Home ರಾಜಕೀಯ ಕಮಲ ಪಾಳಯದ ಪಾಲಾದ ಚಿತ್ರನಟ ಶಶಿಕುಮಾರ್‌ ಮತ್ತು ಮುದ್ದಹನುಮೇಗೌಡ

ಕಮಲ ಪಾಳಯದ ಪಾಲಾದ ಚಿತ್ರನಟ ಶಶಿಕುಮಾರ್‌ ಮತ್ತು ಮುದ್ದಹನುಮೇಗೌಡ

0

ಜೆಡಿಎಸ್‌ ನಾಯಕ ಹಾಗೂ ಕನ್ನಡ ಚಲನಚಿತ್ರ ನಟ ಶಶಿಕುಮಾರ್‌ ಅವರು ಇಂದು ಇನ್ನೊಬ್ಬ ಕಾಂಗ್ರೆಸ್‌ ನಾಯಕ ಮುದ್ದಹನುಮೇಗೌಡ ಅವರೊಂದಿಗೆ ಬಿಜೆಪಿ ಪಕ್ಷವನ್ನು ಸೇರಿದ್ದಾರೆ.

ಬಿಜೆಪಿಯ ರಾಜ್ಯ ಕಚೇರಿ ಜಗನ್ನಾಥ ಭವನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರುಗಳ ಸಮ್ಮುಖದಲ್ಲಿ ಶಶಿಕುಮಾರ್, ಮುದ್ದಹನುಮೇಗೌಡ ಹಾಗು ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್, ಸೇವಾದಳದ ಉಪಾಧ್ಯಕ್ಷ ಹನುಮಂತರಾವ್, ಕಾಂಗ್ರೆಸ್ ಪಕ್ಷದ ವೆಂಕಟಾಚಲಯ್ಯ, ಎಸ್ಪಿ ಪ್ರಧಾನ ಕಾರ್ಯದರ್ಶಿ, ರವಿಕುಮಾರ್, ಹಾಗೂ ಇನ್ನಿತರ ಕೆಲವು ಸಂಘಟನೆಗಳ ನಾಯಕರು ಇಂದು ಬಿಜೆಪಿ ಸೇರ್ಪಡೆಯಾದರು. ಪಕ್ಷದ ಧ್ವಜ ನೀಡಿ ಶಾಲು ಹೊದಿಸಿ ಪಕ್ಷದ ಪ್ರಾಥಮಿಕ ಸದಸ್ಯತ್ವ ನೀಡಿ ಈ ನಾಯಕರನ್ನು ಬಿಜೆಪಿಗೆ ಬರಮಾಡಿಕೊಳ್ಳಲಾಯಿತು.

ಶಶಿಕುಮಾರ್‌ ಅವರು ಚಳ್ಳಕೆರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದರೆ, ಮುದ್ದಹನುಮೇಗೌಡರು ಕುಣಿಗಲ್‌ ಕ್ಷೇತ್ರದಿಂದ ಕಣಕ್ಕಿಳಿಯಲು ಟಿಕೆಟ್‌ ಎದುರುನೋಡುತ್ತಿದ್ದಾರೆ. ಉಳಿದಂತೆ ಮಾಜಿ ಐಎಎಸ್‌ ಅಧಿಕಾರಿ ಕೊರಟಗೆರೆ ಕ್ಷೇತ್ರದಿಂದ ಚುನಾವಣೆ ಎದುರಿಸುವ ಉತ್ಸಾಹದ್ದಲ್ಲಿದ್ದಾರೆಂದು ಹೇಳಲಾಗುತ್ತಿದ್ದು, ಈ ಮೂವರಿಗೂ ಪಕ್ಷ ಟಿಕೆಟ್‌ ನೀಡುವ ಭರವಸೆ ಕೊಟ್ಟಿರುವುದಾಗಿ ಮೂಲಗಳು ತಿಳಿಸಿವೆ.

ಮುದ್ದಹನುಮೇಗೌಡರು ಕಾಂಗ್ರೆಸ್‌ ಟಿಕೆಟ್ಟಿನಿಂದಲೇ ಕುಣಿಗಲ್‌ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದರಾದರೂ ಅವರಿಗೆ ಪಕ್ಷದಿಂದ ಸರಿಯಾದ ಸ್ಪಂದನೆ ದೊರಕಿರಲಿಲ್ಲ. ಈ ಕಾರಣದಿಂದಾಗಿ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದಾರೆ. ಸದ್ಯದ ರಾಜಕೀಯ ಪಟಲದಿಂದ ಬಹುತೇಕ ಕಣ್ಮರೆಯಾದಂತೆ ಇದ್ದಂತಹ ಶಶಿಕುಮಾರ್‌ ಅವರಿಗೆ ಹೊಸ ಪಕ್ಷ ಯಾವ ರೀತಿಯ ಜವಬ್ದಾರಿ ನೀಡಲಿದೆ ಹಾಗೂ ಅವರು ಯಾವ ರೀತಿಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಇನ್ನೇನು ಚುನಾವಣಾ ರಂಗಕ್ಕೆ ತನ್ನ ತೆರೆದುಕೊಳ್ಳಲಿರುವ ಕರ್ನಾಟಕದ ರಾಜಕಾರಣ ಎಂದಿನಂತೆ ಇನ್ನಷ್ಟು ರಾಜಕೀಯ ವಲಸೆಗಳಿಗೆ ಸಾಕ್ಷಿಯಾದರೆ ಅಚ್ಚರಿಯಿಲ್ಲ.

ಈ ನಾಯಕರುಗಳ ಪಕ್ಷ ಸೇರ್ಪಡೆ ಕಾರ್ಯಕ್ರಮದ ಲೈವ್‌ ಪ್ರಸಾರವನ್ನು ನೀವು ನಮ್ಮ ಪೀಪಲ್‌ ಮೀಡಿಯಾ ಮೂಲಕ ವೀಕ್ಷಿಸಬಹುದು.

You cannot copy content of this page

Exit mobile version