇನಿಯನ್ನರ ಜೀವನ ನರಕಸದೃಶವಾಯಿತು, ಆದರೆ ಪೂರ್ಣ ಬಲದಲ್ಲಿ ಮುಂದೆ ಬರಲಿಲ್ಲ, ಜಗತ್ತು ಪ್ರತಿಕ್ರಿಯಿಸಲಿಲ್ಲ. ಆದ್ದರಿಂದ ನನ್ನ ಮನೆಯ ಗಡಿಗಳು , ಉಕ್ರೇನ್‌ನ ಗಡಿಗಳವರೆಗಷ್ಟೇ ಎಂದು ನನಗೆ ಸ್ಪಷ್ಟವಾಯಿತು: ನಮ್ಮನ್ನು ಬಿಟ್ಟು ಬೇರೆ ಯಾರೂ ನಮ್ಮ ಬೆನ್ನಿಗಿರಲಿಲ್ಲ. 

ನಾವು ಪರಸ್ಪರರ ಬೆಂಬಲಕ್ಕಿದ್ದೇವೆ ಮತ್ತು ಅದು ಅಮೂಲ್ಯವಾದುದು. ಆದರೆ ಆ ಸುಂದರವಾದ ಪರಿಕಲ್ಪನೆಯೇ? ನಾವೆಲ್ಲರೂ ಒಬ್ಬರನ್ನೊಬ್ಬರು ಬೆಂಬಲಿಸುವ ಪರಿಪೂರ್ಣ ಜಗತ್ತನ್ನು ನಾವು ಇನ್ನೂ ಸಾಧಿಸಲು ಸಾಧ್ಯವಾಗದಿದ್ದ, ಕುರಿತು ನಮ್ಮ ಸ್ನೇಹಶೀಲ ಖಂಡವಾದ ಯುರೋಪ್ ಏನನ್ನುತ್ತದೆ? ರಷ್ಯಾ ಆಕ್ರಮಣದ ಆ ಆರಂಭಿಕ ವರ್ಷಗಳಲ್ಲಿ (2014-2015), ನಮ್ಮ ಸಹಾಯಕ್ಕೆ ಬಾರದೆ ಪಶ್ಚಿಮದವರೂ ದ್ರೋಹ ಮಾಡಿದರೆಂದು ಅನೇಕ ಉಕ್ರೇನಿಯನ್ನರು ಭಾವಿಸಿದ್ದರು. ನಾವು ಉಕ್ರೇನಿಯನ್ನರು,ಆಕ್ರಮಣಕ್ಕೆ ಒಳಗಾದ ಯುರೋಪಿಯನ್ನರಾಗಿದ್ದೆವು, ಆದರೆ ಇದು ಮುಖ್ಯವಾಗಿ ಉಕ್ರೇನಿಯನ್ನರದಷ್ಟೇ ಸಮಸ್ಯೆಯಾಗಿತ್ತು. 

ನವೆಂಬರ್ 1956 ರಲ್ಲಿ, ರಷ್ಯಾದ ಫಿರಂಗಿದಳವು ತಮ್ಮ ಕಚೇರಿಯನ್ನು ಧ್ವಂಸಗೊಳಿಸುವ ಸ್ವಲ್ಪ ಸಮಯದ ಮೊದಲು ಹಂಗೇರಿಯನ್ ಸುದ್ದಿ ಸಂಸ್ಥೆಯ ನಿರ್ದೇಶಕರು, ಟೆಲೆಕ್ಸ್ ಮೂಲಕ “ನಾವು ಹಂಗೇರಿಗಾಗಿ ಮತ್ತು ಯುರೋಪಿಗಾಗಿ ಸಾಯಲಿದ್ದೇವೆ.” ಎಂಬ ಸಂದೇಶವನ್ನು ಜಗತ್ತಿಗೆ ಕಳುಹಿಸಿದರು.

1984 ರಲ್ಲಿ ಝೆಕ್ ಲೇಖಕ ಮಿಲನ್ ಕುಂದೇರಾ ‘ದಿ ಟ್ರ್ಯಾಜೆಡಿ ಆಫ್ ಸೆಂಟ್ರಲ್ ಯುರೋಪ್’ ಪ್ರಬಂಧವನ್ನು ಅನ್ನು ಈ ಸಂದೇಶದೊಂದಿಗೆ ಪ್ರಾರಂಭಿಸಿದರು. ಯುರೋಪ್‌ಗಾಗಿ ಸಾಯತ್ತೇವೆಂಬ ಈ ಹಂಗೇರಿಯನ್ ವ್ಯಕಿಯ ಮಾತಿನ ಅರ್ಥವೇನೆಂದು 1968 ರ ಪ್ರಾಗ್ ಸ್ಪ್ರಿಂಗ್‌ನ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಕುಂದೇರಾರಿಗೆ ತಿಳಿದಿತ್ತು. ಪ್ರಾಗ್ ಕ್ರಾಂತಿಯು ವಿಫಲವಾದ ನಂತರ ಗಡೀಪಾರಾಗಿ ಬದುಕುತ್ತಿರುವ ಅವರ ಬಗ್ಗೆ 2022ರಲ್ಲಿ ಕೈವ್‌ನಲ್ಲಿರುವ ಉಕ್ರೇನಿಯನ್ ಲೇಖಕಿಯಾಗಿ ನಾನು ಆಗಾಗ್ಗೆ ಯೋಚಿಸುತ್ತಿರುತ್ತೇನೆ. ನಾವು, ಮಧ್ಯ ಯುರೋಪಿಯನ್ನರು, ಯುರೋಪಿಗಾಗಿ ಹೋರಾಡಲು ಸಿದ್ಧರಿದ್ದೇವೆ: ಕೆಲವೊಮ್ಮೆ ನಮ್ಮ ಪ್ರೀತಿಯನ್ನು ಯೂರೋಪ್ ಅಪೇಕ್ಷಿಸದಿದ್ದರೂ ಸಹ.

ಯುರೋಪ್ ಹಂಗೇರಿಯ ರಕ್ಷಣೆಗೆ ಬರಲಿಲ್ಲ. ಝೆಕ್ ಜನರ ರಕ್ಷಣೆಗೆ ಬರಲಿಲ್ಲ, 2014 ರಲ್ಲಿ ಉಕ್ರೇನಿಯನ್ನರ ರಕ್ಷಣೆಗೂ ಬರಲಿಲ್ಲ. ‘ಮಧ್ಯ ಯುರೋಪಿಯನ್ ಎಂದರೆ ಯುರೋಪ್‌ನಿಂದ ದ್ರೋಹಕ್ಕೆ ಒಳಗಾದವರು’ ಎಂದಾದಲ್ಲಿ , ಉಕ್ರೇನ್ ಖಂಡಿತವಾಗಿಯೂ ಈ ಸಂಘದ ಸದಸ್ಯ. 

ಆದಾಗ್ಯೂ, ಫೆಬ್ರವರಿ 2022 ರಲ್ಲಿ ರಷ್ಯಾ ಉಕ್ರೇನ್‌ ಮೇಲೆ ಪೂರ್ಣ ಪ್ರಮಾಣದ ಯುದ್ಧವನ್ನು ಪ್ರಾರಂಭಿಸಿದಾಗ, ನಿರಾಶ್ರಿತರಾಗಿ ಬಂದ ಉಕ್ರೇನಿಯನ್ನರನ್ನು ಯುರೋಪ್ ಒಳಬಿಟ್ಟುಕೊಂಡಿತು ಮತ್ತು ನಮ್ಮನ್ನು ಬೇಷರತ್ತಾಗಿ ಒಪ್ಪಿಕೊಂಡಿತು.

ಆಕ್ರಮಣದ ಸಮಯದಲ್ಲಿ ನಾನು ದೇಶದಿಂದ ಹೊರಗಿದ್ದೆ. ಈಜಿಪ್ಟ್‌ನಿಂದ ಉಕ್ರೇನ್‌ಗೆ 24 ಫೆಬ್ರವರಿ 2022 ರಂದು ಬೆಳಿಗ್ಗೆ 7 ಗಂಟೆಗೆ ನಿಗದಿಯಾಗಿದ್ದ ನನ್ನ ವಿಮಾನ ಪಯಣವು ಸಹಜವಾಗಿ ರದ್ದಾಯಿತು; ಕೈವ್‌ನಿಂದ ಇವಾನೊ-ಫ್ರಾಂಕಿವ್ಸ್ಕ್‌ವರೆಗಿನ ಉಕ್ರೇನಿಯನ್ ವಿಮಾನ ನಿಲ್ದಾಣಗಳ ಮೇಲೆ ರಷ್ಯಾ ಬಾಂಬ್ ದಾಳಿ ನಡೆಸುತ್ತಿತ್ತು. “ಏನಾಯಿತು ಗೊತ್ತಾ?” ನಾವು ಟರ್ಮಿನಲ್ ಅನ್ನು ಪ್ರವೇಶಿಸಿದ ತಕ್ಷಣ ಈಜಿಪ್ಟಿನ ಅಧಿಕಾರಿ ನನ್ನನ್ನು ಕೇಳಿದರು. ಅವರು ಪದೇ ಪದೇ ನಮಗೆ ಅರ್ಥ ಮಾಡಿಸಲೋ ಎಂಬಂತೆ”ನೀವು ನಿಮ್ಮ ದೇಶಕ್ಕೆ ಹೋಗಲು ಸಾಧ್ಯವಿಲ್ಲ.” ಎಂದು ಹೇಳುತ್ತಿದ್ದರು. ಉಕ್ರೇನಿಯನ್ನರ ಹತಾಶ ಗುಂಪಿನ ನಡುವೆ ನಾವು ದೀರ್ಘಕಾಲ ನಿಂತಿದ್ದೆವು , ಆದರೆ ಅಂತಿಮವಾಗಿ ಆ ಚಿಕ್ಕ ವಿಮಾನ ನಿಲ್ದಾಣದಲ್ಲಿ ನಾವು ಮಾತ್ರ ಉಳಿದೆವು . ಉಳಿದ ಉಕ್ರೇನಿಯನ್ನರು ತಮ್ಮ ಪ್ರವಾಸ ಸಂಸ್ಥೆಯಿಂದ ಆಯೋಜಿಸಲ್ಪಟ್ಟ ಬಸ್ಸುಗಳಲ್ಲಿ ತೆರಳಿದರು.

ಆ ದಿನ, ನಾನು ಈಜಿಪ್ಟ್‌ನಿಂದ -ಮಿಲನ್ ಕುಂದೇರಾ 1968 ರಲ್ಲಿ ತನ್ನ ಮನೆ ಮತ್ತು ಯುರೋಪ್‌ಗಾಗಿ ಹೋರಾಡಿದ್ದ – ಪ್ರೇಗ್‌ಗೆ ಅತೀ ದುಬಾರಿ ಟಿಕೆಟ್‌ಗಳನ್ನು ಖರೀದಿಸಬೇಕಾಯಿತು. ಹುರ್ಘದಾ ವಿಮಾನ ನಿಲ್ದಾಣದಲ್ಲಿ, ಯುರೋಪಿಯನ್ ಒಕ್ಕೂಟದ ನಾಗರಿಕರು ಚೆಕ್ ಇನ್ ಮಾಡಿ ತೆರಳಿದರು;ಆದರೆ ಎಲ್ಲಾ ಉಕ್ರೇನಿಯನ್ ನಾಗರಿಕರಿಗೆ ಒಂದು ಕಡೆ ಕಾಯುವಂತೆ ಕೇಳಲಾಯಿತು. ಹಲವಾರು ವರ್ಷಗಳಿಂದ ವೀಸಾಗಳಿಲ್ಲದೆ ಉಕ್ರೇನಿಯನ್ನರು ಯುರೋಪಿಯನ್ ಒಕ್ಕೂಟಕ್ಕೆ ಪ್ರಯಾಣಿಸಲು ಸಾಧ್ಯವಾಗುವ ಒಪ್ಪಂದವು ಜಾರಿಯಲ್ಲಿದೆ ಎಂದು ನಾವು ವಿವರಿಸಲು ಪ್ರಯತ್ನಿಸಿದೆವು . ಆದರೆ ಏರ್‌ಲೈನ್‌ನ ಸಿಬ್ಬಂದಿ ‘ಈಗ ಅದು ಅಪ್ರಸ್ತುತ’ ಎಂದು ಉತ್ತರಿಸಿದರು: ನಮ್ಮನ್ನು ದೇಶದೊಳಕ್ಕೆ ಬಿಟ್ಟುಕೊಳ್ಳಲು ಸಿದ್ಧರಿದ್ದಾರೆಯೇ ಎಂದು ಪ್ರಾಗ್, ಈಜಿಪ್ಟಿಗೆ ಈಗ ಹೇಳಬೇಕಾಗಿತ್ತು. 

“ಅವರು ನಮ್ಮನ್ನು ಒಳಗೆ ಬಿಟ್ಟುಕೊಳ್ಳದಿದ್ದರೆ?” ನನ್ನ 10 ವರ್ಷದ ಮಗ ಕೇಳಿದನು.

ನನಗೆ ಏನು ಉತ್ತರಿಸಬೇಕೆಂದು ತೋಚದೆ ಅವನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡೆ.

ಹಿಂದಿನ ದಿನ ಜರ್ಮನಿಯು ತನ್ನ ವಿಮಾನವನ್ನು ಹತ್ತಲು ಉಕ್ರೇನಿಯನ್ ವ್ಯಕ್ತಿಗೆ ನಿರಾಕರಿಸಿದ್ದ ಸುದ್ದಿಯನ್ನು ಚರ್ಚಿಸುತ್ತ ನಾನು ಮತ್ತು ಇತರ ಉಕ್ರೇನಿಯನ್ನರು ಹಲವು ಗಂಟೆಗಳ ಕಾಲ ಪ್ರಾಗ್ ನಿಂದ ನಿರ್ಧಾರಕ್ಕಾಗಿ ಕಾಯುತ್ತಿದ್ದೆವು. ನಂತರ ನಮಗೆ ತೀರ್ಪು ಪ್ರಕಟಿಸಲಾಯಿತು: “ನೀವು ಬರಬಹುದು.”

ಜೆಕ್ ಗಡಿ ನಿಯಂತ್ರಣ ಅಧಿಕಾರಿ ನಮ್ಮ ಪಾಸ್‌ಪೋರ್ಟ್‌ಗಳನ್ನು ನೋಡಿದರು ಮತ್ತು ನಂತರ ನಮ್ಮತ್ತ ನೋಡಿದರು. ನಮ್ಮ ಪಾಸ್‌ಪೋರ್ಟ್ ವಿವರಗಳಿಗಿಂತ ಬಹುಶಃ ನಮ್ಮ ಮುಖದ ಮೇಲಿನ ಭಾವನೆಗಳನ್ನು ಓದಲು ಅವಳು ಹೆಚ್ಚು ಆಸಕ್ತಿ ಹೊಂದಿದ್ದಳು, ಅವಳು ನಮ್ಮನ್ನು ಸಹಾನುಭೂತಿಯಿಂದ ನೋಡುತ್ತಿದ್ದಳು ಎಂದು ನಾನು ಭಾವಿಸುತ್ತೇನೆ. ನಂತರ ಅವಳು ಯಾವುದೇ ಪ್ರಶ್ನೆಗಳನ್ನು ಕೇಳದೆ ನಮ್ಮ ಪಾಸ್‌ಪೋರ್ಟ್‌ಗಳಿಗೆ ಮುದ್ರೆ ಹಾಕಿದಾಗ ಅವಳಿಗೆ ವಿಷಯ ತಿಳಿದಿದೆಯೆಂದು ನಾನು ಅರಿತುಕೊಂಡೆ; ಇಡೀ ಜಗತ್ತು ನಮ್ಮತ್ತ ನೋಡುತ್ತಿತ್ತು. ನಿಯಂತ್ರಣದ ಪ್ರಯತ್ನಗಳನ್ನು ಮೀರಿ ಕಣ್ಣೀರು ಹೊರಬಂತು, ನಾನು ಏಕೆ ಅಳುತ್ತಿದ್ದೇನೆ ಎಂದು ನನ್ನ ಮಗ ಕೇಳಿದಾಗ, ನಾನು ಉತ್ತರಿಸಿದೆ:

“ಏಕೆಂದರೆ ನಾವು ಮನೆ ತಲುಪಿದ್ದೇವೆ.”

“ಆದರೆ ಇದು ಉಕ್ರೇನ್ ಅಲ್ಲ,” ಅವನು ವಾದಿಸಿದ.

“ಇದು ಯುರೋಪ್,” ನಾನು ಉತ್ತರಿಸಿದೆ, “ಯುರೋಪ್” ಎಂಬ ಪದವೇ ನನ್ನ ಮಗುವಿಗೆ ಎಲ್ಲವನ್ನೂ ವಿವರಿಸಿಬಿಡುತ್ತದೇನೋ ಎಂಬಂತೆ.

ನಾವು ಬೀಳುತ್ತಿದ್ದೆವು, ಮತ್ತು ನಮ್ಮ ಯುರೋಪಿಯನ್ ಸ್ನೇಹಿತರು ನಮ್ಮ ಕೈ ಹಿಡಿಯಲು ಸಿದ್ಧರಾಗಿದ್ದರು. ಮನೆಯ ಮಿತಿಗಳು ಈಗಷ್ಟೇ ವಿಸ್ತರಿಸಿರಬಹುದು ಎಂದು ನಾನು ಭಾವಿಸಿದೆ.

ತಮ್ಮ ತಾಯ್ನಾಡು ತೊರೆದು ಬಂದ ಉಕ್ರೇನಿಯನ್ನರಿಗೆ ಜೆಕ್ ರಿಪಬ್ಲಿಕ್ ಮತ್ತು ಪೋಲೆಂಡ್‌ನಲ್ಲಿನ ರೈಲು ಟಿಕೆಟ್‌ಗಳು ಉಚಿತವೆಂಬ ಮಾಹಿತಿ ದೊರಕಿತು. ನಾವು ಪ್ರಾಗ್ ನಿಂದ ಪೋಲೆಂಡ್‌ಗೆ ರೈಲಿನಲ್ಲಿ ಪ್ರಯಾಣಿಸಿ, ಆಕ್ರಮಣದ ಮೂರನೇ ದಿನ ಕೊನೆಗೂ ಗಡಿ ದಾಟಿ ಉಕ್ರೇನ್‌ಗೆ ಹಿಂದಿರುಗಿದೆವು .

ಪೋಲಿಷ್-ಉಕ್ರೇನಿಯನ್ ಗಡಿಯಲ್ಲಿ, ನಾನು ವರ್ಣಿಸಲಾಗದ ಹತಾಶೆ ಮತ್ತು ಭಯವನ್ನು ನೋಡಿದೆ. ಚಿಕ್ಕ ಮಕ್ಕಳು ಭಾರವಾದ ಸೂಟ್‌ಕೇಸ್‌ಗಳನ್ನು ಎಳೆಯುತ್ತಿದ್ದರು, ಅವರ ಭಯಭೀತರಾದ ಅಜ್ಜಿಯರು ಮತ್ತು ತಾಯಂದಿರು ಅವರಿಗಿಂತ ಹೆಚ್ಚು ದಿಗ್ಭ್ರಮೆಗೊಂಡಿದ್ದರು. ಗುಂಪಿನಲ್ಲಿ ಜನರು ಅಪ್ಪಚ್ಚಿಯಾದಾಗ ಅವರ ಕಿರುಚಾಟ ಮತ್ತು ನಿರಾಶ್ರಿತರ ಗಮನವನ್ನು ಸೆಳೆಯಲು,ದುರಂತವನ್ನು ತಡೆಯಲು ಪ್ರಯತ್ನಿಸುತ್ತಿರುವ ಗಡಿ ಕಾವಲುಗಾರರ ದೊಡ್ಡ ಧ್ವನಿಗಳು ಕೇಳಿಬಂದವು . ಗಡಿಯಲ್ಲಿ ಶೀತ, ಹಸಿವು ಮತ್ತು ಭಯಭೀತರಾದ ಅವರಿಗೆ ಆ ಸಮಯದಲ್ಲಿ ನೆನಪಾಗಲಿಲ್ಲವೇನೋ – ಆದರೆ ಆ ಕ್ಷಣದಲ್ಲಿ ಅವರ ಮನೆಯಾದ ಯುರೋಪ್ನ ಗಡಿಗಳು ಉಕ್ರೇನ್ ಅನ್ನು ಸೇರಿಸಿಕೊಳ್ಳಲು ವಿಸ್ತರಿಸಲ್ಪಟ್ಟವು. 

ಯುರೋಪ್ ಮನೆಯಾಗಿತ್ತು, 2014 ರಲ್ಲಿ ಉಕ್ರೇನಿಯನ್ನರು ಮೈದಾನ್ ನಲ್ಲಿ ಪರಸ್ಪರ ಅವಲಂಬಿಸಲು ನಿರ್ಧರಿಸಿದಂತೆ ಇದು ನಾವು ಒಬ್ಬರನ್ನೊಬ್ಬರು ಅವಲಂಬಿಸಬಹುದಾದ ಸ್ಥಳವಾಗಿದೆ ಎಂದು ಸಾಬೀತಾಯಿತು.

ಉಕ್ರೇನಿಯನ್ ನಿರಾಶ್ರಿತರನ್ನು ಯುರೋಪ್ ಸ್ವೀಕರಿಸಿದ ಬಗ್ಗೆ ನಡೆದ ಚರ್ಚೆಗಳ ಬಗ್ಗೆ ನಾವು ಚೆನ್ನಾಗಿ ತಿಳಿದಿದ್ದೇವೆ. ವರ್ಣಭೇದ ನೀತಿ ಮತ್ತು ಇಸ್ಲಾಮೋಫೋಬಿಯಾದ ಕುರಿತ ಕಳವಳದ ಹೊರತಾಗಿಯೂ, ಉಕ್ರೇನಿಯನ್ ನಿರಾಶ್ರಿತರಿಗೆ ದೊರಕಿದ ಆಶ್ರಯ ಕೇವಲ ದಯೆಗಿಂತ ಹೆಚ್ಚಿನದು ಎಂದು ನಾನು ನಂಬಲಿಚ್ಚಿಸುತ್ತೇನೆ. ಇದು ದೃಷ್ಟಿಕೋನದಲ್ಲಿ ಆದ ಒಂದು ಬದಲಾವಣೆ, ಯುರೋಪಿನ ಕಥೆಯಲ್ಲಿ ಆದ ಬದಲಾವಣೆ ಮತ್ತು ಅಂತಿಮವಾಗಿ ಉಕ್ರೇನಿಯನ್ನರು ಹಾಗೂ ಇತರ ಯುರೋಪಿಯನ್ನರು ತಾವು ಹಂಚಿಕೊಂಡ ಮನೆ ಎಂದು ಪರಿಗಣಿಸುವ ಪ್ರದೇಶದ ಗಡಿಗಳಲ್ಲಿ ಆದ ಬದಲಾವಣೆಯಾಗಿದೆ. 

ದುರದೃಷ್ಟವಶಾತ್, ಸಿರಿಯಾ ಅಥವಾ ಸುಡಾನ್‌ನಿಂದ ನಿರಾಶ್ರಿತರಾಗಿ ಬಂದವರಿಗೆ ಇದು ಹೆಚ್ಚು ಸಹಾಯ ಮಾಡದಿರಬಹುದು. ಆದರೆ ಒಂದು ಗುಂಪಿನ ನಿರಾಶ್ರಿತರ ಕಡೆಗಿನ ಸಹಾನುಭೂತಿಯ ಕಾರ್ಯಾಚರಣೆಗಳು ಉಕ್ರೇನಿಯನ್ನರನ್ನು ಒಳಗೊಂಡಂತೆ ನಮಗೆಲ್ಲರಿಗೂ, ಯುದ್ಧಪೀಡಿತ ಪ್ರದೇಶಗಳಿಂದ ಪಲಾಯನ ಮಾಡುವ ಇತರ ಎಲ್ಲ ಜನರ ಬಗ್ಗೆ ಹೆಚ್ಚು ಕರುಣೆಯ ಪಾಠಗಳನ್ನು ಕಲಿಸಬಹುದು ಎಂದು ನಾನು ನಂಬುತ್ತೇನೆ. ನಾವು ಆದರ್ಶ ಸಹೋದರತ್ವದ ಬಗ್ಗೆ ಹಾಡಬಹುದು ಅಥವಾ ನಾವು ಹಂಚಿಕೊಂಡಿರುವ ದುರ್ಬಲ ನಂಬಿಕೆಯ ಮಿತಿಗಳನ್ನು ವಿಸ್ತರಿಸಲು ಶ್ರದ್ಧೆಯಿಂದ ಕೆಲಸ ಮಾಡಬಹುದು. ಈ ಎಲ್ಲ ಅಡೆತಡೆಗಳ ನಡುವೆಯೂ ಗಡಿಯಿಲ್ಲದ ಜಗತ್ತಿನ ಕನಸೇ ನಮ್ಮ ಸ್ಫೂರ್ತಿಯಾಗಬೇಕು ಎಂದು ನಾನು ನಂಬುತ್ತೇನೆ. ಈ ದೃಷ್ಟಿಯನ್ನು ಸಂಪೂರ್ಣವಾಗಿ ಸಾಧಿಸಲು ನಮಗೆ ಎಂದಿಗೂ ಸಾಧ್ಯವಾಗದೇ ಇರಬಹುದು , ಆದರೆ ಇದು ವಾಸ್ತವವು ಒಳಿತಿನ ಕುರಿತು ಗಮನಹರಿಸುವಂತೆ ಮಾಡುವ ತಂತ್ರವಾಗಿ ಉಳಿಯಬಹುದು.

ಅಪರಿಚಿತರನ್ನು ಸ್ವೀಕರಿಸಬೇಕೆಂಬ ಅಥವಾ ಅವರಿಗೆ ಪ್ರೀತಿಯನ್ನು ತೋರಿಸಬೇಕೆಂಬ ನೈತಿಕ ನಿರ್ಬಂಧಕ್ಕೆ ಯಾರೂ ಬದ್ಧರಾಗಿರಬೇಕಿಲ್ಲ, ಆದರೂ ಅದು ಸಂಭವಿಸುತ್ತದೆ. ಈ ಪ್ರೀತಿಯು ನಿರಾಶ್ರಿತರನ್ನು ಒಳಗೊಂಡಂತೆ ಎಲ್ಲಾ ಭವಿಷ್ಯದ ಕಥೆಗಳನ್ನು ಬದಲಾಯಿಸುವ ನಿಜವಾದ ಕಥೆಯಾಗುತ್ತದೆ. 

ಈ ಲೇಖನದ ಮೊದಲ ಭಾಗವನ್ನು ಇಲ್ಲಿ ಓದಿ: https://peepalmedia.com/rip-victoria-amelina-part-1/

ಅನುವಾದ: ರಂಜಿತಾ ಜಿ ಎಚ್

Related Articles

ಇತ್ತೀಚಿನ ಸುದ್ದಿಗಳು

You cannot copy content of this page