ಬೆಂಗಳೂರು: “ವಕ್ಫ್, ಹಲಾಲ್ ಬಜೆಟ್ ಮತ್ತು ಕಾಂಟ್ರಾಕ್ಟ್ ಜಿಹಾದ್ಗಾಗಿ ಹೋರಾಡಿದ ಕರ್ನಾಟಕದ ಬಿಜೆಪಿ ಹುಲಿಗಳು ಹಾಗೂ ಮಸೀದಿಗಳ ಮುಂದೆ ಡಿಜೆ ಹಾಕಿ ಕುಣಿದವರು, ಹೋಳಿ ಬಣ್ಣ ಎರಚಿದವರು. ಈಗ ಮಸೀದಿಗಳ ಮುಂದೆ ಸಾಲುಗಟ್ಟಿ ನಿಂತು ‘ಸೌಗತ್-ಎ-ಮೋದಿ’ ಕಿಟ್ಗಳನ್ನು ವಿತರಿಸಲಿದ್ದಾರೆ. ಇದನ್ನ ನೋಡಿದರೆ ಎಲ್ಲಾ ಸ್ವಯಂ ಘೋಷಿತ ಹಿಂದೂ ಹುಲಿಗಳ ಬಗ್ಗೆ ಕನಿಕರ ಮೂಡುತ್ತಿದೆ,” ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ರಾಜ್ಯ ಬಿಜೆಪಿಯನ್ನು ಟೀಕಿಸಿದ್ದಾರೆ.
ಈ ಕುರಿತು ತಮ್ಮ ಎಕ್ಸ್ನಲ್ಲಿ ಬರೆದು ಕೊಂಡಿರುವ ಅವರು, ‘ಸೌಗತ್-ಎ-ಮೋದಿ’ ಕಿಟ್ಗಳನ್ನು ವಿತರಿಸಲಿರುವ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾಹೇಬರು ಕಾತರರಾಗಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.
“ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ವಾಟ್ಸಾಪ್ ಯೂನಿವರ್ಸಿಟಿಯನ್ನು ಬಿಟ್ಟು, ಸಂವಿಧಾನವನ್ನು ಚೆನ್ನಾಗಿ ಓದಬೇಕು ಹಾಗೂ ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳಿವೆ ಎನ್ನುವ ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕು. ವಾಟ್ಸಾಪ್ ಯೂನಿವರ್ಸಿಟಿಯನ್ನೇ ನಂಬಿಕೊಂಡರೆ ಇದೇ ರೀತಿ ತಮ್ಮ ಪಕ್ಷದ ಅನಿರೀಕ್ಷಿತ ಮಾಸ್ಟರ್ ಸ್ಟ್ರೋಕ್ ಗಳಿಂದ ಬೆಪ್ಪರಾಗಬೇಕಾಗುತ್ತದೆ!” ಎಂದು ಖರ್ಗೆ ಟೀಕಿಸಿದ್ದಾರೆ.
ಇನ್ನೂ ಮುಂದುವರೆದು, ಬಿಜೆಪಿಗರಿಗೆ ನನ್ನ ಸಲಹೆ, ಈ ಕಾರ್ಯಕ್ರಮಕ್ಕೆ ಬರುವಾಗ ದಯವಿಟ್ಟು ನಿಮ್ಮ ಅಲ್ಪಸಂಖ್ಯಾತ ಮೋರ್ಚಾಗೆ ಕುಫಿ(ಟೋಪಿ)ಗಳನ್ನು ತರಲು ಹೇಳಲು ಮರೆಯಬೇಡಿ ಎಂದು ಸಲಹೆ ಸೂಚಿಸಿದ್ದಾರೆ.
ಅಷ್ಟಕ್ಕೂ ಏನಿದು ‘ಸೌಗತ್-ಎ-ಮೋದಿ’ ಕಿಟ್?
ರಂಜಾನ್ ಹಿನ್ನಲೆಯಲ್ಲಿ, ಬಿಜೆಪಿ ಅಲ್ಪಾ ಸಂಖ್ಯಾತ ಮೂರ್ಚಾದಿಂದ ವತಿಯಿಂದ ‘ಸೌಗತ್-ಎ-ಮೋದಿʼ ಕಿಟ್ ವಿತರಿಸುವ ಅಭಿಯಾನವನ್ನು ಆರಂಭಿಸಿದ್ದು, ಭಾರತ ದೇಶದಾದ್ಯಂತ, 32 ಲಕ್ಷ ಬಡ ಮುಸ್ಲೀಮರಿಗೆ ವಿಶೇಷ ಕಿಟ್ಗಳನ್ನ ವಿರಿಸುವ ಗುರಿಯನ್ನ ಭಾರತೀಯ ಜನತಾ ಪಾರ್ಟಿ ಹೊಂದಿದೆ. ಈ ಅಭಿಯಾನವು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ. ಇದು ಬಡ ಮುಸ್ಲಿಮರು ಯಾವುದೇ ಕಷ್ಟವಿಲ್ಲದೇ ಹಬ್ಬವನ್ನ ನಡೆಸಲು ಸಹಾಯಕವಾಗುವ ಗುರಿಯನ್ನೂ ಕೂಡ ಹೊಂದಿದೆ ಎನ್ನುವುದು ರಾಷ್ಟ್ರಾಧ್ಯಕ್ಷ ಅಭಿಪ್ರಾಯವಾಗಿದೆ
ಕಿಟ್ ನಲ್ಲಿ ಏನೇನಿದೆ?
ಈ ಕಿಟ್ಗಳಲ್ಲಿ, ಆಹಾರ ಪದಾರ್ಥಗಳು, ಬಟ್ಟೆ, ಶಾವಿಗೆ, ಡ್ರೈ ಫ್ರೂಟ್ಸ್ ಗಳು ಇರಲಿವೆ.