ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಮ್ಮೆ ತೀವ್ರ ಕುತೂಹಲ ಮೂಡಿದೆ. ಶರದ್ ಪವಾರ್ ನೇತೃತ್ವದ ಎನ್ಸಿಪಿ (ಎಸ್ಪಿ) ಪಕ್ಷವು ಆಡಳಿತಾರೂಢ ಎನ್ಡಿಎ (NDA) ಒಕ್ಕೂಟದೊಂದಿಗೆ ಕೈಜೋಡಿಸಲಿದೆ ಎಂಬ ವರದಿಗಳು ರಾಜಕೀಯ ವಲಯದಲ್ಲಿ ಜೋರಾಗಿ ಕೇಳಿಬರುತ್ತಿವೆ.
ಕಾಂಗ್ರೆಸ್ ಪಕ್ಷದೊಂದಿಗೆ ಎನ್ಸಿಪಿ (ಎಸ್ಪಿ) ವಿಲೀನದ ಪ್ರಸ್ತಾಪಕ್ಕೆ ಸೂಕ್ತ ಬೆಂಬಲ ಸಿಕ್ಕಿಲ್ಲ ಎಂಬ ಸುದ್ದಿಗಳ ಬೆನ್ನಲ್ಲೇ ಈ ಹೊಸ ಚರ್ಚೆ ಮುನ್ನೆಲೆಗೆ ಬಂದಿದೆ. ಎನ್ಸಿಪಿ (ಎಸ್ಪಿ) ಪಕ್ಷದ ಕೆಲವು ಸಂಸದರು ಮತ್ತು ಶಾಸಕರು ಎನ್ಡಿಎ ಒಕ್ಕೂಟ ಸೇರುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಒಂದು ವೇಳೆ ಎನ್ಸಿಪಿ (ಎಸ್ಪಿ) ಎನ್ಡಿಎ ಸೇರಿದರೆ, ಸಂಸದರಾದ ಸುಪ್ರಿಯಾ ಸುಳೆ ಸೇರಿದಂತೆ ಕೆಲವು ಪ್ರಮುಖ ನಾಯಕರಿಗೆ ಕೇಂದ್ರ ಸರ್ಕಾರದಲ್ಲಿ ಪ್ರಮುಖ ಜವಾಬ್ದಾರಿಗಳನ್ನು ವಹಿಸುವ ಸಾಧ್ಯತೆಯಿದೆ ಎಂದು ಪ್ರಚಾರ ಮಾಡಲಾಗುತ್ತಿದೆ.
ಇದೇ ವೇಳೆ, ಬಿಜೆಪಿ ಹಿರಿಯ ನಾಯಕ ವಿನೋದ್ ತಾವ್ಡೆ ಮತ್ತು ಶರದ್ ಪವಾರ್ ಎನ್ಸಿಪಿ ಪಕ್ಷದ ನಾಯಕ ಜಯಂತ್ ಪಾಟೀಲ್ ನಡುವೆ ರಹಸ್ಯ ಸಭೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಎನ್ಸಿಪಿ (ಎಸ್ಪಿ) ಈ ವರದಿಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದು, ಇವೆಲ್ಲವೂ ಕೇವಲ ವದಂತಿಗಳಷ್ಟೇ ಎಂದು ತಳ್ಳಿಹಾಕಿದೆ.
