ಕಾಂಗ್ರೆಸ್‌ಗೆ ಶಾಕ್: ದೆಹಲಿಯ ಐತಿಹಾಸಿಕ ಕಚೇರಿ ತೆರವುಗೊಳಿಸಲು ಕೇಂದ್ರ ಸರ್ಕಾರದ ಸೂಚನೆ, ಮಾ.28 ಕ್ಕೆ ಕೊನೆಯ ಗಡುವು

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ 24ನೇ ಬಂಗಲೆ—ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದ ಕೇಂದ್ರ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕಟ್ಟಡ—ಇದೀಗ ಖಾಲಿ ಮಾಡುವಂತೆ ಕೇಂದ್ರ ಸರ್ಕಾರದಿಂದ ಅಂತಿಮ ನೋಟಿಸ್ ಜಾರಿಯಾಗಿದೆ.

ಸರ್ಕಾರದ ಸೂಚನೆಯ ಪ್ರಕಾರ, ಮಾರ್ಚ್ 28ರೊಳಗೆ ಕಚೇರಿಯನ್ನು ತೆರವುಗೊಳಿಸಬೇಕಾಗಿದೆ. ಇದೇ ವೇಳೆ ಯುವ ಕಾಂಗ್ರೆಸ್ ಕಚೇರಿ ಇರುವ ರೈಸಿನಾ ರಸ್ತೆಯ 5ನೇ ಬಂಗಲೆಯನ್ನೂ ಇದೇ ಅವಧಿಯಲ್ಲಿ ಖಾಲಿ ಮಾಡುವಂತೆ ಸೂಚನೆ ನೀಡಲಾಗಿದೆ.

ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕರು, ಈ ಕ್ರಮವು ರಾಜಕೀಯ ದುರುದ್ದೇಶಪೂರ್ವಕವಾಗಿದೆ ಎಂದು ಆರೋಪಿಸಿದ್ದಾರೆ. ಪಕ್ಷವು ದೀರ್ಘಕಾಲದಿಂದ ಮಾರುಕಟ್ಟೆ ದರದ ಬಾಡಿಗೆಯನ್ನು ಪಾವತಿಸುತ್ತಿದ್ದು, ಹಾಗಿದ್ದರೂ ಏಕೆ ತೆರವು ಸೂಚನೆ ನೀಡಲಾಗಿದೆ ಎಂಬ ಪ್ರಶ್ನೆಯನ್ನು ಎತ್ತಿದೆ.

ಕಾಂಗ್ರೆಸ್ ಮೂಲಗಳ ಪ್ರಕಾರ, ಈ ಬಂಗಲೆಗಳನ್ನು ತಮ್ಮ ಹಿರಿಯ ಸಂಸದರಲ್ಲಿ ಒಬ್ಬರ ಹೆಸರಿಗೆ ಮರುಹಂಚಿಕೆ ಮಾಡುವ ಪ್ರಯತ್ನವೂ ನಡೆದಿತ್ತು, ಆದರೆ ಅದು ಸಾಧ್ಯವಾಗಲಿಲ್ಲ. ದೆಹಲಿಯಲ್ಲಿ ಹಲವಾರು ನಾಯಕರು ಸರ್ಕಾರದ ಬಂಗಲೆಗಳಲ್ಲಿ ವಾಸಿಸುತ್ತಿದ್ದು, ಅವರು ಮಾರುಕಟ್ಟೆ ದರದ ಬಾಡಿಗೆ ಪಾವತಿಸುವುದು ಸಾಮಾನ್ಯ ಎಂದು ಕಾಂಗ್ರೆಸ್ ವಾದಿಸಿದೆ.

ಇದೀಗ ಈ ವಿಷಯವನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುವ ಬಗ್ಗೆ ಕಾಂಗ್ರೆಸ್ ಚಿಂತನೆ ನಡೆಸುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು