ದಾವಣಗೆರೆ ಜಿಲ್ಲೆಯ ನ್ಯಾಮತಿ ಎಸ್.ಬಿ.ಐ ಬ್ಯಾಂಕ್ ನ ಚಿನ್ನಾಭರಣ ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲಾ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳು ಮತ್ತು ಅವರ ತಂಡದ ಶೋಧ ಈಗ ಮತ್ತಷ್ಟು ಚುರುಕುಗೊಂಡಿದೆ.
2024 ರ ನವೆಂಬರ್ 26ರಂದು ನ್ಯಾಮತಿ ಎಸ್.ಬಿ.ಐ ಬ್ಯಾಂಕ್ ನಲ್ಲಿದ್ದ 17.750 ಕೆಜಿ ಚಿನ್ನಾಭರಣ ದರೋಡೆ ಆಗಿತ್ತು. ಬ್ಯಾಂಕಿನಲ್ಲಿ ವ್ಯವಹರಿಸುತ್ತಿದ್ದ 509 ಗ್ರಾಹಕರ ಪೈಕಿ ಹಲವು ಗ್ರಾಹಕರು ಅಡವಿಟ್ಟಿದ ಚಿನ್ನವನ್ನು ಆರೋಪಿಗಳು ಕಳವು ಮಾಡಿದ್ದರು.
ತಮಿಳುನಾಡು ಮೂಲದ ವಿಜಯಕುಮಾರ್(32), ಅಜಯ್ ಕುಮಾರ್(33), ನ್ಯಾಮತಿಯ ನಿವಾಸಿ ಮಂಜುನಾಥ್(40), ಹೊನ್ನಾಳಿಯ ಅಭಿಷೇಕ್(28), ಚಂದ್ರಶೇಖರ್(34) ಅವರನ್ನು ಗುರುವಾರ ಬಂಧಿಸಿ 224 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಉಳಿದ ಚಿನ್ನವನ್ನು ಜಪ್ತಿ ಹಾಗೂ ಪ್ರಮುಖ ಆರೋಪಿ ಪರಮಾನಂದನ ಬಂಧನಕ್ಕಾಗಿ ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ.
ಬಂಧಿತ ವಿಜಯಕುಮಾರ್ ಮತ್ತು ಅಜಯಕುಮಾರ್ ಕಳೆದ ಎರಡು ವರ್ಷಗಳಿಂದ ನಾಮತಿಯಲ್ಲಿ ಬೇಕರಿ ನಡೆಸುತ್ತಿದ್ದರು. ವಿಜಯಕುಮಾರ್ ಮತ್ತು ಅಜಯ್ ಕುಮಾರ್ ಅವರಿಗೆ ಉಳಿದವರು ಸಾಥ್ ನೀಡಿದ್ದರು. ಪ್ರಮುಖ ಆರೋಪಿ ಹಾಗೂ ಪ್ರಕರಣದ ಕಿಂಗ್ ಪಿನ್ ಎಂದೇ ಕರೆಸಿಕೊಂಡಿರುವ ಪರಮಾನಂದನ ಪತ್ತೆಗೆ ಶೋಧ ಕಾರ್ಯ ಮುಂದುವರೆದಿದೆ.