Monday, June 9, 2025

ಸತ್ಯ | ನ್ಯಾಯ |ಧರ್ಮ

ಕೋಮು ಸೌಹಾರ್ದತೆಯನ್ನು ಕದಡುತ್ತಿರುವ ರಾಜ್ಯಪಾಲರನ್ನು ಪದಚ್ಯುತಗೊಳಿಸಿ: ತಮಿಳುನಾಡು ಸರ್ಕಾರ

ಚೆನ್ನೈ: ತಮಿಳುನಾಡು ರಾಜ್ಯದ ರಾಜ್ಯಪಾಲ ಆರ್. ಎನ್. ರವಿಯವರನ್ನು “ರಾಜ್ಯದ ಶಾಂತಿಗೆ ಬೆದರಿಕೆ” ಎಂದು ಕರೆದಿರುವ ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆ, “ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರವು ಜನ ಸೇವೆ ಮಾಡದಂತೆ ತೊಂದರೆ ನೀಡುತ್ತಿರುವುದಕ್ಕಾಗಿ” ” ಅವರನ್ನು ಪದಚ್ಯುತಿಗೊಳಿಸುವಂತೆ ಕೋರಿ ರಾಷ್ಟ್ರಪತಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದೆ. ಜೊತೆಗೆ ಅವರು ಕೋಮುದ್ವೇಷವನ್ನು ಪ್ರಚೋದಿಸುತ್ತಾರೆ ಎಂದು ಸಹ ಡಿಎಂಕೆ ಆರೋಪಿಸಿದೆ.

“ರಾಜ್ಯಪಾಲ ಆರ್.ಎನ್. ರವಿಯವರು ಸಂವಿಧಾನ ಮತ್ತು ಕಾನೂನನ್ನು ಉಳಿಸಿ, ರಕ್ಷಿಸಿ ಮತ್ತು ಸಮರ್ಥಿಸುವುದಾಗಿ ಮಾಡಿದ್ದ ಪ್ರಮಾಣವಚವನ್ನು ಉಲ್ಲಂಘಿಸಿದ್ದಾರೆ” ಎಂದು ಡಿಎಂಕೆ ಅಧ್ಯಕ್ಷರು ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಲಾಗಿದೆ. ವಿಧಾನಸಭೆಯು ಅಂಗೀಕರಿಸಿದ ಮಸೂದೆಗಳಿಗೆ ಸಹಿ ಹಾಕುವುದರಲ್ಲಿ ಅನವಶ್ಯಕ ವಿಳಬ ಎಸಗುತ್ತಾರೆ ಎಂದೂ ಅದು ಆರೋಪಿಸಿದೆ.

“ಅವರ ಕೆಲವು ಹೇಳಿಕೆಗಳು ದೇಶದ್ರೋಹಿ ಸ್ವರೂಪದಲ್ಲಿದ್ದು, ಅವರ ಹೇಳಿಕೆಗಳು ಸರ್ಕಾರದ ವಿರುದ್ಧ ಅಸಮಾಧನವನ್ನು ಪ್ರಚೋದಿಸುವಂತಿವೆ. ಮತ್ತು ಅವರು ಸಾಂವಿಧಾನಿಕ ಹುದ್ದೆಗೆ ಅನರ್ಹರಾಗಿದ್ದು, ವಜಾ ಮಾಡುವುದೇ ಇದಕ್ಕೆ ಪರಿಹಾರ” ಎಂದು ಪತ್ರ ಹೇಳುತ್ತದೆ.

ಕೆಲವೇ ದಿನಗಳ ಹಿಂದಷ್ಟೇ ಡಿಎಮ್‌ಕೆ ರಾಜ್ಯಪಾಲರ ವಿರುದ್ಧ ದೂರು ನೀಡಲು ತಮ್ಮೊಂದಿಗೆ ಕೈ ಜೋಡಿಸುವಂತೆ ಸಮಾನ ಮನಸ್ಕ ಪಕ್ಷಗಳ ಬಳಿ ವಿನಂತಿಸಿದ್ದನ್ನು ಈ ಹಿನ್ನೆಲೆಯಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಬಿಜೆಪಿಯೇತರ ರಾಜ್ಯಗಳಲ್ಲಿ ರಾಜ್ಯಪಾಲರು ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆನ್ನುವ ವಿಪಕ್ಷಗಳ ಕೂಗಿಗೆ ಈ ಘಟನೆ ಇನ್ನಷ್ಟು ಇಂಬು ನೀಡುತ್ತಿದ್ದು, ಇದಕ್ಕೆ ರಾಷ್ಟ್ರಪತಿಯವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಕೇರಳದಲ್ಲಿಯೂ ರಾಜ್ಯಪಾಲ ಮತ್ತು ಅಲ್ಲಿನ ರಾಜ್ಯ ಸರ್ಕಾರದ ನಡುವಿನ ತಿಕ್ಕಾಟ ಇತ್ತೀಚೆಗೆ ತಾರಕಕ್ಕೇರಿದ್ದು ಅಲ್ಲಿಯೂ ಇಂತಹ ಬೆಳವಣಿಗೆಗಳು ನಡೆಯಬಹುದೇ ಎನ್ನುವುದು ಸದ್ಯದ ಕುತೂಹಲವಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page