Thursday, June 13, 2024

ಸತ್ಯ | ನ್ಯಾಯ |ಧರ್ಮ

ವೈದಿಕ ಕಥನ ಕಲೆಗೆ ಸಾಟಿಯುಂಟೇ…!!

ಹಿಂದುತ್ವ ಪ್ರತಿಪಾದಕರ ಬ್ರಾಹ್ಮಣ್ಯದ ಪೋಷಣೆಗೆ ಸಂಬಂಧಿಸಿದ ಹಾಗು ಬ್ರಾಹ್ಮಣ್ಯಕ್ಕೆ ತೊಡಕಾಗುವವರ ಅವಹೇಳನದ ಕಪೋಲ ಕಲ್ಪಿತ ಕಥಾಸೃಷ್ಟಿಗೆ ದೊಡ್ಡ ಇತಿಹಾಸವೇ ಇದೆ. ವೈದಿಕ ಮಹಾಶಯರುಗಳು ಹರಿಬಿಡುವಂತಹ ರಂಜನೀಯ ಕಟ್ಟು ಕಥೆಗಳು ಮೇಲ್ನೋಟಕ್ಕೆ ನಿರುಪದ್ರವಿ ಎಂಬಂತೆ ತೋರಿದರೂ ಅದು ಸದ್ದಿಲ್ಲದೆ ಮಾಡುವಂತಹ ಭಾವನಾತ್ಮಕ ಪರಿಣಾಮಗಳು ಅಗಾಧವಾದುದು ಎನ್ನುತ್ತಾರೆ ಶಂಕರ್‌ ಸೂರ್ನಳ್ಳಿ

ಉತ್ತರ ಭಾಗದಿಂದ ಕಬ್ಜಾ ಮಾಡಿಕೊಳ್ಳುತ್ತಾ ಬಂದ ಬ್ರಿಟಿಷರಿಗೆ ಭಾರತವನ್ನು ಸಂಪೂರ್ಣವಾಗಿ ಕೈವಶ ಮಾಡಿಕೊಳ್ಳಲು ಮಹಾ ತೊಡಕಾಗಿದ್ದವನೆಂದರೆ ದಕ್ಷಿಣದ ಮೈಸೂರು ಪ್ರಾಂತ್ಯದಲ್ಲಿ ಆಳ್ವಿಕೆ ನಡೆಸುತ್ತಿದ್ದ ಟಿಪ್ಪು ಸುಲ್ತಾನ. ಮಹಾ ಸ್ವಾಭಿಮಾನಿಯಾಗಿದ್ದ ಆತ ಬ್ರಿಟಿಷರೆದುರು ಅಕ್ಷರಶಃ ಕೊನೆಯುಸಿರು ಇರುವ ತನಕವೂ ಹೋರಾಡುತ್ತಾ ಮರಣಿಸಿದ. ಸ್ವತಃ ಪರಾಕ್ರಮಿಯಾಗಿ ಸಶಕ್ತ ಸೇನೆಯನ್ನೂ ಹೊಂದಿದ್ದ ಟಿಪ್ಪುವಿನಿಂದ ಹಲವು ಬಾರಿ ಮುಟ್ಟಿ ನೋಡಿಕೊಳ್ಳುವಂತಹ ಪೆಟ್ಟು ತಿಂದಂತಹ ಬ್ರಿಟಿಷರು ಅವನನ್ನು ಇನ್ನಿಲ್ಲದಂತೆ ದ್ವೇಷಿಸುತ್ತಿದ್ದರು. ಆದರೆ ಟಿಪ್ಪುವನ್ನು ಸಾಮ್ರಾಜ್ಯ ವಿಸ್ತರಣೆಯ ಕಾರಣಕ್ಕಾಗಿ ದ್ವೇಷಿಸುತ್ತಿದ್ದ ಬ್ರಿಟಿಷರು ದೇಶ ಬಿಟ್ಟು ಹೋದಮೇಲೆ ಇವತ್ತು ಇಲ್ಲಿನ ಕೋಮುವಾದಿಗಳು ಬ್ರಿಟಿಷರನ್ನೂ ಮೀರಿಸಿ ಟಿಪ್ಪುವಿನ ವಿರುದ್ಧ ದ್ವೇಷವನ್ನು ಕಾರುತ್ತಿದ್ದಾರೆ.

ಸಾಮಾಜಿಕವಾಗಿ ಅನೇಕ ಸುಧಾರಣಾ ಕಾರ್ಯಗಳನ್ನು ಜಾರಿಗೆ ತಂದು ಜನಸಾಮಾನ್ಯರಿಗೆ ಪ್ರೀತಿ ಪಾತ್ರನಾಗಿದ್ದ ಸುಲ್ತಾನ ಶತ್ರುಗಳ ವಿಚಾರದಲ್ಲಿ ಅತ್ಯಂತ ನಿಷ್ಟುರನಾಗಿದ್ದದ್ದೂ ಹೌದು. ತಾನು ಕಟ್ಟಾ ಸಂಪ್ರದಾಯಸ್ಥ ಮುಸಲ್ಮಾನನಾಗಿದ್ದರೂ ಹಿಂದೂ ದೇವದೇವತೆಗಳ ವಿಚಾರದಲ್ಲಿ ಅತ್ಯಂತ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದುದಕ್ಕೆ ಶೃಂಗೇರಿ, ಕೊಲ್ಲೂರು, ಶಂಕರನಾರಾಯಣ, ಮೇಲುಕೋಟೆ ಮೊದಲಾದ ದೇವಳದೊಂದಿಗಿನ ಆತನ ನಂಟಿರುವ ಐತಿಹಾಸಿಕ ದಾಖಲೆಗಳೇ ಸಾಕ್ಷಿ. ಆದರೂ ಕೂಡ ಟಿಪ್ಪು ಎಂದಾಕ್ಷಣ ಕೋಮುವಾದಿಗಳು ಉರಿದು ಕೊಳ್ಳುವುದುಂಟು. ಆತನ ವಿರುದ್ಧ ಇಲ್ಲಸಲ್ಲದ ಕಟ್ಟು ಕಥೆಗಳನ್ನು ಕಟ್ಟಿ ಹರಿಬಿಟ್ಟು ಟಿಪ್ಪು ಒಬ್ಬ ದುಷ್ಟ ಎಂದು ಬಿಂಬಿಸುವುದಕ್ಕಾಗಿ ಇನ್ನಿಲ್ಲದ ಪ್ರಯತ್ನಗಳನ್ನು ಆವತ್ತಿನಿಂದಲೂ ಮಾಡುತ್ತಿದ್ದಾರೆ. ಇದಕ್ಕೆ ಪರೋಕ್ಷ ಕಾರಣ ಟಿಪ್ಪುವಿನ ಹೆತ್ತವರು. ಅಂದರೆ ಆತ ಮುಸ್ಲಿಮನಾಗಿದ್ದದ್ದೇ ಇದಕ್ಕೆ ಕಾರಣ. ಅವನ ಬಿರುದಾದ ’ಮೈಸೂರು ಹುಲಿ’ ಎಂಬುದರಿಂದ ಹಿಡಿದು ಆತನ ನ್ಯಾಯ ನಿಷ್ಠುರತೆ ಹೋರಾಟಗಳನ್ನೆಲ್ಲ ಅನುಮಾನದ ದೃಷ್ಟಿಯಿಂದಲೇ ನೋಡುವುದನ್ನು ಮುಂದುವರೆಸಿಕೊಂಡು ಬರಲಾಗುತ್ತಿದೆ. ಅವನ ವಿರುದ್ಧ ಇಲ್ಲಸಲ್ಲದ ಕಟ್ಟು ಕಥೆಗಳನ್ನು ಕಟ್ಟಿ ಮುಂದಿನ ಪೀಳಿಗೆಗೆ ಟಿಪ್ಪು ಒಬ್ಬ ನೆನಪಿಸಿಕೊಳ್ಳಬಾರದಂತಹ ದುರುಳವ್ಯಕ್ತಿ ಎಂಬ ಭಾವನೆಯನ್ನು ಬೆಳೆಸುವಂತಹ ವ್ಯವಸ್ಥಿತ ಸಂಚು ನಡೆಯುತ್ತಿದೆ.

ಇದಕ್ಕೆ ಇತ್ತೀಚಿಗಿನ ಉದಾಹರಣೆಯಾಗಿ ರಂಗಾಯಣ ಪ್ರಾಯೋಜಿತ ’ಟಿಪ್ಪುವಿನ ನಿಜ ಕನಸುಗಳು’ ನಾಟಕವಾಗಲೀ ಅಥವ ಟಿಪ್ಪುವನ್ನು ಕೊಂದದ್ದು ಪ್ರಭುತ್ವದ ಹಿನ್ನೆಲೆಯ ಬ್ರಿಟಿಷರಲ್ಲ ಬದಲಿಗೆ ಉರಿಗೌಡ ಮತ್ತು ದೊಡ್ಡ ನಂಜೇ ಗೌಡರೆಂಬವರು ಅಟ್ಟಾಡಿಸಿ ಓಡಿಸಿಕೊಂಡು ಹೋಗಿ ಕೊಂದರೆಂಬ ಕಪೋಲಕಲ್ಪಿತ ಕಥೆಯ ಹಿಂದಿರುವುದು ಇದೇ  ವೈದಿಕತೆಯ ಮಿದುಳು ಎಂಬುವುದರಲ್ಲಿ ಅನುಮಾನವಿಲ್ಲ. ಹಿಂದುತ್ವ ಪ್ರತಿಪಾದಕರ ಬ್ರಾಹ್ಮಣ್ಯದ ಪೋಷಣೆಗೆ ಸಂಬಂಧಿಸಿದ ಹಾಗೂ ಬ್ರಾಹ್ಮಣ್ಯಕ್ಕೆ ತೊಡಕಾಗುವವರ ಅವಹೇಳನದ ಕಪೋಲ ಕಲ್ಪಿತ ಕಥಾಸೃಷ್ಟಿಗೆ ದೊಡ್ಡ ಇತಿಹಾಸವೇ ಇದೆ. ಅದು ಜನಾನುರಾಗಿ ದೊರೆ ಬಲಿಯನ್ನು ವೈದಿಕರು ಮೋಸದಿಂದ ಕೊಂದದ್ದರಿಂದ ಹಿಡಿದು ಜಾತ್ಯತೀತತೆಯ ಹೆಸರಲ್ಲಿ ಮನುವಾದಕ್ಕೆ ಕೊಳ್ಳಿಯಿಟ್ಟ ಎಂದು ಸ್ವತ: ಕಾಶ್ಮೀರಿ ಬ್ರಾಹ್ಮಣರೇ ಆಗಿದ್ದ (ಪಂಡಿತ್) ನೆಹರೂ ಹಾಗು ಅವರ ವಂಶಾವಳಿಯನ್ನು ಕೀಳಾಗಿ ಜರೆಯುವ, ದೇಶವಾಳಿದ ಅವರನ್ನ ಸಾಬರಿಗೆ ಹುಟ್ಟಿದವ ಎಂದು ಕಥೆ ಕಟ್ಟುವ ತನಕ ಇವರ ಹೀನ ಮಸಲತ್ತುಗಳಿಗೆ ಕೊನೆ ಮೊದಲೆಂಬುದಿಲ್ಲ. (ಇದೀಗ ಅವರ ಮರಿಮಗನ ತೇಜೋವಧೆಯನ್ನೂ ಸಹ ಅದು ತಮ್ಮ ಜನ್ಮ ಸಿದ್ಧ ಹಕ್ಕು ಎಂಬಂತೆ ವ್ಯವಸ್ಥಿತವಾಗಿ ನಡೆಸಿಕೊಂಡು ಬರಲಾಗುತ್ತಿದೆ). ವೈದಿಕರ ಈ ’ಉರಿಗೌಡ ಪುರಾಣ’ ಎಂಬುದು ತಮಿಳುನಾಡಿನ ಮರುದು ಪಾಂಡಿಯರ್ ಸಹೋದರ ಕಥೆಯೊಂದಿಗೆ ಕಸಿಕಟ್ಟಿ ತಯಾರು ಮಾಡಿದಂತಹ ತಲೆಬುಡವಿಲ್ಲದ ದುರುದ್ದೇಶಪೂರಿತ ಕಟ್ಟು ಕಥೆಯೆಂಬುದನ್ನು ಹಲವಾರು ಮಂದಿ ಈಗಾಗಲೇ ಪುರಾವೆ ಸಮೇತ ಸಾಬೀತು ಪಡಿಸಿದ್ದಾರೆ. ಅದನ್ನು ಸದ್ಯ ಬದಿಗಿಟ್ಟು ಈ ಮಹಾಶಯರುಗಳು ಈ ತನಕ ಈ ರೀತಿಯಲ್ಲಿ ಕಟ್ಟಿ ಹರಿಬಿಟ್ಟಂತಹ ಕೆಲ ಬೊಗಳೆದಾಸಯ್ಯನ ಕಥೆಗಳನ್ನು ಉದಾಹರಣೆಗೋಸ್ಕರವಾಗಿ ಸುಮ್ಮನೆ ಗಮನಿಸಬಹುದು.

ಕೆಲ ವರ್ಷಗಳ ಹಿಂದೆ ಇಂತಹದೇ ಬ್ರಾಹ್ಮಣ್ಯವನ್ನು ಉಂಡು ಹೊದ್ದಂತಹ ವ್ಯಕ್ತಿಯೊಬ್ಬ ಮಂಗಳೂರಿನ ಬಿಕರ್ನಕಟ್ಟೆ ಎಂಬ ಊರಿನ ಮೂಲ ಹೆಸರು ಭೀಕರ ನ್ಯಾಯದ ಕಟ್ಟೆ. ಅದು ಜನರ ಬಾಯಲ್ಲಿ ಬಳಿಕ ಬಿಕರ್ನಕಟ್ಟೆಯಾಗಿ ಬದಲಾಗಿದೆ ಎಂದು ಹೊಸ ಕಥೆಯೊಂದನ್ನು ಹೆಣೆದು ಪತ್ರಿಕೆಗಳಲ್ಲಿ ಬರೆದಿದ್ದ. ಈತನ ಪ್ರಕಾರ ಸಹಸ್ರಾರು ಕ್ರೈಸ್ತರನ್ನು ಈ ಕಟ್ಟೆಯಲ್ಲಿಯೇ ಟಿಪ್ಪು ಸುಲ್ತಾನ ಕೈಯಾರೆ ಕೊಂದಿದ್ದನಂತೆ. ಬ್ರಿಟಿಷರ ಪರ ತನ್ನ ವಿರುದ್ಧ ಒಳಸಂಚಿನಲ್ಲಿ ಭಾಗಿಯಾಗಿದ್ದರೆಂಬ ಕಾರಣಕ್ಕಾಗಿ ಅಥವಾ ಆ ಅನುಮಾನದಿಂದ ಹಲವಾರು ಕ್ರೈಸ್ತರನ್ನು ಟಿಪ್ಪು ಶಿಕ್ಷಿಸಿದ್ದು ಹೌದಾದರೂ ಬಿಕರ್ನಕಟ್ಟೆಗೂ ಅದಕ್ಕೂ ಯಾವ ಸಂಬಂಧವೂ ಇರಲಿಲ್ಲ.


ಕರಾವಳಿಯಲ್ಲಿ ಕಾಲೇ ಇಡದ ಉತ್ತರದವರ ಕಥೆಯಾದ ರಾಮಾಯಣ ಮಹಾಭಾರತದಲ್ಲಿ ಬರುವ ಪರಶುರಾಮನ ಪಾತ್ರವನ್ನು ಕರಾವಳಿಗೆ ಜೋಡಿಸಿ ಆತ ಕರಾವಳಿಯ ಸೃಷ್ಟಿಕರ್ತನೆನ್ನುವುದಾಗಲೀ, ಹನುಮಂತ ಹಿಮಾಲಯದಿಂದ ಶ್ರೀಲಂಕಾಕ್ಕೆ ಲಕ್ಷ್ಮಣನಿಗಾಗಿ ಬೆಟ್ಟ ಹೊತ್ತೊಯ್ಯುವಾಗ ಬಿದ್ದ ಪರ್ವತದ ತುಂಡೇ ಕೊಟಚಾದ್ರಿ ಎಂಬುದಾಗಲೀ, ಹಿಂದೆ ಸಣ್ಣ ಗ್ರಾಮವಾಗಿದ್ದ ಉಡುಪಿ ಬಳಿಕ ಪ್ರಸಿದ್ಧಿಗೆ ಬಂದಮೇಲೆ ಸ್ವಯಂ ಚಂದ್ರ (ಉಡುಪತಿ -ನಕ್ಷತ್ರಗಳ ಒಡೆಯ)ನೇ ಇಲ್ಲಿ ತಪಸ್ಸಿಗೆ ನಿಂತ ಕಾರಣ ಉಡುಪಿ ಎಂಬ ಹೆಸರು ಬಂತು ಎಂಬ ರಂಜನೀಯ ಕಥೆ (ಅಮೆರಿಕಾದ ನಾಸಾದವರು ಚಂದ್ರಯಾನಕ್ಕಾಗಿ ಬಿಲಿಯನ್‌ ಗಟ್ಟಲೆ ಖರ್ಚು ಮಾಡೋ ಬದಲು ಸೀದಾ ಉಡುಪಿಗೆ ಬಂದಿದ್ದರೆ ಚಂದ್ರನನ್ನು ಖರ್ಚಿಲ್ಲದೇ ಸಮೀಪದಿಂದ ಅಧ್ಯಯನ ಮಾಡಬಹುದಿತ್ತು. ಪಾಪ, ಆ ಬಡಪಾಯಿ ನಾಯಿಲೈಕಾಳನ್ನು ರಷ್ಯದವರು ಸ್ಪುಟ್ನಿಕ್ ಮೂಲಕ ಕಳುಹಿಸಿ ಚಂದ್ರನಲ್ಲೇ ಸಾಯಿಸಿ ಬಿಟ್ಟಿದ್ರು. ಅದನ್ನಾದರೂ ಉಳಿಸಬಹುದಿತ್ತು) ಯನ್ನಾಗಲೀ ನೋಡಿದಾಗ ನಿಜಕ್ಕೂ ವೈದಿಕ ಕಥಾ ಕಲ್ಪನಾ ಲಹರಿಗೆ ಬೆರಗಾಗಲೇ ಬೇಕು.

ಅವೈದಿಕ ಭೂತಗಳನ್ನು ಸಾರಾಸಗಟಾಗಿ ಶಿವನ ಗಣವನ್ನಾಗಿಸಿದ್ದು ಸಾಲದೇ ಇದೀಗ ಬೊಬ್ಬರ್ಯನ ಕಥೆಗೂ ವೈದಿಕರ ಕಣ್ಣು ಬಿದ್ದಂತಿದೆ. ಇದು ಮುಸ್ಲಿಮ್ ವ್ಯಕ್ತಿಗೆ ಸಂಬಂಧಿಸಿದ್ದು ಎನ್ನುವ  ಕಾರಣಕ್ಕೆ ಬೊಬ್ಬರ್ಯ (ಬಬ್ಬರ್ಯ)ನನ್ನು ನೇರಾನೇರ ಮಹಾಭಾರತ ಕಾಲಕ್ಕೆ ಕರೆದೊಯ್ದು (ಇದೇನು ತಪ್ಪಲ್ಲ ಬಿಡಿ. ಕರಾವಳಿ ಜಿಲ್ಲೆಯ ಊರೂರಿನಲ್ಲೂ ಪಾಂಡವ ಐತಿಹ್ಯದ ಕಥೆಗಳಿವೆ. ನಿರಂತರ ನದಿ ನೀರಿನ ಹರಿಯುವಿಕೆಯ ಕೊರೆತದಿಂದಾದ ಕಲ್ಲಿನಲ್ಲಿ ತಟ್ಟೆಯಾಕಾರ ಕಂಡುಬಂದರೆ ಅದು ಪಾಂಡವರು ಉಂಡ ಜಾಗ. ಅದೇ ರೀತಿ ಪಾಂಡವರು ದೇಗುಲದ ಕೆರೆ ಕಟ್ಟಿದ ಕತೆ, ಪಾಂಡವರು ಲಿಂಗ ಪ್ರತಿಷ್ಠಾಪನೆ ಮಾಡಿದ್ದು, ಪಾಂಡವರು ರಾಕ್ಷಸನನ್ನು ಕೊಂದಿದ್ದು.. ಇಂತಹ ಸ್ಥಳೀಯ ಸ್ಥಳ ಪುರಾಣಗಳಿಗೆ ಲೆಕ್ಕವೇ ಇಲ್ಲ. ಪಾಪ ಅವರಿಗೆ ಸಿಕ್ಕಿದ್ದೇ ಕೇವಲ ಹದಿನಾಕೇ ವರ್ಷ ವನವಾಸ. ಅದರಲ್ಲಿ ಬಹುತೇಕ ಕರಾವಳಿ ಜಿಲ್ಲೆಯಲ್ಲೇ ಕಳೆದಂತಿದೆ.) ಅರ್ಜುನ ಚಿತ್ರಾಂಗದರ ಪುತ್ರ ಬಬ್ರುವಾಹನನೇ ಬೊಬ್ಬರ್ಯ ದೈವ ಎಂಬಂತಹ ಕತೆಯನ್ನು ಸೃಷ್ಟಿಸಿ ಈಗ ಹರಿಬಿಡಲಾಗಿದೆ. ಎಲ್ಲಿಯ ಬಬ್ರುವಾಹನ ಎಲ್ಲಿಯ ಬಬ್ಬರ್ಯ..!! ವೈಜ್ಞಾನಿಕವಾಗಿ ಗರ್ಭಿಣಿ ಕಪ್ಪೆಯೆಂಬುದಿಲ್ಲ. ಕಾರಣ ಕಪ್ಪೆಗಳು ಗರ್ಭ ಧರಿಸಲಾರವು. ಅವುಗಳು ನೀರಲ್ಲಿ ಮೊಟ್ಟೆಯಿಟ್ಟು ಬಾಹ್ಯ ಗರ್ಭಧಾರಣೆಯ ಮೂಲಕ ನೀರಲ್ಲೇ ಮರಿಗಳು ಹುಟ್ಟುತ್ತವೆ. ಆದರೂ ಶೃಂಗೇರಿಯಲ್ಲಿ ವಿಶೇಷ ಪ್ರಭೇದದ ಕಪ್ಪೆ ಗರ್ಭಿಣಿಯಾದ ಕಥೆ (ಗರ್ಭಿಣಿ ಕಪ್ಪೆಗೆ ಅದರ ವೈರಿ ಹಾವು ರಕ್ಷಣೆ ನೀಡುವ ಐತಿಹ್ಯ)ಯನ್ನು ವೈದಿಕರು ಸ್ಥಳ ಪುರಾಣವಾಗಿ ಹೆಣೆದಿದ್ದಾರೆ.

ಇನ್ನು ಗೋ ರಾಜಕೀಯಕ್ಕಾಗಿ ದನದ ಪಾವಿತ್ರ್ಯವನ್ನು ಉನ್ನತೀಕರಿಸಲು ದನ ಅದರಲ್ಲೂ ವಿಶೇಷವಾಗಿ ಭಾರತದ ಸ್ವದೇಶೀ ಹಸುಗಳು ಆಮ್ಲಜನಕವನ್ನು ಹೀರಿ ಆಮ್ಲಜನಕವನ್ನೇ ಹೊರ ಬಿಡುತ್ತವೆ (ಹಾಗಾದರೆ ಈ ಉಸಿರಾಟ ಪ್ರಕ್ರಿಯೆ ಯಾವ ಉದ್ದೇಶಕ್ಕೋ?) ಎಂಬ ಕಥೆ. ಅದೇ ಮುಂದುವರೆದು ಪವಿತ್ರ ವೃಕ್ಷವಾದ ಅಶ್ವತ್ಥವೂ ಕೂಡ ಇದೇ ರೀತಿ ಬೇರೆ ಮರಗಳಿಗಿಂತ ಭಿನ್ನವಾಗಿ ರಾತ್ರಿಯೂ ಆಮ್ಲಜನಕವನ್ನು ಹೊರ ಸೂಸುತ್ತದೆನ್ನುವ ಕಥೆಗೆ ವೈಜ್ಞಾನಿಕ ಆಧಾರಗಳೇನಿಲ್ಲ. ಈ ಕಾರಣಕ್ಕೆ ದೆಹಲಿ ಮೊದಲಾದೆಡೆ ಇದೀಗಲೇ ಇದ್ದಿರುವಂತಹ ಬೇರೆ ಮರಗಳಿಗೆ ಬದಲಾಗಿ ಅಶ್ವತ್ಥವನ್ನು ನೆಡುವ ಯೋಜನೆಯೂ ಇದೆಯಂತೆ. ಬೇರೆ ಮರಗಳು ಕಡೇ ಪಕ್ಷ ಕಣ್ಮನ ಸೆಳೆಯುವ ಹೂವೋ ಅಥವಾ ಪಕ್ಷಿ ಹಾಗು ಇನ್ನಿತರ ಜೀವಿಗಳು ತಿನ್ನುವಂತಹ ಹಣ್ಣೋ ಇಂತವನ್ನು ನೀಡಿ ಅವುಗಳ ಆಶ್ರಯಕ್ಕೂ ಅವಕಾಶ ನೀಡಿದರೆ ಆಮ್ಲಜನಕ ಆರೋಪಿತ ಧಾರ್ಮಿಕ ಮಹತ್ವದ ಅಶ್ವತ್ಥ ಅವುಗಳ ಮುಂದೆ
ಬರೀ ಸಪ್ಪೆ.

ವೈದಿಕ ಮಹಾಶಯರುಗಳು ಹರಿಬಿಡುವಂತಹ ಇಂತಹ ರಂಜನೀಯ ಕಟ್ಟು ಕಥೆಗಳು ಮೇಲ್ನೋಟಕ್ಕೆ ನಿರುಪದ್ರವಿ ಎಂಬಂತೆ ತೋರಿದರೂ ಅದು ಸದ್ದಿಲ್ಲದೇ ಮಾಡುವಂತಹ ಭಾವನಾತ್ಮಕ ಪರಿಣಾಮಗಳು ಅಗಾಧವಾದುದು. ಅದಕ್ಕೇ ಇರಬೇಕು ವೈದಿಕರು ಕಟ್ಟಿದ ಪುರಾಣಗಳನ್ನು ಪ್ರಶ್ನಿಸಬಾರದೆಂಬ ಅಲಿಖಿತ ನಿಬಂಧನೆಯೇ ಜಾರಿಯಲ್ಲಿದೆ!


ಶಂಕರ್ ಸೂರ್ನಳ್ಳಿ.

ಲೇಖಕರು

Related Articles

ಇತ್ತೀಚಿನ ಸುದ್ದಿಗಳು