ಉತ್ತರ ಪ್ರದೇಶದಲ್ಲಿ ಸಂಭಾಲ್ನಲ್ಲಿರುವ ಮೊಘಲರ ಕಾಲದ ಜಾಮಾ ಮಸೀದಿಯಲ್ಲಿ ಸರ್ಕಾರ ಸಮೀಕ್ಷೆ ನಡೆಸುತ್ತಿದ್ದಾಗ ನಡೆದ ಹಿಂಸಾಚಾರದಲ್ಲಿ ನಾಲ್ವರು ನಾಗರೀಕರು ಜೀವ ಕಳೆದುಕೊಂಡಿದ್ದಾರೆ. ಈ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ವಯನಾಡು ನೂತನ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಯೋಗಿ ಆದಿತ್ಯನಾಥ್ ಸರ್ಕಾರ ಮುಸ್ಲಿಂ ಧ್ವೇಷದ ನಡೆಯನ್ನು ಅನುಸರಿಸುತ್ತಿದೆ ಎಂದು ಯೋಗಿ ವಿರುದ್ಧ ಹರಿಹಾಯ್ದಿದ್ದಾರೆ.
ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಈ ಸೂಕ್ಷ್ಮ ವಿಷಯವನ್ನು ಕೂಡಲೇ ಕೈಗೆತ್ತಿಕೊಳ್ಳಬೇಕೆಂದು ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದಾರೆ.
ಮೊಘಲರ ಕಾಲದ ಜಾಮಾ ಮಸೀದಿಯ ಜಾಗದಲ್ಲಿ ಹರಿಹರ ದೇವಸ್ಥಾನವಿತ್ತು. ದೊರೆ ಬಾಬರ್ ಅದನ್ನು ಧ್ವಂಸ ಮಾಡಿ ಮಸೀದಿ ಕಟ್ಟಿಸಿದ್ದ ಎಂಬ ಆರೋಪಿಸಿ ಅರ್ಜಿಯೊಂದನ್ನು ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ನ್ಯಾಯಾಲಯ ಕಳೆದ ತಿಂಗಳು ಅದರ ಸಮೀಕ್ಷೆಗೆ ಆದೇಶಿಸಿತ್ತು. ನಂತರದ ಬೆಳವಣಿಗೆಯಲ್ಲಿ ಸಂಭಾಲ್ ಉದ್ವಿಗ್ನಗೊಂಡಿತು. ಮಂಗಳವಾರ ಒಂದು ಸುತ್ತಿನ ಸಮೀಕ್ಷೆ ನಡೆದಿದ್ದು, ಭಾನುವಾರ ಮತ್ತೊಂದು ಸುತ್ತಿನ ಸಮೀಕ್ಷೆ ನಡೆಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಮಸೀದಿ ಬಳಿ ಮುಸ್ಲಿಂ ಸಮುದಾಯದ ಕೆಲವರು ಗುಂಪು ಗುಂಪಾಗಿ ಜಮಾಯಿಸಿ ಘೋಷಣೆಗಳನ್ನು ಕೂಗಲು ಆರಂಭಿಸಿದರು. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಪೂರ್ಣ ಪ್ರಮಾಣದ ಘರ್ಷಣೆಗೆ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಬಲಪ್ರಯೋಗ ಮಾಡಿದ್ದರು. ಈ ಬಲ ಪ್ರಯೋಗದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.
ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಂದ್ರ ಪೆಸಿಯಾ ಹೇಳಿದರು. ಹಿಂಸಾಚಾರಕ್ಕೆ ಸಂಬಂಧಿಸಿದಂತೆ 400 ಜನರ ವಿರುದ್ಧ ಒಟ್ಟು ಏಳು ಪ್ರಕರಣಗಳನ್ನು ದಾಖಲಿಸಲಾಗಿದೆ.
ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಹಿಂಸಾಚಾರದಲ್ಲಿ ಸತ್ತವರಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. “ಸರ್ಕಾರ ಎಲ್ಲ ಬದಿಗಳಿಂದ ವಿಚಾರಣೆ ನಡೆಸಲಿಲ್ಲ. ಸಂವೇದನಾರಹಿತವಾಗಿ ವರ್ತಿಸಿತು. ಇದು ವಾತಾವರಣವನ್ನು ಹಾಳುಮಾಡಿತು ಮತ್ತು ಸಾವುಗಳಿಗೆ ಕಾರಣವಾಯಿತು. ಈ ಸಾವುಗಳಿಗೆ ಬಿಜೆಪಿಯೇ ಹೊಣೆಯಾಗಿದೆ” ಎಂದು ಆರೋಪಿಸಿದ್ದಾರೆ.
ಬಿಜೆಪಿಯು ಹಿಂದೂ ಮತ್ತು ಮುಸ್ಲಿಮರ ನಡುವೆ ಬಿರುಕು ಮೂಡಿಸುತ್ತಿದೆ, ಈ ವಿಷಯದಲ್ಲಿ ಶೀಘ್ರವಾಗಿ ಮಧ್ಯಪ್ರವೇಶಿಸುವಂತೆ ನಾನು ಸುಪ್ರೀಂ ಕೋರ್ಟ್ಗೆ ಒತ್ತಾಯಿಸುತ್ತೇನೆ ಎಂದಿರುವ ಅವರು, ತನಿಖೆ ಪೂರ್ಣಗೊಳ್ಳುವವರೆಗೂ ಜನರು ಶಾಂತಿ ಮತ್ತು ಸೌಹಾರ್ದತೆ ಕಾಪಾಡಿಕೊಳ್ಳಬೇಕು ಎಂದಿದ್ದಾರೆ.
ಹೊಸದಾಗಿ ಚುನಾಯಿತ ಲೋಕಸಭಾ ಸಂಸದರಾದ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತನ್ನ ಸಹೋದರನ ಹೇಳಿಕೆಯನ್ನು ಬೆಂಬಲಿಸಿ ಹೇಳಿಕೆ ನೀಡಿದ್ದು, ತನಿಖೆಗಾಗಿ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದಾರೆ.