Saturday, June 29, 2024

ಸತ್ಯ | ನ್ಯಾಯ |ಧರ್ಮ

ಸಲ್ಮಾನ್ ರಶ್ದಿ : ಒಂದು ಪರಿಚಯ

ಲೇಖಕ ಸಲ್ಮಾನ್ ರಶ್ದಿ ಬರ್ಬರ ಹಲ್ಲೆಗೊಳಗಾಗಿದ್ದಾರೆ. ಬಹು ಹಿಂದೆಯೇ ಅವರ ಮೇಲೆ ಫತ್ವಾ ಹೊರಡಿಸಲಾಗಿತ್ತು. ಯಾವುದೇ ಧರ್ಮದ ಕುರಿತ ಅಭಿಮಾನ ಹಲ್ಲೆ, ಕೊಲೆಯಂತಹ ಕ್ರಮಗಳಿಗೆ ಸಮರ್ಥನೆ ಆಗಲಾರದು. ದುರಭಿಮಾನ ಮತ್ತು ಮತಾಂಧತೆಗಳು ಮಾತ್ರವೇ ಇಂತಹ ಕ್ರೌರ್ಯಗಳಿಗೆ ಕಾರಣವಾಗುತ್ತವೆ. ಈ ಹಿನ್ನೆಲೆಯಲ್ಲಿ ಸಲ್ಮಾನ್ ರಶ್ದಿಯವರ ಕುರಿತ ಒಂದು ಕಿರುಪರಿಚಯ ಇಲ್ಲಿದೆ.

ಧರ್ಮವನ್ನು ಗೌರವಿಸುವುದೆಂದರೆ ಧರ್ಮದ ಬಗೆಗಿನ ಭಯ ಎಂಬುವಂತಾಗಿದೆ. ಇತರ ಎಲ್ಲ ವಿಚಾರಗಳಂತೆ ಧರ್ಮಗಳು ಸಹ ಟೀಕೆ, ವಿಡಂಬನೆ ಮತ್ತು ನಿರ್ಭೀತ ಅಗೌರವಕ್ಕೆ ಅರ್ಹವಾಗಿವೆ – ಸಲ್ಮಾನ್ ರಶ್ದಿ

ಸಲ್ಮಾನ್ ರಶ್ದಿಯವರ ಮೇಲೆ ಹಲ್ಲೆಯಾಗಿದೆ. ವೈದ್ಯರು ಹೇಳಿರುವ ಪ್ರಕಾರ ಅವರ ಒಂದು ಕಣ್ಣು ದೃಷ್ಟಿ ಕಳೆದುಕೊಂಡಿದೆಯಲ್ಲದೇ ಯಕೃತ್ತಿಗೆ ತೀವ್ರ ಪೆಟ್ಟಾಗಿದೆ. ಬಹುಶಃ ಇಂತಹ ಒಂದು ಹಲ್ಲೆ ರಶ್ದಿಯವರಿಗೆ ಅನಿರೀಕ್ಷಿತವೇನೂ ಆಗಿರಲಿಲ್ಲ. ಅವರ ಬಹು ವಿವಾದಿತ ದಿ ಸೆಟಾನಿಕ್ ವರ್ಸಸ್ ಕೃತಿ ಹೊರ ಬಂದಾಗಲೇ ಅವರ ಮೇಲೆ ಧರ್ಮದ್ರೋಹ, ಧರ್ಮನಿಂದನೆಯ ಆರೋಪಗಳು ಬಂದಿದ್ದವಲ್ಲದೆ ಫತ್ವಾಗಳೂ ಹೊರಟಿದ್ದವು.

ಸಲ್ಮಾನ್ ರಶ್ದಿ ಹುಟ್ಟಿದ್ದು 1947 ಜೂನ್ 19 ರಂದು. ಅಂದರೆ ಭಾರತಕ್ಕೆ ಸ್ವಾತಂತ್ರ್ಯ ಬರುವ ಆಸುಪಾಸಿನಲ್ಲಿ. ಅವರು ಕಾಶ್ಮೀರದ ಒಂದು ಸೆಕ್ಯುಲರ್ ಮುಸ್ಲಿಂ ಕುಟುಂಬದಲ್ಲಿ ಜನಿಸಿದ್ದರು. ಇಂದು ಒಬ್ಬ ಭಾರತೀಯ ಬ್ರಿಟೀಷ್ ಪ್ರಜೆಯಾಗಿರುವ ಸಲ್ಮಾನ್ ರಶ್ದಿ 1981 ರಲ್ಲಿ ಮಿಡ್‌ನೈಟ್ಸ್ ಚಿಲ್ಡ್ರನ್ ಎಂಬ ಕಾದಂಬರಿಯ ಮೂಲಕ ಜಗತ್ತಿನ ಗಮನ ಸೆಳೆದವರು. ಸ್ವಾತಂತ್ರ‍್ಯೊತ್ತರ ಭಾರತದ ಕಥೆಯುಳ್ಳ ಈ ಕಾದಂಬರಿಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗಳಿಸಿ ಬ್ರಿಟನ್‌ನ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಪಡೆದುಕೊಂಡಿತು. ರಶ್ದಿ ಅವರ ಮಿಡ್‌ನೈಟ್ಸ್ ಚಿಲ್ಡ್ರನ್ ಕಾದಂಬರಿಯು 600 ಕ್ಕೂ ಹೆಚ್ಚು ಪುಟಗಳನ್ನು ಒಳಗೊಂಡಿದ್ದು, 40 ಕ್ಕೂ ಹೆಚ್ಚು ಭಾಷೆಗೆ ಅನುವಾದಗೊಂಡಿದೆ. ಸಿನಿಮಾ ಮತ್ತು ನಾಟಕ ಕೃತಿಯನ್ನಾಗಿಯೂ ಈ ಪುಸ್ತಕವನ್ನು ಬಳಸಿಕೊಳ್ಳಲಾಗಿದೆ.

1988 ರಲ್ಲಿ ಬಿಡುಗಡೆಗೊಂಡ ದಿ ಸೆಟಾನಿಕ್ ವರ್ಸಸ್ ಕೃತಿ ಬಹಳಷ್ಟು ವಿವಾದಕ್ಕೆ ಗುರಿಯಾದ ಬಳಿಕ ಇರಾನ್ ಈ ಪುಸ್ತಕವನ್ನು ನಿಷೇದಿಸಿತ್ತಲ್ಲದೆ ಇರಾನಿನ ನಾಯಕ ಅಯತೊಲ್ಲಾ ರುಹೊಲ್ಲಾ ಖೊಮೇನಿ ಸಲ್ಮಾನ್ ರಶ್ದಿ ಅವರ ಹತ್ಯೆಗೆ ಫತ್ವಾ ಕೂಡಾ ನೀಡಿದ್ದರು.

1988 ರಲ್ಲಿ ವಿವಾದಕ್ಕೆ ಕಾರಣವಾದ ನಂತರ ರಶ್ದಿ ತಲೆಮರೆಸಿಕೊಂಡು ಬದುಕಬೇಕಾಯಿತು. ಈ ಕಾರಣಕ್ಕಾಗಿ ಬ್ರಿಟನ್ ಸರ್ಕಾರ ಅವರಿಗೆ ಪೋಲಿಸ್ ರಕ್ಷಣೆಯನ್ನು ನೀಡಿತು. 1998 ರಲ್ಲಿ ಇರಾನ್ ಸರ್ಕಾರವು ರಶ್ದಿ ಹತ್ಯೆ ಆದೇಶವನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ ನಂತರ ಸಾರ್ವಜನಿಕವಾಗಿ ಓಡಾಡಲು ಪ್ರಾರಂಭಿಸಿದರು.

ಮತಾಂಧ ಇಸ್ಲಾಮಿಸ್ಟ್ಗಳು ಹೊರಡಿಸಿದ ಫತ್ವಾ ರಶ್ದಿಯವರ ಬರವಣೆಗೆಯನ್ನು ನಿಗ್ರಹಿಸುವಲ್ಲಿ ವಿಫಲವಾಯಿತು. ‘ಜೋಸೆಫ್ ಆ್ಯಂಟನ್’ ಎಂಬ ಗುಪ್ತನಾಮದ ಮೂಲಕ ಅವರು ಬರವಣಿಗೆ ಮುಂದುವರಿಸಿದರು.

ರಶ್ದಿಯವರು ಭಾಗವಹಿಸುತ್ತಿದ್ದ ಸಮ್ಮೇಳನಗಳು ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಬಹಳಷ್ಟು ಬೆದರಿಕೆಗಳು ಮತ್ತು ಬಹಿಷ್ಕಾರಗಳು ಇರುತ್ತಿದ್ದವು. 2007 ರಲ್ಲಿ ಇರಾನ್ ಮತ್ತು ಪಾಕಿಸ್ತಾನದಲ್ಲಿ ಪ್ರತಿಭಟನೆಗಳು ಕೂಡ ನಡೆದವು.

ಬ್ರಿಡ್ಜೆಟ್ ಜೋನ್ಸ್ ಡೈರಿ’ ಸಿನಿಮಾ ಮತ್ತು ಅಮೇರಿಕಾದ ದೂರದರ್ಶನ ಕಾರ್ಯಕ್ರಮ ‘ಸೈನ್ಫೆಲ್ಡ್’ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಂತರರಾಷ್ಟ್ರೀಯ ವಲಯದಲ್ಲಿ ಗುರುತಿಸಿಕೊಂಡಿದ್ದರು.

ಫ್ರೆಂಚ್ ನ ವಿಡಂಬನಾತ್ಮಕ ನಿಯತಕಾಲಿಕ ‘ಚಾರ್ಲಿ ಹೆಬ್ಡೊ’ ಪ್ರವಾದಿ ಮಹಮ್ಮದ್ ಅವರ ಕುರಿತು ಪ್ರಕಟಿಸಿದ್ದ ವ್ಯಂಗ್ಯ ರೇಖಾಚಿತ್ರಗಳ ವಿರುದ್ಧ ಪ್ರಪಂಚದಾದ್ಯಂತ ಮುಸ್ಲಿಮರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಸ್ವಾತಂತ್ರ್ಯ ಮತ್ತು ದಬ್ಬಾಳಿಕೆ, ಅಪ್ರಮಾಣಿಕತೆ ಮತ್ತು ಮೂರ್ಖತನದ ವಿರುದ್ಧ ಯಾವಾಗಲೂ ಶಕ್ತಿಯಾಗಿರುವ ವಿಡಂಬನೆಯ ಕಲೆಯನ್ನು ನಾವೆಲ್ಲರೂ ರಕ್ಷಿಸಬೇಕಾಗಿದ್ದು, ನಾನು ಚಾರ್ಲಿ ಹೆಬ್ಡೊ ಜೊತೆ ನಿಲ್ಲುತ್ತೇನೆ ಎಂದು ರಶ್ದಿ ಹೇಳಿದ್ದರು.

ಸಾರ್ವಜನಿಕ ಜೀವನಕ್ಕೆ ಮರಳಿದ ನಂತರ, ದಿ ಬಿನೀತ್ ಹರ್ ಫೀಟ್(1999) ಮತ್ತು ಪ್ಯೂರಿ(2001) ಎಂಬ ಕಾದಂಬರಿಗಳನ್ನು ಬರೆದರು. ‘ಸ್ಟೆಪ್ ಅಕ್ರಾಸ್ ದಿಸ್ ಲೈನ್’ ಎಂಬ ಪ್ರಬಂಧ ಸಂಗ್ರಹವನ್ನು 2002 ರಲ್ಲಿ ಮತ್ತು ಶಾಲಿಮಾರ್ ದಿ ಕ್ಲೌನ್ (2005) ಮತ್ತು ದಿ ಎನ್‌ಚಾಂಟ್ರೆಸ್ ಆಫ್ ಪ್ಲಾರೆನ್ಸ್(2008) ಕಾದಂಬರಿಗಳನ್ನು ಪ್ರಕಟಿಸಲಾಗಿದೆ.

ಮಕ್ಕಳ ಪುಸ್ತಕವಾದ ಲುಕಾ ಅಂಡ್ ದಿ ಫೈರ್ ಆಫ್ ಲೈಫ್ (2010) ಮತ್ತು ಟು ಇರ‍್ಸ್ ಏಟ್ ಮಂಥ್ಸ್ ಅಂಡ್ ಟ್ವೆಂಟಿ ಏಟ್ ನೈಟ್ಸ್ (2015), ದಿ ಗೊಲ್ಡನ್ ಹೌಸ್ (2017), ಕ್ವಿಚೋಟ್ಟೆ (2019) ಎಂಬ ಕಾದಂಬರಿಯನ್ನು ಪ್ರಕಟಿಸಿದ್ದಾರೆ.

ನಾಲ್ಕು ಬಾರಿ ಮದುವೆಯಾಗಿರುವ ಸಲ್ಮಾನ್ ರಶ್ದಿ ಅವರಿಗೆ ಇಬ್ಬರು ಮಕ್ಕಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು