ಬೆಂಗಳೂರು: ಸಾವರ್ಕರ್ ಜನ್ಮದಿನದಂದು ಕಾಂಗ್ರೆಸ್ ವಿದ್ಯಾರ್ಥಿ ಘಟಕವಾದ NSUI ಸಾವರ್ಕರ್ ಫ್ಲೈ ಓವರ್ ಬೋರ್ಡಿಗೆ ಮಸಿ ಬಳಿದು ಅದರ ಹೆಸರನ್ನು ಬದಲಾಯಿಸಿದ ಘಟನೆಯ ಕುರಿತು ವಿಪಕ್ಷ ನಾಯಕ ಆರ್ ಅಶೋಕ ಪ್ರತಿಕ್ರಿಯಿಸಿದ್ದು ಅವರು, “ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಕಾಂಗ್ರೆಸ್ ವೇಷದಲ್ಲಿರುವ ಉಗ್ರಗಾಮಿ ಸಂಘಟನೆ ಪಿಎಫ್ಐ ಎಂಬುದು ಮತ್ತೊಮ್ಮೆ ಸಾಬೀತಾಗಿದೆ” ಎಂದು ಆರೋಪಿಸಿದ್ದಾರೆ.
ತಮ್ಮ X ಖಾತೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಅವರು “ಯಲಹಂಕದ ವೀರ ಸಾವರ್ಕರ್ ಮೇಲ್ಸೇತುವೆ ನಾಮಫಲಕಕ್ಕೆ ಎನ್ಎಸ್ಯುಐ ಕಾರ್ಯಕರ್ತರು ಮಸಿ ಬಳಿದಿರುವ ಘಟನೆ ಅತ್ಯಂತ ಖಂಡನೀಯವಾಗಿದ್ದು, ಭಾರತಾಂಬೆಯ ಹೆಮ್ಮೆಯ ಪುತ್ರ ವೀರ ಸಾರ್ವಕರರಿಗೆ ಅಪಮಾನ ಮಾಡಿದರೆ ಖಂಡಿತ ಸಹಿಸುವುದಿಲ್ಲ” ಎಂದು ಹೇಳಿದ್ದಾರೆ.
ವಿಷಯದ ಕುರಿತು ದೀರ್ಘ ಪೊಸ್ಟ್ ಬರೆದಿರುವ ಅವರು “ಕಾಂಗ್ರೆಸ್ ಇಂದು ಸಾವರ್ಕರ್ರನ್ನು ವಿರೋಧಿಸಬಹುದು. ಆದರೆ ಸಾವರ್ಕರ್ರನ್ನು ಅಪಾರವಾಗಿ ಪ್ರೀತಿಸುವವರು, ಗೌರವಿಸುವ ಅಸಂಖ್ಯಾತ ಭಾರತೀಯರ ಸಾಲಲ್ಲಿ ಗಾಂಧೀಜಿ ಅವರೂ ನಿಲ್ಲುತ್ತಾರೆ. ಗಾಂಧೀಜಿ ಪತ್ರಗಳಲ್ಲಿ ಸಾವರ್ಕರ್ರನ್ನು ಪ್ರೀತಿಯಿಂದ ʼಭಾಯ್ʼ ಎಂದು ಸಂಬೋಧಿಸುತ್ತಿದ್ದರು. ಕಾಂಗ್ರೆಸ್ ಗಾಂಧೀಜಿಯನ್ನೂ ವಿರೋಧಿಸುವುದೇ?” ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ PFI ಸಂಘಟನೆಯೆದುರು ಮಂಡಿಯೂರಿದೆ ಎಂದು ಆರೋಪಿಸಿರುವ ಅವರು “ಅಪ್ರತಿಮ ಸ್ವತಂತ್ರ ಹೋರಾಟಗಾರರಾದ ವೀರ ಸಾವರ್ಕರ್ ಪಾಠಗಳನ್ನು ಪಠ್ಯಪುಸ್ತಕಗಳಿಂದ ಕೈಬಿಡಬೇಕು ಎಂಬುದು ಎಸ್.ಡಿ.ಪಿ.ಐ ಅಂಗಸಂಸ್ಥೆ ಕ್ಯಾಂಪಸ್ ಫ್ರಂಟ್ನ ಇರಾದೆಯಾಗಿತ್ತು. ಅದನ್ನು ಈಡೇರಿಸಿ ಪಿಎಫ್ಐ ಗೆ ಮಂಡಿಯೂರಿದ ಕಾಂಗ್ರೆಸ್ ಸರ್ಕಾರ ಈಗ NSUI ಮೂಲಕ ಈ ಹೇಯ ಕೃತ್ಯ ಮಾಡಿಸಿ ಮತ್ತೊಮ್ಮೆ ಮುಸ್ಲಿಂ ಮೂಲಭೂತವಾದಿಗಳ ತುಷ್ಟೀಕರಣ ಮಾಡುತ್ತಿದೆ” ಎಂದು ಹೇಳಿದ್ದಾರೆ.
ಈ ನಡುವೆ ಸಾಮಾಜಿಕ ಜಾಲತಾಣದಲ್ಲಿಯೂ ಈ ಕುರಿತು ಪರ ವಿರೋಧ ಅಭಿಪ್ರಾಯಗಳು ಮೂಡಿ ಬರುತ್ತಿದ್ದು, ಕೆಲವು ಕರ್ನಾಟಕಕ್ಕೆ ಸಂಬಂಧವೇ ಇಲ್ಲದ ಸಾವರ್ಕರ್ ಹೆಸರನ್ನು ಫ್ಲೈ ಓವರ್ ಒಂದಕ್ಕೆ ಇಟ್ಟಿದ್ದೇ ಮೊದಲ ತಪ್ಪು ಎಂದು ಹೇಳಿದ್ದಾರೆ. ಇನ್ನೂ ಕೆಲವರು “ನಿಮ್ಮದು ಈಗ ಟ್ವಿಟ್ ಮಾತ್ರಾನಾ ಇಲ್ಲ ಅಡ್ಜಸ್ಟ್ಮೆಂಟ್ ಬಿಟ್ಟು ಏನಾದರೂ ಹೋರಾಟ ಮಾಡೋದು ಇದೆಯಾ!? ವಿರೋಧ ಪಕ್ಷ ಇದೆ ಅನ್ನುವುದಾದರು ಜನರಿಗೆ ನೆನಪಿರಲಿ.” ಎಂದು ಅಶೋಕ್ ಅವರನ್ನೇ ಪ್ರಶ್ನಿಸಿದ್ದಾರೆ.