Friday, June 20, 2025

ಸತ್ಯ | ನ್ಯಾಯ |ಧರ್ಮ

ಹೊಸ ಜವಾಬ್ದಾರಿಗಳನ್ನು ಸಾಹಿತ್ಯ ಪರಿಷತ್ತು ಹೊರುವುದೇ?

೨೧ನೇ ಶತಮಾನದ ಕನ್ನಡ ಕರ್ನಾಟಕ ಎದುರಿಸುತ್ತಿರುವ ಕೋಮುವಾದ ಮತ್ತು ಜಾಗತೀಕರಣ, ರಾಷ್ಟ್ರೀಯ ಶಿಕ್ಷಣ ನೀತಿ ಹಿಂದಿ ಹೇರಿಕೆ ತ್ರಿಭಾಷಾ ಸೂತ್ರ ಇತ್ಯಾದಿ ಪ್ರಶ್ನೆಗಳಿಗೆ ಕನ್ನಡದ ಪರವಾಗಿ ದನಿ ಎತ್ತಿ ನಾಯಕತ್ವ ನೀಡುವ ಅರ್ಹತೆಯನ್ನು ಸಾಹಿತ್ಯ ಪರಿಷತ್ತು ಕಳೆದು ಕೊಂಡಿದೆ. ಸರಕಾರೀ ಅಂಗಸಂಸ್ಥೆಯಾಗಿ ಬೆಳೆದಿರುವ ಅದು ಸಾಹಿತ್ಯದ ಮೂಲಭೂತ ಗುಣಗಳಿಗೆ ವ್ಯತಿರಿಕ್ತವಾದ ಕೆಲಸಗಳನ್ನು ಮಾಡುತ್ತಿದೆ… ಈ ನಿಜ ತಿಳಿದಿರುವ ಲೇಖಕರು ಗಟ್ಟಿಯಾಗಿ ಮಾತಾಡಬೇಕಾದ ಕಾಲವಿದು. ಈ ಎಲ್ಲಾ ಕಾರಣಗಳಿಂದಾಗಿ ನಮಗೆ ಉಪಯುಕ್ತವಾದ ಒಂದು ಸಾಹಿತ್ಯಿಕ ಸಾಂಸ್ಕೃತಿಕ ಸಂಘಟನೆಯನ್ನು ಹೊಸದಾಗಿ ಕಟ್ಟಿಕೊಳ್ಳುವುದು ಇವತ್ತಿನ ಅಗತ್ಯ ಎನ್ನುವ ಸಮಾಜ ಮತ್ತು ಸಂಸ್ಕೃತಿ ಚಿಂತಕ ಪುರುಷೋತ್ತಮ ಬಿಳಿಮಲೆಯವರ ಈ ಮಹತ್ತ್ವದ ಲೇಖನ ನಿಮ್ಮ ಓದಿಗೆ

೨೦೧೪ರ ರಾಜಕೀಯ ಬದಲಾವಣೆಯ ಆನಂತರ ಭಾರತದಲ್ಲಿ ಬುದ್ಧಿಜೀವಿಗಳ ಮತ್ತು ಲೇಖಕರ ಮೇಲೆ ಆಕ್ರಮಣಗಳು ಹೆಚ್ಚಾಯಿತು. ಇದರ ಪರಿಣಾಮವೋ ಎಂಬಂತೆ ಇವತ್ತು ಸರಕಾರದ ಮುಖ್ಯ ಇಲಾಖೆಗಳಲ್ಲಿ, ಸಾರ್ವಜನಿಕ ಚರ್ಚೆಗಳಲ್ಲಿ, ಉನ್ನತ ಕುರ್ಚಿಗಳಲ್ಲಿ, ಸಾಹಿತ್ಯಿಕ ಸಾಂಸ್ಕೃತಿಕ ಸಂಘಟನೆಗಳಲ್ಲಿ  ಬುದ್ಧಿಜೀವಿಗಳು ಮತ್ತು ಲೇಖಕರು ಕಾಣಿಸುವುದೇ ಅಪೂರ್ವವಾಗಿದೆ. ಅಲ್ಲಿ ಇಲ್ಲಿ ಕೆಲವರು ಕಂಡರೂ ಅವರ ತುಟಿಗಳು ಹೊಲಿದಂತಿರುತ್ತವೆ. ಪ್ರಭುತ್ವದ ಜೊತೆಗೆ ನಕಲಿ ಬುದ್ಧಿಜೀವಿಗಳು ಕಾಣಿಸಿಕೊಳ್ಳುತ್ತಿದ್ದಾರೆ.

ಈ ಬೆಳವಣಿಗೆಯು ಉನ್ನತ ಶಿಕ್ಷಣ ಕ್ಷೇತ್ರವನ್ನು ಬರಡುಗೊಳಿಸಿದೆ. ವಿಶ್ವವಿದ್ಯಾಲಯಗಳ ವಿಚಾರ ಸಂಕಿರಣಗಳು ಕಳೆಗುಂದಿ, ಯಾಂತ್ರಿಕವಾಗಿವೆ. ದೇಶದ ಮುಖ್ಯ ಚಿಂತಕರನ್ನೂ, ಲೇಖಕರನ್ನೂ ಅನಧಿಕೃತವಾಗಿ, ಆದರೆ ವ್ಯವಸ್ಥಿತವಾಗಿ ಹೊರಗಿಟ್ಟು ಹಲ್ಲುಗಿಂಜುವವರನ್ನು ಜೊತೆಗಿರಿಸಿಕೊಳ್ಳಲಾಗಿದೆ.  ಪ್ರಭುತ್ವದ ದರ್ಪದೆದುರು ಭಾಷೆ ಸೋತಿದೆ.

ಇಂಥ ಸಂದರ್ಭದಲ್ಲಿ ನಿಜ ತಿಳಿದಿರುವ ನಮ್ಮ ಲೇಖಕರು ಯಾಕೆ ಮೌನವಾಗಿದ್ದಾರೆ ಎಂಬ ಪ್ರಶ್ನೆಯನ್ನು ಅನೇಕರು ಕೇಳುತ್ತಿದ್ದಾರೆ. ಕೆಲವು ಲೇಖಕರ ಜಾಣ ನಡೆಗಳನ್ನು ಸಂಶಯಿಸಲಾಗುತ್ತಿದೆ.

ಹಾಗೆ ನೋಡಿದರೆ, ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಪ್ರಭುತ್ವದ ದರ್ಪವನ್ನು ಲೇಖಕರು ಸದಾ ಪ್ರಶ್ನಿಸುತ್ತಲೇ ಬಂದಿದ್ದಾರೆ. ಕನ್ನಡದ ಆದಿ ಕವಿ ಪಂಪನು ಸ್ವತ: ಅರಿಕೇಸರಿಯ ಆಸ್ಥಾನದಲ್ಲಿದ್ದರೂ ʼನಿಜದಿಂ ಭೂಪರೆಂಬುವರ್‌ ಅವಿವೇಕಿಗಳ್‌ʼ ಎಂದದ್ದಲ್ಲದೆ, ಈ ಅರಸರುʼ ಕಲಿಯನ್ನು ಹಂದಿಗಳನ್ನಾಗಿ ಮಾಡುತ್ತಾರೆ ಮತ್ತು ಹಂದಿಯನ್ನು ಕಲಿಯನ್ನಾಗಿ ಮಾಡುತ್ತಾರೆʼ ಎಂದು ಧೈರ್ಯದಿಂದ ಘೋಷಿಸುತ್ತಾನೆ. ವಚನಕಾರರು ಪ್ರಭುತ್ವವನ್ನೇ ಧಿಕ್ಕರಿಸಿ ಅನುಭವ ಮಂಟಪ ಕಟ್ಟುತ್ತಾರೆ. ಕುಮಾರವ್ಯಾಸನಂತೂ ʼಅರಸು ರಾಕ್ಷಸ, ಮಂತ್ರಿಯೆಂಬುವ ಮೊರೆವ ಹುಲಿ, ಪರಿವಾರ ಹದ್ದಿನ ನೆರವಿ, ಉರಿ ಉರಿವುತಿದೆ ದೇಶ, ನಾವಿನ್ನಿರಲು ಬಾರದುʼ ಎಂದು ಬರೆಯುತ್ತಾನೆ. ಕೃಷ್ಣದೇವರಾಯನ ಮೂಗಿನ ಕೆಳಗೇ ಓಡಾಡುತ್ತಿದ್ದ ಪುರಂದರದಾಸನು ʼ ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ, ಆನೆ ಕುದುರೆ ಒಂಟೆ ಲೊಳಲೊಟ್ಟೆ, ಬಹು ಸೇನೆ ಭಂಡಾರವು ಲೊಳಲೊಟ್ಟೆ, ದೊಡ್ಡ ಕ್ಷೋಣೀಶನೆಂಬುದು ಲೊಳಲೊಟ್ಟೆʼ ಎಂದು ಹಾಡುತ್ತಾ, ಲಂಗೋಟಿ ತೊಟ್ಟುಕೊಂಡು ಚಿನ್ನಾಭರಣಗಳನ್ನು ಮಾರುತ್ತಿದ್ದ ಹಂಪಿಯ ಬೀದಿಗಳಲ್ಲಿ ಸುತ್ತುತ್ತಿದ್ದ.

೨೦ನೇ ಶತಮಾನದ ಬಹುತೇಕ ಸಾಹಿತಿಗಳು ಸಮಕಾಲೀನ ಘಟನೆಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದರು. ಅವರ ಪ್ರತಿಕ್ರಿಯೆಗಳಲ್ಲಿ ಎರಡು ರೀತಿಯಿತ್ತು. ಮೊದಲನೆಯದು, ಕುವೆಂಪು ಮಾಡಿದ ಹಾಗೆ, ಸಾರ್ವಜನಿಕವಾಗಿ ಹೆಚ್ಚು ಮಾತಾಡದೆ, ಗಂಭೀರವಾದ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ಪ್ರಭುತ್ವವನ್ನು ಆಳವಾಗಿ ಪ್ರಶ್ನಿಸುವುದು. ಎರಡನೆಯದು, ಶಿವರಾಮ ಕಾರಂತರ ರೀತಿ. ಗಂಭೀರವಾಗಿ ಬರೆಯುವುದರ ಜೊತೆಗೆ ಗಟ್ಟಿಯಾಗಿ ಜನರೊಡನೆ ಮಾತಾಡುವುದು. ಅವರು ಸುಮಾರು ೪೨೭ ಪುಸ್ತಕಗಳನ್ನು ಬರೆದರು, ಯಕ್ಷಗಾನಕ್ಕೆ ಕಾಯಕಲ್ಪ ನೀಡಿದರು, ವೇಶ್ಯಾ ವಿವಾಹ ಮಾಡಿಸಿದರು. ಪುತ್ತೂರಿನಲ್ಲಿ ಬಾಲವನ ಎಂಬ ಅಸಾಂಪ್ರದಾಯಿಕ ಶಿಕ್ಷಣ ಕೇಂದ್ರ ತೆರೆದರು. ಪರಿಸರಕ್ಕೆ ಹಾನಿಯಾಗುತ್ತದೆ ಎಂದನ್ನಿಸಿದಾಗ ಅದರ ರಕ್ಷಣೆಗೆ ಕಟಿಬದ್ಧರಾದರು. ಕೈಗಾ ಅಣುವಿದ್ಯುತ್ ಸ್ಥಾವರದ ವಿರುದ್ಧ ಹೋರಾಟಕ್ಕೆ ನಾಯಕತ್ವ ನೀಡಿದರು. ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಪದ್ಮಭೂಷಣ ಪ್ರಶಸ್ತಿಯನ್ನು ಹಿಂದಿರುಗಿಸಿದರು. ಪ್ರಗತಿಶೀಲ ಸಾಹಿತಿಗಳಾಗಿದ್ದ ನಿರಂಜನ, ಬಸವರಾಜ ಕಟ್ಟೀಮನಿ, ಚದುರಂಗ ಮೊದಲಾದವರು ಸಾಹಿತ್ಯದ ಮಡಿವಂತಿಕೆಯನ್ನೇ ಪ್ರಶ್ನಿಸಿದರು. ಸ್ವಾತಂತ್ರ್ಯೋತ್ತರ ಕಾಲದಲ್ಲಿ ನವ್ಯ ಸಾಹಿತಿಗಳು ನೆಹರೂ ಯುಗದ ಭ್ರಮೆಗಳನ್ನು ಒಡೆದರು. ಅಡಿಗರಂತೂ ʼನೆಹರೂ ನಿವೃತ್ತರಾಗುವುದಿಲ್ಲʼ ಎಂಬ ಕವಿತೆಯನ್ನೇ ಬರೆದರು. ಲಂಕೇಶ್‌ ಉತ್ಕೃಷ್ಟವಾದ ಕತೆ, ಕಾದಂಬರಿ, ನಾಟಕಗಳನ್ನು ಬರೆಯುತ್ತಲೇ ಪ್ರಭುತ್ವಕ್ಕೆ ಸಿಂಹ ಸ್ವಪ್ನರಾಗಿದ್ದರು.  ಅನಂತಮೂರ್ತಿಯವರು ಸರ್ವಾಧಿಕಾರೀ ಶಕ್ತಿಗಳ ವಿರುದ್ಧ ಹೋರಾಡುತ್ತಲೇ ಕೊನೆಯುಸಿರೆಳೆದರು.

೧೯೭೫ರಲ್ಲಿ ಆರಂಭವಾದ ದಲಿತ ಬಂಡಾಯ ಸಾಹಿತ್ಯದ ಲೇಖಕರಂತೂ ದಟ್ಟವಾದ ಸಾಮಾಜಿಕ ಪ್ರಜ್ಞೆಯುಳ್ಳವರಾಗಿಯೇ ಬರೆದರು. ಸಿದ್ದಲಿಂಗಯ್ಯ, ದೇವನೂರು ಮಹಾದೇವ, ಕುಂವೀ, ಬರಗೂರು, ಸಾರಾ, ಬೊಳುವಾರು, ಚಂಪಾ ಮೊದಲಾದವರು ಅನೇಕ ಬಗೆಯ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಲೇ ಕನ್ನಡ ನಾಡಿನ ಚೈತನ್ಯವನ್ನು ಹೆಚ್ಚಿಸಿದರು. ಸಿದ್ದಲಿಂಗಯ್ಯನವರ ಕವಿತೆಗಳು ಜನರ ಹೃದಯದ ಹಾಡುಗಳಾದುವು. ಅವುಗಳನ್ನು ಕಾಲೇಜುಗಳಲ್ಲಿ, ಬೀದಿಗಳಲ್ಲಿ ಧೈರ್ಯವಾಗಿ ಹಾಡಲಾಯಿತು. ಗೋಡೆಗಳು ಕೂಡಾ ಆಗ ಮಾತಾಡ ತೊಡಗಿದುವು. ಕನ್ನಡ ಕಾವ್ಯಕ್ಕೆ ತಮಟೆಯ ದನಿ ಸೇರಿಸುವಲ್ಲಿ ದಲಿತ ಲೇಖಕರು ಯಶಸ್ವಿಯಾದರು.

ಇಂಥ ಇತಿಹಾಸವಿರುವ ಕನ್ನಡದ ಬರೆಹಗಾರರು ೧೯೯೦ರ ದಶಕದ ಆನಂತರ ಬಹುಮಟ್ಟಿಗೆ ಮೌನವಾಗುತ್ತಲೇ ಹೋದರು. ಲಾಲ್‌ ಕೃಷ್ಣ ಅಡ್ವಾಣಿಯವರು ೧೯೯೦ರಲ್ಲಿ ಆರಂಭಿಸಿದ ರಾಮ ರಥ ಯಾತ್ರೆಯು ಉಗ್ರ ಹಿಂದುತ್ವವನ್ನು ಮುನ್ನೆಲೆಗೆ ತಂದಿತು. ಇದರಿಂದ ದೇಶದಾದ್ಯಂತ ಕೋಮುಗಲಭೆಗಳೂ ಹುಟ್ಟಿಕೊಂಡುವು. ಇದರ ರಾಜಕೀಯ ಲಾಭ ಪಡೆದು ಅಧಿಕಾರವನ್ನು ಹೆಚ್ಚಿಸಿಕೊಂಡಿದ್ದ ಬಿಜೆಪಿಯು ಮುಂದೆ ಇದೇ ತಂತ್ರವನ್ನು ಅನುಸರಿಸಿತು.

೧೯೯೦ರ ಆನಂತರ ಕಾಣಿಸಿಕೊಂಡ ಉಗ್ರ ಹಿಂದುತ್ವ ಮತ್ತು ಜಾಗತೀಕರಣದ ಶಕ್ತಿಗಳು ದಿನ ಸಾಗಿದಂತೆ ಒಂದರೊಳಗೊಂದು ಸೇರಿಕೊಂಡು ಕಾರ್ಯ ನಿರ್ವಹಿಸಲು ಅರಂಭಿಸಿದುವು. ಇವತ್ತು ಜಾಗತೀಕರಣದ ಭಾಗವಾದ ಖಾಸಗೀಕರಣ ಮತ್ತು ನವಬಂಡವಾಳಶಾಹೀ ಶಕ್ತಿಗಳು ಹಿಂದುತ್ವದ ಜೊತೆ ಕೈಜೋಡಿಸಿವೆ. ಇವು ಯಾವುದೇ ಜನಪರ ಚಳುವಳಿಗಳು ತಲೆ ಎತ್ತದಂತೆ ಮಾಡಿವೆ. ಬಂಡವಾಳಶಾಹಿಗಳಿಗೆ ಲಾಭ ತಂದುಕೊಡುವ ಯಾವುದೇ ಯೋಜನೆಗಳು, ನಿರುದ್ಯೋಗ, ಬೆಲೆ ಏರಿಕೆ, ಅಸಮಾನತೆಯ ಅಗಾಧ ಹೆಚ್ಚಳ, ಭ್ರಷ್ಟಾಚಾರ, ಲಿಂಗ ತಾರತಮ್ಯ, ದೇಸೀ ಭಾಷೆಗಳ ಕುಸಿತ, ಸ್ಥಳೀಯ ಸಂಸ್ಕೃತಿಗಳ ನಾಶ ಇತ್ಯಾದಿಗಳನ್ನು ಹಿಂದುತ್ವದ ಪರವಾಗಿರುವವರು ವಿರೋಧಿಸುವುದೇ ಇಲ್ಲ. ಬದಲು ದೇಶದ ಹೆಸರಿನಲ್ಲಿ ಅವನ್ನು ಸಮರ್ಥಿಸಲು ಮುಂದಾಗುತ್ತಾರೆ.  ಬಂಡವಾಳಶಾಹಿಗಳಿಗೆ ಅಡಿಯಾಳಾಗಿರುವ ಟಿ ವಿ ಚಾನಲ್‌ಗಳು, ವಾಟ್ಸಾಪ್‌, ಫೇಸ್‌ಬುಕ್‌ಗಳಂತ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಸುಳ್ಳುಗಳು, ದ್ವೇಷ ಪೂರಿತ ಭಾಷಣಗಳು, ರಾಜಕಾರಣಿಗಳು ಬಳಸುವ ಸೌಜನ್ಯ ರಹಿತ ನುಡಿಗಟ್ಟು ಮೊದಲಾದುವುಗಳನ್ನು ನಮ್ಮ ನೆಲದ ಗುಣಗಳೆಂಬಂತೆ ಬದಲಾಯಿಸಿವೆ. ಇಂಥ ಬೆಳವಣಿಗೆಗಳ ಕುರಿತು ಎಚ್ಚರ ಹುಟ್ಟಿಸುವ ಮಾನವಿಕಗಳನ್ನು ‘ಅನುತ್ಪಾದಕ’ ಎಂದು ಘೋಷಿಸುವ ಮಟ್ಟಿಗೆ ಜನರು ಇವತ್ತು ಬದಲಾಗಿದ್ದಾರೆ. ಹೀಗೆ ನಾಗರಿಕ ಸಮಾಜದ ಯೋಚನಾ ಶಕ್ತಿಯೇ ಕೊಲೆಯಾಗುತ್ತಿರುವಾಗ ಲೇಖಕರು ಸುಮ್ಮನೆ ಕುಳಿತಿರುವುದು ಅಪೇಕ್ಷಣೀಯವಲ್ಲ.

 ಈ ಎಲ್ಲಾ ಕಾರಣಗಳಿಂದಾಗಿ ನಾವೆಲ್ಲ ಒಂದು ಕ್ಷಣ ಒಟ್ಟಿಗೇ ನಿಂತು, ಯೋಚಿಸಿ, ನಮಗೆ ಉಪಯುಕ್ತವಾದ ಒಂದು ಸಾಹಿತ್ಯಿಕ –ಸಾಂಸ್ಕೃತಿಕ ಸಂಘಟನೆಯನ್ನು ಹೊಸದಾಗಿ ಕಟ್ಟಿಕೊಳ್ಳುವುದು ಇವತ್ತಿನ ಅಗತ್ಯ ಎಂದು ತೋರುತ್ತದೆ. ಈ ಕುರಿತು ೧೯೭೪ರಲ್ಲಿ ಕುವೆಂಪು ಮೈಸೂರಿನಲ್ಲಿ ಆಡಿದ ಮಾತುಗಳು ನಮಗೆ ಪ್ರೇರಣೆ ನೀಡಬೇಕು. ಲಂಕೇಶ್‌, ಸುಬ್ಬಣ್ಣ, ತೇಜಸ್ವಿ, ರಾಮದಾಸ್‌, ದೇವನೂರು ಮೊದಲಾದವರ ಮಾರ್ಗ ನಮ್ಮ ಮುಂದಿದೆ.

ಈ ತಿಳಿವಳಿಕೆಯ ಹಿನ್ನೆಲೆಯಲ್ಲಿ ೨೦೨೩ರ ಜನವರಿ ತಿಂಗಳ ಎಂಟನೇ ತಾರೀಕಿನಂದು ಬೆಂಗಳೂರಿನ ಕೆ ಅರ್‌ ಸರ್ಕಲ್‌ ಬಳಿಯಲ್ಲಿರುವ ಅಲ್ಯುಮ್ನಿ ಸಭಾಂಗಣದಲ್ಲಿ ಜನ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಕನ್ನಡಕ್ಕೆ ಹೊಸ ಶಕ್ತಿ ತುಂಬುತ್ತಿರುವ ಹೊಸ ತಲೆಮಾರಿನ ಬರೆಹಗಾರರು ಈ ಸಮಾವೇಶದ ಮುಂಚೂಣಿಯಲ್ಲಿರುತ್ತಾರೆ.

ಪುರುಷೋತ್ತಮ ಬಿಳಿಮಲೆ

ಸಮಾಜ ಮತ್ತು ಸಂಸ್ಕೃತಿ ಚಿಂತಕರು

Related Articles

ಇತ್ತೀಚಿನ ಸುದ್ದಿಗಳು

You cannot copy content of this page