Home ವಿಶೇಷ ಶಿಕ್ಷಕ ದಿನಾಚರಣೆ ತೆರೆದಿಟ್ಟ ಬಿಡಿಚಿತ್ರಗಳು

ಶಿಕ್ಷಕ ದಿನಾಚರಣೆ ತೆರೆದಿಟ್ಟ ಬಿಡಿಚಿತ್ರಗಳು

0

ಶಿಕ್ಷಕ/ಶಿಕ್ಷಕಿ ಅನ್ನುವುದು ಕೇವಲ ಮೂರಕ್ಷರಗಳ ಪದವಲ್ಲ. ಮಕ್ಕಳಲ್ಲಿ ಕಲ್ಪನೆ, ಭರವಸೆ, ಕಲಿಕೆಯ ಪ್ರೀತಿ, ಕನಸುಗಳನ್ನು ಹುಟ್ಟು ಹಾಕಿ ಅವುಗಳನ್ನು ಸಾಕಾರಗೊಳಿಸಲು, ಅವರಿಗೆ ವರ್ಣರಂಜಿತ ಪ್ರೀತಿಯ ಜಗತ್ತನ್ನು ಪರಿಚಯಿಸಲು, ಸದೃಢ ಸಮಾಜ ಮತ್ತು ದೇಶವನ್ನು ಕಟ್ಟಲು ಮಕ್ಕಳ ಬದುಕಿನ ಹಾದಿಗೆ ಮುನ್ನುಡಿ ಬರೆಯುವ ಪದ ಅದು. ಸ್ವತ: ಶಿಕ್ಷಕರಾಗಿ ಈ ಮೂರು ಪದಗಳಿಗೆ ಘನತೆ ತುಂಬಿ ಭಾರತೀಯ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟ್ಟನ್ನು ನೀಡಿದ, ಭಾರತ ಕಂಡ ಅಗ್ರಮಾನ್ಯ ಶಿಕ್ಷಕ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌. ಅವರ ಜನ್ಮ ದಿನವನ್ನು ನೆನಪಿಸುವ ಶಿಕ್ಷಕರ ದಿನ (ಸೆ.೫) ದ ನೆನಪಿನಲ್ಲಿ ಮನಸ್ಸಿನಲ್ಲಿ ಮೂಡಿದ ಬಿಡಿ ಚಿತ್ರಗಳನ್ನು ಪೀಪಲ್‌ ಮೀಡಿಯಾದ ಓದುಗರಿಗಾಗಿ ಸೊಗಸಾಗಿ ಬಿಡಿಸಿಟ್ಟಿದ್ದಾರೆ ವಿದ್ಯಾರ್ಥಿಗಳ ನೆಚ್ಚಿನ ಉಪನ್ಯಾಸಕಿಯೂ, ಲೇಖಕಿಯೂ ಆಗಿರುವ ಸುಧಾ ಆಡುಕಳ.

ಅವಳು ಅತೀವ ಉತ್ಸಾಹದಿಂದ ಕರೆ ಮಾಡಿದಾಗ ನಾನು ಯಾವುದೋ ಕೆಲಸದಲ್ಲಿ ಮುಳುಗಿದ್ದೆ. ಮತ್ತೆ ಫೋನ್ ನೋಡಿ ನಾನೇ ಕರೆ ಮಾಡಿದಾಗಲೂ ಅವಳ ಉತ್ಸಾಹವೇನೂ ಬತ್ತಿರಲಿಲ್ಲ. “ಟೀಚರ್, ನಾನು ಇವಾಗ ಗಣಿತ ಟೀಚರ್ ಆಗಿದ್ದೀನಿ. ಇಲ್ಲೇ ಹತ್ತಿರದ ಪ್ರಾಥಮಿಕ ಶಾಲೆಯಲ್ಲಿ ಪಾಠ ಮಾಡಬಹುದಾ ಎಂದು ಕೇಳಲು ಹೋಗಿದ್ದೆ. ಅವರು ಗಣಿತ ಪಾಠ ಮಾಡು ಎಂದು ಪುಸ್ತಕ ಕೊಟ್ಟರು. ನಾನೂ ಟೀಚರ್ ಆದೆ” ಅವಳು ಮಾತಾಡಿದ್ದು ಫೋನಿನಲ್ಲಾದರೂ ಅವಳ ಕಣ್ಣ ಹೊಳಪನ್ನು ನಾನು ನೋಡಬಲ್ಲವಳಾಗಿದ್ದೆ. ನಾನು ಗಣಿತ ಟೀಚರ್ರೇ ಆಗುವುದೆಂದು ಬೆನ್ನ ಹಿಂದೆ ತಿರುಗುತ್ತಿದ್ದವಳು ಬದುಕಿನ ಅನಿವಾರ್ಯತೆಯಿಂದ ಎಂಜಿನಿಯರಿಂಗ್ ಪದವಿ ಪಡೆದು, ಅಂತಾರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗವನ್ನು ಪಡೆದು ಕೊಂಡಿದ್ದಳು. ಅಷ್ಟಾದ ಮೇಲೆಯೂ ಒಂದೆರಡು ತಿಂಗಳಾದರೂ ತಾನು ಶಿಕ್ಷಕಿಯಾಗಿ ಕೆಲಸ ಮಾಡಬೇಕೆಂಬ ಒತ್ತಾಸೆಯನ್ನು ಅವಳೊಳಗೆ ಮೂಡಿಸಿದ ಸಂಗತಿ ಏನಿರಬಹುದು? ಎಂಬುದು ಶಿಕ್ಷಕ ವೃತ್ತಿಯ ಬಗ್ಗೆ ಮತ್ತೆ ಯೋಚಿಸುವಂತೆ ಮಾಡಿತು.

ಮೊನ್ನೆ ಹೀಗೆ ವಿರಾಮದಲ್ಲಿ ಕುಳಿತು ಗಾರ್ಗಿ ಸಿನೆಮಾ ನೋಡುತ್ತಿದ್ದೆವು. ಅದರಲ್ಲಿ ಚಿತ್ರದ ನಾಯಕಿ ಆಗಾಗ ತನ್ನ ಬಾಲ್ಯಕ್ಕೆ ಜಾರುತ್ತಾಳೆ ಮತ್ತು ಅಲ್ಲಿ ಒಬ್ಬ ಗಡ್ಡಧಾರಿಯಾದ ಶಿಕ್ಷಕ ಪ್ರತ್ಯಕ್ಷನಾಗುತ್ತಾನೆ. ತಣ್ಣಗೆ ಆ ಪುಟ್ಟ ಹುಡುಗಿಯ ಮೈ ಕೈ ಸವರುತ್ತ ತನ್ನ ಮೈ ತೀಟೆಯನ್ನು ತೀರಿಸಿಕೊಳ್ಳುತ್ತಾನೆ. ಆ ದೃಶ್ಯಗಳನ್ನು ನೋಡುತ್ತಿದ್ದಂತೆಯೇ ಬಾಲ್ಯದಲ್ಲಿ ನಮಗೆ ಪಾಠ ಮಾಡಿದ ಅನೇಕ ಶಿಕ್ಷಕರು ನೆನಪಾದರು.

ಕಣ್ಣು ಕಾಣದ, ಕಿವಿ ಕೇಳದ, ಮಾತು ಬಾರದ ಹೆಲೆನ್ ಕೆಲ್ಲರ್ ಎಂಬ ಹುಡುಗಿ ಜಗತ್ತಿನ ಅತಿ ಶ್ರೇಷ್ಠ ಬರಹಗಾರ್ತಿ ಮತ್ತು ಭಾಷಣಕಾರಳಾಗಿ ಹೊರಹೊಮ್ಮಿದ ಅದ್ಭುತವೊಂದು ನಮ್ಮೆಲ್ಲರ ಕಣ್ಣೆದುರಿಗಿದೆ. ಅವಳು ಬರೆದ “ನಾನು ಮೂರು ದಿನಗಳ ಮಟ್ಟಿಗೆ ಜಗವ ನೋಡುವಂತಾದರೆ…” ಎಂಬ ಪ್ರಬಂಧವನ್ನು ಓದುತ್ತಿದ್ದೆ. ಅದರಲ್ಲಿ ಅವಳು ಬರೆಯುತ್ತಾಳೆ, ” ನಾನು ಜಗತ್ತನ್ನು ನೋಡಬಲ್ಲೆನಾದರೆ ಮೊದಲು ನೋಡ ಬಯಸುವುದು ನನಗೆ ಅತ್ಯಂತ ಪ್ರೀತಿಪಾತ್ರರಾದವರ ಮುಖವನ್ನು. ಅದು ನನ್ನ ಗುರು ಆ್ಯನೆ ಸುಲಿವಾನೆಯವರದಲ್ಲದೇ ಬೇರಾರದೂ ಅಲ್ಲ. ಈಗಾಗಲೇ ಅವರ ಪ್ರೀತಿ ಮತ್ತು ಕರುಣೆಯನ್ನು ಸ್ಪರ್ಶಿಸಿರುವೆನಾದರೂ ಅದನ್ನು ಧರಿಸಿರುವ ಅವರ ಮುಖ ಹೇಗಿರಬಹುದೆಂಬುದನ್ನು ನೋಡುವ ಅತೀವ ತವಕ ನನಗೆ” ಕೇವಲ ಸ್ಪರ್ಶದ ಜ್ಞಾನವೊಂದರಿಂದಲೇ ಇಡಿಯ ಜಗತ್ತನ್ನು ಅರ್ಥೈಸಲು ತನ್ನ ಶಿಷ್ಯೆಗೆ ಕಲಿಸಿದ ಆ್ಯನೆ ಅದೆಂಥಹ ಅದ್ಭುತ ಶಿಕ್ಷಕಿಯಾಗಿರಬಹುದು?

ಆ ಶಿಕ್ಷಕಿ ಈ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಹೆಣ್ಣು ಮಕ್ಕಳಿಗೆಂದು ಶಾಲೆ ತೆರೆದಿದ್ದಳು. ವಯಸ್ಸು, ಜಾತಿ ಬೇಧವಿಲ್ಲದೇ ಎಲ್ಲರೂ ಆ ಶಾಲೆಯಲ್ಲಿ ಕಲಿಯಬಹುದಿತ್ತು. ಎಲ್ಲರ ಜೊತೆಗೆ ಅನೇಕ ವಿಧವೆಯರೂ ನಾಲ್ಕಕ್ಷರ ಕಲಿಯಲೆಂದು ಅಲ್ಲಿಗೆ ಸೇರಿದರು. ಹೆಣ್ಣು ಮಕ್ಕಳ ತಲೆಕೆಡಿಸಿ ಸಮಾಜವನ್ನು ಒಡೆಯುವ ಹುನ್ನಾರವಿದು ಎಂದು ಕೆಲವರಿಗೆ ಅನ್ನಿಸಿತು. ದಾರಿಯಲ್ಲಿ ಹೋಗುವಾಗ ಅವಳ ಮೇಲೆ ಸೆಗಣಿಯನ್ನು ಎಸೆದು ಅವಮಾನಿಸಿದರು. ಆ ತಾಯಿ ಮಾರನೇ ದಿನದಿಂದ ಶಾಲೆಗೆ ಹೋದೊಡನೆ ಬದಲಾಯಿಸಲು ಇನ್ನೊಂದು ಸೀರೆಯನ್ನು ಚೀಲದೊಳಗಿಟ್ಟು ನಡೆದಳೇ ಹೊರತು ಶಾಲೆಯ ಬಾಗಿಲನ್ನು ಮುಚ್ಚಲಿಲ್ಲ. ಇಂದು ಅವರನ್ನು ಅಕ್ಷರದವ್ವ ಎಂದು ಕರೆದು ಜಗತ್ತು ಗೌರವಿಸುತ್ತದೆ. ಸಾವಿತ್ರಿಬಾಯಿ ಫುಲೆ ಮತ್ತವರ ಪತಿ ಜ್ಯೋತಿಬಾ ಫುಲೆಯವರು ಸ್ವಾತಂತ್ರ್ಯ ಪೂರ್ವದಲ್ಲಿಯೇ ನಡೆಸಿದ ಶಿಕ್ಷಣ ಕ್ರಾಂತಿಯದು.

ಪ್ರಸಿದ್ಧ ಕಾಲೇಜೊಂದರಲ್ಲಿ ಜಿ.ಎನ್ ದೇವಿಯವರ ಪುಸ್ತಕ ಬಿಡುಗಡೆಯ ಕಾರ್ಯಕ್ರಮವಿತ್ತು. ಅನಿವಾರ್ಯ ಅಡಚಣೆಯಿಂದಾಗಿ ದೇವಿಯವರ ಆ ಕೃತಿಯ ಆಳ, ಅಂತರಾಳಗಳನ್ನು ಅರ್ಥೈಸಿಕೊಳ್ಳಲಾಗದ ಭಿನ್ನ ಶಿಸ್ತಿನ ವಿದ್ಯಾರ್ಥಿಗಳು ಪ್ರೇಕ್ಷಕರಾಗಿ ಭಾಗವಹಿಸಿದ್ದರು. ಕೃತಿ ಪರಿಚಯ, ಕೃತಿ ವಾಚನ, ಕೃತಿ ವಿಮರ್ಶೆಗಳೆಲ್ಲ ನಡೆಯುವಾಗ ಅವರೆಲ್ಲರೂ ತಮ್ಮ ತಮ್ಮ ಮೊಬೈಲ್ ವೀಕ್ಷಣೆಯಲ್ಲಿ ಮಗ್ನರಾಗಿದ್ದರು. ಕೊನೆಯಲ್ಲಿ ದೇವಿಯವರೊಂದಿಗೆ ಸಂವಾದ ಕಾರ್ಯಕ್ರಮವಿತ್ತು. ಸಭೆಯಲ್ಲಿ ನಡೆಯುವುದು ತಮಗೆ ಸಂಬಂಧಿಸಿದ್ದೇ ಅಲ್ಲವೆಂಬಂತೆ ಕುಳಿತಿದ್ದ ವಿದ್ಯಾರ್ಥಿಗಳೊಂದಿಗೆ ದೇವಿಯವರು ಏನು ಸಂವಾದ ನಡೆಸಿಯಾರೆಂಬ ಕುತೂಹಲ ಎಲ್ಲರಂತೆ ನನ್ನಲ್ಲಿಯೂ ಇತ್ತು. ಆದರೆ ಅವರು ಅದನ್ನು ಹೂವೆತ್ತುವಷ್ಟು ಸುಲಭದಲ್ಲಿ ಮಾಡಿ ತೋರಿಸಿದರು. ಮೊದಲು ಎಲ್ಲರನ್ನೂ ತಾವಿರುವ ವೇದಿಕೆಯ ಮೇಲೆಯೇ ಬರುವಂತೆ ಕರೆದರು. ನಿಮ್ಮ ಮೊಬೈಲನ್ನು ಜೊತೆಗೆ ತನ್ನಿ ಎಂದೂ ಸೇರಿಸಿದರು. ಅವರ ನಡುವೆ ನಿಂತು ಎಲ್ಲರನ್ನೂ ತಮ್ಮ ಸುತ್ತಲೂ ಕೂರಿಸಿಕೊಂಡು ನಿಮ್ಮೊಂದಿಗೆ ಒಂದು ಸೆಲ್ಫಿ ಬೇಕು. ಆದರೆ ಅದರ ಮೊದಲು ಸ್ವಲ್ಪ ಮಾತಾಡೋಣವೆ? ಎಂದು ಆತ್ಮೀಯವಾಗಿ ಹೇಳುತ್ತಾ ತಮ್ಮ ವಿಚಾರಧಾರೆಯನ್ನು ಅತಿ ಸರಳ ಮತ್ತು ಅತಿ ಕಡಿಮೆ ಪದಗಳಲ್ಲಿ ಅವರೆದುರು ಮಂಡಿಸಿದರು. ನಡುನಡುವೆ ನಗೆಚಟಾಕಿ ಹಾರಿಸಿ ಅವರನ್ನು ನಗಿಸಿದರು. ಮತ್ತೆ ವಿದ್ಯಾರ್ಥಿಗಳು ಎಷ್ಟು ಪ್ರಶ್ನೆಗಳನ್ನು ಕೇಳಿದರೆಂದರೆ ಊಟದ ಸಮಯವಾಯಿತೆಂದು ಸಂಘಟಕರು ಎಚ್ಚರಿಸುವಷ್ಟು! ಎಲ್ಲ ಮುಗಿದಾಗ ಮಕ್ಕಳು ದೇವಿಯವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದನ್ನು ಮರೆತು ಇನ್ನೊಮ್ಮೆ ಕಾಲೇಜಿಗೆ ಬರಲೇಬೇಕು ಎಂದು ಒತ್ತಾಯಿಸುತ್ತಿದ್ದರು. ಶಿಕ್ಷಕರೆಲ್ಲರೂ ಕಲಿಯಲೇಬೇಕಾದ ಅದೆಷ್ಟೋ ಪಾಠಗಳು ಆ ಒಂದು ತಾಸಿನಲ್ಲಿದ್ದವು.

ಇಂದು ಶಿಕ್ಷಣದ ಬಗ್ಗೆ ಮಾತನಾಡುವಾಗಲೆಲ್ಲ ವಿದ್ಯಾರ್ಥಿಗಳ ನಡವಳಿಕೆಯ ಬಗೆಗಿನ ದೂರುಗಳು ಮುನ್ನೆಲೆಗೆ ಬರುತ್ತಲೇ ಇರುತ್ತವೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧ ತೆಳುವಾಗುತ್ತಿರುವುದರ ಬಗ್ಗೆಯೂ ಚರ್ಚೆಯಾಗುತ್ತದೆ. ಆಗೆಲ್ಲ ಗೆಳೆಯ ಡಾ|ಶ್ರೀಪಾದ ಭಟ್ ಹೇಳುವ ಮಾತು ನೆನಪಿಗೆ ಬರುತ್ತದೆ, “ಇಂದಿನ ಮಕ್ಕಳು ಟಿ. ವಿ. ಯಲ್ಲಿ ಬರುವ ಜಾಹೀರಾತುಗಳಂತಿದ್ದಾರೆ, ನಾವಿನ್ನೂ ಹಳೆಯ ಧಾರಾವಾಹಿಗಳಂತಿದ್ದೇವೆ.”

ತರಗತಿಯಲ್ಲಿ ವಿದ್ಯಾರ್ಥಿಯ ಕುಂದಿದ ಮುಖವನ್ನು ಗಮನಿಸಿಯೇ ಹತ್ತಿರ ಕರೆದು, ಮಾತನಾಡಿಸಿ, ಸಾಂತ್ವನ ಹೇಳುವ, ಮಕ್ಕಳ ವಾಂತಿ, ಎಂಜಲನ್ನೂ ಒರೆಸಿ ತಾಯ್ತನ ತೋರುವ, ಕುಸಿದುಹೋದ ಆತ್ಮವಿಶ್ವಾಸವನ್ನು ಮರಳಿ ತರುವ, ಅಡ್ಡದಾರಿ ಹಿಡಿದರೆಂದು ಅರಿವಾದೊಡನೆ ಏಕಾಂತದಲ್ಲಿ ಕರೆದು ಕಿವಿಹಿಂಡಿ ಬುದ್ಧಿಹೇಳಿ, ಬೆನ್ನು ತಟ್ಟಿ ಕಳಿಸುವ, ವಿದ್ಯಾರ್ಥಿಗಳ ಪ್ರತಿಭೆಗೆ ವಿಫುಲ ಅವಕಾಶ ನೀಡಿ ಪ್ರೋತ್ಸಾಹಿಸುವ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಅವರೆಲ್ಲರನ್ನೂ ಸಮ ಭಾವದಿಂದ ನೋಡುವ ಅನೇಕ ಶಿಕ್ಷಕರು ಇಂದಿಗೂ ಇದ್ದಾರೆಂಬ ಸತ್ಯವೇ ಭವಿಷ್ಯದ ಬಗ್ಗೆ ಕನಸುಗಳನ್ನಿಟ್ಟುಕೊಳ್ಳುವಂತೆ ಮಾಡುತ್ತದೆ. ಎಲೆಮರೆಯ ಕಾಯಿಯಂತೆ ದುಡಿಯುವ ಇವರನ್ನು ನೋಡುವಾಗ ಶಿಕ್ಷಕತನವೆಂಬುದು ಬಹುಶಃ ವೃತ್ತಿಯಲ್ಲ, ಅದೊಂದು ಸ್ವಭಾವ ಅನಿಸುತ್ತದೆ.

ಅಧಿಕಾರಿಯೊಬ್ಬರು ಶಿಕ್ಷಕ ದಿನಾಚರಣೆಯ ಭಾಷಣದಲ್ಲಿ ಹೇಳಿದ್ದರು, “ಇಂದಿಗೂ ತಮ್ಮ ಮಕ್ಕಳನ್ನು ಅತೀವ ಭರವಸೆಯಿಂದ ಪಾಲಕರು ಬಿಡುವುದು ಶಿಕ್ಷಕರೊಂದಿಗೆ ಮಾತ್ರ.” ಶಿಕ್ಷಕರ ಹೊಣೆಗಾರಿಕೆಯ ಬಗ್ಗೆ ಇದಕ್ಕಿಂತ ಬೇರೆ ವ್ಯಾಖ್ಯಾನ ಬೇಕೆ?

ತುದಿ ಬೆರಳ ಸ್ಪರ್ಶದಲ್ಲಿ ಜಗತ್ತಿನ ಎಲ್ಲ ಮಾಹಿತಿಗಳೂ ಕಣ್ಣೆದುರು ಸುರಿಯುವ ಈ ಕಾಲದಲ್ಲಿ ಶಿಕ್ಷಕರ ಹೊಣೆಗಾರಿಕೆಯೇನು? ಶಿಕ್ಷಕರು ಮತ್ತು ಪೋಷಕರು ಪರಸ್ಪರ ಚರ್ಚಿಸಿ ತೀರ್ಮಾನಿಸಬೇಕಾದ ಮತ್ತು ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ವಿಷಯವಿದು. ಶಿಕ್ಷಕರ ದೈಹಿಕ ಉಪಸ್ಥಿತಿ ಮತ್ತು ಅವರೊಂದಿಗಿನ ಒಡನಾಟ, ಮಾತು, ನೋಟ ಇವೆಲ್ಲವೂ ಅಂತರ್ಜಾಲಕ್ಕಿಂತ ಬೇರೆಯಾದ ಹೊಸತೊಂದು ಅನುಭವವನ್ನು ನೀಡುವುದಿಲ್ಲವೆಂದಾದಲ್ಲಿ ಶಿಕ್ಷಣ ಕ್ರಮದ ಮರುವಿಮರ್ಶೆ ಅನಿವಾರ್ಯ.

ಶಾಲೆಗಳಿಲ್ಲದಿದ್ದರೆ ಬದುಕೆಷ್ಟು ಸುಂದರವಾಗುತ್ತಿತ್ತು? ಎಂದು ಮಗುವೊಂದು ಯೋಚಿಸುತ್ತಿರುವಂತೆ ಕನಸಾಗಿ ಎಚ್ಚರವಾದಾಗಲೆಲ್ಲ ಮೈತುಂಬಾ ಬೆವರು. ಹಾಗನಿಸದಂತೆ ಆಗಬೇಕಲ್ಲ ಎಂಬ ಒತ್ತಡವೇ ಶಿಕ್ಷಕನನ್ನು ಜೀವಂತವಾಗಿಡುತ್ತದೆ.

ಥಳಥಳಿಸುವ ಕಟ್ಟಡ, ಹೊಳೆಯುವ ನೆಲ, ವಾತಾಯನ ಸಹಿತ ತರಗತಿ ಕೋಣೆಗಳು, ಬಾಗಿಲ ಬಳಿ ತೂಗುಬಿಟ್ಟ ಸಾಲುಸಾಲು ಮುಖಗಳು, ಸೂಜಿ ಬಿದ್ದರೆ ಕೇಳುವಷ್ಟು ನೀರವ ಮೌನ, ಕೈಕಟ್ಟಿ ಇರುವೆ ಸಾಲಿನಂತೆ ನಡೆಯುವಷ್ಟು ಶಿಸ್ತು ಇವುಗಳೆಲ್ಲದರ ನಡುವೆ ಪುಡಿಗಾಸಿನ ಸಂಬಳದಲ್ಲಿ ಜೀವನ ನಡೆಸಲೂ ಪರದಾಡುವ ತರುಣ ಶಿಕ್ಷಕರು, ನಡುನಡುವೆ ಪ್ರಕಟವಾಗುವ ಆತ್ಮಹತ್ಯೆಗಳ ಸುದ್ದಿಗಳು…. ನಿಜಕ್ಕೂ ಕತ್ತಲ ಗುಹೆಯೊಳಗೆ ಏನಾಗುತ್ತಿದೆ? ಶಿಕ್ಷಕ ದಿನಾಚರಣೆಯ ಶುಭಾಶಯಗಳನ್ನು ಅವರಿಗೆ ಹೇಳುವುದಾದರೂ ಹೇಗೆ?

ದಿಸರ್ವಪಲ್ಲಿ ರಾಧಾಕೃಷ್ಣ

ಆದರ್ಶ ಶಿಕ್ಷಕರಾಗಿದ್ದು, ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾದ ಸರ್ವಪಲ್ಲಿ ರಾಧಾಕೃಷ್ಣನ್‌ ರಲ್ಲಿ ಅವರ ಗೆಳೆಯರು ಒಮ್ಮೆ ಕೇಳಿದರಂತೆ, “ಇಂತಹ ಉನ್ನತ ಹುದ್ದೆಯನ್ನು ಅಲಂಕರಿಸುವ ನಿಮ್ಮ ಜನ್ಮದಿನವನ್ನು ಆಚರಿಸೋಣವೆ?” ಅದಕ್ಕೆ ಅವರು ನೀಡಿದ ಉತ್ತರ, “ಶಿಕ್ಷಕ ವೃತ್ತಿಗಿಂತ ಘನತೆಯ ಹುದ್ದೆ ಬೇರೆಯುಂಟೆ? ನನ್ನ ಜನ್ಮ ದಿನವನ್ನು ಆಚರಿಸುವುದಾದಲ್ಲಿ ಅದನ್ನು ಶಿಕ್ಷಕರ ದಿನಾಚರಣೆಯೆಂದೇ ಆಚರಿಸಬೇಕು.” ಅವರ ನೆನಪಿನಲ್ಲಿಂದು ನಮ್ಮೆಲ್ಲರ ದಿನಾಚರಣೆ. ಆ ದಿನದ ನೆನಪಿನಲ್ಲಿ ಮನಸ್ಸಿನಲ್ಲಿ ಮೂಡಿದ ಬಿಡಿ ಚಿತ್ರಗಳಿವು.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಸುಧಾ ಆಡುಕಳ
ಉಪನ್ಯಾಸಕಿ, ಲೇಖಕಿ

You cannot copy content of this page

Exit mobile version