Saturday, June 15, 2024

ಸತ್ಯ | ನ್ಯಾಯ |ಧರ್ಮ

ಸಮತೆ ಮಮತೆಯ ಬಸವ ಮತ್ತು ಸನಾತನ ಮತ್ಸರದ ಮೋದಿ

ಬುದ್ಧನಂತೆ ಸಮತೆ ಮಮತೆಯನ್ನು ಸಾರಿದ ಬಸವ ತತ್ವಕ್ಕೆ ದಿನಿತ್ಯ ಅಪಮಾನಮಾಡುತ್ತಿರುವುದು, ದಿನನಿತ್ಯ ಕೊಲ್ಲುತ್ತಿರುವುದು ಮೋದಿಯ ಬಿಜೆಪಿ ಮತ್ತು ಸಂಘಿ ಪರಿವಾರದವರೇ ..

ವಾಸ್ತವವಾಗಿ RSS ನ ಎರಡನೇ ಸರಸಂಘಚಾಲಕ ಗೋಲ್ವಳ್ಕರ್ ಬೌದ್ಧ, ಲಿಂಗಾಯತ, ಸಿಖ್ ಧರ್ಮಗಳು ಬ್ರಾಹ್ಮಣ ವಿರೋಧಿಯಾದ್ದರಿಂದ ದೇಶದ್ರೋಹಿಎಂದು ಬಣ್ಣಿಸಿದ್ದಾರೆ…!

ಬಸವ ತತ್ವ ಹೇಳುವುದೇನು?

ಕಳಬೇಡ, ಕೊಲಬೇಡ..
ಹುಸಿಯ ನುಡಿಯಲು ಬೇಡ..
ಮುನಿಯಬೇಡ..
ಅನ್ಯರಿಗೆ ಅಸಹ್ಯ ಪಡಬೇಡ..
ತನ್ನ ಬಣ್ಣಿಸಬೇಡ..
ಇದಿರ ಹಳಿಯಬೇಡ..
ಇದೆ ಅಂತರಂಗ ಶುದ್ಧಿ
ಇದೆ ಬಹಿರಂಗ ಶುದ್ದಿ…

ಆದರೆ ಅಂತರಂಗದಲ್ಲೂ ಬಹಿರಂಗದಲ್ಲೂ ಬರಿಯ ದ್ವೇಷ, ಸುಳ್ಳು, ಸ್ವಾರ್ಥಗಳ ಕೊಳಕನ್ನೇ ತುಂಬಿಕೊಂಡಿರುವ ಮೋದಿ ನೇತೃತ್ವದ ಬಿಜೆಪಿ ಮತ್ತು ಆರೆಸ್ಸೆಸ್ ಪ್ರತಿಯೊಂದು ಹೆಜ್ಜೆಯಲ್ಲೂ ಮೇಲಿನ ಬಸವ ತತ್ವವನ್ನು ಕೊಲ್ಲುತ್ತಾ ಸನಾತನ ಬ್ರಾಹ್ಮಣೀಯ ಸ್ವಾರ್ಥ -ಹಿಂಸೆಯನ್ನೇ ಪಾಲಿಸುತ್ತಾ ಬಂದಿದ್ದಾರೆ.

ಉದಾಹರಣೆಗೆ :

1) ಬಸವಣ್ಣ ಕಳಬೇಡ ಎಂದ ..ಆದರೆ ಮೋದಿ ?

ಹಿಂದಿನ ಸರ್ಕಾರಗಳು ಜನರ ಸಂಪತ್ತನ್ನು ಕಳವು ಮಾಡುತ್ತಿದ್ದರೇ, ಮೋದಿ ಸರ್ಕಾರ ಆದಾನಿ-ಅಂಬಾನಿಗಳ ಜೊತೆಗೂಡಿ ಜನಸಾಮನ್ಯರ ಸಂಪತ್ತನ್ನು ದರೋಡೆ ಮಾಡುತ್ತಿವೆ . .

2) ಬಸವಣ್ಣ ಕೊಲಬೇಡ ಎಂದ – ಆದರೆ ಮೋದಿ?

ಗುಜರಾತ ನರಮೇಧದಿಂದ ಹಿಡಿದು, ಮುಜಾಫರ್ ನಗರ್ , ದೆಹಲಿಯವರೆಗೆ ಮೋದಿ-ಸಂಘಿ ಗಳು ಮಾಡಿದ ನರಮೇಧಗಳು , ಜಾರಖಂಡ್ ನಿಂದ ಮೊದಲುಗೊಂಡು ಮೊನ್ನೆ ಬಿಹಾರದಲ್ಲಿ ಬೀಫ್ ಕೊಂಡೊಯ್ಯುತ್ತದನೆಂಬ ಅನುಮಾನದ ಮೇಲೆ ನಡೆಸಿದ ಲಿಂಚಿಂಗ್ ವರೆಗೆ – ಮೋದಿ ಸರ್ಕಾರ ಮತ್ತು ಸಂಘಪರಿವಾರ ದಿನಿತ್ಯ ಬಸವ ತತ್ವಗಳನ್ನು ಕಗ್ಗೊಲೆ ಮಾಡುತ್ತಿದೆ

3) ಬಸವಣ್ಣ ಹುಸಿಯ ನುಡಿಯಲು ಬೇಡ ಎಂದ – ಆದರೆ ಮೋದಿ?

ನಿನ್ನೆ ಮಾಡಿದ ಭಾಷಣದಿಂದ ಹಿಡಿದು ಮೋದಿ ಯವರು ಬಾಯಿ ಬಿಟ್ಟರೆ ಬರಿ ಸುಳ್ಳುಗಳು – ಇತಿಹಾಸದ ಬಗ್ಗೆ, ಪುರಾಣದ ಬಗ್ಗೆ , ಟಿಪ್ಪುವಿನ ಬಗ್ಗೆ, ಅಂಬೇಡ್ಕರ್ ಬಗ್ಗೆ ..ಈಗ ಬಸವಣ್ಣನ ಬಗ್ಗೆ.- ಮೋದಿ ಮತ್ತು ಸಂಘ ನಿಂತಿರುವುದೇ ಸುಳ್ಳು ಇತಿಹಾಸದ ಅಡಿಪಾಯದ ಮೇಲೆ ಅಲ್ಲವೇ?

4) ಬಸವಣ್ಣ ಅನ್ಯರಿಗೆ ಅಸಹ್ಯ ಪಡಬೇಡ ಎಂದ – ಆದರೆ ಮೋದಿ?

ಬ್ರಾಹ್ಮಣ ರನ್ನು ಹೊರತು ಪಡಿಸಿ ಉಳಿದ ಎಲ್ಲರನ್ನೂ, ವಿಶೇಷವಾಗಿ ಮುಸ್ಲಿಂ-ಕ್ರಿಶ್ಚಿಯನ್- ದಲಿತರನ್ನು – ಆದಿವಾಸಿ-ಮಹಿಳೆಯರನ್ನು ಆನ್ಯ ಗೊಳಿಸುವ , ಅಸಹ್ಯವಾಗಿ ಚಿತ್ರಿಸುವ , ವೈರಿಗಳನ್ನಾಗಿಸುವ ಮೋದಿತ್ವ,
” ಇವನಾರವ, ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ?

ಎಂಬ ಬಸವ ತತ್ವಕ್ಕೆ ತದ್ವಿರುದ್ಧವಲ್ಲವೇ?

5) ಬಸವಣ್ಣ ತನ್ನ ಬಣ್ಣಿಸಬೇಡ ಎಂದ – ಆದರೆ ಮೋದಿ ?

ಪ್ರಾಯಶಃ ಭಾರತದ ಇತಿಹಾಸದಲ್ಲಿ ತನ್ನಿಂದಲೇ ಎಲ್ಲವೂ ಸಾಧ್ಯವಾಯಿತು, ತಾನೇ ವಿಶ್ವ ಗುರು ಎಂದು ಮೋದಿಯವರಷ್ಟು ಬೊಗಳೆ ಬಿಡುತ್ತಿರುವ ಮತ್ತೊಬ್ಬ ಪ್ರಧಾನಿ ಯನ್ನು ಭಾರತ ಕಂಡಿರಲಿಲ್ಲ. ಮೊನ್ನೆ ತನ್ನ ಹೆಸರಿನ ಸ್ಟೇಡಿಯಂ ಗೆ ಹೋಗಿ, ತನ್ನ ಫೋಟೋ ಇರುವ ಸ್ಮರಣಿಕೆಯನ್ನು ಪಡೆದುಕೊಳ್ಳುವ ಲಜ್ಜೆಗೇಡಿತನದಿಂದ ಹಿಡಿದು ಪ್ರತಿಯೊಂದರಲ್ಲೂ ತನ್ನ ಚಿತ್ರವನ್ನು ಅಚ್ಚು ಮಾಡುವ ಇಂಥಾ ನಾರ್ಸಿಸ್ಟ್ (ಆತ್ಮರತಿ- ಸ್ವಲೋಲುಪ ) , ” ಎನಗಿಂತ ಕಿರಿಯರಿಲ್ಲ” ಎಂದು ಬೋಧಿಸಿದ ಬಸವಣ್ಣನನ್ನು ದಿನನಿತ್ಯ ಕೊಲ್ಲುತ್ತಿಲ್ಲವೇ?

ಬಸವಣ್ಣನ ಅನುಭವ ಮಂಟಪವನ್ನು ಮತ್ತು ಬಸವ ಸಂಸತ್ತನ್ನು ನಾಶಗೊಳಿಸಿದ್ದು ಮೋದಿಯವರ ಹಿರೀಕರಾದ ಸನಾತನಿಗಳು.

ದಲಿತ-ಬ್ರಹ್ಮಣರ ನಡುವಿನ ಅಂತರ್ಜಾತಿ ಮದುವೆಯು ವರ್ಣಾಶ್ರಮಕ್ಕೆ ಧಕ್ಕೆ ತರುತ್ತದೆ ಎಂದು ಸೈನ್ಯವನ್ನು ಬಳಸಿ ಶರಣರನ್ನು , ಬಸವ ತತ್ವವನ್ನು ಕೊಂದು ಹಾಕಿದ್ದು ಮೋದಿ ಸರ್ಕಾರ ಹಾಗೂ ಸಂಘ ಪರಿವಾರ ಮರುಸ್ಥಾಪಿಸಬಯಸುತ್ತಿರುವ ಬ್ರಾಹ್ಮಣೀಯ ಸನಾತನವಾದವೇ ..

ಇಂದು ಸನಾತನವಾದದ ಪುನರುತ್ಥಾನಕ್ಕೆ ಕಟಿಬದ್ಧವಾಗಿರುವ ಮೋದಿ ಸರ್ಕಾರ ಮತ್ತು ಸಂಘಪರಿವಾರ ಅಂತರ್ಜಾತಿ ಮದುವೆಗಳನ್ನು, ಅಂತರ್ಧರ್ಮೀಯ ವಿವಾಹಗಳನ್ನು ಅಪರಾಧೀಕರಿಸುವ ಶಾಸನಗಳನ್ನು ಮಾಡುತ್ತಿದೆ.

ಹೀಗೆ,

ಸಂವಿಧಾನದಲ್ಲಿರುವ ಬಸವಣ್ಣನನ್ನು ಪ್ರತಿನಿತ್ಯ ಕೊಲ್ಲುತ್ತಿರುವ ಸನಾತನಿ ಮೋದಿಯವರು ತಾನು ಬಸವಣ್ಣನವರ ಅನುಯಾಯಿ ಎಂದು ಜನರಿಗೆ ಮಂಕುಬೂದಿ ಎರಚುತ್ತಿರುವುದು ಎಂಥಾ ಕುಚೋದ್ಯವಲ್ಲವೇ ?

-ಶಿವಸುಂದರ್

Related Articles

ಇತ್ತೀಚಿನ ಸುದ್ದಿಗಳು