ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಕ್ಷೇತ್ರ ಕನಕಗಿರಿಯಲ್ಲಿ ವಾರದ ಅಂತರದಲ್ಲಿ ಎರಡೆರಡು ಬಾಲ್ಯ ವಿವಾಹ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ 18 ವರ್ಷದೊಳಗಿನ ಮಕ್ಕಳಿಗೆ ಬಾಲ್ಯ ವಿವಾಹ ನಡೆದಿದ್ದು, ಅದರ ಬಗ್ಗೆ ಪ್ರಕರಣ ದಾಖಲಿಸದಂತೆ ಒತ್ತಡ ತಂದ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.
ಕಳೆದ ಏ. 21 ರಂದು ಕನಕಗಿರಿ ತಾಲೂಕಿನ ಶಿರವಾರದಲ್ಲಿ ಬಾಲ್ಯ ವಿವಾಹ ನಡೆದರೆ, ಏ.26ರಂದು ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಮತ್ತೊಂದು ಮದುವೆಯಾಗಿದೆ. ದುರಂತವೆಂದರೆ ಬಾಲ್ಯ ವಿವಾಹ ನಿಷೇಧ ರಾಜ್ಯದಲ್ಲಿ ಜಾರಿಯಲ್ಲಿರುವುದು ಗೊತ್ತಿದ್ದರೂ ಕಾಂಗ್ರೆಸ್ ಶಾಸಕ ಕಂಪ್ಲಿ ಶಾಸಕ ಗಣೇಶ್ ಕೂಡ ಮದುವೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
ಏಪ್ರಿಲ್ 21ರಂದು ಆದ ಮದುವೆ ಬಗ್ಗೆ ತಡವಾಗಿ ಕೇಸು ದಾಖಲಿಸಲಾಗಿದೆ. ಈ ಮದುವೆಗೆ ಕಂಪ್ಲಿ ಶಾಸಕ ಗಣೇಶ್ ಭಾಗಿಯಾಗಿದ್ದ ಕಾರಣಕ್ಕೆ ಏ. 25 ರಂದು ಕೇಸ್ ದಾಖಲಾಗತ್ತೆ. ಕೇಸು ದಾಖಲಿಸದಂತೆ ಒತ್ತಡ ಬಂದಿತ್ತು ಎಂಬ ಮಾಹಿತಿ ಕೂಡ ಈಗ ಹರಿದಾಡುತ್ತಿದೆ. ಬಾಲ್ಯ ವಿವಾಹ ಅನ್ನೋ ಸುದ್ದಿ ಹರಿದಾಡುತ್ತಿದ್ದಂತೆ ಹಿರೇಖೇಡ ಗ್ರಾಮ ಪಂಚಾಯಿತಿ ಅಧಿಕಾರಿ ಏ. 25 ರಂದು ಕನಕಗಿರಿ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ದ ದೂರು ನೀಡಿದ್ದಾರೆ.
ಮದುವೆಯಾದ ಶ್ಯಾಮಣ್ಣ ಬಂಕಾಪೂರ, ಇವರ ಸಂಬಂಧಿಗಳಾದ ಪಕ್ಕೀರಪ್ಪ ಬಂಕಾಪೂರ, ದೇವಮ್ಮ ಎಂಬುವರ ವಿರುದ್ದ ದೂರು ದಾಖಲಾಗಿದೆ.
ಶಿರವಾರದಲ್ಲಿ ನಡೆದ ಮದುವೆ ಸಂಬಂಧ ಏ.25 ಕ್ಕೆ ದೂರು ದಾಖಲಾಗಿತ್ತು. ಆದರೆ ಅದರ ಪರಿವೆಯೇ ಇಲ್ಲದೆ ಮರುದಿನವೇ ಸಚಿವರ ಕ್ಷೇತ್ರದಲ್ಲಿ ಮತ್ತೊಂದು ಬಾಲ್ಯ ವಿವಾಹವಾಗಿದೆ. ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಮತ್ತೊಂದು ಮದುವೆಯಾಗಿದೆ. ಕಾನೂನು, ಕಾಯ್ದೆ ಯಾವುದೇ ಭಯವಿಲ್ಲದೆ ಹುಲಿ ಹೈದರ್ ಗ್ರಾಮದಲ್ಲಿ ಬಾಲ್ಯ ವಿವಾಹ ನಡೆದಿದೆ.
ಹುಲಿ ಹೈದರ್ ಊರಲ್ಲಿ ನಡೆದ ಮದುವೆಯಲ್ಲಿ ಬಾಲಕಿಗೆ 17 ವರ್ಷ 9 ತಿಂಗಳು ಎಂದು ತಿಳಿದು ಬಂದಿದೆ. ದುರಂತವೆಂದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಸಂಬಂಧಿಕರದ್ದೇ ಈ ಮದುವೆಯಾಗಿದೆ. ಆ ಮೂಲಕ ಕಾಯ್ದೆ ಕಾನೂನುಗಳನ್ನು ಗಾಳಿಗೆ ತೂರಲಾಗಿದೆ. ಮದುವೆಯಾಗಿ 30 ಗಂಟೆ ಕಳೆದರೂ ಪೊಲೀಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದಾರೆ.