Friday, June 14, 2024

ಸತ್ಯ | ನ್ಯಾಯ |ಧರ್ಮ

ಶಿವಮೊಗ್ಗ | ಯಾವುದೇ ಏನ್‌ಕೌಂಟರ್‌ ನಡೆದಿಲ್ಲ, ಒಮ್ನಿ ಕಾರಿನಲ್ಲಿ ಬಂದಿದ್ದವರರಲ್ಲಿ ಹಿಂದೂ, ಮುಸ್ಲಿಮರಿಬ್ಬರೂ ಇದ್ದರು: ಎಸ್‌ಪಿ

ಶಿವಮೊಗ್ಗ: ಶಿವಮೊಗ್ಗ ಗಲಭೆಯ ವೇಳೆ ಒಮ್ನಿ ಕಾರಿನಲ್ಲಿ ಬಂದು ಕಲ್ಲು ತೂರಿದ್ದಾರೆನ್ನುವ ವದಂತಿಗಳನ್ನು ಶಿವಮೊಗ್ಗ ಎಸ್ಪಿ ಜಿ ಕೆ ಮಿಥುನ್‌ ಕುಮಾರ್‌ ಅವರು ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು ಕಾರಿನಲ್ಲಿ ಬಂದವರು ದಾವಣಗೆರೆ ಜಿಲ್ಲೆಯ ನ್ಯಾಮತಿಯವರಾಗಿದ್ದು, ಇತರೆಡೆ ಮೆರವಣಿಗೆಗಳನ್ನು ನೋಡಿ ರಾಗಿ ಗುಡ್ಡಕ್ಕೂ ಬಂದಿದ್ದರು ಎಂದು ತಿಳಿಸಿದ್ದಾರೆ.

ಅವರು ಗಲಭೆ ಆರಂಭಗೊಂಡಿದ್ದನ್ನು ನೋಡಿ ನಂತರ ತಮ್ಮ ಊರಿಗೆ ಮರಳಿದ್ದಾರೆ. ಈ ದೃಶ್ಯಗಳು ಸಿಸಿ ಕೆಮೆರಾಗಳಲ್ಲಿ ದಾಖಲಾಗಿದ್ದು, ವಿವರಗಳನ್ನು ನೋಡಲಾಗಿದೆ ಎಂದು ಅವರು ತಿಳಿಸಿದರು. ಸಾರ್ವಜನಿಕರು ದಯವಿಟ್ಟು ಇಂತಹ ವದಂತಿಗಳನ್ನು ನಂಬಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

ಬಿಜೆಪಿ ರಾಜಕಾರಣಿಗಳು ಪತ್ರಿಕಾಗೋಷ್ಟಿ ನಡೆಸಿ ಹೊರಗಿನಿಂದ ಬಂದವರು ಶಿವಮೊಗ್ಗದಲ್ಲಿ ಮೆರವಣಿಗೆಯಲ್ಲಿ ಕಲ್ಲು ತೂರಿದ್ದಾರೆ ಎಂದು ಆರೋಪ ಹೊರಿಸಿದ್ದರು.

ಪೊಲೀಸ್ ಎನ್‌ಕೌಂಟರ್‌ನಲ್ಲಿ ಮುಸ್ಲಿಮ್ ಯುವಕ ಸತ್ತಿದ್ದಾನೆ ಎನ್ನುವುದು ಕೂಡಾ ಸು‍ಳ್ಳು

ಎನ್‌ ಕೌಂಟರಿನಲ್ಲಿ ಮುಸ್ಲಿಂ ಯುವಕನೊಬ್ಬ ಸತ್ತಿದ್ದಾನೆ ಎನ್ನುವ ವದಂತಿ ಹಬ್ಬಿಸಲಾಗಿದ್ದು ಅದೂ ಕೂಡಾ ಸುಳ್ಳು ಎಂದು ಎಸ್ಪಿ ತಿಳಿಸಿದ್ದಾರೆ. ಮೆರವಣಿಗೆ ಸಮಯದಲ್ಲಿ ಕಲ್ಲು ತೂರಾಟದ ಬಳಿಕ ನಡೆದ ಬೆಳವಣಿಗೆಯಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಮುಸ್ಲಿಮ್ ಯುವಕ ಮೃತಪಟ್ಟಿದ್ದಾನೆ ಎಂದು ಹೇಳುವ ಧ್ವನಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ಕುರಿತು ಸ್ಪಷ್ಟನೆ ನೀಡಿರುವ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿದ್ದು ಯಾರೂ ಇಂತಹ ಸುದ್ದಿಗಳಿಗೆ ಕಿವಿಯಾಗಬಾರದು ಎಂದು ಮನವಿ ಮಾಡಿಕೊಂಡರು.

ಈ ಸುದ್ದಿಯನ್ನು ಹಬ್ಬಿಸಿದವರ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಲಾಗಿದ್ದು, FIR ಕೂಡಾ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು