Sunday, June 23, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿಯ ಪುಂಡ ಹಿಂದೂತ್ವಕ್ಕೆ ಮಾದರಿ ಶಿವಸೇನೆ

ಬೊಗಸೆಗೆ ದಕ್ಕಿದ್ದು…13

ನಿಖಿಲ್ ಕೋಲ್ಪೆ

ಮಹಾರಾಷ್ಟ್ರ ರಾಜಕಾರಣದಲ್ಲಿ ಗಮನಾರ್ಹ ಶಕ್ತಿಯಾಗಿ ಬೆಳೆದುಬಂದಿರುವ ಶಿವಸೇನೆಯು ಮೂಲತಃ ಒಂದು ಪ್ರಾದೇಶಿಕ, ರಾಷ್ಟ್ರವಾದಿ, ತೀವ್ರ ಬಲಪಂಥೀಯ ರಾಜಕೀಯ ಪಕ್ಷವಾಗಿದ್ದು, ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಇತ್ತೀಚೆಗಷ್ಟೇ ಸ್ವಲ್ಪ ಸೌಮ್ಯ ನಿಲುವು ತೋರಿಸಿದ್ದರೂ, ಅದರೊಳಗಿನ ತೀವ್ರ ಹಿಂದೂತ್ವವಾದಿ ಶಕ್ತಿಗಳು ಬಿಜೆಪಿಯ ಪ್ರಚೋದನೆಯಿಂದ ಮತ್ತೆಮತ್ತೆ ಹೆಡೆಯೆತ್ತಿವೆ.

ತನ್ನ ಆಕ್ರಮಣಕಾರಿ ತತ್ವಗಳಿಗೆ ಅನುಗುಣವಾಗಿ ಘರ್ಜಿಸುವ ಹುಲಿಯನ್ನು ಪಕ್ಷದ ಚಿಹ್ನೆಯನ್ನಾಗಿಯೂ, ಬಿಲ್ಲು ಬಾಣವನ್ನು ಚುನಾವಣಾ ಚಿಹ್ನೆಯನ್ನಾಗಿಯೂ ಹೊಂದಿರುವ ಶಿವಸೇನೆಯ ಇತಿಹಾಸವನ್ನು ದೇಶದಲ್ಲಿ ಹಿಂದೂ ತೀವ್ರವಾದವು ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ನೋಡಬೇಕು. ಯಾಕೆಂದರೆ, ಇಂದು ದೇಶದಾದ್ಯಂತ ಬಿಜೆಪಿಯೊಳಗೆ ಬೆಳೆಯುತ್ತಿರುವ- ಮರಾಠಿಯಲ್ಲಿ ಟಪೋರಿ ಅಂದರೆ, “ಹಾದಿಬೀದಿಯ ಪುಂಡ, ನಾಲಾಯಕ್” ಹಿಂದೂತ್ವಕ್ಕೆ ಮಾದರಿಯಾಗಿರುವುದೇ ಶಿವಸೇನೆ. ನಮ್ಮಲ್ಲಿಯೂ ಬಜರಂಗದಳ, ಆ ಸೇನೆ ಈ ಸೇನೆ ಎಂದು ಇಂತಹ ಶಕ್ತಿಗಳು ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಇದನ್ನು ಅರ್ಥ ಮಾಡಿಕೊಳ್ಳಲು ಶಿವಸೇನೆಯ ಇತಿಹಾಸವನ್ನು ಸ್ವಲ್ಪವಾದರೂ ನೋಡುವುದು ಅಗತ್ಯ.

ಹೊಸ ರಾಜಕೀಯ ಕಥನ

ಶಿವಸೇನೆಯು ಹುಟ್ಟಿದಾಗ ಅದು ಮಹಾರಾಷ್ಟ್ರದಲ್ಲಿ ಒಂದು ಹೊಸ ರಾಜಕೀಯ ಕಥನ ಅಥವಾ ಪರಿಕಲ್ಪನೆಯನ್ನೇ ರೂಪಿಸಿತು. ಅದೆಂದರೆ, ಮರಾಠರ ಹಕ್ಕು ಮತ್ತು ಹಿಂದೂ ರಾಷ್ಟ್ರೀಯತೆ. ಅದಕ್ಕೆಂದೇ ರೂಪಿತವಾದ ಘೋಷಣೆ “ಮರಾಠಿ ಮಾಣುಸ್”- ಎಂದರೆ ಮರಾಠಿ ಮನುಷ್ಯ. “ಅಮ್ಚಿ ಮಾಠಿ, ಅಮ್ಚಿ ಮಾಣುಸ್”- ಎಂದರೆ, “ನಮ್ಮ ಮಣ್ಣು, ನಮ್ಮ ಜನ” ಎಂಬುದು ಇಂದಿಗೂ ಅಲ್ಲಿ ಜನಪ್ರಿಯ ಘೋಷಣೆ. “ಅಮ್ಚಿ ಮುಂಬಯಿ” ಕೂಡಾ ಇದೇ ಬ್ರಾಂಡಿನದ್ದು. ಇದಕ್ಕೆ ಸಂಕೇತವಾಗಿ ಬಳಸಿದ್ದು, ಇಂದು ಹಿಂದೂ ಹೋರಾಟಗಾರ ಎಂದು ಸಂಘಪರಿವಾರವು ಸುಳ್ಳಾಗಿ ಬಿಂಬಿಸುತ್ತಿರುವ ಮರಾಠಾ ಸ್ವಾಭಿಮಾನದ ಸಂಕೇತವಾದ ಶಿವಾಜಿಯನ್ನು. ಅದಕ್ಕೆಂದೇ ಪಕ್ಷದ ಹೆಸರು ಶಿವಸೇನೆ. ಪಕ್ಷದ ಬೆಳವಣಿಗೆಯ ಗುರಿ ಅಸಂಖ್ಯಾತ ನಿರುದ್ಯೋಗಿ, ಹತಾಶ ಶೂದ್ರ ಯುವಜನರಾಗಿದ್ದರೆ, ಆಕ್ರಮಣದ ಗುರಿ ಮೂಲತಃ ದಕ್ಷಿಣ ಭಾರತೀಯರು ಹಾಗೂ ನಂತರದಲ್ಲಿ ಹಿಂದಿ ಭಾಷಿಕರು ಮತ್ತು ಸಾಮಾನ್ಯವಾಗಿ ಮುಸ್ಲಿಮರು.

ಪ್ರೇರಣೆ: ಆರೆಸ್ಸೆಸ್ ಮತ್ತು ಹಿಟ್ಲರ್. ಹಿಟ್ಲರನ ಕುಖ್ಯಾತ ಗೂಂಡಾ ಸೈನಿಕ ಪಡೆ ವಾಫೆನ್ ಎಸ್‌ಎಸ್ ಮತ್ತು ಶಿವಸೇನೆಯ ಹೆಸರಿನ ಎಸ್‌ಎಸ್ ಒಂದೇ ಆಗಿರುವುದು ಕಾಕತಾಳೀಯವೇನಲ್ಲ. ಇಂದು ಬಿಜೆಪಿಯ ಉಗ್ರವಾದಿ ಮುಖವಾಗಿರುವ ಬಜರಂಗದಳ ಇತ್ಯಾದಿಗಳ ಈಗಿನ ರೂಪವೇ ಶಿವಸೇನೆಯ ಹಿಂದಿನ ರೂಪ. ಶಿವಸೇನೆಯು ಬಿಜೆಪಿಯಿಂದ ದೂರವಾಗಲು ಮೂಲಕಾರಣವೇ ಇಂತಾ ಶಕ್ತಿಗಳು. ಅದೇ ಶಕ್ತಿಗಳು ಪ್ರಾದೇಶಿಕವಾದ ಶಿವಸೇನೆಯಿಂದ, ರಾಷ್ಟ್ರೀಯವೂ ಲಾಭದಾಯಕವೂ ಆದ ಬಿಜೆಪಿಯ ಕಡೆಗೆ ಆಕರ್ಷಿತವಾದದ್ದು. ಮಿತ್ರಪಕ್ಷಗಳನ್ನು ನುಂಗಿ ನೀರು ಕುಡಿಯುವುದರಲ್ಲಿ ಬಿಜೆಪಿ ಎತ್ತಿದ ಕೈ ಎಂಬುದಕ್ಕೆ ಹತ್ತಿರದ ಉದಾಹರಣೆ ಎಂದರೆ, ಗೋವಾದ ಪ್ರಬಲ ಬಲಪಂಥೀಯ ಪಕ್ಷವಾಗಿದ್ದ ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಇದೀಗ ಅದು ಹೇಳಹೆಸರಿಲ್ಲದಂತೆ ಆಗಿದೆ. ಕರ್ನಾಟಕದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಅವರಿಗಿಂತಲೂ ಹೆಚ್ಚಾಗಿ ಹಿಂದೂತ್ವದ ಪುಂಗಿ ಊದುತ್ತಿರುವ ಕುಮಾರಸ್ವಾಮಿ ಇತ್ಯಾದಿಗಳಿಗೆ ಇದರ ಅರಿವಿದ್ದಂತಿಲ್ಲ.

ದೇಶದಲ್ಲಿ ತೀವ್ರವಾದಿ ಹಿಂದೂತ್ವದ ಬೆಳವಣಿಗೆಗೆ ಕಾರಣಗಳೇನು ಮತ್ತು ನಮ್ಮ ಪರಿಸ್ಥಿತಿಗೂ- ಶಿವಸೇನೆಯು ಬಿಜೆಪಿಗಿಂತಲೂ ಬಹಳ ಹಿಂದೆಯೇ ಪ್ರಬಲವಾಗಿ ಬೆಳೆದ ಐತಿಹಾಸಿಕ ಪರಿಸ್ಥಿತಿಗೂ ಸಾಮ್ಯವಿದೆಯೇ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡೇ ಅದನ್ನು ಚುಟುಕಾಗಿ ನೋಡೋಣ.

ಹಿನ್ನೆಲೆ

ಸ್ವಾತಂತ್ರ್ಯದ ಬಳಿಕ ಉಳಿದ ಬ್ರಿಟಿಶ್ ಕಾಲದ ಪ್ರೆಸಿಡೆನ್ಸಿಗಳಲ್ಲಿ ಮತ್ತು ರಾಜರು ಆಳುತ್ತಿದ್ದ ರಾಜ್ಯಗಳಲ್ಲಿ ಬೇರೆಬೇರೆ ಭಾಷೆಗಳನ್ನು ಮಾತನಾಡುವ ಪ್ರದೇಶಗಳಿದ್ದವು. ಕರ್ನಾಟಕ ಏಕೀಕರಣ ಚಳವಳಿ ನಡೆದಂತೆ ಮಹಾರಾಷ್ಟ್ರದಲ್ಲೂ ಹಿಂಸಾತ್ಮಕವಾದ ಮಹಾರಾಷ್ಟ್ರ ಏಕೀಕರಣ ಚಳವಳಿ ನಡೆಯಿತು. ಮುಂಬಯಿಯಲ್ಲಿ ಈಗಿನಂತೆ ಆಗಲೂ ಶ್ರೀಮಂತ ಗುಜರಾತಿಗಳ ಪ್ರಾಬಲ್ಯವಿತ್ತು. ಏಕೀಕರಣ ಚಳುವಳಿಯನ್ನು ನಿರ್ದಯವಾಗಿ ದಮನಿಸಿದವರು (ನಂತರ ಪ್ರಧಾನಿಯಾದ) ಗುಜರಾತಿ ಮುಖ್ಯಮಂತ್ರಿ ಮೊರಾರ್ಜಿ ದೇಸಾಯಿ ಎಂಬುದನ್ನು ಗಮನಿಸಬೇಕು. 1960ರಲ್ಲಿ ಬಾಂಬೆ ಪ್ರೆಸಿಡೆನ್ಸಿಯನ್ನು ಒಡೆದು ಮಹಾರಾಷ್ಟ್ರ ಮತ್ತು ಗುಜರಾತ್ ಭಾಷಾವಾರು ರಾಜ್ಯಗಳ ಸ್ಥಾಪನೆಯಾಯಿತು. ನಿಜಾಮನ ಹೈದರಾಬಾದ್ ಪ್ರಾಂತ್ಯದ ಮರಾಠಿ ಭಾಷಿಕ ಪ್ರದೇಶಗಳೂ ಸೇರಿ, ಮುಂಬಯಿ ರಾಜಧಾನಿಯಾಯಿತು. ಆದರೆ, ರಾಜಧಾನಿಯಲ್ಲಿ ಶ್ರೀಮಂತ ವ್ಯಾಪಾರಿ ಮಾರ್ವಾಡಿ, ಗುಜರಾತಿಗಳದ್ಧೇ ಕಾರುಬಾರು. ಜೊತೆಗೆ ಮುಂಬಯಿ ಕೈಗಾರಿಕಾ-ವಾಣಿಜ್ಯ ನಗರವಾಗಿ ಬೆಳೆದಿದ್ದುದರಿಂದ ದಕ್ಷಿಣ ಭಾರತೀಯರೂ ಸೇರಿದಂತೆ ಎಲ್ಲಾ ಕಡೆಗಳ ಜನರು ಉದ್ಯೋಗ ಅರಸಿ ಮುಂಬಯಿ ಸೇರಿದ್ದರು. ನಿರುದ್ಯೋಗ ತಾಂಡವವಾಡುತ್ತಿದ್ದುದರಿಂದ ಈ ಕುರಿತು ಮರಾಠಿಗರಲ್ಲಿ ತೀವ್ರವಾದ ಅಸಮಾಧಾನವಿತ್ತು. ಅಸೂಯೆ ಇತ್ತು.

ಸ್ಥಾಪನೆ

ಇದನ್ನೇ ಬಂಡವಾಳ ಮಾಡಿಕೊಂಡ ಬಾಳಾ ಠಾಕ್ರೆ ಜೂನ್ 19, 1966ರಲ್ಲಿ ಶಿವಸೇನೆಯನ್ನು ಒಂದು ರಾಜಕೀಯ ಪಕ್ಷವಾಗಿ ಸ್ಥಾಪನೆ ಮಾಡಿದರು. ಇದನ್ನು ಅವರು ಒಮ್ಮೆಗೇ ಮಾಡಲಿಲ್ಲ. ಮರಾಠ ಮತ್ತು ಬಲಪಂಥೀಯ ಚಿಂತಕರಾಗಿ ಸ್ವಲ್ಪ ಹೆಸರು ಮಾಡಿದ್ದ ಪ್ರಬೋಧನ್‌ಕರ್ ಠಾಕ್ರೆ ಅವರ ಮಗನಾದ ಬಾಳಾ ಠಾಕ್ರೆ ಆಗ ಪ್ರಖ್ಯಾತವಾಗಿದ್ದ ಫ್ರೀ ಪ್ರೆಸ್ ಜರ್ನಲ್‌‌ ಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಾರರಾಗಿದ್ದರು. (ಅಂದಹಾಗೆ ಆಗ ನನ್ನ ಪತ್ರಿಕಾ ವೃತ್ತಿಯ ಗುರು ಹಾಗೂ ದೊಡ್ಡಪ್ಪ ಎಸ್.ಬಿ. ಕೋಲ್ಪೆಯವರು ಪ್ರೀ ಪ್ರೆಸ್ ಜರ್ನಲ್‌ನಲ್ಲಿಯೇ ಮುಖ್ಯ ವರದಿಗಾರರೂ, ನಂತರ ಸ್ವಲ್ಪ ಕಾಲ ಸಂಪಾದಕರೂ ಆಗಿದ್ದ ಎಸ್.ಬಿ. ಕೋಲ್ಪೆ ಅವರ ಕಿರಿಯ ಸಹೋದ್ಯೋಗಿ ಠಾಕ್ರೆ. ಅವರು ಹೇಳಿದಂತೆ ಹಿಂದೂ-ಮುಸ್ಲಿಂ ಗಲಭೆಗಳ ವೇಳೆ ವರದಿ ಮಾಡಲು ಬರಲು ಹೇಳಿದರೆ, ಕಚೇರಿಯಲ್ಲಿಯೇ ಮುದುಡಿ ಕುಳಿತಿರುತ್ತಿದ್ದ ಹೇಡಿ.)

ಠಾಕ್ರೆ ಅತ್ಯುತ್ತಮ ಗೆರೆಗಳ ಪ್ರಖರ ವ್ಯಂಗ್ಯಚಿತ್ರಗಳನ್ನು ಬರೆಯುತ್ತಿದ್ದರು. ನಂತರ ರಾಜೀನಾಮೆ ನೀಡಿ “ಮಾರ್ಮಿಕ್” ಎಂಬ ಪತ್ರಿಕೆಯನ್ನು ಆರಂಭಿಸಿದ್ದರು. ಇದರಲ್ಲಿ ಆವರು ಬರೆಯುತ್ತಿದ್ದ ಕಟುವಾದ ರಾಜಕೀಯ ವಿಷ ತುಂಬಿದ ವ್ಯಂಗ್ಯಚಿತ್ರಗಳು ಮತ್ತು ವಿಡಂಬನೆಗಳೇ ಪ್ರಮುಖವಾಗಿದ್ದವು. ಇದು ಜನಪ್ರಿಯವಾಯಿತು. ಮುಂದೆ ಶಿವಸೇನೆಯು ಬಳಸಿದ ದಕ್ಷಿಣ ಭಾರತೀಯ ವಿರೋಧಿ “ಲುಂಗಿ ಬಗಾವೋ, ಪುಂಗಿ ಬಜಾವೋ” ಅಥವಾ “ಲುಂಗಿ ಓಡಿಸಿ, ಪುಂಗಿ ಬಾರಿಸಿ” ಎಂಬ ಪ್ರಚೋದನಾತ್ಮಕ ಘೋಷಣೆಯ ಮೂಲ ಇರುವುದು ಇಲ್ಲಿಯೇ. ಆ ಕಾಲದಲ್ಲಿ ದಕ್ಷಿಣ ಭಾರತೀಯರು, ಮುಖ್ಯವಾಗಿ ತಮಿಳರು ಲುಂಗಿ ಧರಿಸಿದರೆ, ಮರಾಠಿ ಮತ್ತಿತರು ಕಚ್ಚೆ ಅಥವಾ ಪೈಜಾಮ ಮತ್ತು ಬಿಳಿ ದೋಣಿ ಟೊಪ್ಪಿ ಧರಿಸುತ್ತಿದ್ದರು. ಇದನ್ನು ತುಳುವರು “ಓಡ ಕಂಕಣೆ ಪಾಡ್ದಿನಿ” ಎಂದರೆ, “ದೋಣಿ ಮಗುಚಿ ಹಾಕಿದ್ದು” ಎಂದು ತಮಾಶೆ ಮಾಡುತ್ತಿದ್ದರು. ಇದನ್ನು ಹೇಳುವ ಕಾರಣ ಎಂದರೆ, ಒಳಗೊಳಗೇ ಹೊಗೆಯಾಡುತ್ತಿದ್ದ ಭಾಷಾ, ಪ್ರಾದೇಶಿಕ ಅಸಮಾಧಾನವನ್ನು ತೋರಿಸುವುದು. ಪ್ಯಾಂಟು ಸೂಟು ಪ್ರತಿಷ್ಟೆಯ ಸಂಕೇತವಾಗಿತ್ತು. ಈ ನೆಲೆಯಲ್ಲಿ ಜನರನ್ನು ಗುರುತಿಸಿ ದ್ವೇಷಿಸಲು ಸುಲಭವಾಗಿತ್ತು. ನರೇಂದ್ರ ಮೋದಿ ಹಿಂದೆ ಮುಸ್ಲಿಮರನ್ನು ಗುರಿ ಮಾಡಿ, “ಉಡುಪು ಗುರುತು ಹೇಳುತ್ತದೆ” ಎಂದು ಹೇಳಿಕೆ ನೀಡಿದ್ದಕ್ಕೆ ಇದೇ ಪ್ರೇರಣೆಯಾಗಿದ್ದಿರಬಹುದು.

ಹೊಸದಾಗಿ ಸ್ಥಾಪಿತವಾದ ಪಕ್ಷವು ದೊಡ್ಡ ಪ್ರಮಾಣದಲ್ಲಿ ನಿರುದ್ಯೋಗಿ ಯುವಕರನ್ನು ಆಕರ್ಷಿಸಿತು. ಶಿವಸೇನೆಯ ಕಾರ್ಯಕರ್ತರು ಮೊದಲಿಗೆ ಸರಕಾರಿ ಅಧಿಕಾರಿಗಳು, ಖಾಸಗಿ ಸಂಸ್ಥೆಗಳನ್ನು ಬೆದರಿಸಿ, ತಮ್ಮವರಿಗೆ ಕೆಲಸ ಕೊಡಿಸಲು ಆರಂಭಿಸಿದರು. ಉದ್ಯೋಗ ಮಾರ್ಗದರ್ಶನ, ಅರ್ಜಿ ಬರೆದುಕೊಡುವುದು ಇತ್ಯಾದಿಗಳನ್ನು ಮಾಡುತ್ತಿದ್ದರು. ಆಗ ಅಧಿಕಾರಿಗಳು ಹೆಚ್ಚಾಗಿ ಮರಾಠಿಯೇತರರೇ ಆಗಿದ್ದು, ಅವರನ್ನು ಬೆದರಿಸಿ ಮರಾಠಿ ಕಾರ್ಮಿಕರ ಪರವಾಗಿ ನಿಂತರು. ಇದರ ಜೊತೆಯಲ್ಲಿ ಕಾರ್ಯಕರ್ತರಿಗೆ ಸ್ದಳೀಯವಾಗಿ ಗೂಂಡಾಗಿರಿ ನಡೆಸಿ ವಸೂಲಿ ಮಾಡುವ ಅವಕಾಶವೂ ಇತ್ತು. ಇವೆಲ್ಲವೂ ಹತಾಶ ಜನರನ್ನು ಮರಾಠಿ ಸ್ವಾಭಿಮಾನದ ನೆಲೆಯಲ್ಲಿ ಪಕ್ಷದ ಕಡೆಗೆ ಆಕರ್ಷಿಸಿದವು. ಜೊತೆಗೆ ಠಾಕ್ರೆಯ ಹಿಟ್ಲರ್ ಮಾದರಿಯ, ಕಂಚಿನ ಕಂಠದ, ಶತ್ರುಗಳನ್ನೂ ಮಂತ್ರಮುಗ್ಧಗೊಳಿಸುವ ಭಾಷಣಕಲೆ ಬಹಳವಾಗಿ ನೆರವಾಯಿತು. ಠಾಕ್ರೆ ಭಾಷಣಗಳಿಗೆ ಸಾವಿರಾರು ಜನರು ಸೇರುತ್ತಿದ್ದರು. ಶಿವಸೇನೆ ಎಂದರೆ ಎಲ್ಲರೂ ಬೆದರಲು ಆರಂಭಿಸಿದರು.

ಕಮ್ಯುನಿಸ್ಟ್ ದಮನ

ಆಗ ಮುಂಬಯಿಯಲ್ಲಿ ಅಸಂಖ್ಯಾತ ಬಟ್ಟೆ ಮಿಲ್ಲುಗಳು ಮತ್ತು ಇತರ ಕಾರ್ಖಾನೆಗಳಿದ್ದವು. ಅವುಗಳ ಮಾಲಕರು ಮುಖ್ಯವಾಗಿ ಗುಜರಾತಿ-ಮಾರ್ವಾಡಿಗಳಾಗಿದ್ದರು. ಇಲ್ಲೆಲ್ಲಾ ಕಮ್ಯುನಿಸ್ಟ್ ನೇತೃತ್ವದ ಕಾರ್ಮಿಕ ಸಂಘಟನೆಗಳಿದ್ದವು. ಇಲ್ಲಿ ಕಮ್ಯುನಿಸ್ಟರು ಎಷ್ಟು ಪ್ರಬಲರಾಗಿದ್ದರು ಎಂದರೆ, ಹಲವಾರು ನಗರಪಾಲಿಕೆ ಸದಸ್ಯರೂ, ಶಾಸಕರೂ ಆಯ್ಕೆಯಾಗುತ್ತಿದ್ದರು. ಇದು ಕಾಂಗ್ರೆಸಿಗೆ ಬೆದರಿಕೆಯಾಗಿತ್ತು. ಆಗ ಅವರನ್ನು ಹಿಂಸಾತ್ಮಕವಾಗಿ ಬಗ್ಗುಬಡಿಯಲು- ಕಾಂಗ್ರೆಸಿನ ಹಣದ ಚೀಲ ಎಂದರೆ, ಫಂಡ್ ರೈಸರ್ ಎಂದೇ ಹೆಸರಾಗಿದ್ಧ ಇನ್ನೊಬ್ಬ ಗುಜರಾತಿ ನಾಯಕ ರಜನಿಭಾಯ್ ಪಟೇಲ್ ಶಿವಸೇನೆಯನ್ನು ಬಳಸಿದರು ಎಂಬ ಆರೋಪವಿದೆ. ಇದಕ್ಕೆ ಗುಜರಾತಿ ಮಿಲ್ಲು ಮಾಲಕರ ಹಣಬೆಂಬಲವಿತ್ತು. ಮುಂದೆ ಶಿವಸೇನೆಗೆ ಪ್ರಬಲವಾಗಿ ಸೆಡ್ಡುಹೊಡೆದು ನಿಂತ ದಲಿತ್ ಪ್ಯಾಂಥರ್ಸ್ ಮತ್ತು ಅಂಬೇಡ್ಕರ್ ಅವರು ಸ್ಥಾಪಿಸಿದ್ದ ಆರ್‌ಪಿಐ, ಅಥವಾ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ನಾಯಕರನ್ನು ಹಣಬಲದಿಂದ ಭ್ರಷ್ಟಗೊಳಿಸಿ ಅವುಗಳು ಒಡೆದು ನುಚ್ಚುನೂರಾಗುವಂತೆ ಮಾಡಿದ ಕುಖ್ಯಾತಿಯೂ ಈ ಗುಜರಾತಿಗೆ ಇದೆ. ಶಿವಸೇನೆಯ ಜೊತೆಗೆ ಅವರು ಭೂಗತ ಸಂಪರ್ಕ ಹೊಂದಿದ್ದ ಕಾರ್ಮಿಕ ನಾಯಕ “ಕಾಮ್‌ಗಾರ್ ಆಗಾಡಿ”ಯ ಡಾ. ದತ್ತಾ ಸಾಮಂತ್ ಅವರನ್ನು ಬೆಳೆಸಿದರು. ಸಾಮಂತ್ ನಂತರ ಭೂಗತ ಜಗತ್ತಿನಿಂದಲೇ ಕೊಲೆಯಾದರು.

ನಂತರದಲ್ಲಿ ಶಿವಸೇನೆಯ ಕಾಮ್‌ಗಾರ್ ಸೇನಾ ಮತ್ತು ಸಾಮಂತ್ ಆವರ ಕಾಮ್‌ಗಾರ್ ಅಗಾಡಿ- ಕಾರ್ಮಿಕ ಸಂಘಟನೆಯ ಕ್ಷೇತ್ರಕ್ಕೆ ಭಯಾನಕವಾದ ಹಿಂಸೆಯನ್ನು ತಂದವು. ಕಮ್ಯುನಿಸ್ಟ್ ಕಾರ್ಮಿಕ ನಾಯಕರು ಒಬ್ಬರ ಬೆನ್ನಿಗೆ ಒಬ್ಬರು ಕೊಲೆಯಾಗತೊಡಗಿದರು. ಕಮ್ಯುನಿಸ್ಟರು ಬಹುತೇಕ ನಿರ್ನಾಮವಾದರು. ನಂತರದಲ್ಲಿ ಶಿವಸೇನೆಯು ಕಾಂಗ್ರೆಸಿಗೆ ಸಂಪೂರ್ಣವಾಗಿ ತಿರುಗಿಬಿದ್ದಿತು.

ಎಪ್ಪತ್ತರ ದಶಕದಲ್ಲಿ ಶಿವಸೇನೆಯು ಮರಾಠಿಗರನ್ನು ಪ್ರಚೋದಿಸಿ ದಕ್ಷಿಣ ಭಾರತೀಯರ ವಿರುದ್ಧ ಛೂಬಿಟ್ಟಿತು. ಶಿವಸೇನಾ ಕಾರ್ಯಕರ್ತರು ದಕ್ಷಿಣ ಭಾರತೀಯರ, ಮುಖ್ಯವಾಗಿ ಉಡುಪಿ ಹೊಟೇಲುಗಳ ಮೇಲೆ ದಾಳಿ ಆರಂಭಿಸಿತು. 1974-75ರಲ್ಲಿ ಬೆಳಗಾವಿ ವಿಷಯದಲ್ಲಿ ಹಿಂಸಾತ್ಮಕ ಗಡಿ ಗಲಾಟೆಯನ್ನು ಎಬ್ಬಿಸಿತು. ಒಮ್ಮೆಯಂತೂ ನಾಲ್ಕು ತಿಂಗಳುಗಳ ಕಾಲ ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವೆ ಬಸ್ ಸೇರಿದಂತೆ ವಾಹನ ಸಂಚಾರ ಸಂಪೂರ್ಣ ನಿಂತಿತ್ತು. ಕೊನೆಗೆ ಮುಂಬಯಿಯ ಬಂಟ ಸಮುದಾಯದವರು, ನಂತರ ಬಿಲ್ಲವರು ತಮ್ಮ ವ್ಯಾಪಾರ ಉಳಿಸಲು ತಮ್ಮದೇ ಪಡೆಕಟ್ಟಿಕೊಂಡು ಶಿವಸೇನೆಗೆ ಸರಿಯಾದ ಎದುರೇಟು ನೀಡಿದ್ದರು. ಆಗ ಉಂಟಾದ ರಾಜಿ ಇಂದೂ ಮುಂದುವರಿದಿದ್ದು, ಬಂಟ ಸಮುದಾಯದ ಹಲವರು ಶಿವಸೇನೆಯ ಕಾರ್ಪೊರೇಟರುಗಳು, ಶಾಸಕರು ಆಗಿದ್ದಾರೆ.

ಹಿಂದೂತ್ವದ ಬಂಡಿ

1968ರ ಮಾರ್ಚ್‌ನಲ್ಲಿ ನಡೆದ ಬೃಹನ್ಮುಂಬಯ ಮಹಾನಗರಪಾಲಿಕೆಯ ಚುನಾವಣೆಯಲ್ಲಿ ಶಿವಸೇನೆಯು 140ರಲ್ಲಿ 42 ಸ್ಥಾನಗಳನ್ನು ಗೆದ್ದಿತು. 1968ರ ಆಗಸ್ಟ್ ತಿಂಗಳಲ್ಲಿ ಮರಾಠಿ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ ಎಂದು ಕಾಮ್‌ಗಾರ್ ಸೇನಾ ಸ್ಥಾಪಿಸಿತು. ನಂತರ ನಡೆದ ಹಿಂಸಾತ್ಮಕ ಕಥಾನಕವನ್ನು ಈಗಾಗಲೇ ಚುಟುಕಾಗಿ ನೋಡಿದ್ದೀರಿ. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಮತ್ತು ಮುಂಬಯಿ ಹಾಗೂ ನೆರೆಯ ಥಾಣೆ ಜಿಲ್ಲೆ ಬಿಟ್ಟರೆ ಇಡೀ ಮಹಾರಾಷ್ಟ್ರದಲ್ಲಿ ಅದು ಹೇಳಿಕೊಳ್ಳುವ ಪ್ರಭಾವ ಬೀರಲಿಲ್ಲ. ಹಾಗಾಗಿ, ದಕ್ಷಿಣ ಭಾರತೀಯರೂ ಹಿಂದೂಗಳು ಎಂಬುದನ್ನು ಮರೆತು ದಾಳಿ ಮಾಡಿದ್ದ ಶಿವಸೇನೆಯು ಹಿಂದೂತ್ವದ ಬಂಡಿಯೇರಿ ಪುಂಗಿ ಊದಲು ಆರಂಭಿಸಿತು. ದಕ್ಷಿಣ ಭಾರತೀಯರನ್ನು ಗುರಿ ಮಾಡುವುದು ಕಡಿಮೆಯಾಯಿತು.

1989ರ ಚುನಾವಣೆಯಲ್ಲಿ ಅದು ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಂಡಿತು. 1995-1999ರ ನಡುವೆ ಅದು ಮೈತ್ರಿ ಸರಕಾರ ನಡೆಸಿತು. ಮೊದಲ ಬಾರಿಗೆ ಶಿವಸೇನೆಯು ಮುಖ್ಯಮಂತ್ರಿ ಪದಕ್ಕೆ ಏರಿ ಮನೋಹರ ಜೋಶಿ ಮುಖ್ಯಮಂತ್ರಿಯಾದರು. 1999ರಿಂದ 2014ರ ತನಕ ಈ ಕೂಟ ಪ್ರತಿಪಕ್ಷದಲ್ಲಿತ್ತು. 2014ರ ವಿಧಾನಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆಯಲ್ಲಿ ಜಗಳವಾಡಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದವು. ಬಿಜೆಪಿ ಅತೀದೊಡ್ಡ ಪಕ್ಷವಾಗಿ ಮೂಡಿಬಂದು, ನಂತರ ಅವು ಜೊತೆಯಾಗಿಯೇ ಸರಕಾರ ಸ್ಥಾಪಿಸಿದವು. ನಂತರ ಇವುಗಳು ಹತ್ತಿರ-ದೂರ ಆಗುತ್ತಲೇ ಇದ್ಧು, ಅಂತಿಮವಾಗಿ 2014ರಲ್ಲಿ ಶಿವಸೇನೆಯು ಎನ್‌ಡಿಎಯಿಂದ ಹೊರಬಂತು.

ಪಕ್ಷದ ಬೆಳವಣಿಗೆಯಲ್ಲಿ ಬಾಳಾ ಠಾಕ್ರೆಯ ಆಣ್ಣನ ಮಗ ರಾಜ್ ಠಾಕ್ರೆ, ಸ್ವಂತ ಮಗ ಉದ್ಧವ್ ಠಾಕ್ರೆಗಿಂತ- ತನ್ನ ಚಾಣಾಕ್ಷತನ ಮತ್ತು ತಂತ್ರಗಳಿಂದ ಹೆಚ್ಚಿನ ಕೊಡುಗೆ ಸಲ್ಲಿಸಿದ್ಧರು. ಆದರೆ, ಸಾಯುವ ಕಾಲಕ್ಕೆ ಬಾಳಾ ಠಾಕ್ರೆ ಸ್ವಂತ ಮಗ ಉದ್ಧವ್‌ರನ್ನೇ ಉತ್ತರಾಧಿಕಾರಿ ಎಂದು ಘೋಷಿಸಿದರು. ಇದರಿಂದ ಕೋಪಗೊಂಡ ರಾಜ್ ಠಾಕ್ರೆ ಮಹಾರಾಷ್ಟ್ರ ನವನಿರ್ಮಾಣ ಸೇನೆ ಸ್ಥಾಪಿಸಿದರೂ, ಹೆಚ್ಚಿನ ಯಶಸ್ಸು ಕಾಣಲಿಲ್ಲ. ಈಗ ಆ ಪಕ್ಷವು ಬೀದಿ ಪುಂಡಾಟಕ್ಕೆ ಸೀಮಿತವಾಗಿದೆ.

ನಂತರದಲ್ಲಿ ಶಿವಸೇನೆಯು ಕಾಂಗ್ರೆಸ್ ಮತ್ತು ಶರದ್ ಪವಾರ್ ಅವರ ಎನ್‌ಸಿಪಿ ಜೊತೆಗೆ ಮೈತ್ರಿ ಮಾಡಿಕೊಂಡು ಮಹಾರಾಷ್ಟ್ರ ವಿಕಾಸ್ ಆಗಾಡಿ ಹೆಸರಿನಲ್ಲಿ ಸರಕಾರ ಸ್ದಾಪಿಸಿ ಉದ್ಧವ್ ಠಾಕ್ರೆ ಮಂತ್ರಿಯಾದದ್ದು, ಪಕ್ಷವು ಮತ್ತೆ ಮತ್ತೆ ಒಡೆದದ್ದು ಇತ್ತೀಚಿನ ಕತೆ.

ಆದರೆ, ಶಿವಸೇನೆಯು ತನ್ನ ಬೆಳವಣಿಗೆಯ ಉದ್ದಕ್ಕೂ ಬಳಸಿದ ಕಾರ್ಯತಂತ್ರಗಳೂ ಬಹಳ ಉದ್ದವಾಗಿದ್ದು, ತುಂಬಾ ಕುತೂಹಲಕಾರಿಯಾಗಿವೆ. ಭಿವಂಡಿ ಸೇರಿದಂತೆ ಬಿಜೆಪಿಗಿಂತ ಮೊದಲೇ ಕೋಮುಗಲಭೆಗಳನ್ನು ವ್ಯವಸ್ಥಿತವಾಗಿ ತನ್ನ ಬೆಳವಣಿಗೆ ಮತ್ತು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡದ್ದು ಶಿವಸೇನೆ. ಪಾಕಿಸ್ತಾನವನ್ನು ಶತ್ರುವೆಂದು ಬಿಂಬಿಸಿ ಲಾಭ ಪಡೆಯುವುದನ್ನು ಕಲಿಸಿಕೊಟ್ಟದ್ದು ಶಿವಸೇನೆ. ಹಲವಾರು ಮಂದಿರ ಮಸೀದಿ ವಿವಾದಗಳನ್ನು ಬಿಜೆಪಿಯು ಬಾಬ್ರಿ ಮಸೀದಿ ವಿವಾದವನ್ನುವನ್ನು ಬಳಸಿಕೊಳ್ಳುವುದಕ್ಕೆ ಮೊದಲೇ ಬಳಸಿಕೊಂಡದ್ದು ಶಿವಸೇನೆ. ಬಾಬ್ರಿ ಮಸೀದಿ ನಾಶದ ಬಳಿಕ ದೇಶದಲ್ಲೇ ಮೊದಲು ಮುಂಬಯಿಯಲ್ಲಿ ಗಲಭೆ ಎಬ್ಬಿಸಿದ್ಧು ಶಿವಸೇನೆ. ಇಂತಾ ಹಲವಾರು ವಿಷಯಗಳಿದ್ದು, ಅವುಗಳ ಬಗ್ಗೆಯೇ ಪ್ರತ್ಯೇಕವಾಗಿ ಹೇಳಬಹುದು.

Related Articles

ಇತ್ತೀಚಿನ ಸುದ್ದಿಗಳು