Friday, February 28, 2025

ಸತ್ಯ | ನ್ಯಾಯ |ಧರ್ಮ

ಸಮಾಜ ಸೇವೆಯಿಂದ ದೇವರ ದರ್ಶನ: ರೋಟರಿ ಕ್ಲಬ್ ಅಧ್ಯಕ್ಷರಾದ ಡಾ.ನಾಗಾನಂದ ಕೆಂಪರಾಜ್

ಕೋಲಾರ,ಫೆ,28: “ಸಮಾಜಸೇವೆಯನ್ನು ಮಾಡುವುದು ಎಂದರೆ ದೇವರನ್ನು ದರ್ಶನ ಮಾಡಿಕೊಳ್ಳುವುದೇ ಆಗಿದ್ದು, ಸೇವೆಯೇ ದೇವರು” ಎಂದು ಕೋಲಾರ ಜಿಲ್ಲಾ ರೋಟರಿ ಕ್ಲಬ್ ಅಧ್ಯಕ್ಷರೂ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರೂ ಆದ ಡಾ.ನಾಗಾನಂದ ಕೆಂಪರಾಜ್ ಅವರು ಅಭಿಪ್ರಾಯಪಟ್ಟರು.

ಕೋಲಾರ ಸಮೀಪದ ಅಣ್ಣಿಹಳ್ಳಿ ಗ್ರಾಮದಲ್ಲಿ ಬೆಂಗಳೂರಿನ ಕೆ.ನಾರಾಯಣಪುರದ ಕ್ರಿಸ್ತು ಜಯಂತಿ ಕಾಲೇಜಿನ ಕರ್ನಾಟಕ ನಾಗರಿಕ ರಕ್ಷಣಾ ದಳ(ಕೆಸಿಡಿಸಿ) ವತಿಯಿಂದ ಹಮ್ಮಿಕೊಂಡಿರುವ ೪ ದಿನಗಳ ‘ಕಾಲೇಜು ವಿದ್ಯಾರ್ಥಿಗಳ ಗ್ರಾಮೀಣ ಶಿಬಿರ’ವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಸಂಸ್ಕೃತಿಯಲ್ಲಿ ಸಮಾಜಸೇವೆಗೆ ಮಹೋನ್ನತವಾದ ನೆಲೆ ಮತ್ತು ಬೆಲೆ ಇದೆ. ಮಹಾತ್ಮಾ ಗಾಂಧೀಜಿ, ವಿವೇಕಾನಂದ, ಕುವೆಂಪು ಮೊದಲಾದವರು ಬಡವರ ಸೇವೆಯನ್ನು ಕುರಿತು ಮಾರ್ಗದರ್ಶನ ಮಾಡಿದ್ದಾರೆ. ಬಡವರ ಸೇವೆಯಲ್ಲಿ ಭಗವಂತನನ್ನು ಕಾಣಿರಿ ಎಂದಿದ್ದಾರೆ. ದರಿದ್ರ ದೇವೋಭವ ಎಂಬ ನುಡಿಯು ಸಮಾಜಸೇವೆಗೆ ಸ್ಫೂರ್ತಿ ನೀಡುವಂತದ್ದಾಗಿದೆ. ನಮಗೆ ಹುಟ್ಟು ಮತ್ತು ಸಾವು ಸಹಜವಾದುದು. ಆದರೆ ನಮ್ಮ ಬಾಳ್ವೆಗೆ ಬೆಲೆ ಬರುವುದು ನಾವು ಮಾಡುವ ಸೇವೆಯಿಂದ ಮಾತ್ರ ಎಂದು ತಿಳಿಸಿದರು.

ನಾವು ಎಷ್ಟು ಓದಿದ್ದೀವಿ, ಎಷ್ಟು ಸಂಪಾದನೆ ಮಾಡಿದ್ದೀವಿ, ಎಷ್ಟು ಎತ್ತರ ಬೆಳೆದಿದ್ದೀವಿ ಅನ್ನೋದಕ್ಕೆ ಬೆಲೆ ಬರೋದು ನಮ್ಮನ್ನು ಈ ನೆಲ, ಜಲ, ಜನರ ಸೇವೆಗೆ ತೊಡಗಿಸಿಕೊಂಡಾಗ ಮಾತ್ರ. ಸೇವಾ ಮನೋಧರ್ಮವು ಶ್ರೇಷ್ಠವಾದುದು. ಇದನ್ನು ಇಂದಿನ ವಿದ್ಯಾರ್ಥಿಗಳು, ಯುವಜನರು ಬೆಳೆಸಿಕೊಳ್ಳಬೇಕು. ದೇಶಕ್ಕೆ ತುರ್ತು ಸಂದರ್ಭ ಬಂದಾಗ ಜವಾಬ್ದಾರಿಯುತ ನಾಗರೀಕರಾಗಿ ದೇಶ ಸೇವೆ ಮಾಡಲು ಸಿದ್ಧರಾಗಬೇಕು ಎಂಬುದನ್ನು ಇಂತಹ ಗ್ರಾಮೀಣ ಶಿಬಿರಗಳು ಕಲಿಸಿಕೊಡುತ್ತವೆ. ಗ್ರಾಮಗಳ ಜನರಲ್ಲಿ ಕಾಣುವ ಪ್ರೀತಿ, ನೆಲದ ಅರಿವುಗಳನ್ನು ಕಲಿತುಕೊಂಡರೆ ಅದರಿಂದ ಜಗತ್ತಿನಲ್ಲಿ ಯಾವು ಮೂಲೆಯಲ್ಲಿದ್ದಾದರೂ ಬದುಕಬಹುದು ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯ ಸಮಾಜ ಸೇವಕರೂ ಭಾರತ ಸರ್ಕಾರದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಮಾಜಿ ಸದಸ್ಯರಾದ ಬೆಳಗಾನಹಳ್ಳಿ ಮುನಿವೆಂಕಟಪ್ಪ ಅವರು ಮಾತನಾಡಿ, ಹಳ್ಳಿಯಲ್ಲಿ ಬದುಕಿ ಬಾಳಲು ಕಲಿತರೆ ಡೆಲ್ಲಿಯಲ್ಲೂ ಬಾಳಿ ಬದುಕುವ ಕೌಶಲ್ಯ ಸಿದ್ಧಿಸುತ್ತದೆ. ರೈತರೇ ರಾಷ್ಟçದ ಬೆನ್ನೆಲುಬು. ರೈತರು ಬಾಳಿಬದುಕಿ ತಮ್ಮ ಕೃಷಿಯ ಮೂಲಕ ಇಡೀ ಜಗತ್ತನ್ನು ಬೆಳಗುವ ಕಾಯಕಶ್ರದ್ಧೆಯನ್ನು ಇಂದಿನ ಹೊಸ ತಲೆಮಾರು ಅರಿಯಬೇಕು. ವಿದ್ಯಾಭ್ಯಾಸದ ಜೊತೆಗೆ ಜನಪರವಾದ ಸೇವಾ ಮನೋಭಾವವನ್ನು ರೂಢಿಸಿಕೊಳ್ಳಬೇಕು. ಭಾರತ ಸಂವಿಧಾನವೆಂಬ ನಮ್ಮೆಲ್ಲರ ರಕ್ಷಾ ಕವಚವನ್ನು ಕಾಪಾಡಿಕೊಂಡು ಹಳ್ಳಿಗಳ ಉದ್ಧಾರದ ಮೂಲಕ ರಾಷ್ಟ್ರೋದ್ಧಾರವಾಗುವತ್ತ ಶ್ರಮಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಣ್ಣಿಹಳ್ಳಿ ರೇಷ್ಮೆ ಬೆಳೆಗಾರರ ಸಹಕಾರ ಸಂಘದ ಕಾರ್ಯದರ್ಶಿಯಾದ ಸೋಮನಾಥ್, ರಾಷ್ಟçಪ್ರಶಸ್ತಿ ಪ್ರಶಸ್ತಿ ವ್ಯಾಸ್ ಸಮ್ಮಾನ್ ಪುರಸ್ಕೃತ ಯುವ ವಿದ್ವಾಂಸರಾದ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ, ಯುವಕವಿ ಹಾಗೂ ಕಲಾವಿದ ಅಮರನಾಥ್ ಅರಿನಾಗನಹಳ್ಳಿ, ಸರ್ಕಾರಿ ಉಪಕರಣಾಗಾರ ಹಾಗೂ ತರಬೇತಿ ಕೇಂದ್ರದ ಕನ್ನಡ ಉಪನ್ಯಾಸಕರಾದ ಪ್ರವೀಣ್ ಮಟ್ನಹಳ್ಳಿ ಅವರು ಉಪಸ್ಥಿತರಿದ್ದರು. ಕ್ರಿಸ್ತು ಜಯಂತಿ ಕಾಲೇಜಿನ ಕರ್ನಾಟಕ ನಾಗರಿಕ ರಕ್ಷಣಾ ದಳ(ಕೆಸಿಡಿಸಿ) ಸಂಯೋಜಕರಾದ ಡಾ.ಮುಸ್ಲಿಂ ಅಬ್ದುಲ್ ರಜಾಕ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಯೋಜಕರಾದ ಡಾ.ಎಸ್.ಇಂದಿರಾ ಅವರು ವಂದಿಸಿದರು. ಗ್ರಾಮೀಣ ಶಿಬಿರದಲ್ಲಿ ಕ್ರಿಸ್ತು ಜಯಂತಿ ಕಾಲೇಜಿನ ವಿವಿಧ ಅಧ್ಯಯನ ಶಾಖೆಗಳ ೫೦ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page