Wednesday, June 26, 2024

ಸತ್ಯ | ನ್ಯಾಯ |ಧರ್ಮ

ಭಿನ್ನ ಸಂಸ್ಕೃತಿಗಳ ಮೇಲೆ ಆರ್‌ಎಸ್‌ಎಸ್, ಬಿಜೆಪಿ ದಾಳಿ: ರಾಹುಲ್ ಗಾಂಧಿ

ಮೊಕೊಂಗಾನ್ (ನಾಗಾಲ್ಯಾಂಡ್): ದೇಶದಲ್ಲಿ ಆರ್‌ಎಸ್‌ಎಸ್ ಮತ್ತು ಬಿಜೆಪಿ ವಿವಿಧ ಧರ್ಮಗಳ ಮೇಲೆ ದಾಳಿ ನಡೆಸುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಅಂತಹ ಶಕ್ತಿಗಳ ವಿರುದ್ಧ ಸೈದ್ಧಾಂತಿಕ ಸಮರ ಸಾರುವುದೇ ತಮ್ಮ ಭಾರತ್ ಜೋಡೋ ನ್ಯಾಯ ಯಾತ್ರೆಯ ಗುರಿ ಎಂದು ಅವರು ಸ್ಪಷ್ಟಪಡಿಸಿದರು.

ಭಾರತ್ ಜೋಡೋ ನ್ಯಾಯ ಯಾತ್ರೆಯ ಅಂಗವಾಗಿ ನಾಗಾಲ್ಯಾಂಡ್ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಬುಧವಾರ ಇಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡುತ್ತಾ, ನಿಮ್ಮ ಸಂಪ್ರದಾಯಗಳು, ನಿಮ್ಮ ಆಹಾರ ಪದ್ಧತಿ ಮತ್ತು ನೀವು ಎಂತಹ ತೊಡಬೇಕೆನ್ನುವುದನ್ನು ನಿರ್ಧರಿಸುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದರು. ಪ್ರತಿಯೊಂದು ಸಂಸ್ಕೃತಿ ಮತ್ತು ಪ್ರತಿಯೊಂದು ಧರ್ಮವನ್ನು ಗೌರವಿಸಬೇಕು ಎಂದು ಹೇಳಿದರು. ಈಶಾನ್ಯ ರಾಜ್ಯಗಳ ಜನಸಂಖ್ಯೆ ಚಿಕ್ಕದಾದರೂ ದೇಶದ ಇತರ ಭಾಗಗಳಂತೆ ಅವೂ ಕೂಡಾ ಮುಖ್ಯ ಎಂದು ಹೇಳಿದರು. ಎರಡು ಭಾಗವಾಗಿರುವ ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡದೇ ಇರುವುದು ನಾಚಿಕೆಗೇಡು ಎಂದು ರಾಹುಲ್ ಪ್ರತಿಕ್ರಿಯಿಸಿದ್ದಾರೆ.

ಒಂಬತ್ತು ವರ್ಷಗಳ ಹಿಂದೆ ನಾಗಾಲ್ಯಾಂಡ್ ಜನರೊಂದಿಗೆ ಶಾಂತಿ ಒಪ್ಪಂದದಲ್ಲಿ ನೀಡಿದ್ದ ಭರವಸೆಗಳನ್ನು ಜಾರಿಗೆ ತರದಿದ್ದಕ್ಕಾಗಿ ನಾಚಿಕೆಪಡುತ್ತೇನೆ ಎಂದು ಅವರು ಹೇಳಿದರು. ಯುವಕರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾಗಾಲ್ಯಾಂಡ್ ರಾಜ್ಯದ ಉಜ್ವಲ ಭವಿಷ್ಯಕ್ಕಾಗಿ ಯುವಕರು ಅದರಲ್ಲೂ ಹೆಣ್ಣು ಮಕ್ಕಳು ಶ್ರಮಿಸಬೇಕು ಎಂದು ಕರೆ ನೀಡಿದರು. ದೆಹಲಿಗೆ ರಾಹುಲ್ ಗಾಂಧಿ ಎಂಬ ಯೋಧ ಇದ್ದಾರೆ ಎಂಬುದನ್ನು ನೆನಪಿಡಿ ಎಂದು ಭರವಸೆ ನೀಡಿದರು. ಈಶಾನ್ಯ ರಾಜ್ಯಗಳು, ವಿಶೇಷವಾಗಿ ನಾಗಾಲ್ಯಾಂಡ್ ವಿರುದ್ಧ ಕೇಂದ್ರ ಸರ್ಕಾರದ ತಾರತಮ್ಯದ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು. ದೇಶದ ಇತರೆ ಭಾಗದ ಜನರು ಅನುಭವಿಸುತ್ತಿರುವ ಉತ್ತಮ ರಸ್ತೆ, ವಿದ್ಯುತ್, ಆಸ್ಪತ್ರೆ ಮತ್ತಿತರ ಮೂಲ ಸೌಕರ್ಯಗಳು ನಾಗಾಲ್ಯಾಂಡ್ ಜನತೆಗೆ ಏಕೆ ಇಲ್ಲ ಎಂದು ಪ್ರಶ್ನಿಸಿದರು. ನಾಗಾ ಯುವಕರು ಈ ರಸ್ತೆಗಳಲ್ಲಿ ಸಂಚರಿಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಮತ್ತು ದೇಶದ ಇತರ ಭಾಗದ ಮಕ್ಕಳೊಂದಿಗೆ ಮನೆಯಲ್ಲಿ ವಿದ್ಯುತ್ ಇಲ್ಲದೆ ಹೇಗೆ ಸ್ಪರ್ಧಿಸುತ್ತಾರೆ ಎಂದು ಅವರು ವಿಷಾದಿಸಿದರು.

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷವು ಕೆಲವೇ ಜನರಿಗೆ ಸಹಾಯ ಮಾಡುತ್ತಿದೆ ಎಂದು ಟೀಕಿಸಿದ ಅವರು, ದೇಶದ ಪ್ರಮುಖ 500 ಕಂಪನಿಗಳಲ್ಲಿ ಒಂದೇ ಒಂದು ನಾಗಾ ಒಡೆತನದ ಕಂಪನಿ ಇಲ್ಲ. ನಿಮ್ಮ ಬಳಿ ಪರಿಹಾರವಿಲ್ಲದಿದ್ದರೆ, ದಯವಿಟ್ಟು ಜನರಿಗೆ ಸುಳ್ಳು ಹೇಳಬೇಡಿ ಮತ್ತು ಪೊಳ್ಳು ಭರವಸೆಗಳನ್ನು ನೀಡಬೇಡಿ ಎಂದು ಅವರು ಪ್ರಧಾನಿ ನರೇಂದ್ರ ಮೋದಿಗೆ ಹೇಳಿದರು. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚೆ ನಡೆಸದೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದರು. ತಮ್ಮ ಭಾರತ್ ಜೋಡೋ ನ್ಯಾಯ ಯಾತ್ರೆಯ ಮೂಲ ಉದ್ದೇಶ ಜನರ ಮಾತುಗಳನ್ನು ಆಲಿಸಿ ಅವರ ನೋವು ಹಂಚಿಕೊಳ್ಳುವುದಾಗಿದೆ ಎಂದರು. ನಾಗಾಲ್ಯಾಂಡ್‌ನ ಜನರು ತಮ್ಮ ಸಮಸ್ಯೆಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಅವರು ಕರೆ ನೀಡಿದರು. ಈ ಪ್ರವಾಸದ ನಂತರ ನಾಗಾಲ್ಯಾಂಡ್‌ಗೆ ಬಂದು ನಿಮ್ಮೊಂದಿಗೆ ಕೆಲವು ದಿನಗಳನ್ನು ಕಳೆಯುತ್ತೇನೆ ಎಂದು ಭರವಸೆ ನೀಡಿದರು

Related Articles

ಇತ್ತೀಚಿನ ಸುದ್ದಿಗಳು