Sunday, June 16, 2024

ಸತ್ಯ | ನ್ಯಾಯ |ಧರ್ಮ

ಮರೆಯಲಾಗದ ಮಹಾನುಭಾವರು ಸಿದ್ದಪ್ಪ ಕಂಬಳಿಯವರು

1882 ರಲ್ಲಿ ಗಂಗವ್ವ ಮತ್ತು ತೋಟಪ್ಪ ದಂಪತಿಗಳ ಮಗನಾಗಿ ಸೆಪ್ಟೆಂಬರ್ 11 1882 ರಲ್ಲಿ ಸಿದ್ದಪ್ಪ ಕಂಬಳಿಯವರ ಜನನ. ತಂದೆ ಕಂಬಳಿ ಮಾರುವ ವೃತ್ತಿಯಾದ ಕಾರಣ ಕಂಬಳಿಯೆಂಬ ಅಡ್ಡ ಹೆಸರು ಬಂದಿತು. ಲಕ್ಕುಂಡಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದರು. ಧಾರವಾಡದಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿದರು.

ಪುಣೆಯ ಡೆಕ್ಕನ್ ಕಾಲೇಜಿನಲ್ಲಿ B.A ಪದವಿಯನ್ನು 1904 ರಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರು. ಸರ್ಕಾರಿ ನೌಕರಿ ಸಿಗುವುದಾದರೂ ಜೀ ಹುಜೂರ್ ಅನ್ನಬೇಕಾದ ಹುದ್ದೆ ಬೇಡವೆಂದು ಕಾನೂನು ಅದ್ಯಯನ ಕೈಗೊಳ್ಳಲು ಮುಂಬೈಗೆ ಪ್ರಯಾಣ ಬೆಳೆಸಿದರು. ಕಾನೂನು ಪರೀಕ್ಷೆಯಲ್ಲಿ ಇಡೀ ಮುಂಬೈ ರಾಜ್ಯಕ್ಕೆ ಪ್ರಥಮರಾಗಿ ಉತ್ತೀರ್ಣರಾದರು.

ಸಿದ್ದಪ್ಪ ಕಂಬಳಿಯವರ ವಕಾಲತ್ತಿನ ಪ್ರತೀತಿ ಅರಿತ ಸಿರಸಂಗಿ ಲಿಂಗರಾಜ ದೇಸಾಯಿಯವರು ತಮ್ಮದೊಂದು ಕೇಸು ಪ್ರೀವಿ ಕೌನ್ಸಿಲ್ ಎದುರು ಹೋದಾಗ ಕಂಬಳಿಯವರನ್ನು ಲಂಡನ್ ಗೆ ಕಳುಹಿಸಲು ಆಲೋಚಿಸಿದಾಗ ಆಗ ಮೊದಲ ಮಹಾಯುದ್ದದ ಕಾರಣ ಪ್ರಯಾಣ ಅಪಾಯಕಾರಿ ಎಂದು ವಿಚಾರವನ್ನು ಕೈ ಬಿಟ್ಟರು ಲಿಂಗಾರಾಜ ದೇಸಾಯಿಯವರು. 1917ರಲ್ಲಿ ಹುಬ್ಬಳ್ಳಿಯ ನಗರ ಸಭೆಯ ಸದಸ್ಯರಾಗಿ, 1921 ರಲ್ಲಿ ನಗರಸಭೆ ಅದ್ಯಕರಾಗಿ, ಅದೇ ಕಾಲಕ್ಕೆ ವಕೀಲರ ಸಂಘದ ಅದ್ಯಕ್ಷರಾಗಿ, ಜಿಲ್ಲಾ ಬೋರ್ಡ್ ಸದಸ್ಯರಾಗಿ, ಮುಂಬೈ ವಿಧಾನಪರಿಷತ್ತಿನ ಸದಸ್ಯರಾಗಿ ಆಯ್ಕೆಯಾದರು. 1924ರಲ್ಲಿ ಮುಂಬೈ ವಿಧಾನ ಪರಿಷತ್ ಉಪಸಭಾಪತಿಯಾಗಿ ಆಯ್ಕೆಯಾದ ಮೊದಲಕನ್ನಡಿಗ ಎಂಬ ಇತಿಹಾಸ ನಿರ್ಮಿಸಿದರು.

ಧಾರವಾಡ ದಲ್ಲಿ ಡೆಪ್ಯುಟಿ ಚನ್ನಬಸಪ್ಪ ನವರು ಸ್ಥಾಪಿಸಿದ ಶಿಕ್ಷಕರ ಟ್ರೆನಿಂಗ್ ಕಾಲೇಜು ಮತ್ತು ಅರಟಾಳ ರುದ್ರಗೌಡ್ರು ಸ್ಥಾಪಿಸಿದ KCD ಕಾಲೇಜುನ್ನು ಬ್ರಿಟಿಷ್‌ ಸರಕಾರ ಆರ್ಥಿಕ ಮಿತವ್ಯಯದ ನೆಪದಡಿ ಅನುದಾನ ಸ್ಥಗಿತಗೂಳಿಸಲು ಪ್ರಯತ್ನಿಸಿದಾಗ ಬ್ರಿಟಿಷ್ ಸರಕಾರಕ್ಕೆ ಸವಾಲು ಹಾಕಿ ಏಕಾಂಗಿ ವೀರರಾಗಿ ಹೋರಾಡಿ ಇವೆರಡು ಸಂಸ್ಥೆಗಳನ್ನು ಉಳಿಸಿ ಉತ್ತರ ಕರ್ನಾಟಕದಲ್ಲಿ ಅಕ್ಷರ ಜ್ಯೋತಿ ಪ್ರಜ್ವಲಿಸಲು ಕಾರಣರಾದರು ಸರ್ ಸಿದ್ದಪ್ಪ ಕಂಬಳಿಯವರು.

ಕರ್ನಾಟಕ ಏಕೀಕರಣ ಪರಿಷತ್ತಿನ ಪ್ರಥಮ ಮತ್ತು 1926ರ ದ್ವಿತೀಯ ಅಧಿವೇಶನದ ಅಧ್ಯಕ್ಷರಾಗಿ ಕರ್ನಾಟಕ ಏಕೀಕರಣಕ್ಕೆ ಗಟ್ಟಿಯಾದ ಬುನಾದಿಯನ್ನು ಹಾಕಿದರು ಸರ್ ಸಿದ್ದಪ್ಪ ಕಂಬಳಿಯವರು.

1930ರಲ್ಲಿ ಲಂಡನಿನಲ್ಲಿ ಜರುಗುವ ದುಂಡು ಮೇಜಿನ ಪರಿಷತ್ತಿಗೆ ಅಹ್ವಾನ ಬಂದಿತ್ತು. ಆದರೆ ಅದಕ್ಕೆ ಹಾಜರಾಗಲಿಲ್ಲ. ಅದೇ ವರ್ಷ ನವೆಂಬರನಲ್ಲಿ ಸರ್ ಸಿದ್ದಪ್ಪ ಕಂಬಳಿ ಮುಂಬೈ ಸರಕಾರದಲ್ಲಿ ಮಂತ್ರಿಯಾದರು. ಇದು ಕನ್ನಡಿಗನೋರ್ವ ಮುಂಬೈ ಸರಕಾರದಲ್ಲಿ ಮಂತ್ರಿಯಾದ ಮೊದಲಿಗರು ಎಂಬ ಹೆಗ್ಗಳಿಕೆಯಾಗಿದೆ.

1920 ರಲ್ಲಿ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಪ್ರಥಮವಾಗಿ ಶೋಷಿತರ ಬೃಹತ್ ಸಮಾವೇಶ ಹಮ್ಮಿಕೊಂಡರು. ಇದರ ಮುಖ್ಯ ಅಥಿತಿಗಳು ಛತ್ರಪತಿ ಶಾಹುಮಾಹಾಜರು. ಇದರ ಸಾನಿದ್ಯವನ್ನು ಹುಬ್ಬಳ್ಳಿಯ ಸಿದ್ದಾರೂಢ ಶ್ರೀ ಗಳು ವಹಿಸಿದ್ದರು.

1924ರ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಲು ಗಾಂಧೀಜಿ ಬೆಳಗಾವಿಗೆ ಬಂದಾಗ ಧಾರವಾಡದ ರೇಲ್ವೆ ನಿಲ್ದಾಣದಲ್ಲಿ ಇಳಿದು ಸಿದ್ದಪ್ಪ ಕಂಬಳಿ ಅಂದರೆ ಯಾರು ಬೇಟಿ ಮಾಡಿಸಿ ಎಂದಿದ್ದರು. ಇದರಿಂದ ಸಿದ್ದಪ್ಪ ಕಂಬಳಿಯವರ ವ್ಯಕ್ತಿತ್ವದ ಮಹತ್ವ ಅರಿವಾಗದೇ ಇರುವುದಿಲ್ಲ. ಸರ್‌ ಸಿದ್ದಪ್ಪ ಕಂಬಳಿಯವರು 1927 ರಲ್ಲಿ ಧಾರವಾಡದಲ್ಲಿ ಭಾರತೀಯ ತರುಣ ಸಂಘ ಕಟ್ಟಿ ಅದನ್ನೊಂದು ಬ್ರಾಹ್ಮಣೇತರರ ಘಟನೆಯಾಗಿಸುತ್ತಾರೆ, 1930ರಲ್ಲಿ ಬೆಳಗಾವಿಯಲ್ಲಿ ಬ್ರಾಹ್ಮಣೇತರ ಪರಿಷತ್‌ ಕೂಡಾ ಆರಂಭವಾಗುತ್ತದೆ.

ಡಾ.ಬಿ.ಆರ್.ಅಂಬೇಡ್ಕರ್ ಅವರು ಬ್ಯಾರಿಸ್ಟರ ಪದವಿ ಮುಗಿಸಿದ ನಂತರ ಅವರ ಚಟುವಟಿಕೆಗಳಿಗೆ ಬೆಂಗಾವಲಾಗಿ ನಿಂತವರು ಸರ್ ಸಿದ್ದಪ್ಪ ಕಂಬಳಿಯವರು. 1932 ಪೂನಾ act ನಲ್ಲೂ ಸಹ ಗಟ್ಟಿಯಾಗಿ ಅಂಬೇಡ್ಕರ್ ಅವರ ಬೆಂಗವಲಾಗಿ ನಿಂತವರು ಸರ್ ಸಿದ್ದಪ್ಪ ಕಂಬಳಿಯವರು.

1937 ರಲ್ಲಿ ಮುಂಬಯಿ ವಿಧಾನಸಭೆಗೆ ಚುಣಾವಣೆ ನಡೆದಾಗ ಸರ್ ಸಿದ್ದಪ್ಪ ಕಂಬಳಿಯವರ ವಿರುದ್ದ ಧಾರವಾಡಕ್ಕೆ ಬಂದು ಬಾಷಣ ಮಾಡಿದವರು ಜವಹರಲಾಲ ನೆಹರು ಮತ್ತು ಸರದಾರ ವಲ್ಲಭಭಾಯಿ ಪಟೇಲ್ ಅವರು. ಆದರೆ ಪಲಿತಾಂಶ ಮಾತ್ರ ಸರ್ ಸಿದ್ದಪ್ಪ ಕಂಬಳಿಯವರದ್ದಾಗಿತ್ತು.

ಬೆಳಗಾವಿಯ ಲಿಂಗರಾಜ ಕಾಲೇಜ್‌ಗೆ ಅನುಮತಿ ನೀಡಲು ಪುಣೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಮೀನ ಮೇಷ ಏನಿಸುವಾಗ ಮಡಿವಂತರ ಮೂಗು ಹಿಡಿದು ಲಿಂಗರಾಜ ಕಾಲೇಜ್ ಸ್ಥಾಪನೆಗೆ ಸಿಂಡಿಕೇಟ್ ಅನುಮತಿ ಕೊಡಿಸಿದರು ಸಿದ್ದಪ್ಪ ಕಂಬಳಿಯವರು.

ಶಿಕ್ಷಣ ಮಂತ್ರಿಗಳಿದ್ದಾಗ ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪನೆಗೆ ಮಂಜೂರಾತಿ ನೀಡಿ ಈ ಭಾಗದಲ್ಲಿ ಉನ್ನತ ಶಿಕ್ಷಣ ತೆಲೆ ಎತ್ತಿ ನಿಲ್ಲಿಸಲು ಕಾರಣರಾದವರು ಸರ್ ಸಿದ್ದಪ್ಪ ಕಂಬಳಿಯವರು.

ಅಂಬೇಡ್ಕರ್ ಅವರು ತಮ್ಮ ಶಿಕ್ಷಣ ಪೂರೈಸಿದ ನಂತರ ಶಿಕ್ಷಣ ಮಂತ್ರಿಗಳಾಗಿದ್ದ ಸಿದ್ದಪ್ಪ ಕಂಬಳಿಯವರಿಗೆ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕ ಹುದ್ದೆಗೆ ಪ್ರಸ್ತಾಪಿಸಿದಾಗ ಸಿದ್ದಪ್ಪ ಕಂಬಳಿಯವರು ಪ್ರಾಧ್ಯಾಪಕ ಹುದ್ದೆಗೆ ಅವಕಾಶ ಒದಗಿಸಿ ಅಂಬೇಡ್ಕರ್ ಅವರ ಪ್ರತಿಭೆಗೆ ಭೂಮಿಕೆ ಒದಗಿಸಿಕೊಟ್ಟರು.

ಪ್ರತ್ಯೇಕ ಗಾಂಧಿಜೀ ಮತ್ತು ಅಂಬೇಡ್ಕರ್ ಅವರ ಮಧ್ಯದ ಪ್ರಾತಿನಿಧ್ಯದ ಪ್ರಶ್ನೆ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದಾಗ ಅಂಬೇಡ್ಕರ ಅವರು ಹೆಜ್ಜೆ ಹಜ್ಜೆಗೂ ಸರ್ ಸಿದ್ದಪ್ಪ ಕಂಬಳಿಯವರೊಂದಿಗೆ ಸಮಾಲೋಚನೆ ಮಾಡಿರುವುದು ಐತಿಹಾಸಿಕ.

1930ರಲ್ಲಿ ಸರ್ ಸಿದ್ದಪ್ಪ ಕಂಬಳಿಯವರಿಗೆ “ಜಸ್ಟಿಸ್ ಆಪ್ ಪೀಸ್” ಪ್ರಶಸ್ತಿ ಬಂದಿತು. ಇದನ್ನು ಪಡೆದ ಮೊದಲ ಕನ್ನಡಿಗರು ಇವರು. 1939ರಲ್ಲಿ ಸರಕಾರ ಇವರಿಗೆ ಸರ್ ಪ್ರಶಸ್ತಿ ನೀಡಿ ಗೌರವಿಸಿತ್ತು.

ಸರದಾರ ವಲ್ಲಭಭಾಯಿ ಪಟೇಲ್ ಅವರು ಕಂಬಳಿಯವರ ಮುಂಗೈ ಹಿಡಿದು ತಮ್ಮ ಕಾಂಗ್ರೆಸ್ ಪಕ್ಷಕ್ಕೆ ಅಹ್ವಾನಿಸಿದರೂ ಸಹಿತ ತಮ್ಮ ಮಾತೃ ಪಕ್ಷಕ್ಕೆ ನಿಷ್ಠೆ ತೋರಿಸಿದರು.

ಮಹಾರಾಷ್ಟ್ರದಲ್ಲಿ ಜ್ಯೋತಿ ಬಾ ಪುಲೆಯವರು ಮತ್ತು ಮಾತೆ ಸಾವಿತ್ರಿ ಬಾ ಪುಲೆಯವರು ನಿರ್ವಹಿಸಿದಂತೆ ಕರ್ನಾಟಕದಲ್ಲಿ ಅವರ ಪಾತ್ರ ನಿರ್ವಹಿಸಿದವರು ಸರ್ ಸಿದ್ದಪ್ಪ ಕಂಬಳಿಯವರು ಮತ್ತು ಅವರ ಸಮಕಾಲಿನರು‌.

ಇದನ್ನೆಲ್ಲಾ ಹೇಳಲು ಕಾರಣ ಸೆಪ್ಟೆಂಬರ್ 11 ಈ ಮರೆಯಲಾಗದ ಮಹಾನುಭಾವರ ಜನ್ಮದಿನ. ಅವರ ಸಾಧನೆಯನ್ನು ಅವಲೋಕಿಸಲು ಇದೊಂದು ಸಂದರ್ಭ ಮಾತ್ರ.

ಲೇಖನ: ಮಹೇಶ ನೀಲಕಂಠ ಚನ್ನಂಗಿ KES
ಮುಖ್ಯ ಶಿಕ್ಷಕರು, ಚನ್ನಮ್ಮನ ಕಿತ್ತೂರು.

Related Articles

ಇತ್ತೀಚಿನ ಸುದ್ದಿಗಳು